ETV Bharat / sports

ವಿಶ್ವಕಪ್​ ಸೋತರೂ ರೋಹಿತ್​ ನಾಯಕತ್ವಕ್ಕಿಲ್ಲ ಕುತ್ತು: ಇದೇ ಕಾರಣ

author img

By ETV Bharat Karnataka Team

Published : Nov 20, 2023, 9:17 PM IST

Rohit Sharma
Rohit Sharma

India needs Rohit Sharma captaincy: ಭಾರತಕ್ಕೆ ಬೇಕು ಇನ್ನೂ ಎರಡು ವರ್ಷ ರೋಹಿತ್ ಶರ್ಮಾ ನಾಯಕತ್ವದ ಅಗತ್ಯತೆ ಇದೆ. ಏಕೆ ಎಂಬುದಕ್ಕೆ ಇಲ್ಲಿದೆ ಸೂಕ್ತ ಕಾರಣ.

ಅಹಮದಾಬಾದ್(ಗುಜರಾತ್​): ವಿಶ್ವಕಪ್​ ಫೈನಲ್​ಗೂ ಮುನ್ನ ರೋಹಿತ್​ ಶರ್ಮಾ ಹೇಳಿದ್ದ ಮಾತು ಈಗ ವೈರಲ್ ಆಗುತ್ತಿದೆ. ಅದರಲ್ಲಿ ಭಾರತ ನಾಯಕ ಕುಂತಲ್ಲಿ, ನಿಂತಲ್ಲಿ, ಕನಸಿನಲ್ಲೂ ವಿಶ್ವಕಪ್​ ಕಣ್ಣ ಮುಂದೆ ಬರುತ್ತದೆ ಎಂದು ಹೇಳಿದ್ದಾರೆ. ನಾಯಕನಾಗಿ ಈ ಟ್ರೋಫಿಯ ಬಗ್ಗೆ ಅಷ್ಟೊಂದು ಕನಸು ಕಟ್ಟಿಕೊಂಡಿದ್ದ ರೋಹಿತ್​​ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಕಣ್ಣೀರಿಟ್ಟರು. ನರೇಂದ್ರ ಮೋದಿ ಕ್ರೀಡಾಂಗಣದ ನಡುವಿನಿಂದ ಬೌಂಡರಿ ಲೈನ್​ ತಲುಪುವಷ್ಟರಲ್ಲಿ ಅವರ ಕಣ್ಣಾಲಿಗಳು ನೀರು ತುಂಬಿಕೊಂಡಿದ್ದವು. ರೋಹಿತ್​ ಶರ್ಮಾ ಅವರ ಆ ಭಾರದ ನಡೆಗೆ ಭಾರತೀಯ ಕ್ರಿಕೆಟ್​ ಪ್ರೇಮಿಗಳಿಗೂ ನಾಟಿತ್ತು.

ಆದರೆ ರೋಹಿತ್​ ಈ ಸೋಲಿನಿಂದಾಗಿ ನಾಯಕತ್ವವನ್ನು ತೊರೆಯುವ ನಿರ್ಧಾರ ಮಾಡಿದಲ್ಲಿ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಅಲ್ಲದೇ, ಅವರ ನಾಯಕತ್ವ ಪ್ರಶ್ನೆ ಮಾಡುವಂತಹ ಪ್ರದರ್ಶನ ಟೂರ್ನಿಯಲ್ಲಿ ಬಂದಿಲ್ಲ. ಹೀಗಿರುವಾಗ ರೋಹಿತ್​ ನಾಯಕತ್ವದಿಂದ ಹಿಂದೆ ಸರಿದರೆ ತಂಡದಲ್ಲಿ ಒಂದು ದೊಡ್ಡ ನಿರ್ವಾತ ಉಂಟಾಗಬಹುದು. ಅಲ್ಲದೇ ತಂಡ ಪ್ರದರ್ಶನದ ಮೇಲೆ ದೊಡ್ಡ ಪರಿಣಾಮವೂ ಆಗಬಹುದು.

