ETV Bharat / state

ಮಕ್ಕಳಿಗೆ ಮೊದಲು ಪುಸ್ತಕ, ಸಮವಸ್ತ್ರ ನಂತರ ಪಠ್ಯಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ

author img

By

Published : May 31, 2023, 6:48 PM IST

education-minister-madhu-bangarappa-talks-about-revision-of-textbooks
ಮಕ್ಕಳಿಗೆ ಮೊದಲು ಪುಸ್ತಕ, ಸಮವಸ್ತ್ರ ನಂತರ ಪಠ್ಯಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಂತೆ ಪಠ್ಯಪುಸ್ತಕ ಪರಿಷ್ಕರಣೆ ಆಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಮಕ್ಕಳಿಗೆ ಮೊದಲು ಪುಸ್ತಕ, ಸಮವಸ್ತ್ರ ನಂತರ ಪಠ್ಯಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ

ದೇವನಹಳ್ಳಿ: ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿ, ಬಸವನಪುರ ಮತ್ತು ಜಾಲಿಗೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದರು. ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕದೊಂದಿಗೆ ಹೂ ಕೊಟ್ಟು ಸಿಹಿ ವಿತರಣೆ ಮಾಡಿ ಮಕ್ಕಳಿಗೆ ಸ್ವಾಗತ ಕೋರಿದರು.

ಅರದೇಶನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 2023-2024ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಸಾಧನೆ ಮಾಡಬೇಕು. ಶಿಕ್ಷಣದಿಂದ ಯಾವುದೇ ಮಕ್ಕಳು ವಂಚಿತರಾಗಬಾರದು. ನೆರೆಹೊರೆಯಲ್ಲಿ ಯಾರಾದರೂ ಶಿಕ್ಷಣ ವಂಚಿತ ಮಕ್ಕಳು ಕಂಡುಬಂದಲ್ಲಿ ನಿಮ್ಮ ಸ್ನೇಹಿತರೆಂದು ತಿಳಿದು ಅವರನ್ನು ಶಾಲೆಗೆ ಕರೆದುಕೊಂಡು ಬನ್ನಿ ಎಂದು ಮಕ್ಕಳನ್ನು ಪ್ರೇರೇಪಿಸಿದರು ಹಾಗೂ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಶಿಕ್ಷಕರ, ಪೋಷಕರ ಸಹಕಾರ ಅಗತ್ಯ ಎಂದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲು ಮಕ್ಕಳಿಗೆ ಪುಸ್ತಕ ಹಾಗೂ ಸಮವಸ್ತ್ರ ನೀಡಿ, ಮಕ್ಕಳು ಶಾಲೆಗೆ ಬರುವುದೇ ಓದುವುದಕ್ಕೆ, ಪಠ್ಯಪುಸ್ತಕ ಪರಿಷ್ಕರಣೆ ಸಹ ಮುಖ್ಯವಾಗಿದೆ, ಅವುಗಳನ್ನ ಹಂತ ಹಂತವಾಗಿ ಮಾಡಲಾಗುವುದು, ಮುಖ್ಯಮಂತ್ರಿಗಳ ಮಾರ್ಗದರ್ಶನದಂತೆ ಪರಿಷ್ಕರಣೆ ಮಾಡಲಾಗುವುದು ಎಂದರು, ಇದೇ ವೇಳೆ ಪಠ್ಯಪುಸ್ತಕದಲ್ಲಿನ ಯಾವು ಪಾಠಗಳನ್ನ ತೆಗೆಯಲಾಗುತ್ತದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಮಕ್ಕಳ ಭವಿಷ್ಯ ಹಿತಕ್ಕೆ ಇರುವ ಪಾಠಗಳು ಇದ್ದೇ ಇರುತ್ತವೆ, ಇದರ ಜೊತೆಗೆ ಹೊಸ ಪಾಠಗಳನ್ನ ಸೇರಿಸುವ ಅಥವಾ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ತಜ್ಞರು ತಿರ್ಮಾನಿಸುತ್ತಾರೆ ಎಂದರು.

ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದು ಹೀಗೆ..

ಶಿಕ್ಷಕರ ನೇಮಕಾತಿ ಹಂತ ಹಂತವಾಗಿ ಆಗುತ್ತೆ, ಮೊದಲಿಗೆ ಶಿಕ್ಷಕರ ವರ್ಗಾವಣೆ ಗೊಂದಲ ಇದ್ದು, ವರ್ಗಾವಣೆ ಬಯಸಿ 87 ಸಾವಿರ ಅರ್ಜಿ ಬಂದಿದೆ, ಇದರಲ್ಲಿ ಅರ್ಹತೆ ಇರುವ 20 ರಿಂದ 25 ಸಾವಿರ ಅರ್ಜಿಗಳಿಗೆ ನಿನ್ನೆ ಸಂಜೆ ಅನುಮೋದನೆ ನೀಡಿದ್ದೇವೆ, ಅದರ ಪ್ರಕ್ರಿಯೆ ಇವತ್ತಿನಿಂದ ಆರಂಭ ಆಗುತ್ತೆ. ಶಿಕ್ಷಕರ ವರ್ಗಾವಣೆಯನ್ನ ಹಿಂದಿನ ಸರ್ಕಾರ ಯಾವ ಕಾರಣಕ್ಕೆ ಸಾಕಷ್ಟು ದಿನಗಳಿಂದ ಪೆಂಡಿಂಗ್ ಇಟ್ಟುಕೊಂಡಿತ್ತೋ ಗೊತ್ತಿಲ್ಲ ಎಂದು ಹೇಳಿದರು.

ಪ್ರಣಾಳಿಕೆ ಯೋಜನೆಗಳು ಗ್ಯಾರಂಟಿ ಜಾರಿಯಾಗುತ್ತದೆ: ಪ್ರಣಾಳಿಕೆ ಉಪಾಧ್ಯಕ್ಷ ನಾನೇ ಆಗಿರೋದ್ರಿಂದ ಗ್ಯಾರಂಟಿ ಯೋಜನೆಗಳು ಜಾರಿ ಆಗುತ್ತವೆ. ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಪ್ರತಿಕ್ರಿಯೆ ಅವರು ಮುಖ್ಯಮಂತ್ರಿಗಳು ಅಧಿಕಾರ ಸ್ವೀಕಾರ ಮಾಡಿದ ಕ್ಷಣದಿಂದ ಗ್ಯಾರಂಟಿ ಯೋಜನೆ ಮಾಡುತ್ತೇವೆ ಎಂದು ಹೇಳಿದ್ದಾರೆ, ಅದಕ್ಕೆ ಕೆಲವೊಂದು ನಿಯಮಗಳು ಇರುತ್ತವೆ ಅದನ್ನ ಚರ್ಚೆ ಮಾಡ್ತಾ ಇದ್ದಾರೆ, ಪ್ರಣಾಳಿಕೆ ಉಪಾಧ್ಯಕ್ಷ ನಾನೇ ಆಗಿರೋದ್ರಿಂದ ಗ್ಯಾರಂಟಿ ಯೋಜನೆಗಳು ಜಾರಿ ಆಗುತ್ತವೆ ಎಂದರು.

ಇದನ್ನೂ ಓದಿ: ಮಕ್ಕಳಿಗೆ ಸಿಹಿ ನೀಡಿ ಶಾಲೆಗೆ ಸ್ವಾಗತಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.