ETV Bharat / sports

Exclusive: 'ಭಾರತ ಬಲಶಾಲಿ ತಂಡ, ಗೆಲ್ಲುವುದು ಕಠಿಣ ಸವಾಲು'- ಕ್ರಿಕೆಟಿಗ ಮುಶ್ಫಿಕರ್ ರಹೀಮ್ ತಂದೆಯ ಮಾತು

author img

By ETV Bharat Karnataka Team

Published : Oct 19, 2023, 6:05 PM IST

Updated : Oct 19, 2023, 6:14 PM IST

ಮಹಬೂಬ್ ಹಬೀಬ್
ಮಹಬೂಬ್ ಹಬೀಬ್

ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ಭಾರತದ ವಿರುದ್ಧ ಇಂದು ಬಾಂಗ್ಲಾದೇಶ ಸೆಣಸಾಡುತ್ತಿದೆ. ಬಾಂಗ್ಲಾ ವಿಕೆಟ್​ ಕೀಪರ್​ ಮುಶ್ಫಿಕರ್ ರಹೀಮ್ ಅವರ ತಂದೆ ಮಹಬೂಬ್ ಹಬೀಬ್ ಅವರು ಪಂದ್ಯ ವೀಕ್ಷಣೆಯ ವೇಳೆ ಈಟಿವಿ ಭಾರತ್ ಪ್ರತಿನಿಧಿ ಸಜ್ಜದ್ ಸೈಯದ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಪುಣೆ (ಮಹಾರಾಷ್ಟ್ರ): 27 ವರ್ಷಗಳ ನಂತರ ಮಹಾರಾಷ್ಟ್ರದ ಪುಣೆಯಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯ (ಗುರುವಾರ) ನಡೆಯುತ್ತಿದೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ. ಭಾರತ ಕ್ರಿಕೆಟ್​ ತಂಡಕ್ಕೆ ಬಾಂಗ್ಲಾದೇಶ ಠಕ್ಕರ್​ ನೀಡಲಿದೆ ಎಂದು ಭಾವಿಸಿರುವ ಬಾಂಗ್ಲಾ ಅಭಿಮಾನಿಗಳ ಜತೆಗೆ ತಂಡದ ವಿಕೆಟ್‌ಕೀಪರ್ ಮುಶ್ಫಿಕರ್ ರೆಹಮಾನ್ ಅವರ ತಂದೆ ಮಹಬೂಬ್ ಹಬೀಬ್ ಕ್ರೀಡಾಂಗಣದಲ್ಲಿ ಹಾಜರಿದ್ದಾರೆ.

ಪಂದ್ಯಾರಂಭಕ್ಕೂ ಮೊದಲು ಮಹಬೂಬ್ ಹಬೀಬ್ ಅವರು ಈಟಿವಿ ಭಾರತ್​ ಜತೆಗೆ ಮಾತನಾಡಿದ್ದು, ಬಾಂಗ್ಲಾದೇಶ ತಂಡ ಭಾರತದ ವಿರುದ್ಧ ಉತ್ತಮವಾಗಿ ಸೆಣಸಾಡಲಿವೆ. ಜಯ ಕೂಡ ದಕ್ಕಬಹುದು. ಆದರೆ, ಭಾರತ ತಂಡ ಅತ್ಯಂತ ಬಲಶಾಲಿಯಾಗಿದ್ದು, ಸೋಲಿಸುವುದು ಕಠಿಣ ಸವಾಲು ಎಂದೂ ಒಪ್ಪಿಕೊಂಡರು.