ರೋಹಿತ್ ಶರ್ಮಾ ಸುತ್ತ ಜಗತ್ತು ಕುಸಿದಿದೆ ಎಂದು ತೋರುತ್ತಿದ್ದರೂ, ಭಾರತೀಯ ಕ್ರಿಕೆಟ್ ತಂಡಕ್ಕೆ ಕನಿಷ್ಠ ಎರಡು ವರ್ಷಗಳ ಕಾಲ ದೀರ್ಘ ಸ್ವರೂಪಗಳಲ್ಲಿ ಅವರು ಚುಕ್ಕಾಣಿ ಹಿಡಿಯಬೇಕಾದ ಅಗತ್ಯ ಇದೆ. 2007ರಲ್ಲಿ ರಾಹುಲ್ ದ್ರಾವಿಡ್ ಅವರ ನಾಯಕತ್ವದ ಅವಧಿಯು ಕೊನೆಗೊಂಡಾಗ, ಧೋನಿ ತಂಡದಲ್ಲಿ ಬದಲಿ ನಾಯಕರಾಗಲು ಸಿದ್ಧರಿದ್ದರು. ಧೋನಿ ನಿರ್ಗಮಿಸಿದಾಗ, ವಿರಾಟ್ ಕೊಹ್ಲಿ ರೂಪದಲ್ಲಿ ಈಗಾಗಲೇ ಉತ್ತರಾಧಿಕಾರದ ಯೋಜನೆ ಇತ್ತು. ಕೊಹ್ಲಿಯಿಂದ ರೋಹಿತ್ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದರು.

ರೋಹಿತ್​ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್​ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ರೋಹಿತ್​ ಶರ್ಮಾ ಅವರನ್ನು ಬಿಟ್ಟು ಈಗಲೇ ರಾಹುಲ್​ ಅವರಿಗೆ ಸಂಪೂರ್ಣ ನಾಯಕತ್ವವನ್ನು ಕಟ್ಟಲು ಸಾಧ್ಯವಿಲ್ಲ. ಹಾಗೇ ರಾಹುಲ್​ ಅವರನ್ನು ಪರ್ಯಾಯ ನಾಯಕರಾಗಿ ತಂಡ ಇದುವರೆಗೂ ಬಿಂಬಿಸಿಲ್ಲ. ಈ ಸ್ಥಾನಕ್ಕೆ ಹೊಸ ಅಭ್ಯರ್ಥಿಯ ಹುಡುಕಾಟ ಇದ್ದೇ ಇದೆ​. ಅತ್ತ ಪಂತ್​ ಅವರ ಮೇಲೆ ತಂಡಕ್ಕೆ ಹೆಚ್ಚಿನ ನಿರೀಕ್ಷೆಗಳೂ ಇದೆ. ಆದರೆ ಯುವ ಆಟಗಾರರು ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳಲು ವರ್ಷಗಳಷ್ಟು ಕಾಲದ ಅಗತ್ಯವಿದೆ, ಆಯ್ಕೆದಾರರಿಗೆ ರೋಹಿತ್‌ನೊಂದಿಗೆ ಮುಂದುವರಿಯುವುದನ್ನು ಬಿಟ್ಟು ಬೇರೆ ಆಯ್ಕೆ ಇರುವುದಿಲ್ಲ.

ನಾಯಕತ್ವದ ಬಗ್ಗೆ ದ್ರಾವಿಡ್​ ಹೇಳಿದ್ದು: ಕೋಚ್​ ರಾಹುಲ್​ ದ್ರಾವಿಡ್​​ ಪಂದ್ಯದ ನಂತರ ಮಾತನಾಡಿದಾಗ "ರೋಹಿತ್​ ಅಸಾಧಾರಣ ನಾಯಕರಾಗಿದ್ದಾರೆ. ರೋಹಿತ್ ಅವರು ನಿಜವಾಗಿಯೂ ಈ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ತಮ್ಮ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ಹುಡುಗರಿಗೆ ನೀಡಿದ್ದಾರೆ. ಅವರು ನಮ್ಮ ಯಾವುದೇ ಸಂಭಾಷಣೆಗಳಿಗೆ, ನಮ್ಮ ಯಾವುದೇ ಸಭೆಗಳಿಗೆ ಯಾವಾಗಲೂ ಲಭ್ಯವಿರುತ್ತಾರೆ" ಎಂದು ದ್ರಾವಿಡ್​​ ಹೇಳಿದರು.

