ETV Bharat / sports

ಲತಾ ಮಂಗೇಶ್ಕರ್ ಅಪ್ರತಿಮ ಕ್ರಿಕೆಟ್​ ಪ್ರೇಮಿ, 2011ರ ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಗೆಲುವಿಗಾಗಿ ಉಪವಾಸ ಮಾಡಿದ್ರು

author img

By

Published : Feb 6, 2022, 4:40 PM IST

ದೇಶದ ಅತ್ಯಂತ ಪ್ರಸಿದ್ಧ ಗಾಯಕಿ ಆಗಿದ್ದ ಲತಾ ಮಂಗೇಶ್ಕರ್​ ತಮ್ಮ 92ನೇ ವಯಸ್ಸಿನಲ್ಲಿ ಭಾನುವಾರ ಬೆಳಗ್ಗೆ ಬಹು ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಮಧುರ ಕಂಠದಿಂದ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ಮಂಗೇಶ್ಕರ್​, ಕ್ರಿಕೆಟ್​ ಆಟವೆಂದರೆ ಅನ್ನ, ನೀರು ಬಿಟ್ಟು ನೋಡುವಷ್ಟು ಹುಚ್ಚು ಪ್ರೇಮ ಅವರಲ್ಲಿತ್ತು. ಇದಕ್ಕೆ ಒಂದೆರಡು ನಿದರ್ಶನಗಳು ಇಲ್ಲಿವೆ..

avid cricket fan Lata Mangeskhar
ಲತಾ ಮಂಗೇಶ್ಕರ್​

ನವದೆಹಲಿ: ಸಂಗೀತ ಲೋಕದ ದಂತಕತೆ, ಗಾನ ಕೋಗಿಲೆ ಲತಾ ಮಂಗೇಶ್ಕರ್​ ಕ್ರಿಕೆಟ್​ ಪ್ರೇಮಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಆ ಕ್ರಿಕೆಟ್​ ಪ್ರೇಮ ಎಷ್ಟಿತ್ತೆಂದರೆ, 2011ರ ಏಕದಿನ ವಿಶ್ವಕಪ್ ಸೆಮಿಫೈನಲ್​ನಲ್ಲಿ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಭಾರತ ಗೆಲ್ಲಲೆಂದು ಉಪವಾಸ ಕೂಡ ಮಾಡಿದ್ದರಂತೆ.

ದೇಶದ ಅತ್ಯಂತ ಪ್ರಸಿದ್ಧ ಗಾಯಕಿ ಆಗಿದ್ದ ಲತಾ ಮಂಗೇಶ್ಕರ್​ ತಮ್ಮ 92ನೇ ವಯಸ್ಸಿನಲ್ಲಿ ಭಾನುವಾರ ಬೆಳಗ್ಗೆ ಬಹು ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಮಧುರ ಕಂಠದಿಂದ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಮಂಗೇಶ್ಕರ್, ಕ್ರಿಕೆಟ್​ ಆಟವೆಂದರೆ ಅನ್ನ, ನೀರು ಬಿಟ್ಟು ನೋಡುವಷ್ಟು ಹುಚ್ಚು ಪ್ರೇಮ ಅವರಲ್ಲಿತ್ತು. ಇದಕ್ಕೆ ಒಂದೆರಡು ನಿದರ್ಶನಗಳಿಲ್ಲಿವೆ.

1983ರ ವಿಶ್ವಕಪ್​ ಫೈನಲ್ ಪಂದ್ಯವನ್ನು ಲಾರ್ಡ್ಸ್​ ಮೈದಾನದಲ್ಲಿ ಕುಳಿತು ವೀಕ್ಷಿಸಿದ್ದ ಲತಾ ಅವರು, 2011ರಲ್ಲಿ ಭಾರತ 28 ವರ್ಷಗಳ ಬಳಿಕ ಗೆದ್ದ 2ನೇ ವಿಶ್ವಕಪ್​ ಪಂದ್ಯವನ್ನು ಮನೆಯಲ್ಲಿ ಕುಳಿತು ವೀಕ್ಷಿಸಿದ್ದರು.

ಪಾಕಿಸ್ತಾನ ವಿರುದ್ಧ ಗೆಲುವಿಗಾಗಿ ಉಪವಾಸವಿದ್ದು ಪ್ರಾರ್ಥನೆ

ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನದ ವಿರುದ್ಧದ ಸೆಮಿಫೈನಲ್​ ಪಂದ್ಯದ ವೇಳೆ ಅವರು ಭಾರತ ಗೆಲ್ಲಲಿ ಎಂದು ತೊಟ್ಟು ನೀರನ್ನು ಕುಡಿಯದೇ ಉಪವಾಸ ಇದ್ದು ಪ್ರಾರ್ಥಿಸಿದ್ದರಂತೆ. ಈ ವಿಷಯವನ್ನು ಸ್ವತಃ ಗಾನ ಕೋಗಿಲೇ ಪಿಟಿಐ ಸಂದರ್ಶನದ ವೇಳೆ ಬಹಿರಂಗ ಪಡಿಸಿದ್ದರು.

