ETV Bharat / sports

'ಪಂತ್​ಗೆ ಆಕ್ರಮಣಕಾರಿ ಆಟವಾಡಬೇಡಿ ಎಂದು ನಾವು ಯಾರೂ ಹೇಳುವುದಿಲ್ಲ': ಕೋಚ್ ದ್ರಾವಿಡ್ ಬೆಂಬಲ

author img

By

Published : Jan 7, 2022, 9:18 AM IST

SA v IND, 2nd Test
ಕೋಚ್ ರಾಹುಲ್ ದ್ರಾವಿಡ್

ರಿಷಭ್ ಸಕಾರಾತ್ಮಕ ಮನೋಭಾವದ ಆಟಗಾರ ಎಂದು ನಮಗೆ ತಿಳಿದಿದೆ. ಪಂತ್​ ಅವರ ಆಟದ ಶೈಲಿಯೇ ಅವರಿಗೆ ಯಶಸ್ಸನ್ನು ತಂದುಕೊಟ್ಟಿದೆ. ಆದರೆ, ಖಂಡಿತವಾಗಿಯೂ ನಾವು ಅವರೊಂದಿಗೆ ಕೆಲ ವಿಚಾರದ ಬಗ್ಗೆ ಮಾತುಕತೆ ನಡೆಸುತ್ತೇವೆ. ಬಹುಶಃ ಅದಕ್ಕೆ ಸೂಕ್ತ ಸಮಯ ಬರಬೇಕಿದೆ ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದರು.

ಜೋಹಾನ್ಸ್‌ಬರ್ಗ್: ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್​ ಪಂತ್ ಅವರ ಆಕ್ರಮಣಕಾರಿ ಅಥವಾ ಸಕಾರಾತ್ಮಕ ಮನೋಭಾವದ ಸಂಬಂಧ ಸದ್ಯ ಅವರಿಗೆ ನಾವು ಯಾರೂ ಕೂಡ ಸಲಹೆ, ಸೂಚನೆ ನೀಡುವುದಿಲ್ಲ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಭಾರತದ 7 ವಿಕೆಟ್​ಗಳಿಂದ ಜೋಹಾನ್ಸ್​ಬರ್ಗ್​ ಟೆಸ್ಟ್​ ಗೆದ್ದಿರುವ ದಕ್ಷಿಣ ಆಫ್ರಿಕಾ 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲೇ ಪಂತ್​ ಅನಗತ್ಯ ಹೊಡೆತಕ್ಕೆ ಮುಂದಾಗಿ ಮೂರು ಎಸೆತಗಳಲ್ಲೇ ಡಕ್‌ಗೆ ಔಟ್​ ಆಗಿದ್ದರು. ಆಫ್ ಸ್ಟಂಪ್‌ನ ಹೊರಗಿದ್ದ ಎಸೆತವನ್ನು ಕ್ರಿಸ್​ನಿಂದ ಮುಂದೆ ಬಂದು ಬಾರಿಸಲು ಯತ್ನಿಸಿ ವಿಕೆಟ್​ ಕೀಪರ್​ಗೆ ಕ್ಯಾಚ್​ ನೀಡಿ ವಿಕೆಟ್​ ಒಪ್ಪಿಸಿದ್ದರು. ಈ ಬಗ್ಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.

ಪಂದ್ಯದ ಬಳಿಕ ಮಾತನಾಡಿರುವ ಕೋಚ್​ ದ್ರಾವಿಡ್​, ರಿಷಭ್ ಸಕಾರಾತ್ಮಕ ಮನೋಭಾವದ ಆಟಗಾರ ಎಂಬುದು ನಮಗೆ ತಿಳಿದಿದೆ. ಪಂತ್​ ಆಟದ ಶೈಲಿಯೇ ಅವರಿಗೆ ಯಶಸ್ಸನ್ನು ತಂದುಕೊಟ್ಟಿದೆ. ಆದರೆ, ಖಂಡಿತವಾಗಿಯೂ ನಾವು ಅವರೊಂದಿಗೆ ಕೆಲ ವಿಚಾರದ ಬಗ್ಗೆ ಮಾತುಕತೆ ನಡೆಸುತ್ತೇವೆ.