ವಿಶ್ವಕಪ್​ ಅಭಿಯಾನದಲ್ಲಿ 'ಕ್ಯಾಪ್ಟನ್ ಶರ್ಮಾ' ಅದ್ಭುತ ಪ್ರದರ್ಶನ ನೀಡಿದ್ದಾರೆ. ರೋಹಿತ್ ಟೂರ್ನಿ ಉದ್ದಕ್ಕೂ​ ಡೇರಿಂಗ್​ ಬ್ಯಾಟಿಂಗ್​ ಮಾಡಿದ್ದಾರೆ. ಅಲ್ಲದೇ ಪಂದ್ಯದ ಒತ್ತಡದ ಸಮಯವನ್ನು ಉತ್ತಮವಾಗಿ ನಿಬಾಯಿಸಿದ್ದಾರೆ. ಬೌಲಿಂಗ್​ ಬದಲಾವಣೆಯೂ ತಂಡದ ಯಶಸ್ಸಿನ ಗುಟ್ಟಾಗಿತ್ತು. ತಂಡವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯವೂ ಅವರು ಗಳಿಸಿದ್ದರು. ಅವರ ಈ ಎಲ್ಲಾ ಗುಣ ತಂಡದ ಯಶಸ್ಸಿಗೆ ಕಾರಣ ಆಗಿತ್ತು.

"ರೋಹಿತ್​ ಈ ಟೂರ್ನಿಗಾಗಿ ಸಾಕಷ್ಟು ತಮ್ಮ ವೈಯಕ್ತಿಕ ಸಮಯವನ್ನು, ಶಕ್ತಿಯನ್ನು ನೀಡಿದ್ದಾರೆ. ಅವರು ಉದಾಹರಣೆಯಾಗುವ ರೀತಿಯಲ್ಲಿ ತಂಡವನ್ನು ಮುನ್ನಡೆಸಲು ಬಯಸಿದ್ದರು ಮತ್ತು ಪಂದ್ಯಾವಳಿಯ ಮೂಲಕ ಅದನ್ನು ಮಾಡುವಲ್ಲಿ ಸಾಕಷ್ಟು ಉತ್ತಮವಾಗಿ ಕಂಡುಬಂದಿದ್ದರು. ಇದಕ್ಕಿಂತ ಒಬ್ಬ ವ್ಯಕ್ತಿ ಮತ್ತು ನಾಯಕನ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ" ಎಂದು ದ್ರಾವಿಡ್ ಹೇಳಿದ್ದಾರೆ.

ರೋಹಿತ್​ ನಾಯಕತ್ವ ಏಕೆ ಮುಂದುವರೆಯ ಬೇಕು?: 36 ವರ್ಷ ಆಗಿರುವ ರೋಹಿತ್​ ಶರ್ಮಾ ವಿರಾಟ್​ರಂತೆ ಫಿಟ್​ ಆಗಿ ಕಾಣದಿದ್ದರೂ ಇನ್ನು ಕೆಲ ವರ್ಷ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಮುಂದಿನ ಏಕದಿನ 2027ರ ವಿಶ್ವಕಪ್​ ವೇಳೆಗೆ 40 ವರ್ಷ ಆಗುವುದರಿಂದ ಇದು ಅವರ ಕೊನೆಯ ಏಕದಿನ ವಿಶ್ವಕಪ್​ ಆಗಬಹುದು. ಕೊನೆಯ ಅವಕಾಶ ಎಂದು ಅವರಿಗೆ ಗೆಲ್ಲುವ ಆಸೆ ಇತ್ತು ಎಂದರೆ ತಪ್ಪಾಗದು.

