ETV Bharat / state

ಏ.29ರಿಂದ ಮೇ 6ರ ವರೆಗೆ ಹಿರಿಯ ನಾಗರಿಕರಿಗೆ ಮನೆ ಮನೆಗೆ ತೆರಳಿ ಮತದಾನ ಪ್ರಕ್ರಿಯೆ: ಮನೋಜ್ ಕುಮಾರ್ ಮೀನಾ

author img

By

Published : Apr 26, 2023, 8:49 PM IST

Chief Electoral Officer Manoj Kumar Meena
ಮುಖ್ಯಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ

ಈ ಬಾರಿ ವಿಧಾನಸಭಾ ಚುನಾವಣೆಯ ಸಂಪೂರ್ಣ ಮಾಹಿತಿಯನ್ನು ಮುಖ್ಯಚುನಾವಣಾಧಿಕಾರಿ ನೀಡಿದ್ದಾರೆ.

ಬೆಂಗಳೂರು : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ. ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಈ ಮಾಹಿತಿ ನೀಡಿದರು.

ಏ.29ರಿಂದ ಮೇ 6ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, 99,529 ಮತದಾರರು ಮನೆಯಿಂದಲೇ ತಮ್ಮ ಹಕ್ಕನ್ನು ಚಲಾಯಿಸಲು ನೊಂದಾಯಿಸಿಕೊಂಡಿದ್ದಾರೆ. ಹಿರಿಯ ಮತದಾರರು 12.15 ಲಕ್ಷ ಮತದಾರರಿದ್ದಾರೆ. ಈ ಪೈಕಿ 5.46 ಪುರುಷರು, 6.69 ಮಹಿಳೆಯರು ಮತ್ತು ಇತರೆ 16 ಮಂದಿ ಇದ್ದಾರೆ. 12.15 ಲಕ್ಷ ಮತದಾರರ ಪೈಕಿ 80,250 ಮತದಾರರು ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಇದೇ ರೀತಿ 5.71 ಲಕ್ಷ ವಿಕಲಚೇತನ ಮತದಾರರಿದ್ದು, 3.35 ಲಕ್ಷ ಪುರುಷರು, 2.35 ಲಕ್ಷ ಮಹಿಳೆಯರು, 61 ಇತರೆ ಮತದಾರದಿದ್ದಾರೆ. ಇವರಲ್ಲಿ 19,279 ಮತದಾರರು ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ ಎಂದು ಮುಖ್ಯಚುನಾವಣಾಧಿಕಾರಿ ತಿಳಿಸಿದರು.

ಶನಿವಾರದಿಂದ (ಏ.29) ಮನೆಯಿಂದಲೇ ಮತದಾನ ಮಾಡಿಸಿಕೊಳ್ಳುವ ಕಾರ್ಯ ಆರಂಭಗೊಳ್ಳಲಿದ್ದು, ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೇ 6ರವರೆಗೆ ಮನೆಯಿಂದ ಮತದಾನಕ್ಕೆ ಅವಕಾಶ ಇದೆ. ಮನೆಯಿಂದ ಮತದಾನ ಪಡೆದುಕೊಳ್ಳಲು ಚುನಾವಣಾ ಸಿಬ್ಬಂದಿ ನೋಂದಾಯಿತ ವ್ಯಕ್ತಿಗಳಿಗೆ ಯಾವಾಗ, ಯಾವ ಸಮಯಕ್ಕೆ ಬರಲಾಗುತ್ತದೆ ಎಂಬುದರ ಬಗ್ಗೆ ಮೊದಲೇ ಮಾಹಿತಿ ನೀಡಲಾಗುತ್ತದೆ. ಇಲ್ಲಿಯೂ ಗೌಪ್ಯ ಮತದಾನವಾಗಲಿದೆ. ಇಬ್ಬರು ಚುನಾವಣಾಧಿಕಾರಿ, ಒಬ್ಬರು ವಿಡಿಯೋಗ್ರಾಫರ್, ಒಬ್ಬರು ಪೊಲೀಸ್ ಸಿಬ್ಬಂದಿ ಮತ್ತು ರಾಜಕೀಯ ಪಕ್ಷಗಳ ಏಜೆಂಟ್‌ಗಳು ಉಪಸ್ಥಿತರಿರಲಿದ್ದಾರೆ. ಇವರ ಸಮ್ಮುಖದಲ್ಲಿ ಮತದಾನ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಮನೆಯಿಂದ ಮತದಾನ ಮಾಡಿದ ಬಳಿಕ ಯಾರಿಂದ, ಎಲ್ಲಿ, ಯಾವ ಕ್ಷೇತ್ರದಲ್ಲಿ ಮತದಾನವಾಗಿದೆ ಎಂಬುದನ್ನು ಗುರುತಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿ ನೀಡಿದರು.

