ETV Bharat / sports

ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಸೂರ್ಯ ನಾಯಕ; ಸ್ಥಾನ ಕಳೆದುಕೊಂಡ ಸಂಜು ಸ್ಯಾಮ್ಸನ್

author img

By ETV Bharat Karnataka Team

Published : Nov 20, 2023, 10:01 PM IST

Updated : Nov 20, 2023, 10:22 PM IST

Suryakumar Yadav
Suryakumar Yadav

ವಿಶ್ವಕಪ್​ ಬೆನ್ನಲ್ಲೇ ಆಸ್ಟ್ರೇಲಿಯಾದ ವಿರುದ್ಧ ನಡೆಯಲಿರುವ 5 ಟಿ20 ಪಂದ್ಯಗಳ ಸರಣಿಗೆ ಸೂರ್ಯಕುಮಾರ್​ ಯಾದವ್​ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಹೈದರಾಬಾದ್​: ವಿಶ್ವಕಪ್​ಗೂ ಮುನ್ನ ಆರಂಭವಾಗಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯ ಏಕದಿನ ಪಂದ್ಯಗಳು ಮುಗಿದಿವೆ. 5 ಟಿ20 ಪಂದ್ಯಗಳು ಬಾಕಿ ಇದ್ದು, ಇದು ನವೆಂಬರ್​ 23ರಿಂದ ಆರಂಭವಾಗಲಿದೆ. ವಿಶ್ವಕಪ್ ಮುಗಿದ ನಾಲ್ಕು ದಿನಗಳ ಅವಧಿಯ ಅಂತರದಲ್ಲಿ ಸರಣಿ ಆರಂಭವಾಗುತ್ತಿದೆ. ಇದಕ್ಕೆ ಸೂರ್ಯಕುಮಾರ್​ ಯಾದವ್​ ನಾಯಕತ್ವದಲ್ಲಿ 15 ಜನ ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.

ನವೆಂಬರ್ 23 ರಂದು ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ-20ಸರಣಿ ಡಿಸೆಂಬರ್ 3 ರಂದು ಬೆಂಗಳೂರು​ನಲ್ಲಿ ಮುಕ್ತಾಯವಾಗಲಿದೆ. ಐರ್ಲೆಂಡ್​​ ಪ್ರವಾಸಕ್ಕೆ ಆಯ್ಕೆ ಆಗಿದ್ದ ತಂಡವನ್ನೇ ತೆಗೆದುಕೊಳ್ಳಲಾಗಿದ್ದು ಅದರಲ್ಲಿ ಎರಡು ಬದಲಾವಣೆ ಮಾಡಲಾಗಿದೆ.

ಜಸ್ಪ್ರೀತ್​ ಬುಮ್ರಾಗೆ ವಿಶ್ರಾಂತಿ: ಗಾಯದಿಂದ ಚೇತರಿಸಿಕೊಂಡ ನಂತರ ಐರ್ಲೆಂಡ್​ ಸಿರೀಸ್ ನಾಯಕತ್ವ, ಏಷ್ಯಾಕಪ್​ ಮತ್ತು ವಿಶ್ವಕಪ್​ನಲ್ಲಿ ಬುಮ್ರಾ ಆಡಿರುವುದರಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕಮ್​ಬ್ಯಾಕ್​ ಮಾಡಿದ ನಂತರ ಸತತ ಮೂರು ತಿಂಗಳ ಕಾಲ ತಂಡದಲ್ಲಿ ಬುಮ್ರಾ ಆಡಿದ್ದಾರೆ.

ಸಂಜು ಸ್ಯಾಮ್ಸನ್​ಗೆ ಅನ್ಯಾಯ: ಐರ್ಲೆಂಡ್ ಸರಣಿಯಲ್ಲಿ ವಿಕೆಟ್​ ಕೀಪಿಂಗ್​ ಜೊತೆಗೆ ಬ್ಯಾಟಿಂಗ್​ ಸಹ ಮಾಡಿದ್ದ ಸಂಜು ಸ್ಯಾಮ್ಸನ್​ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಜಿತೇಶ್ ಶರ್ಮಾ ಅವರನ್ನೇ ಪ್ರಮುಖ ಕೀಪರ್​ ಆಗಿ ತಂಡಕ್ಕೆ ತೆಗೆದುಕೊಳ್ಳಲಾಗಿದೆ.

