ETV Bharat / state

ಬೆಂಗಳೂರು: ಎರಡು ತಲೆಯ 2 ಹಾವು, 12 ಜಿಂಕೆ ಕೊಂಬು, ಆನೆ ದಂತಗಳು ವಶ.. ಐವರ ಬಂಧನ

author img

By ETV Bharat Karnataka Team

Published : Nov 7, 2023, 4:58 PM IST

Updated : Nov 7, 2023, 6:56 PM IST

ವನ್ಯಜೀವಿ ಸಂರಕ್ಷಣಾ ಕಾಯ್ದೆ
ವನ್ಯಜೀವಿ ಸಂರಕ್ಷಣಾ ಕಾಯ್ದೆ

ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯ ಆರೋಪದ ಮೇರೆಗೆ ಐವರು ಆರೋಪಿಗಳನ್ನು ವೈಯಾಲಿ ಕಾವಲ್​ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಜಿಂಕೆ ಕೊಂಬು, ಆನೆ ದಂತ, ಮಾಂಸ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನ ವೈಯಾಲಿ ಕಾವಲ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂದ್ರಶೇಖರ್, ರಂಗಸ್ವಾಮಿ, ಲೋಕೇಶ್, ಶೇಖರ್ ಹಾಗೂ ರೈಮಂಡ್ ಬಂಧಿತ ಆರೋಪಿಗಳು. ವೈಯಾಲಿ ಕಾವಲ್ 18ನೇ ಕ್ರಾಸ್ ಹಾಗೂ ಗುಟ್ಟಹಳ್ಳಿ ಸರ್ಕಲ್ ಬಳಿ ದಂಧೆಯಲ್ಲಿ ತೊಡಗಿದ್ದಾಗ, ಖಚಿತ ಸುಳಿವಿನ ಮೇಲೆ ಆರೋಪಿಗಳನ್ನ ಬಂಧಿಸಲಾಗಿದೆ.

ಬಂಧಿತರಿಂದ ಎರಡು ತಲೆಯ ಎರಡು ಹಾವುಗಳು, 12 ಜಿಂಕೆ ಕೊಂಬು ಹಾಗೂ ಆನೆ ದಂತಗಳನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

Bengaluru crime
ಬಂಧಿತ ಆರೋಪಿಗಳು

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಬಹಿರಂಗಪಡಿಸದಂತೆ ಆದೇಶ: ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ವಶಪಡಿಸಿಕೊಳ್ಳುವ ವಸ್ತುಗಳ ಮೌಲ್ಯವನ್ನ ಬಹಿರಂಗಪಡಿಸದಂತೆ ಪೊಲೀಸ್ ಇಲಾಖೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ. ಕಳ್ಳ ದಾಸ್ತಾನು ಮಾಡಿರುವ, ಕಳ್ಳ ಸಾಗಾಣಿಕೆಯ ವಿರುದ್ಧ ಪೊಲೀಸರು ದಾಳಿ ನಡೆಸಿ, ಆರೋಪಿಗಳ ವಿರುದ್ಧ ಪ್ರಕರಣಗಳನ್ನ ದಾಖಲಿಸುವ ವೇಳೆ ವಶಪಡಿಸಿಕೊಂಡ ವಸ್ತುಗಳ ಮೌಲ್ಯವನ್ನ ಬಹಿರಂಗಪಡಿಸುವುದರಿಂದ ಕಳ್ಳಸಾಗಾಣಿಕೆದಾರರಿಗೆ ಅವುಗಳ ಮೌಲ್ಯ ತಿಳಿಯುತ್ತದೆ. ಇದರಿಂದ ಅತೀ ಹೆಚ್ಚು ಮೌಲ್ಯ ಇರುವ ವನ್ಯ ಜೀವಿಗಳ ಹತ್ಯೆ, ಕಳ್ಳತನ, ಸಾಗಾಣಿಕೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಆದ್ದರಿಂದ ಸಾರ್ವಜನಿಕ ಮೌಲ್ಯ ನಿಗದಿಪಡಿಸುವುದಾಗಲಿ, ಅದರ ಮಾರುಕಟ್ಟೆ ಮೌಲ್ಯ ನಮೂದಿಸಿ ಹೇಳಿಕೆ ನೀಡುವುದಾಗಲಿ ಮಾಡದಂತೆ ಆದೇಶದಲ್ಲಿ‌ ಅಲೋಕ್ ಮೋಹನ್ ಅವರು ಸೂಚಿಸಿದ್ದಾರೆ.