ಬಹುಶಃ ಅದಕ್ಕೆ ಸೂಕ್ತ ಸಮಯ ಬರಬೇಕಿದೆ. ರಿಷಭ್‌ಗೆ ಧನಾತ್ಮಕ ಅಥವಾ ಆಕ್ರಮಣಕಾರಿ ಆಟವಾಡಬೇಡಿ ಎಂದು ಯಾರೂ ಹೇಳುವುದಿಲ್ಲ. ಆದರೆ ಕೆಲವೊಮ್ಮೆ ಸಮಯವಕ್ಕೆ ತಕ್ಕಂತೆ ಬ್ಯಾಟಿಂಗ್​ ಮಾಡಬೇಕಾಗುತ್ತದೆ ಎಂದು ದ್ರಾವಿಡ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇನ್ನೂ ಕಲಿಕಾ ಹಂತದಲ್ಲಿದ್ದಾರೆ:

ಪಂತ್​ ತಮ್ಮ ಆಟದಿಂದ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಆಟಗಾರನಾಗಿದ್ದಾರೆ. ನಾವು ಅವರನ್ನು ಸ್ವಾಭಾವಿಕ ಆಟದಿಂದ ದೂರವಿಡುವುದಿಲ್ಲ ಮತ್ತು ಬದಲಾಯಿಸಿಕೊಳ್ಳಲು ಕೇಳುವುದಿಲ್ಲ. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ನಮ್ಮ ಆಟವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಪಂತ್​ ಇನ್ನೂ ಕಲಿಕಾ ಹಂತದಲ್ಲಿದ್ದು, ಒಂದು ನಿರ್ದಿಷ್ಟ ರೀತಿಯಲ್ಲಿ ಆಡುತ್ತಾರೆ. ಮುಂದಿನ ದಿನಗಳಲ್ಲಿ ಸುಧಾರಣೆ ಮಾಡಿಕೊಂಡು ಇನ್ನೂ ಉತ್ತಮ ಬ್ಯಾಟರ್​ ಆಗಲಿದ್ದಾರೆ ಎಂದು ದ್ರಾವಿಡ್​ ಯುವ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ.

ಬಂಡೆಯಂತೆ ಆಡಿದ ಎಲ್ಗರ್​:

ಇದೇ ವೇಳೆ ದ್ರಾವಿಡ್, ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಅವರ ಅಜೇಯ 96 ರನ್​ಗಳ​ ಇನ್ನಿಂಗ್ಸ್​ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಎಲ್ಗರ್ ಚೆನ್ನಾಗಿ ಆಡಿದ್ದು, ಅವರಿಗೆ ಎಲ್ಲ ಕ್ರೆಡಿಟ್ ನೀಡಲೇಬೇಕು. ಎರಡೂ ಟೆಸ್ಟ್ ಪಂದ್ಯಗಳಲ್ಲಿ ಅವರು ಕ್ರೀಸ್​ನಲ್ಲಿ ಬಂಡೆಯಂತೆ ನಿಂತು ಆಡಿದರು ಎಂದು ಹೇಳಿದರು.

ನಾವು 122 ರನ್‌ ಇಟ್ಟುಕೊಂಡು 8 ವಿಕೆಟ್‌ ಕಬಳಿಸಬೇಕಾದರೆ, ನಿಜವಾಗಿಯೂ ವಿಶೇಷವಾದುದ್ದನ್ನು ಸಾಧಿಸಬೇಕು. ಮಳೆಯಿಂದ ಮೈದಾನವು ತೇವವಾಗಿರುವುದು ಕೂಡ ನಮ್ಮ ಬೌಲರ್​ಗಳಿಗೆ ಸಹಕಾರಿ ನೀಡಲಿಲ್ಲ. ಹೀಗಾಗಿ ಚೆಂಡನ್ನು ಸ್ವಿಂಗ್​ ಮಾಡುವುದು ಸಾಧ್ಯವಾಗಲಿಲ್ಲ. ಒಟ್ಟಾರೆ ಈ ಪಂದ್ಯದಲ್ಲಿ ನಮಗಿಂತ ದಕ್ಷಿಣ ಆಫ್ರಿಕಾ ಉತ್ತಮವಾಗಿ ಆಡಿದೆ ಎಂದು ನಾನು ಭಾವಿಸುತ್ತೇನೆ ಎಂದರು.

ಇದನ್ನೂ ಓದಿ: ಪವನ್ ಮಿಂಚಿನ ದಾಳಿಗೆ ಬೆದರಿದ ಜೈಪುರ್: ಅಗ್ರ ಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.