ETV Bharat / city

ಬೇರೆ ಸ್ವಾಮೀಜಿಗಳಂತೆ ಹೋರಾಟದಿಂದ ಓಡಿ ಹೋಗಲಿಲ್ಲ: ಬಸವ ಜಯಮೃತ್ಯುಂಜಯ ಶ್ರೀ

author img

By

Published : Sep 30, 2021, 10:16 PM IST

Basavajaya mrutyunjaya swamiji
ಬಸವ ಜಯಮೃತ್ಯುಂಜಯ ಶ್ರೀ

ಶಿಫಾರಸು, ರಾಜಕಾರಣ ಮಾಡುವುದು ಮಠಗಳ ಕಾರ್ಯವಲ್ಲ. ಪಂಚಮಸಾಲಿಗಳನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ಪ್ರತಿಜ್ಞೆ ಅಲ್ಲ. ಬದಲಾಗಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ದೊರಕಿಸಿಕೊಡುವುದು, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಿಸುವ ವ್ಯವಸ್ಥೆ ಮಾಡುವುದು ನಮ್ಮ ಪ್ರತಿಜ್ಞೆ- ಬಸವ ಜಯಮೃತ್ಯುಂಜಯ ಶ್ರೀ.

ದಾವಣಗೆರೆ: ಹೋರಾಟದ ಸಂದರ್ಭದಲ್ಲಿ ಅನೇಕ ಆಮಿಷಗಳು ಬಂದರೂ ಕೂಡ ಬೇರೆ ಸ್ವಾಮೀಜಿಗಳಂತೆ ನಾನು ಹೋರಾಟದಿಂದ ಓಡಿ ಹೋಗಲಿಲ್ಲ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.‌

ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ವೇದಿಕೆ ಭಾಷಣ ಮಾಡಿದ ಬಸವ ಜಯಮೃತ್ಯುಂಜಯ ಶ್ರೀ

ನಗರದಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ವೇದಿಕೆ ಭಾಷಣ ಮಾಡಿದ ಅವರು, ಇದೇ ಕಾರಣಕ್ಕೆ ಇಲ್ಲಿನ ಜನರು ಇಂದು ಗೌರವ ನೀಡಿದ್ದಾರೆ. ಬೇರೆ ಸ್ವಾಮೀಜಿಗಳಂತೆ ಇಟ್ಟಿಗೆ, ಸಿಮೆಂಟ್‌ನಿಂದ ಮಠ ಕಟ್ಟಬೇಕು ಎಂಬ ಆಸೆ ಇಲ್ಲ. ಈ ಸಮಾಜದ ಜನರ ಸಂಕಷ್ಟಗಳಿಗೆ ಸ್ಪಂದಿಸುವುದೇ ನನ್ನ ಕರ್ತವ್ಯ ಎಂದರು.

ಶಿಫಾರಸು, ರಾಜಕಾರಣ ಮಾಡುವುದು ಮಠಗಳ ಕಾರ್ಯವಲ್ಲ. ಪಂಚಮಸಾಲಿಗಳನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ಪ್ರತಿಜ್ಞೆ ಅಲ್ಲ. ಬದಲಾಗಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ದೊರಕಿಸಿಕೊಡುವುದು, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಿಸುವ ವ್ಯವಸ್ಥೆ ಮಾಡುವುದು ನಮ್ಮ ಪ್ರತಿಜ್ಞೆ. ಕಟ್ಟಿದ ಮಠಗಳು ಎಂದಾದರೂ ಬಿದ್ದು ಹೋಗಬಹುದು. ಆದರೆ ಭಕ್ತರ ಮನಸ್ಸಿನಲ್ಲಿ ಕಟ್ಟಿದ ಮಠಗಳು ಎಂದಿಗೂ ಶಾಶ್ವತವಾಗಿರುತ್ತವೆ ಎಂದರು.

