ETV Bharat / entertainment

ವಸತಿ ಫ್ಲಾಟ್​ಗಳ ಹೆಸರಲ್ಲಿ ವಂಚನೆ ಆರೋಪ.. ಇಡಿ ವಿಚಾರಣೆಗೆ ಹಾಜರಾದ ನಟಿ, ಸಂಸದೆ ನುಸ್ರತ್​ ಜಹಾನ್​

author img

By ETV Bharat Karnataka Team

Published : Sep 12, 2023, 3:57 PM IST

Nusrat Jahan
ನುಸ್ರತ್​ ಜಹಾನ್​

Nusrat Jahan appears for ED interrogation: ವಸತಿ ಫ್ಲಾಟ್​ಗಳ ಹೆಸರಲ್ಲಿ ನಂಬಿಸಿ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್​ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ.

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ)​ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್​ ವಿರುದ್ಧ ಕೆಲ ದಿನಗಳ ಹಿಂದೆ ಗಂಭೀರ ಆರೋಪವೊಂದು ಕೇಳಿ ಬಂದಿತ್ತು. ವಸತಿ ಫ್ಲಾಟ್​ಗಳ ಹೆಸರಲ್ಲಿ 28 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆಂದು ಅವರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನುಸ್ರತ್​ ಜಹಾನ್​ ಅವರು ಇಂದು ಬೆಳಗ್ಗೆ ಕೋಲ್ಕತ್ತಾ ಸಾಲ್ಟ್​ ಲೇಕ್​ನ ಸಿಜಿಒ ಕಾಂಪ್ಲೆಕ್ಸ್​ನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ವರದಿಗಳ ಪ್ರಕಾರ, ಫ್ಲಾಟ್​ಗಳ ಖರೀದಿ ಮತ್ತು ಮಾರಾಟದ ಬಗ್ಗೆ ನುಸ್ರತ್​ ಜಹಾನ್​ ಅವರನ್ನು ಇಂದು ವಿಚಾರಣೆ ನಡೆಸಲಾಗುವುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ನ್ಯೂ ಟೌನ್​ನಲ್ಲಿ ವಸತಿ ಫ್ಲಾಟ್​ಗಳ ಹೆಸರಿನಲ್ಲಿ ಒಟ್ಟು 429 ಜನರಿಗೆ ವಂಚಿಸಲಾಗಿದೆ ಎಂದು ದೂರಲಾಗಿದೆ. ನಟಿ, ಸಂಸದೆ ನುಸ್ರತ್​ ಜಹಾನ್​ ಗರಿಯಾಹತ್​ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಸಂಸ್ಥೆಯ ನಿರ್ದೇಶಕರಲ್ಲಿ ನುಸ್ರತ್​ ಜಹಾನ್​ ಕೂಡ ಒಬ್ಬರು.

ಇದನ್ನೂ ಓದಿ: ನುಸ್ರತ್ ಜಹಾನ್​ ಮಗುವಿನ ತಂದೆಯ ಕುರಿತಾದ ಊಹಾಪೋಹಕ್ಕೆ ತೆರೆ: ಶಿಶು ಜನನ ಪ್ರಮಾಣ ಪತ್ರದಲ್ಲೇನಿದೆ?

ಹೀಗಾಗಿ ವಂಚನೆಗೊಳಗಾದವರು ಕೆಲವು ದಿನಗಳ ಹಿಂದೆ ಗರಿಯಾಹತ್​ ಪೊಲೀಸ್​ ಠಾಣೆಯಲ್ಲಿ ವಂಚನೆ ಆರೋಪದಡಿ ಲಿಖಿತ ದೂರು ದಾಖಲಿಸಿದ್ದರು. ಅಲ್ಲದೇ, ಘಟನೆಗೆ ಸಂಬಂಧಿಸಿದಂತೆ ಅಲಿಪುರ ನ್ಯಾಯಾಲದಲ್ಲಿ ಪ್ರಕರಣವೂ ದಾಖಲಾಗಿತ್ತು. ನುಸ್ರತ್​ ಜಹಾನ್​ ಅವರ ಕಂಪನಿಯು ವಸತಿ ಗೃಹಗಳ ಹೆಸರಿನಲ್ಲಿ ತಲಾ 5 ಲಕ್ಷ 55 ಸಾವಿರ ರೂಪಾಯಿಗಳನ್ನು ತೆಗೆದುಕೊಂಡಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಹಣವನ್ನು ತೆಗೆದುಕೊಳ್ಳುವ ಸಮಯದಲ್ಲಿ 2018ರಲ್ಲಿ 3 ಬಿಎಚ್‌ಕೆ ಫ್ಲಾಟ್ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಇದಾಗಿ ಐದು ವರ್ಷ ಕಳೆದರೂ ಇನ್ನೂ ವಸತಿ ಸೌಲಭ್ಯ ಸಿಕ್ಕಿಲ್ಲ. ಆದ್ದರಿಂದ ಪೊಲೀಸ್​ ಹಾಗೂ ಕಾನೂನು ಮೊರೆ ಹೋಗಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.

ಆರೋಪ ತಳ್ಳಿಹಾಕಿದ್ದ ಸಂಸದೆ: ಈ ವಿಚಾರವಾಗಿ ಇಂದು ನಟಿ, ಸಂಸದೆ ನುಸ್ರತ್​ ಜಹಾನ್​ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ಇದಕ್ಕೂ ಮುನ್ನ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪವನ್ನು ನಟಿ ನುಸ್ರತ್ ತಳ್ಳಿ ಹಾಕಿದ್ದರು. ಆಗಸ್ಟ್​ 2ರಂದು ​ಕೋಲ್ಕತ್ತಾದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಅವರು ಈ ವಿಚಾರದಲ್ಲಿ ನನ್ನದು ತಪ್ಪಿಲ್ಲ ಎಂದು ಹೇಳಿದ್ದರು. ಅಲ್ಲದೇ, ಮಾರ್ಚ್​ 2017ರಲ್ಲಿ ರಿಯಲ್​ ಎಸ್ಟೇಟ್​ ಕಂಪನಿಯ ನಿರ್ದೇಶಕರ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದರು. ಈ ಕಂಪೆನಿಯಿಂದ ಸಾಲ ಪಡೆದಿರುವುದು ನಿಜ. ಆದರೆ, ಮೇ 2017ರಲ್ಲೇ ಅದನ್ನು ಮರುಪಾವತಿಸಿದ್ದೇನೆ ಎಂದು ಹೇಳಿದ್ದರು.

ಇದನ್ನೂ ಓದಿ: ರಾಜಕೀಯ ಬಿಟ್ಟು ಬಿಗ್​ ಬಾಸ್​ ಮನೆಗೆ ಹೋಗಲು ಸಿದ್ಧವಾದ್ರಾ ಟಿಎಂಸಿ ಸಂಸದೆ ನುಸ್ರತ್ ಜಹಾನ್!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.