"ನಾನು ಇಡೀ ಪಂದ್ಯವನ್ನು ವೀಕ್ಷಿಸಿದ್ದೆ ಮತ್ತು ತುಂಬಾ ಚಿಂತೆಗೀಡಾಗಿದ್ದೆ. ಭಾರತ ಆಡುವಾಗ ನನ್ನ ಕುಟುಂಬದ ಪ್ರತಿಯೊಬ್ಬರೂ ಕೆಲವು ರೀತಿಯ ಮೂಢನಂಬಿಕೆಗಳನ್ನು ಅನುಸರಿಸುತ್ತಾರೆ. ನಾನು, ಮೀನಾ ಮತ್ತು ಉಷಾ ಆ ಪಂದ್ಯದ ವೇಳೆ ಒಂದು ತೊಟ್ಟು ನೀರನ್ನು ಸಹಾ ಕುಡಿದಿರಲಿಲ್ಲ. ನಾನಂತೂ ಪ್ರತಿಕ್ಷಣವೂ ಭಾರತ ಗೆಲ್ಲಬೇಕೆಂದು ಪ್ರಾರ್ಥಿಸುತ್ತಿದ್ದೆ ಮತ್ತು ಭಾರತ ಗೆದ್ದ ನಂತರ ನಾವೆಲ್ಲಾ ಅಂದು ರಾತ್ರಿ ಊಟ ಮಾಡಿದ್ದೆವು" ಎಂದು ಅವರು ತಿಳಿಸಿದ್ದರು.

ಲಾರ್ಡ್ಸ್​ನಲ್ಲಿ 1983ರ ವಿಶ್ವಕಪ್ ಫೈನಲ್ ವೀಕ್ಷಣೆ

ಇದೇ ಸಂದರ್ಶನದ ವೇಳೆ ಕ್ರಿಕೆಟ್​ನ ಕಟ್ಟಾ ಅಭಿಮಾನಿಯಾಗಿರುವ ಲತಾ ಅವರು 1983ರ ವಿಶ್ವಕಪ್​ ಫೈನಲ್​ ಅನ್ನು ನೆನೆಪಿಸಿಕೊಳ್ಳುತ್ತಾ, ​ಆ ಸಂದರ್ಭದಲ್ಲಿ ನಾನು ಸಂಗೀತ ಕಾರ್ಯಕ್ರಮಕ್ಕಾಗಿ ಲಂಡನ್​ನಲ್ಲಿದ್ದೆ. ಕಪಿಲ್ ದೇವ್​ ಮತ್ತು ತಂಡ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಗೆದ್ದ ಬಳಿಕ ನನಗೂ ಫೈನಲ್ ಪಂದ್ಯವನ್ನು ನೋಡಲೇಬೇಕೆಂಬ ಹಂಬಲ ಉಂಟಾಗಿತ್ತು. ಗ್ಯಾಲರಿಯಲ್ಲಿ ಕುಳಿತು ಐತಿಹಾಸಿಕ ಪಂದ್ಯವನ್ನು ಕಣ್ತುಂಬಿಕೊಂಡಿದ್ದೆ ಎಂದಿದ್ದರು.

"ಜೊತೆಗೆ ಕಪಿಲ್ ದೇವ್​ ಮತ್ತು ತಂಡ ಫೈನಲ್​ ಪಂದ್ಯಕ್ಕೂ ಮುನ್ನ ನನ್ನನ್ನು ಔತಣಕ್ಕೆ ಆಹ್ವಾನ ನೀಡಿದ್ದರು. ನಾನು ಭಾಗಿಯಾಗಿ ಅವರೆಲ್ಲರಿಗೂ ಶುಭಕೋರಿದ್ದೆ, ಮತ್ತೆ ವಿಶ್ವಕಪ್​ ಗೆದ್ದು ಇತಿಹಾಸ ನಿರ್ಮಿಸದ ನಂತರ ಕಪಿಲ್​ ದೇವ್​ ಭಾರತ ತಂಡದ ಜೊತೆಗೆ ಡಿನ್ನರ್​ಗೆ ಅಹ್ವಾನಿಸಿದ್ದರು. ಅಲ್ಲಿಗೆ ತೆರಳಿ ಭಾರತ ತಂಡವನ್ನು ಅಭಿನಂದಿಸಿದ್ದೆ" ಎಂದು ಅವರು ಸಂದರ್ಶನದ ವೇಳೆ ತಿಳಿಸಿದ್ದರು.

ಸಚಿನ್ ತೆಂಡೂಲ್ಕರ್​ ನನ್ನ ಮಗನಂತಿದ್ದರು

ಸಚಿನ್​ ತೆಂಡೂಲ್ಕರ್​ ನನ್ನನ್ನ ತನ್ನ ತಾಯಿಯಂತೆ ಭಾವಿಸುತ್ತಿದ್ದರು. ನಾನೂ ಕೂಡ ಮಗನಂತೆ ಅವರ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದೆ. ಸಚಿನ್​ ಮೊದಲ ಸಲ ನನ್ನನ್ನು ಆಯಿ(ಅಮ್ಮ) ಎಂದು ಕರೆದ ಕ್ಷಣವನ್ನು ನಾನೆಂದಿಗೂ ಮರೆಯಾಗುವುದಿಲ್ಲ, ಮರೆಯುವುದಿರಲಿ, ನಾನು ಅದನ್ನೂ ಊಹಿಸುವುದೂ ಇಲ್ಲ. ಅಂತಹ ಮಗನನ್ನು ಪಡೆದಿದ್ದಕ್ಕೆ ನಾನು ಧನ್ಯ ಎಂದು ಭಾವಿಸುತ್ತೇನೆ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ:ಧೋನಿ ನಿವೃತ್ತಿ ನಂತರ ನಮಗೆ ಒಬ್ಬ ಫಿನಿಷರ್​ ಸಿಕ್ಕಿಲ್ಲ, ಇನ್ನೂ ಹುಡುಕುತ್ತಲೇ ಇದ್ದೇವೆ : ರೋಹಿತ್ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.