ETV Bharat / state

ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದು ಹೀಗೆ..

author img

By

Published : May 31, 2023, 5:06 PM IST

Updated : May 31, 2023, 5:54 PM IST

"ವಿದ್ಯಾರ್ಥಿಗಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಬಹುದಾದ ಭಾಗಗಳನ್ನು ಕೈಬಿಡಲಾಗುವುದು" ಎಂದು ಕಾಂಗ್ರೆಸ್ ಸರ್ಕಾರ ಹೇಳಿದೆ. ಇನ್ನೊಂದೆಡೆ ಬಿಜೆಪಿ ನಾಯಕರು ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

DK Shivakumar
ಡಿಸಿಎಂ ಡಿ.ಕೆ. ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದರು.

ಬೆಂಗಳೂರು: "ನಾವು ಪ್ರಣಾಳಿಕೆಯನ್ನು ಹೊರ ತಂದಿದ್ದೇವೆ. ಕರ್ನಾಟಕವು ರಾಜ್ಯ ಶಿಕ್ಷಣ ನೀತಿಯನ್ನು ಹೊಂದಿದೆ. ನಾಗ್ಪುರ ಶಿಕ್ಷಣ ನೀತಿ ಹೊಂದಿಲ್ಲ. ನಾವು ಈ ಬಗ್ಗೆ ಸುದೀರ್ಘವಾಗಿ ಮತ್ತು ವಿಸ್ತಾರವಾಗಿ ಚರ್ಚಿಸುತ್ತೇವೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದರು.

ಎರಡು ತಿಂಗಳ ಬೇಸಿಗೆ ರಜೆಯ ನಂತರ ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳು ಬುಧವಾರ ಪುನರಾರಂಭಗೊಂಡಿದ್ದು, ಪಠ್ಯಕ್ರಮದ ಪರಿಷ್ಕರಣೆ ವಿಚಾರವು ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಗೊಂದಲದ ಸ್ಥಿತಿಗೆ ದೂಡಿದೆ. ವಿದ್ಯಾರ್ಥಿ ಸಮುದಾಯ, ಬೋಧಕ ಬಂಧುತ್ವ ಮತ್ತು ಪೋಷಕರು ಪಠ್ಯಕ್ರಮದ ಯಾವ ಭಾಗವನ್ನು ತೆಗೆದುಹಾಕಲಿದ್ದಾರೆ ಹಾಗೂ ಯಾವುದನ್ನು ಸೇರಿಸಲಿದ್ದಾರೆ ಎಂದು ಖಚಿತವಾಗಿಲ್ಲ.

"ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷಪೂರಿತವಾಗಿರುವ ಭಾಗಗಳನ್ನು ಕೈಬಿಡಲಾಗುವುದು" ಎಂದು ಕಾಂಗ್ರೆಸ್ ಸರ್ಕಾರ ಹೇಳಿದೆ. ಮತ್ತೊಂದೆಡೆ, "ನಗರ ನಕ್ಸಲರು ವಿಷಯಗಳನ್ನು ನಿಯಂತ್ರಿಸಿದರೆ ಸುಮ್ಮನಿರುವುದಿಲ್ಲ" ಎಂದು ಬಿಜೆಪಿ ಎಚ್ಚರಿಸಿದೆ. ಈ ಹೇಳಿಕೆಗಳು ವಿಷಯಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ.

ರಾಜ್ಯದಲ್ಲಿವೆ 62,229 ಶಾಲೆಗಳು: ಆದರೆ, ಶಾಲೆಗಳ ಪುನಾರಂಭದ ಮೊದಲ ದಿನವೇ ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರವನ್ನು ವಿತರಿಸಲಾಯಿತು. ಈ ನಡುವೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾಥಮಿಕ ಶಾಲೆಗಳಿಗೆ ಬುಧವಾರ ಭೇಟಿ ನೀಡಿ ಪುಸ್ತಕಗಳನ್ನು ವಿತರಿಸಿದರು. ಅವರು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಸರ್ಕಾರಿ ಮತ್ತು ಖಾಸಗಿ ಸೇರಿ ರಾಜ್ಯದಲ್ಲಿ 62,229 ಶಾಲೆಗಳಿವೆ. ಅವುಗಳಲ್ಲಿ 25,278 ಪ್ರಾಥಮಿಕ, 36,951 ಪ್ರೌಢಶಾಲೆಗಳು ಮತ್ತು 15,867 ಮಧ್ಯಮ ಶಾಲೆಗಳು. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೂ ಸಿದ್ಧತೆ ನಡೆದಿದೆ.