ಕೊನೆ ಎರಡು ಪಂದ್ಯಕ್ಕೆ ಅಯ್ಯರ್​: ಆಸ್ಟ್ರೇಲಿಯಾ ಏಕದಿನ ಸರಣಿ ಮತ್ತು ವಿಶ್ವಕಪ್​ ಆಡಿರುವ ಶ್ರೇಯಸ್​ ಅಯ್ಯರ್​ ಮೊದಲ ಮೂರು ಟಿ20ಗಳಿಗೆ ಲಭ್ಯ ಇರುವುದಿಲ್ಲ. ಅಲ್ಲಿಯ ವರೆಗೆ ರುತುರಾಜ್ ಗಾಯಕ್ವಾಡ್ ತಂಡದ ಉಪನಾಯಕರಾಗಿರಲಿದ್ದಾರೆ. ರಾಯ್‌ಪುರ ಮತ್ತು ಬೆಂಗಳೂರಿನಲ್ಲಿ ಕೊನೆಯ ಎರಡು ಟಿ20 ಗಳಿಗೆ ಶ್ರೇಯಸ್ ಅಯ್ಯರ್ ಉಪನಾಯಕನಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಕೋಚ್​ ಯಾರೆಂದು ತಿಳಿಸದ ಬಿಸಿಸಿಐ: ಭಾರತದ ನಿಯೋಜಿತ ಭಾರತ ಕೋಚ್ ರಾಹುಲ್ ದ್ರಾವಿಡ್ ಕಳೆದ ಮೂರು ತಿಂಗಳಿಂದ ವಿಶ್ರಾಂತಿ ಪಡೆಯದೇ ತಂಡದೊಂದಿಗೆ ಪ್ರವಾಸ ಮಾಡಿದ್ದಾರೆ. ಹೀಗಾಗಿ ತವರಿನಲ್ಲಿ ನಡೆಯುತ್ತಿರುವ ಈ ಟಿ20 ಸರಣಿಗೆ ವಿವಿಎಸ್​ ಲಕ್ಷ್ಮಣ್​ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಾರಾ ಎಂಬ ಪ್ರಶ್ನೆ ಇದೆ. ಬಿಸಿಸಿಐ ಪ್ರಕಟಣೆಯಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ದ್ರಾವಿಡ್​ ಜವಾಬ್ದಾರಿ ವಹಿಸಿಕೊಂಡಿರುವ ಸಾಧ್ಯತೆಯೂ ಇದೆ. ಈಗಾಗಲೇ ಲಕ್ಷ್ಮಣ್​ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದಾರೆ. ಚೀನಾದ ಹ್ಯಾಂಗ್​ಝೌನಲ್ಲಿ ನಡೆದ ಏಷ್ಯಾಡ್​ನಲ್ಲಿ ಲಕ್ಷ್ಮಣ್​ ತರಬೇತಿ ಅಡಿಯಲ್ಲಿ ತಂಡ ಚಿನ್ನದ ಪದಕ ಗೆದ್ದಿದೆ. ​

ಪಂದ್ಯದ ವೇಳಾಪಟ್ಟಿ: ನವೆಂಬರ್ 23 (ಗುರುವಾರ) - ವಿಶಾಕಪಟ್ಟಣಂನಲ್ಲಿ ಮೊದಲ ಪಂದ್ಯ. ನ. 26 ತಿರುವನಂತಪುರಂ ಮತ್ತು ನ.28 ಗುವಾಹಟಿ, ಡಿಸೆಂಬರ್​ 1 ರಾಯ್‌ಪುರ, ಡಿ.3 ಬೆಂಗಳೂರು.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್

ಇದನ್ನೂ ಓದಿ:ವಿಶ್ವಕಪ್​ ಸೋತರೂ ರೋಹಿತ್​ ನಾಯಕತ್ವಕ್ಕಿಲ್ಲ ಕುತ್ತು: ಇದೇ ಕಾರಣ

Last Updated :Nov 20, 2023, 10:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.