ಒಟ್ಟು ಮತದಾರರ ವಿವರ : ಚುನಾವಣೆಯಲ್ಲಿ 5.31 ಕೋಟಿ ಮತದಾರರ ಮತ ಚಲಾಯಿಸಲು ಅರ್ಹರಿದ್ದಾರೆ. ಇವರಲ್ಲಿ ಕೇವಲ 3.5 ಲಕ್ಷ ಮಂದಿಗೆ ಗುರುತಿನ ಚೀಟಿ ತಲುಪಿಸುವ ಕಾರ್ಯ ಮಾತ್ರ ಬಾಕಿ ಇದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ, ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆ ಕೈಗೊಂಡಿದ್ದು, ಈ ಹಿಂದೆ ಅಂದರೆ ಜ.15ರಂದು ಪ್ರಕಟಿಸಿದ್ದ ಮತದಾರರ ಅಂತಿಮ ಪಟ್ಟಿಯಲ್ಲಿ 5.30 ಕೋಟಿ ಮತದಾರರು ಮತದಾನದ ಅರ್ಹತೆ ಹೊಂದಿದ್ದರು. ಇದಾದ ಬಳಿಕ 16.04 ಲಕ್ಷ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಒಟ್ಟು 5.31 ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಸಂಪಾದಿಸಿದ್ದಾರೆ. ಇವರಲ್ಲಿ 2.67 ಕೋಟಿ ಮತದಾರರು ಪುರುಷರು, 2.64 ಕೋಟಿ ಮಹಿಳಾ ಮತದಾರರು ಮತ್ತು 4927 ಇತರೆ ಮತದಾರರಿದ್ದಾರೆ. ಮೊದಲ ಬಾರಿಗೆ ಮತ ಚಲಾಯಿಸುವವ ಯುವ ಮತದಾರರು 11.71 ಲಕ್ಷ ಇದ್ದು, 6.45 ಲಕ್ಷ ಪುರುಷರು, 5.26 ಲಕ್ಷ ಮಹಿಳೆಯರು, 181 ಇತರರು ಇದ್ದಾರೆ ಎಂದು ಮುಖ್ಯಚುನಾವಣಾಧಿಕಾರಿ ಮೀನಾ ವಿವರಿಸಿದರು.

3,048 ಅನಿವಾಸಿ ಮತದಾರರಿದ್ದು, 2,172 ಪುರುಷರು, 875 ಮಹಿಳೆಯರು, ಒಬ್ಬರು ಇತರೆ ಮತದಾರರಿದ್ದಾರೆ. 2022ರ ಸೆಪ್ಟೆಂಬರ್ ತಿಂಗಳಿನಿಂದ 2023ರ ಏಪ್ರಿಲ್ 25ರವರೆಗೆ 37.94 ಲಕ್ಷ ಮತದಾರರ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಇನ್ನು 3.5 ಲಕ್ಷ ಬಾಕಿ ಇದ್ದು, ಈ ತಿಂಗಳ ಅಂತ್ಯಕ್ಕೆ ವಿತರಣೆ ಮಾಡಲಾಗುವುದು. ಇನ್ನು, ಮತದಾರರ ಚೀಟಿಯನ್ನು ಮತದಾನ ದಿನಾಂಕದ 10 ದಿನಗಳ ಮುಂಚಿತವಾಗಿ ಎಲ್ಲಾ ಅರ್ಹ ಮತದಾರರಿಗೆ ಜಿಲ್ಲಾ ಚುನಾವಣಾಧಿಕಾರಿಯಿಂದ ವಿತರಣೆ ಮಾಡಲಾಗುವುದು. ಮತದಾರರ ಚೀಟಿ ವಿತರಣೆ ಬಳಿಕ ಅವರಿಂದ ಸಹಿಯನ್ನು ಪಡೆದುಕೊಳ್ಳಲಾಗುವುದು ಎಂಬುದನ್ನು ಮುಖ್ಯಚುನಾವಣಾಧಿಕಾರಿ ಮಾಹಿತಿ ನೀಡಿದ್ರು.

ದೇಶ ಮತ್ತು ವಿಶ್ವದಲ್ಲಿ 561 ಇಲಾಖೆ/ಕಚೇರಿಗಳಲ್ಲಿ 47,488 ಸೇವಾ ಮತದಾರರಿದ್ದಾರೆ. 45,897 ಪುರುಷರು, 1581 ಮಹಿಳಾ ಸೇವಾ ಮತದಾರರಿದ್ದಾರೆ. ಎಲ್ಲಾ ಸೇವಾ ಮತದಾರರಿಗೆ ವಿದ್ಯುನ್ಮಾನವಾಗಿ ಅಂಚೆ ಮತಪತ್ರಗಳನ್ನು ಸಿದ್ಧಪಡಿಸಿ ಕಳುಹಿಸಲಾಗಿದೆ. ಎಲ್ಲಾ ಸೇವಾ ಮತದಾರರಿಂದ ಚಲಾಯಿಸುವ ಅಂಚೆ ಮತಪತ್ರಗಳು ಎಣಿಕೆಯ ದಿನದಂದು ಬೆಳಗ್ಗೆ 8 ಗಂಟೆಗೆ ಅಥವಾ ಅದಕ್ಕಿಂತ ಮುಂಚಿತವಾಗಿ ಚುನಾವಣಾಧಿಕಾರಿಗಳಿಗೆ ತಲುಪಬೇಕಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ ಸೇವಾ ಮತದಾರಿದ್ದಾರೆ. 20,424 ಸೇವಾ ಮತದಾರರಿದ್ದಾರೆ. ನಂತರ ಬಾಗಲಕೋಟೆ ಜಿಲ್ಲೆಯಲ್ಲಿ 3,262 ಸೇವಾ ಮತದಾರರಿದ್ದಾರೆ ಎಂದು ಮುಖ್ಯಚುನಾವಣಾಧಿಕಾರಿ ವಿವರಿಸಿದರು.