ಕಲಿಕೆಯ ಅಂತರವನ್ನು ಕಡಿಮೆ ಮಾಡುವ ಗುರಿ: 1ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ 10 ದಿನಗಳವರೆಗೆ ಸೇತು ಬಂಧ ಕಾರ್ಯಕ್ರಮ ಹಾಗೂ 4ರಿಂದ 10ನೇ ತರಗತಿಗೆ 15 ದಿನಗಳ ಕಾರ್ಯಕ್ರಮ ಪ್ರಾರಂಭಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಶಾಲೆಗಳಿಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ. ಸೇತು ಬಂಧ ಯೋಜನೆಯಡಿ, ದೈಹಿಕ ತರಗತಿಗಳನ್ನು ನಡೆಸದ ಕಾರಣ ಕಳೆದು ಹೋದ ಕಲಿಕಾ ಅವಧಿಗಳನ್ನು ಸರಿದೂಗಿಸಲು ವಿದ್ಯಾರ್ಥಿಗಳಿಗೆ ಹಿಂದಿನ ತರಗತಿಗಳು ಮತ್ತು ಮುಂದಿನ ತರಗತಿಗಳಿಂದ ಪಾಠಗಳನ್ನು ಕಲಿಸಲಾಗುತ್ತದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳ ನಡುವಿನ ಕಲಿಕೆಯ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯ- ಮಧು ಬಂಗಾರಪ್ಪ: ‘ಮಕ್ಕಳ ಮನಸ್ಸಿನಲ್ಲಿ ವಿಷ ತುಂಬುವ ಪಠ್ಯ ಮತ್ತು ಪಾಠಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ, ಹಂತ ಹಂತವಾಗಿ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೆ ಭರವಸೆ ನೀಡಿದೆ. "ಹಂತ ಹಂತವಾಗಿ ಪರಿಷ್ಕರಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಯಾವ ಪಾಠವು ಮಕ್ಕಳ ಮನಸ್ಸನ್ನು ಕೆಡಸುವಂತ ಭಾಗವಿದೆಯೋ ಅದನ್ನು ಬದಲಾಯಿಸಲಾಗುವುದು" ಎಂದು ಅವರು ತಿಳಿಸಿದರು.

ಪಠ್ಯಪುಸ್ತಕ ಪರಿಷ್ಕರಣೆ ಖಚಿತ, ತಂಡ ರಚನೆ: ಮಕ್ಕಳ ಭವಿಷ್ಯ, ಚಿಂತನೆ ಹಾಗೂ ಮಕ್ಕಳ ಅವಶ್ಯಕತೆ ಇರುವ ವಿದ್ಯಾಭ್ಯಾಸ ಬಿಟ್ಟು ಬೇರೆ ಏನಾದರೂ ಪಠ್ಯದಲ್ಲಿ ಇದ್ದರೆ, ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ಬಂದು ಪರಿಷ್ಕರಣೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ನಿರ್ದೇಶನದಂತೆ ನಾನೇ ಒಂದು ತಂಡವನ್ನು ರಚನೆ ಮಾಡಿಕೊಳ್ಳುತ್ತಿದ್ದೇನೆ. ಕೆಲವು ದಿನಗಳಲ್ಲಿ ತಂಡ ರಚನೆಯಾಗಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಲಭಿಸಲಿದೆ. ಪಠ್ಯಪುಸ್ತಕದಲ್ಲಿರುವ ಎಲ್ಲಾ ವಿಚಾರಗಳನ್ನು ಕೂಡ ಪರಿಶೀಲನೆ ಮಾಡಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದ್ದರು.

ಇದನ್ನೂ ಓದಿ: ಗ್ಯಾರಂಟಿಗಳನ್ನು ಎಲ್ಲರಿಗೂ ಫ್ರೀ ಕೊಡಲು ಆಗಲ್ಲ: ಶಿವಲಿಂಗೇಗೌಡ

Last Updated : May 31, 2023, 5:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.