ಮಹಂತ ಸ್ವಾಮೀಜಿ ಕಾರ್ಯಕ್ರಮದಲ್ಲಿ ಅಪಮಾನ:

ನಾಲ್ಕು ವರ್ಷದ ಹಿಂದೆ ಲಿಂಗೈಕ್ಯ ಡಾ.ಮಹಂತ ಸ್ವಾಮೀಜಿ ಕಾರ್ಯಕ್ರಮದಲ್ಲಿ ನನಗೆ ಅಪಮಾನವಾಗಿತ್ತು. ದಾವಣಗೆರೆ ನಗರದಲ್ಲಿರುವ ರೇಣುಕಾ ಮಂದಿರದಲ್ಲಿ ಇಂದು ನನಗೆ ಗೌರವ ಸಿಕ್ಕಿದೆ. ಇದಕ್ಕೆ ಹೇಳುವುದು ಅತ್ತೆಗೊಂದು ಕಾಲ, ಸೊಸೆಗೊಂದ ಕಾಲ ಎಂದು. ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯದಾಗುತ್ತದೆ. ನಾನು ಹಣ ಮಾಡಿಲ್ಲ. ಸಮಾಜದ ಕೆಲಸ ಮಾಡಿದ್ದೇನೆ ಎಂದರು.

ತುಳಿಯಲು ಪ್ರಯತ್ನಿಸಿದರು:

ಹೇಗಾದ್ರೂ ಮಾಡಿ ತುಳಿಯಬೇಕು ಎಂದು ದೊಡ್ಡ ಸ್ವಾಮೀಜಿಗಳು ಪ್ರಯತ್ನಿಸಿದರು. ಆದರೆ ನಮ್ಮ ಪ್ರಾಮಾಣಿಕತೆ, ಪಾರದರ್ಶಕತೆ ನಮ್ಮನ್ನು ಕಾಪಾಡಿದೆ. ಎಷ್ಡು ತುಳಿಯಲು ಪ್ರಯತ್ನಿಸುತ್ತಾರೋ ಅಷ್ಟೇ ಮೇಲಕ್ಕೆ ಭಕ್ತರು ನಮ್ಮನ್ನು ಮತ್ತೆ ಮೇಲೆತ್ತುತ್ತಾರೆ. ಪಂಚಮಸಾಲಿಗಳು ಎಲ್ಲರನ್ನು ನಂಬುವ ವ್ಯಕ್ತಿಗಳು ಎಂದರು.

ಒಳ್ಳೆ ಸುದ್ದಿ ಕೊಟ್ರೆ, ಬೊಮ್ಮಾಯಿ ಫೋಟೋ ಇಟ್ಟು ಪೂಜೆ:

ಬಿಎಸ್‌ವೈ ಅವರನ್ನು ನಂಬಿದ್ದೆವು. ಅವರು ಕೈ ಬಿಟ್ಟರು. ಸಿಎಂ ಬೊಮ್ಮಾಯಿ ಅವರನ್ನು ನಂಬಿದ್ದೇವೆ, ಅವರು ನಂಬಿಕೆ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ನಾಳೆ ಸರ್ಕಾರದಿಂದ ಒಳ್ಳೆಯ ಸುದ್ದಿ ಬರುತ್ತಾ ಎಂದು ಕಾದು ನೋಡುತ್ತೇವೆ. ಒಳ್ಳೆಯ ಸುದ್ದಿ ನೀಡಿದರೆ, ರಾಣಿ ಚೆನ್ನಮ್ಮ ಜತೆ ಬೊಮ್ಮಾಯಿ ಫೋಟೋ ಇಟ್ಟು ಪೂಜಿಸುತ್ತೇವೆ. ಒಳ್ಳೆ ಸುದ್ದಿ ಬಂದ್ರೆ ಸನ್ಮಾನ, ಇಲ್ಲವಾದರೆ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬೆಂಗಳೂರಿಗೆ ಹೊರಡಲು ಸಮಾಜದವರಿಗೆ ಕರೆ:

ನಾಳೆ ಏನಾಗುತ್ತದೆಯೋ ಗೊತ್ತಿಲ್ಲ. ಹಾಗಾಗಿ ದಾವಣಗೆರೆಯಿಂದಲೇ ನೇರವಾಗಿ ಬೆಂಗಳೂರಿಗೆ ಪ್ರಯಾಣಿಸಿ, ಅಲ್ಲಿ ಸಭೆಯ ನಂತರ ಏನು ತೀರ್ಮಾನವಾದಂತೆ ನಡೆಯೋಣ ಎಂದು‌ ಭಕ್ತರಿಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.