ಮತದಾರರ ಸಂಖ್ಯೆಗನುಗುಣವಾಗಿ ಈ ಮೊದಲು 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತದಾರರ ಸಂಖ್ಯೆ ನೊಂದಣಿಯಲ್ಲಿ ಹೆಚ್ಚಳವಾಗಿರುವುದರಿಂದ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 263 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ಒಟ್ಟು 58282 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2018ರ ಚುನಾವಣೆಯಲ್ಲಿ 56,696 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಚುನಾವಣೆಯಲ್ಲಿ 1,15,707 ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುತ್ತದೆ. 82,543 ಕಂಟ್ರೋಲ್ ಯೂನಿಟ್, 89,379 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈಗಾಗಲೇ ಇವಿಎಂ ಬಗ್ಗೆ ಅರಿವು ಕಾರ್ಯಕ್ರಮ ಮಾಡಲಾಗಿದೆ. ಎಲ್ಲಾ ಜಿಲ್ಲೆಯಲ್ಲಿಯೂ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. 16 ವಿಧಾನಸಭೆ ಕ್ಷೇತ್ರದಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇರುವುದರಿಂದ ಎರಡು ಬ್ಯಾಲೆಟ್ ಯೂನಿಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಮುಖ್ಯಚುನಾವಣಾಧಿಕಾರಿ ಹೇಳಿದ್ರು.

80,459 ಮಂದಿ ಭದ್ರತೆಗೆ ನಿಯೋಜನೆ : ಚುನಾವಣೆ ಶಾಂತಿಯುತವಾಗಿ ನಡೆಸಲು ಭದ್ರತೆಗಾಗಿ 80,459 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 54,682 ಪೊಲೀಸ್ ಸಿಬ್ಬಂದಿ, 20 ಸಾವಿರ ಗೃಹ ರಕ್ಷಕ ಸಿಬ್ಬಂದಿ, 90 ಕೆಎಸ್‌ಆರ್‌ಪಿ ತುಕಡಿ, 5,037 ಸಿಎಆರ್/ಡಿಎಆರ್, 650 ಎಸ್‌ಎಪಿ/ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 650 ಎಸ್‌ಎಪಿ/ಸಿಎಪಿಎಫ್ ಸಿಬ್ಬಂದಿ ಪೈಕಿ 405 ಸಿಬ್ಬಂದಿ ಈಗಾಗಲೇ ರಾಜ್ಯಕ್ಕೆ ಆಗಮಿಸಿದ್ದು, 245 ಸಿಬ್ಬಂದಿ ಶೀಘ್ರದಲ್ಲಿಯೇ ಬರಲಿದ್ದಾರೆ ಎಂಬ ವಿವರವನ್ನು ಮುಖ್ಯಚುನಾವಣಾಧಿಕಾರಿ ಸಲ್ಲಿಸಿದರು.

2,615 ಅಭ್ಯರ್ಥಿಗಳು ಕಣದಲ್ಲಿ : ಚುನಾವಣಾ ಕಣದಲ್ಲಿ 2,615 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 2429 ಪುರುಷರು, 185 ಮಹಿಳೆಯರು ಮತ್ತು ಒಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಳ್ಳಾರಿ ನಗರ ವಿಧಾನಕ್ಷೇತ್ರದಲ್ಲಿ 24 ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು, ಚಿತ್ರದುರ್ಗ ಕ್ಷೇತ್ರದಲ್ಲಿ 21 ಅಭ್ಯರ್ಥಿಗಳು, ಯಲಹಂಕ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆರು ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಯಮಕನಮರಡಿ, ದೇವದುರ್ಗ, ತೀರ್ಥಹಳ್ಳಿ, ಕುಂದಾಪುರ, ಕಾಪು, ಮಂಗಳೂರು, ಬಂಟ್ವಾಳ ಕ್ಷೇತ್ರದಲ್ಲಿ ತಲಾ ಐವರಂತೆ ಸ್ಪರ್ಧಿಸಿದ್ದಾರೆ ಎಂದು ಮುಖ್ಯಚುನಾವಣಾಧಿಕಾರಿ ತಿಳಿಸಿದರು.

ಇದನ್ನೂ ಓದಿ : ಸಿದ್ದರಾಮಯ್ಯ ವರುಣಾ ಕ್ಷೇತ್ರ ಅಭಿವೃದ್ಧಿ ಮಾಡಿದ್ದರೆ ಕೈ ಮುಗಿದು ನಾ ಹೊರಟು ಹೋಗುವೆ: ವಿ ಸೋಮಣ್ಣ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.