ಇದನ್ನೂ ಓದಿ: ತುಮಕೂರು: ಮಾಂಸಕ್ಕಾಗಿ ಬಾವಲಿಗಳ ಬೇಟೆ; ನಾಲ್ವರ ಬಂಧನ

ಇತ್ತೀಚಿನ ಸುದ್ದಿಗಳು: ಮತ್ತೊಂದು ಇಂತಹದೇ ಪ್ರಕರಣದಲ್ಲಿ ಇತ್ತೀಚೆಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಾಡರಾಮನಹಳ್ಳಿಯಲ್ಲಿ ಮಾಂಸಕ್ಕಾಗಿ ಎಂಟು ಬಾವಲಿಗಳನ್ನು ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿ ಅಕ್ಟೋಬರ್ 30 ರಂದು ಅರೆಸ್ಟ್ ಮಾಡಿದ್ದರು. ಮಾಗಡಿ ತಾಲೂಕಿನ ಹೊಂಬಾಳಮ್ಮಪೇಟೆಯ ನಿವಾಸಿಗಳಾದ ರಂಗನಾಥ, ರಾಮಕೃಷ್ಣ, ಶಿವಶಂಕರ ಹಾಗೂ ರಂಗನಾಥ ಎಂದು ಆರೋಪಿಗಳನ್ನು ಗುರುತಿಸಲಾಗಿತ್ತು.

ಆರೋಪಿಗಳು ಕಾಡರಾಮನಹಳ್ಳಿಯ ಜಮೀನೊಂದರಲ್ಲಿ 8 ಬಾವಲಿಗಳನ್ನು ಮಾಂಸಕ್ಕಾಗಿ ಬೇಟೆಯಾಡಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಹುಲಿಯೂರುದುರ್ಗ ವಲಯ ಅರಣ್ಯಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಸೆರೆ ಹಿಡಿದಿದ್ದರು. ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಸಾಮಾನ್ಯ ಕಾಗೆಗಳು, ಬಾವಲಿಗಳು ಹಾಗೂ ಇಲಿಗಳನ್ನು ಸಂರಕ್ಷಿತ ಪಟ್ಟಿ 2ರಡಿಯಲ್ಲಿ ತರಲಾಗಿದೆ. ಈ ತಿದ್ದುಪಡಿಯಂತೆ ಸಂರಕ್ಷಿತ ಪಟ್ಟಿಯಡಿಯಲ್ಲಿರುವ ಪ್ರಾಣಿಗಳನ್ನು ಕೊಂದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 25,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ.

ನವಿಲು ಬೇಟೆ-ಒಡಿಶಾ ಮೂಲದ ಮೂವರು ಸೆರೆ : ಮಾಂಸಕ್ಕಾಗಿ ನವಿಲು ಬೇಟೆಯಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ತುಮಕೂರು ಜಿಲ್ಲೆಯ ಮಾರನಾಯಕಪಾಳ್ಯದಲ್ಲಿ ನಡೆದಿತ್ತು. ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಮೂವರು ಸೆರೆಯಾಗಿದ್ದರು. ಬಂಧಿತರನ್ನು ಬಿಟ್ಟಿಂಗ್​ ನಾಯಕ್​, ಬೈಷಾಕ್​ದಾವು ಮತ್ತು ದುಬಾ ಕಾಪತ್ ಎಂದು ಗುರುತಿಸಲಾಗಿತ್ತು.

Last Updated :Nov 7, 2023, 6:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.