ETV Bharat / state

ಬೆಳಗಾವಿ ಗಡಿ ವಿವಾದ: ಸಾಂವಿಧಾನಿಕ ಮಾರ್ಗದ ಮೂಲಕವೇ ಪರಿಹಾರ- ಅಮಿತ್ ಶಾ

author img

By

Published : Dec 14, 2022, 9:13 PM IST

amit-shah-meeting-with-cm-bommai-and-shinde-on-border-issue
ಬೆಳಗಾವಿ ಗಡಿ ವಿವಾದ: ಅಮಿತ್​ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಣಯ

ಬೆಳಗಾವಿ ಗಡಿ ವಿವಾದ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ನವ ದೆಹಲಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ನೇತೃತ್ವದಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಮಹತ್ವದ ಸಭೆ ದೆಹಲಿಯಲ್ಲಿ ನಡೆದಿದೆ. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಬಳಿಕ ಅಮಿತ್​ ಶಾ ಸುದ್ದಿಗಾರರೊಂದಿಗೆ ಮಾತನಾಡಿ ವಿವರಣೆ ನೀಡಿದರು.

ಸಾಂವಿಧಾನಿಕ ಮಾರ್ಗದಲ್ಲಿ ಪರಿಹರಿಸಿಕೊಳ್ಳಬೇಕು: ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಉಭಯ ರಾಜ್ಯಗಳ ಸಿಎಂಗಳ ಸಭೆ ನಡೆಸಲಾಗಿದೆ. ಉತ್ತಮ ರೀತಿಯಲ್ಲಿ ಮಾತುಕತೆ ಆಗಿದೆ. ಇಬ್ಬರೂ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿವಾದಿತ ವಿಷಯಗಳು ಹಾದಿಯಲ್ಲಿ ಚರ್ಚೆ ಆಗುವುದಲ್ಲ. ಸಾಂವಿಧಾನಿಕ ಮಾರ್ಗದಲ್ಲಿ ವಿವಾದವನ್ನು ಪರಿಹರಿಸಿಕೊಳ್ಳಬೇಕಿದೆ ಎಂದು ಅಮಿತ್ ಶಾ ಹೇಳಿದರು.

ಆರೋಪ, ಪ್ರತ್ಯಾರೋಪ ಬೇಡ: ಅಲ್ಲದೇ, ಗಡಿ ವಿಚಾರದಲ್ಲಿ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸುಪ್ರೀಂ ಕೋರ್ಟ್​ ನಿರ್ಧಾರ ಮಾಡುವವರೆಗೂ ಯಾವುದೇ ರಾಜ್ಯವು ಮತ್ತೊಂದು ರಾಜ್ಯದ ಮೇಲೆ ಆರೋಪ ಮಾಡುವಂತಿಲ್ಲ. ಎರಡೂ ರಾಜ್ಯಗಳ ತಲಾ ಮೂವರು ಸಚಿವರು ಕುಳಿತು ಚರ್ಚೆ ನಡೆಸಬೇಕಿದೆ. ನೆರೆಹೊರೆಯ ರಾಜ್ಯಗಳ ನಡುವೆ ಕೆಲ ವಿವಾದಗಳಿವೆ. ಎರಡೂ ರಾಜ್ಯಗಳ ನಡುವೆ ಕಾನೂನು ವ್ಯವಸ್ಥೆ ಕಾಪಾಡಬೇಕೆಂದು ಸಲಹೆ ನೀಡಿದರು.

ಐಪಿಎಸ್​ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ: ಯಾವುದೇ ರಾಜ್ಯದವರಿಗೂ ಇದರಿಂದ ತೊಂದರೆಯಾಗಬಾರದು. ಈ ಹಿನ್ನೆಲೆಯಲ್ಲಿ ಹಿರಿಯ ಐಪಿಎಸ್​ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಎರಡೂ ರಾಜ್ಯಗಳು ಒಪ್ಪಿವೆ. ವಿವಾದ ಇಷ್ಟೊಂದು ಗಂಭೀರವಾಗಲು ಟ್ವಿಟರ್​ನಲ್ಲಿ ಕೆಲ ನಕಲಿ ಖಾತೆಗಳೂ ಕೂಡ ಕಾರಣ ಎಂಬುದು ಬೆಳಕಿಗೆ ಬಂದಿದೆ. ಕೆಲ ನಾಯಕರ ಹೆಸರಲ್ಲಿ ಈ ಖಾತೆಗಳನ್ನು ತೆರೆಯಲಾಗಿದೆ. ಈ ಮೂಲಕ ವಿವಾದ ಇನ್ನಷ್ಟು ಗಂಭೀರವಾಗಲು ಕಾರಣವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗುವುದು ಎಂದೂ ಅಮಿತ್​ ಶಾ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.