ETV Bharat / entertainment

ನಿರ್ಮಾಪಕಿಯಾದ ನಿವೇದಿತಾ; ವಂಶಿ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಹಣ ಹೂಡಿದ ಶಿವಣ್ಣನ ಪುತ್ರಿ

author img

By

Published : May 1, 2023, 4:17 PM IST

nivedita
ನಿರ್ಮಾಪಕಿಯಾದ ನಿವೇದಿತಾ

ಹ್ಯಾಟ್ರಿಕ್​ ಹೀರೋ ಶಿವಣ್ಣ ಪುತ್ರಿ ನಿವೇದಿತಾ ಶಿವರಾಜ್​ಕುಮಾರ್​ 'ಶ್ರೀ ಮುತ್ತು ಸಿನಿ ಸರ್ವಿಸ್​' ಮೂಲಕ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಕರುನಾಡ ಚಕ್ರವರ್ತಿ ಡಾ.ಶಿವ ರಾಜ್​ಕುಮಾರ್​ ಅವರು ಯುವ ಸಿನಿಮೋತ್ಸಾಹಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾರೆ. ಹೀಗಾಗಿಯೇ ಅವರು ಕನ್ನಡ ಚಿತ್ರರಂಗದ ಮಾಸ್​ ಲೀಡರ್​ ಆಗಿ ಗುರುತಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಲ್ಲುವ ಶಿವಣ್ಣನ ಹಾದಿಯಲ್ಲಿ ಅವರ ಮಗಳು ನಿವೇದಿತಾ ಕೂಡ ನಡೆಯಲು ಮುಂದಾಗಿದ್ದಾರೆ. ಕಲೆ ಅನ್ನೋದು ದೊಡ್ಮನೆ ಕುಟುಂಬಕ್ಕೆ ರಕ್ತಗತವಾಗಿಯೇ ಬಂದಿದೆ. ಇಡೀ ಕುಟುಂಬವೇ ಕಲಾಸೇವೆಯಲ್ಲಿ ತೊಡಗಿದೆ.

ಅಂದು ಡಾ. ರಾಜ್​ಕುಮಾರ್ ಬೆಳ್ಳಿ ಪರದೆಯಲ್ಲಿ ರಾರಾಜಿಸುತ್ತಿದ್ದರೆ, ತೆರೆ ಹಿಂದೆ ಅವರಿಗೆ ಬೆನ್ನೆಲುಬಾಗಿ ಚಿತ್ರ ನಿರ್ಮಾಣ ಸಂಸ್ಥೆಯನ್ನು ಕಟ್ಟಿ ಪಾರ್ವತಮ್ಮ ರಾಜ್​ಕುಮಾರ್ ನೆರವಾಗಿದ್ದರು.​ ಪೂರ್ಣಿಮಾ ಎಂಟರ್​ಪ್ರೈಸರ್ಸ್​ ಮೂಲಕ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್​ ಹಿಟ್​ ಚಿತ್ರಗಳನ್ನು ಪಾರ್ವತಮ್ಮ ಕೊಡುಗೆಯಾಗಿ ನೀಡಿದ್ದಾರೆ. ಅದನ್ನೇ ಅಣ್ಣಾವ್ರ ಇಡೀ ತಲೆಮಾರು ಮುಂದುವರೆಸಿಕೊಂಡು ಬಂದಿದೆ.

ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ಅವರ ಪತ್ನಿ ಗೀತಾ ಶಿವ ರಾಜ್​ಕುಮಾರ್​ ಗೀತಾ ಪಿಕ್ಚರ್ಸ್​ ಅಡಿ ನಿರ್ಮಾಪಕರಾಗಿದ್ದಾರೆ. ದಿವಂಗತ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ನಿಧನದ ನಂತರ ಪಿಆರ್​ಕೆ ಪ್ರೊಡಕ್ಷನ್​ ಅಡಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ನಿರ್ಮಾಪಕರಾಗಿ ಚಿತ್ರರಂಗಕ್ಕೆ ದುಡಿಯುತ್ತಿದ್ದಾರೆ. ಇದೀಗ ಶಿವಣ್ಣನ ಎರಡನೇ ಪುತ್ರಿ ನಿವೇದಿತಾ ಶಿವ ರಾಜ್​ಕುಮಾರ್​ ತಮ್ಮದೇ ಒಡೆತನದ ನಿರ್ಮಾಣ ಸಂಸ್ಥೆಯಡಿ ಚೊಚ್ಚಲ ಚಿತ್ರದ ನಿರ್ಮಾಣಕ್ಕಿಳಿದಿದ್ದಾರೆ. ​

  • ಜೀವನದ ಅನುಭವಗಳ ಸರಮಾಲೆಯನ್ನು ತೂಗುವ ಕಥೆಯೊಂದು ಇದೀಗ ಶುರುವಾಗಲಿದೆ! #Production1, ಶೀಘ್ರದಲ್ಲಿ ನಿಮ್ಮ ಮುಂದೆ. We're thrilled to announce our first production for the silver screen, a heartwarming tale that will take you on a wholesome journey.@shrimutthu_cs @vk1419_films pic.twitter.com/hCjWftLnzJ

