ETV Bharat / state

ಪಿಎಸ್ಐ ನೇಮಕದಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಸಚಿವ ಆರಗ ಜ್ಞಾನೇಂದ್ರ

author img

By

Published : Mar 30, 2022, 7:38 PM IST

aaraga-jnanendra
ಆರಗ ಜ್ಞಾನೇಂದ್ರ

ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿ ಭಾರೀ ಹಣದ ವ್ಯವಹಾರ ನಡೆದಿದೆ ಎಂದು ಹರಿಪ್ರಸಾದ್ ಆಕ್ಷೇಪಿಸಿದಾಗ ಸಚಿವ ಮಾಧುಸ್ವಾಮಿ, ಪ್ರತಿಪಕ್ಷದ ನಾಯಕರು ಹೈಕೋರ್ಟ್ ಹೇಳಿಕೆಯನ್ನು ವರ್ಗಾವಣೆಗೆ ಥಳುಕು ಹಾಕುವುದು ಬೇಡ ಎಂದರು..

ಬೆಂಗಳೂರು : ಪಿಎಸ್​ಐ ನೇಮಕಾತಿಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ್ ಅರಳಿ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್​ ಬಳಕೆ ಮಾಡಿ ಅಭ್ಯಾಸ ನಡೆಸುತ್ತಿದ್ದ ಮಾಹಿತಿ ಆಧರಿಸಿ ಬೆಳಗಾವಿ, ಕಲಬುರಗಿ ಸೇರಿ ಕೆಲವು ಕಡೆ ಹೋಟೆಲ್ ಮೇಲೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆಯಲಾಗಿದೆ.

ಪರೀಕ್ಷಾ ಕೊಠಡಿಯಲ್ಲಿ ಬ್ಲೂಟೂತ್​ ಬಳಕೆಯಾಗಿಲ್ಲ. ಪರೀಕ್ಷಾ ಕೇಂದ್ರದ ಸುತ್ತ ಎರಡು ಹಂತದ ಬಿಗಿ ಕಾವಲು ಹಾಕಲಾಗಿತ್ತು ಎಂದು ಸ್ಪಷ್ಟ ಪಡಿಸಿದರು. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಮೀಸಲಾತಿ ಸಿಕ್ಕಿಲ್ಲ ಎಂದು ಆ ಭಾಗದ ಸದಸ್ಯರು ಆಕ್ಷೇಪಿಸಿದಾಗ ಅದನ್ನು ಪರಿಶೀಲಿಸಲು ಮುಖ್ಯಮಂತ್ರಿಯವರು ನೇಮಕಾತಿ ಪಟ್ಟಿಗೆ ತಡೆ ನೀಡಿದ್ದಾರೆ.

ಅದನ್ನು ಹೊರತುಪಡಿಸಿ ಯಾವುದೇ ಅವ್ಯವಹಾರ ನಡೆದಿಲ್ಲ. ಅದಕ್ಕಾಗಿಯೂ ತಡೆ ನೀಡಿಲ್ಲ. ಕಲ್ಯಾಣ ಕರ್ನಾಟಕದ ಪಾಲು ಹಂಚಿಕೆಯಲ್ಲಿ ಅನ್ಯಾಯವಾಗಿರುವುದನ್ನು ಪರಿಶೀಲಿಸಿದ ಬಳಿಕ ನೇಮಕಾತಿ ಆದೇಶ ನೀಡಲಾಗುವುದು ಎಂದರು. ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ.

ಹಣದ ವ್ಯವಹಾರವೂ ಇಲ್ಲ. ಪರೀಕ್ಷೆಯಲ್ಲಿ ನಕಲು ನಡೆದಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಸದಸ್ಯರಿಗೆ ಕ್ಷೇತ್ರವಾರು ಫಲಿತಾಂಶ ಒದಗಿಸುತ್ತೇನೆ. ಒಂದೇ ಕ್ಷೇತ್ರದ ಹಾಗೂ ಒಂದೇ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಹೆಚ್ಚಾಗಿ ಆಯ್ಕೆಯಾಗಿದ್ದಾರೆ ಎಂಬುದು ಸರಿಯಲ್ಲ ಎಂದರು. ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿ ಭಾರೀ ಹಣದ ವ್ಯವಹಾರ ನಡೆದಿದೆ ಎಂದು ಹರಿಪ್ರಸಾದ್ ಆಕ್ಷೇಪಿಸಿದಾಗ ಸಚಿವ ಮಾಧುಸ್ವಾಮಿ, ಪ್ರತಿಪಕ್ಷದ ನಾಯಕರು ಹೈಕೋರ್ಟ್ ಹೇಳಿಕೆಯನ್ನು ವರ್ಗಾವಣೆಗೆ ಥಳುಕು ಹಾಕುವುದು ಬೇಡ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಯಾರು, ಎಲ್ಲಿ ಎಷ್ಟು ಹಣ ಪಡೆದಿದ್ದಾರೆ ಎಂದು ನಿರ್ದಿಷ್ಟವಾಗಿ ಮಾಹಿತಿ ನೀಡಿದರೆ ತನಿಖೆ ನಡೆಸುತ್ತೇವೆ. ಅದನ್ನು ಬಿಟ್ಟು ಪ್ರತಿಪಕ್ಷದ ನಾಯಕರು ಪತ್ರಿಕೆಯಲ್ಲಿ ವರದಿಯಾಗಿದ್ದನ್ನು ಉಲ್ಲೇಖಿಸಿ ಮಾತನಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವುದು ಹೇಗೆ? ಎಂದರು. 345 ಪಿಎಸ್ಐ ಹುದ್ದೆಗಳಿಗೆ ಒಂದು ಲಕ್ಷ ಜನ ಪರೀಕ್ಷೆ ಬರೆದಿದ್ದಾರೆ.

ನಾಲ್ಕು ಸಾವಿರ ಕಾನ್ಸ್​ಟೇಬಲ್​ ನೇಮಕಾತಿಗೆ ನಾಲ್ಕು ಲಕ್ಷ ಜನ ಪರೀಕ್ಷೆ ಬರೆದ್ದಾರೆ. ಅವಕಾಶ ಸಿಗದಿದ್ದವರು ಅವ್ಯವಹಾರ ನಡೆದಿದೆ ಎಂದು ಕಲ್ಪಿತ ಆರೋಪ ಮಾಡುತ್ತಿದ್ದಾರೆ. ಆದರೆ, ಅದಕ್ಕೆ ಸೂಕ್ತ ದಾಖಲೆಗಳಿವೆಯೇ, ಎಲ್ಲೋ ಕೇಳಿ ಬರುತ್ತಿತ್ತು ಎಂಬ ಮಾತುಗಳನ್ನು ಆಧರಿಸಿ ಇಲ್ಲಿ ಚರ್ಚೆ ಮಾಡಲು ಸಾಧ್ಯವೇ? ಎಂದು ಸಚಿವರು ವಿವರಿಸಿದರು.

ಓದಿ: ವಿಧಾನಸಭೆಯಲ್ಲಿ ರಾಮನ ಲೆಕ್ಕ, ಕೃಷ್ಣನ ಲೆಕ್ಕ, ಭೀಮನ‌ ಲೆಕ್ಕದ ಸ್ವಾರಸ್ಯಕರ ಚರ್ಚೆ: ವಿಡಿಯೋ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.