ETV Bharat / sitara

ಡಾಲಿ ಕೈಗೆ ರಾಖಿ ಕಟ್ಟಿ ಖುಷಿಪಟ್ಟ ಮಂಗಳಮುಖಿಯರು

author img

By

Published : Aug 22, 2021, 7:44 AM IST

daali dhananjay
ಡಾಲಿ ಧನಂಜಯ್

ಶ್ರಾವಣ ಮಾಸದಲ್ಲಿ ಸಹೋದರ-ಸಹೋದರಿಯರ ಭಾತೃತ್ವದ ಪವಿತ್ರ ಹಬ್ಬವಾದ ರಕ್ಷಾ ಬಂಧನವನ್ನು ಇಂದು ನಾಡಿನಾದ್ಯಂತ ಆಚರಿಸಲಾಗುತ್ತದೆ. ವಿಶೇಷ ಅಂದ್ರೆ ನಟ ಡಾಲಿ ಧನಂಜಯ್​ ಅವರಿಗೆ ಮಂಗಳಮುಖಿಯರು ರಾಖಿ ಕಟ್ಟಿ, ತಮ್ಮ ಅಭಿಮಾನ ಮತ್ತು ಆತ್ಮೀಯತೆಯನ್ನು ವ್ಯಕ್ತಪಡಿಸಿದ್ದಾರೆ.

ಅಣ್ಣ-ತಂಗಿಯ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ಹಬ್ಬವೆಂದ್ರೆ ರಕ್ಷಾ ಬಂಧನ. ಈ ಹಬ್ಬವನ್ನು ಮಂಗಳಮುಖಿಯರ ಪರ ಹೋರಾಟಗಾರ್ತಿ ಅಕ್ಕೈ​ ಪದ್ಮಶಾಲಿ ಮತ್ತು ಕೆಲವು ಮಂಗಳಮುಖಿಯರು ಸ್ಯಾಂಡಲ್​ವುಡ್​ನಲ್ಲಿ ಬಹು ಬೇಡಿಕೆಯ ನಟ‌ನನೊಂದಿಗೆ ಆಚರಿಸಿದ್ದಾರೆ.

'ರತ್ನನ್ ಪ್ರಪಂಚ' ಸಿನಿಮಾದ ಟ್ರೈಲರ್ ಸಕ್ಸಸ್ ಖುಷಿಯಲ್ಲಿರುವ ಡಾಲಿ ಧನಂಜಯ್​ಗೆ ಅಕ್ಕೈ​ ಪದ್ಮಶಾಲಿ ಮತ್ತು ಕೆಲವು ಮಂಗಳಮುಖಿಯರು, ಧನಂಜಯ್​ ನಿವಾಸಕ್ಕೆ ತೆರಳಿ ರಾಖಿ ಕಟ್ಟಿ, ಖುಷಿ ಪಟ್ಟಿದ್ದಾರೆ. ಜೊತೆಗೆ ಡಾಲಿಗೆ ಉಡುಗೊರೆ ಸಹ ನೀಡಿ ಗೌರವಿಸಿದ್ದಾರೆ‌.

ಮಂಗಳಮುಖಿಯರ ಕೈಯಲ್ಲಿ ಧನಂಜಯ್​ ರಾಖಿ ಕೊಟ್ಟಿಸಿಕೊಳ್ಳುವುದಕ್ಕೆ ಒಂದು ಕಾರಣವಿದೆ‌. ಹೌದು, ಡಾಲಿ ಧನಂಜಯ ಅಭಿನಯದ 'ಜಯನಗರ 4ನೇ ಬ್ಲಾಕ್​' ಕಿರುಚಿತ್ರದಲ್ಲಿ ಮಂಗಳಮುಖಿಯ ಪಾತ್ರ ಹೈಲೈಟ್​ ಆಗಿತ್ತು. ಅವರ ಬಗ್ಗೆ ಧನಂಜಯ್​ ಗೌರವ ಭಾವನೆ ಹೊಂದಿದ್ದು, ಈ ಕುರಿತು ಅನೇಕ ಬಾರಿ ಕಾಳಜಿಯ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ ಗಟ್ಟಲೆ ಜನ ವೀಕ್ಷಿಸಿರುವ 'ರತ್ನನ್​ ಪ್ರಪಂಚ' ಚಿತ್ರದಲ್ಲಿ ಮಂಗಳಮುಖಿ ಅಕ್ಕೈ​ ಪದ್ಮಶಾಲಿ ಕೂಡ ನಟಿಸಿದ್ದಾರೆ. ಹೀಗಾಗಿ ಧನಂಜಯ್​ ಜೊತೆ ಅಕ್ಕೈ ಪದ್ಮಶಾಲಿಗೆ ಆತ್ಮೀಯ ಗೆಳೆತನವಿದೆ. ಈ ಪ್ರೀತಿ, ವಿಶ್ವಾಸಕ್ಕೆ ಧನಂಜಯಗೆ ಅಕ್ಕೈ​ ಪದ್ಮಶಾಲಿ ರಾಖಿ ಕಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪದ್ಮಶಾಲಿಗೆ ಕೆಲವು ಮಂಗಳಮುಖಿಯರು ಸಾಥ್ ನೀಡಿದ್ದಾರೆ.

ಸದ್ಯಕ್ಕೆ ಡಾಲಿ ಧನಂಜಯ್​ಗೆ​ ಕನ್ನಡ ಮಾತ್ರವಲ್ಲದೇ, ಪರಭಾಷೆಯಲ್ಲೂ ಬೇಡಿಕೆ ಹೆಚ್ಚಿದೆ. ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ 'ಪುಷ್ಪ' ಚಿತ್ರದಲ್ಲಿ ಧನಂಜಯ್​ ಅಭಿನಯಿಸಿದ್ದಾರೆ. ಕನ್ನಡದಲ್ಲಿ 'ಸಲಗ', 'ಬಡವ ರಾಸ್ಕಲ್'​, 'ಹೆಡ್​ ಬುಶ್'​, 'ರತ್ನನ್​ ಪ್ರಪಂಚ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಧನಂಜಯ ಬ್ಯುಸಿಯಾಗಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.