    — Niveditha Shivarajkumar (@NivedithaSrk) May 1, 2023 " class="align-text-top noRightClick twitterSection" data=" ">

ನಿವೇದಿತಾ ಅವರ ಕನಸಿನ ಕೂಸು 'ಶ್ರೀ ಮುತ್ತು ಸಿನಿ ಸರ್ವಿಸ್​' ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ನೀಡಲೆಂದು ರೂಪುಗೊಂಡಿರುವ ನಿರ್ಮಾಣ ಸಂಸ್ಥೆಯಾಗಿದೆ. ಈಗಾಗಲೇ ಈ ಸಂಸ್ಥೆಯಡಿ ಧಾರಾವಾಹಿ ಹಾಗೂ ಮೂರು ವೆಬ್​ಸೀರೀಸ್​ಗಳು ಹೊರಬಂದಿವೆ. ಈಗ ಇದೇ ಬ್ಯಾನರ್​ ಅಡಿ ನಿವೇದಿತಾ ಶಿವ ರಾಜ್​ಕುಮಾರ್​ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಟಾಲಿವುಡ್​ ಗಾಸಿಪ್: ದುಬೈನಲ್ಲಿ ದುಬಾರಿ ವಿಲ್ಲಾ ಖರೀದಿಸಿದ್ರಂತೆ ಮಹೇಶ್​ ಬಾಬು

"ಹೊಂಬಿಸಿಲ ಕಿರಣಗಳಲ್ಲಿ ತಂಗಾಳಿಯೊಂದು ಮೂಡಿದೆ, ಹುಟ್ಟು ಸಾವಿನ ಸ್ವಾರಸ್ಯವನ್ನು ಅನ್ವೇಷಿಸಲು ಹೊರಟಿದೆ. ಮೇ 1ರಂದು ಒಂದು ಹೊಸ ಅಧ್ಯಾಯದೊಂದಿಗೆ ನಿಮ್ಮ ಮುಂದೆ" ಎಂಬ ಪೋಸ್ಟರ್​ ಮೂಲಕ ತಮ್ಮ ಹೊಸ ಹೆಜ್ಜೆಯ ಬಗ್ಗೆ ತಿಳಿಸಿದ್ದಾರೆ. ನಿವೇದಿತಾ ಶಿವರಾಜ್​ಕುಮಾರ್​ ಒಡೆತನದ ಶ್ರೀ ಮುತ್ತು ಸರ್ವೀಸ್​ ಅಡಿ ಮೂಡಿ ಬರುತ್ತಿರುವ ಈ ಚೊಚ್ಚಲ ಸಿನಿಮಾಗೆ ವಂಶಿ ಸಾರಥಿಯಾಗಿದ್ದಾರೆ.

ಒಂದಿಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವುಳ್ಳ, ಪಿಆರ್​ಕೆ ನಿರ್ಮಾಣ ಸಂಸ್ಥೆಯಡಿ ಬಂದ ಮಾಯಾಬಜಾರ್​ ಸಿನಿಮಾದಲ್ಲಿ ಅಸಿಸ್ಟೆಂಟ್​ ಡೈರೆಕ್ಟರ್​ ಆಗಿ ಕೆಲಸ ಮಾಡಿರುವ ಮತ್ತು ಇತ್ತೀಚೆಗೆ ತೆರೆಗೆ ಬಂದ ಐದು ಕಥೆಗಳ ಪೆಂಟಗನ್​ ಸಿನಿಮಾದ ಕಿರಣ್​ ಕುಮಾರ್​ ನಿರ್ದೇಶನದ ಕಥೆಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ವಂಶಿ ಅವರು ನಿವೇದಿತಾ ಬಂಡವಾಳ ಹಾಕುತ್ತಿರುವ ಮೊದಲ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣ ಪ್ರಮಾಣದ ನಾಯಕನಾಗಿ ಮಿಂಚಲಿದ್ದಾರೆ.

ಲೈಫ್​ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಗೋಲ್ಡನ್​ ಸ್ಟಾರ್​ ಗಣೇಶ್​ ನಟನೆಯ ಬಾನ ದಾರಿಯಲಿ ಚಿತ್ರದ ಛಾಯಾಗ್ರಾಹಕ ಅಭಿಲಾಷ್​ ಕಲ್ಲಟ್ಟಿ ಅವರದ್ದೇ ಕ್ಯಾಮರಾ ವರ್ಕ್​ ಇರಲಿದೆ. ಚರಣ್​ ರಾಜ್​ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಸಿನಿಮಾಕ್ಕಿದೆ. ಜಯ್​ ರಾಮ್​ ಕೋ ಡೈರೆಕ್ಟರ್​ ಆಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಿಂಧೂ ನಾಗರೀಕತೆ ಕುರಿತು ಸಿನಿಮಾ ಮಾಡುವಂತೆ ರಾಜಮೌಳಿಗೆ ಆನಂದ್​ ಮಹೀಂದ್ರಾ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.