ಪ್ರಬಲ ಭಾರತದೆದುರು ಬಾಂಗ್ಲಾದೇಶ ಗೆಲ್ಲುವ ನಿರೀಕ್ಷೆ ನನಗಿದೆ. ಜಯ ಗಳಿಸುವುದು ಅಷ್ಟು ಸುಲಭವಲ್ಲ ಎಂದು ಗೊತ್ತಿದೆ. ಆದರೆ ಅಷ್ಟು ಸಲೀಸಾಗಿ ನಮ್ಮ ತಂಡ ಸೋಲದೆಂಬ ನಿರೀಕ್ಷೆಯೂ ಇದೆ. ಭಾರತ ತಂಡ ಪ್ರಶಸ್ತಿ ಗೆಲ್ಲುವ ಫೇವರೇಟ್​ ತಂಡಗಳಲ್ಲಿ ಒಂದು. ಟೂರ್ನಿಯಲ್ಲಿ ಅತ್ಯುತ್ತಮವಾಗಿ ಆಡುವ ತಂಡ ವಿಶ್ವಕಪ್​ ಎತ್ತಿ ಹಿಡಿಯಲಿದೆ ಎಂದರು.

ಇದೇ ವೇಳೆ ತಮ್ಮ ಪುತ್ರ, ತಂಡದ ವಿಕೆಟ್​ ಕೀಪರ್​ ಆಗಿರುವ ಮುಶ್ಫಿಕರ್ ರಹೀಮ್ ಪಂದ್ಯದಲ್ಲಿ ಉತ್ತಮವಾಗಿ ಆಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಹೀಮ್​ 46 ಎಸೆತಗಳಲ್ಲಿ 38 ರನ್​ ಗಳಿಸಿ ಜಸ್ಪ್ರೀತ್​ ಬೂಮ್ರಾ ಎಸೆತದಲ್ಲಿ ಔಟಾದರು.

ವಿರಾಟ್​, ಗಿಲ್​, ರೋಹಿತ್​ಗೆ ಮೆಚ್ಚುಗೆ​: ಭಾರತ ತಂಡದ ಬಗ್ಗೆಯೂ ಮಾತನಾಡಿರುವ ಮಹಬೂಬ್ ಹಬೀಬ್​, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಆರಂಭಿಕ ಶುಭ್​ಮನ್ ಗಿಲ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ತಂಡದ ಶಕ್ತಿಯಾಗಿದ್ದಾರೆ. ವಿರಾಟ್ ಕೊಹ್ಲಿ ತಂಡದ ದೊಡ್ಡ ಶಕ್ತಿ. ನಾಯಕ ಶರ್ಮಾ ಮತ್ತು ಗಿಲ್ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಲಿದ್ದಾರೆ ಎಂದರು.

ಪಂದ್ಯದಲ್ಲಿ ಬಾಂಗ್ಲಾ ಆರಂಭಿಕರಾದ ತನ್​ಜಿದ್​ ಹಸನ್​ ಮತ್ತು ಲಿಟ್ಟನ್​ ದಾಸ್​ ಅರ್ಧಶತಕ ಬಾರಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ದಿಢೀರ್​ ಕುಸಿತ ಕಂಡಿತು. ಮುಶ್ಫೀಕರ್​ ರಹೀಮ್ ಮತ್ತು ಮೊಹಮದುಲ್ಲಾ ಅಲ್ಪ ಕಾಣಿಕೆ ನೀಡಿ ತಂಡವನ್ನು ಮೇಲೆತ್ತುವ ಕೆಲಸ ಮಾಡಿದರು. ಮೊಹಮದ್​ ಸಿರಾಜ್​, ರವೀಂದ್ರ ಜಡೇಜಾ 'ಡಬಲ್​' ಸ್ಟ್ರೋಕ್​ ನೀಡಿದರು.

ಇದನ್ನೂ ಓದಿ: ಐಸಿಸಿ ಕ್ರಿಕೆಟ್ ವಿಶ್ವಕಪ್: ವಿರಾಟ್ ಕೊಹ್ಲಿ ಬೌಲಿಂಗ್ ಶೈಲಿ ಕಣ್ತುಂಬಿಕೊಂಡ ಕ್ರೀಡಾ ಜಗತ್ತು!

Last Updated :Oct 19, 2023, 6:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.