ರೋಹಿತ್​ ಶರ್ಮಾ ಏಕದಿನ ದ್ವಿಪಕ್ಷೀಯ ಸರಣಿಗಳನ್ನು ಮತ್ತು ಟೆಸ್ಟ್​ನ ನಾಯಕತ್ವವನ್ನು ಮುನ್ನಡೆಸ ಬೇಕಾಗುತ್ತದೆ. 2025ರ ಟೆಸ್ಟ್​ ಚಾಂಪಿಯನ್​​ಶಿಪ್​ನ ಋತು ಆರಂಭವಾಗುತ್ತಿದ್ದು, ಅಲ್ಲಿಯ ವರೆಗೆ ಅವರು ದೀರ್ಘ ಮಾದರಿಯ ಕ್ರಿಕೆಟ್​ಗೆ ನಾಯಕರಾಗಿರಬೇಕಾಗುತ್ತದೆ. ಆ ಸಮಯದವರೆಗೆ ಭಾರತೀಯ ಕ್ರಿಕೆಟ್‌ಗೆ ರೋಹಿತ್ ಶರ್ಮಾ ನಾಯಕ ಮತ್ತು ಮಾರ್ಗದರ್ಶಕನ ಅಗತ್ಯವಿದೆ.

ಟಿ20 ಇಂಟರ್‌ನ್ಯಾಶನಲ್‌ಗಳಿಗೆ, ಅವರು ಹಾರ್ದಿಕ್ ಪಾಂಡ್ಯ ಅವರನ್ನು ಮೀಸಲಿಟ್ಟಿದ್ದಾರೆ. ಆದರೆ ಏಕದಿನಗಳಿಗೆ ವಿಭಿನ್ನ ಮನಸ್ಥಿತಿಯ ಅಗತ್ಯವಿದೆ ಮತ್ತು ಹಾರ್ದಿಕ್ ವಿಶ್ವಕಪ್‌ನಲ್ಲಿ ಉಪನಾಯಕರನ್ನಾಗಿ ನೇಮಿಸಲಾಗಿದ್ದರೂ, ಫಿಟ್‌ನೆಸ್ ಅವರಿಗೆ ಇತ್ತೀಚೆಗೆ ಕಾಡುತ್ತಿರುವ ಸಮಸ್ಯೆ ಆಗಿದೆ. ಉಳಿದ ಆಯ್ಕೆ ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ. ಬುಮ್ರಾ ಐರ್ಲೆಂಡ್‌ನಲ್ಲಿ ನಾಯಕತ್ವ ಮಾಡಿದ್ದಾರೆ ಅಷ್ಟೇ.

ರಾಹುಲ್​ ನಾಯಕತ್ವದ ಬಗ್ಗೆ ಪ್ರಶ್ನೆಗಳು ಇವೆ. ಐಪಿಎಲ್ ನಾಯಕರಾಗಿರುವ ರಾಹುಲ್​ ಕಿಂಗ್ಸ್ ಇಲೆವೆನ್ ಪಂಜಾಬ್​ ಮತ್ತು ಲಕ್ನೋ ಸೂಪರ್ ಜೈಂಟ್ಸ್​ಗೆ ಪ್ರಶಸ್ತಿ ಗೆದ್ದುಕೊಡುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ 2021-22ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತವನ್ನು ಮುನ್ನಡೆಸಿದ ಅವರು ಒಂದು ಟೆಸ್ಟ್ ಮತ್ತು ಎಲ್ಲಾ ಮೂರು ಏಕದಿನ ಪಂದ್ಯಗಳನ್ನು ಕಳೆದುಕೊಂಡಿದ್ದರು. ಹೀಗಾಗಿ ರೋಹಿತ್​ ಶರ್ಮಾ ಮುಂದುವರೆಯಲೇ ಬೇಕಾದ ಅಗತ್ಯತೆ ಇದೆ.

ಇದನ್ನೂ ಓದಿ: ವಿಶ್ವಕಪ್​ ಫೈನಲ್‌ ಸೋಲು: ಭಾರತ ಐಸಿಸಿ ಈವೆಂಟ್​ನ ಹೊಸ ಚೋಕರ್ಸ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.