ಬೆಂಗಳೂರು: ಕೋವಿಡ್ ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶಗಳನ್ನು ಗಮನಿಸಿ, ಅದೇ ವಿಚಾರವಾಗಿ ಅನಗತ್ಯವಾಗಿ ಅರ್ಜಿ ಸಲ್ಲಿಸುವವರಿಗೆ 25 ಸಾವಿರ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಕೋವಿಡ್ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅಜಿರ್ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಎಚ್ಚರಿಕೆ ನೀಡಿದೆ.
ಕೊರೊನಾ ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈಗಾಗಲೇ ಹಲವು ಆದೇಶಗಳನ್ನು ನೀಡಿದೆ. ಆದರೆ, ಕೆಲವರು ಕೋರ್ಟ್ ಆದೇಶಗಳನ್ನು ಗಮನಿಸದೇ ಅನಗತ್ಯವಾಗಿ ಅರ್ಜಿ ಹಾಗೂ ಮನವಿಗಳನ್ನು ಸಲ್ಲಿಸುತ್ತಿದ್ದಾರೆ. ಇನ್ನು ಮುಂದೆ ಅನಗತ್ಯ ಅರ್ಜಿಗಳನ್ನು ಸಲ್ಲಿಸಿದವರಿಗೆ 25 ಸಾವಿರ ರೂ. ದಂಡ ವಿಧಿಸಿ, ಆ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸಲು ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಮನೆ ಬಾಗಿಲಿಗೆ ಪಡಿತರ ವಿತರಿಸಲು ಸಕಾರಕ್ಕೆ ನಿರ್ದೇಶಿಸಲು ಕೋರಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತು ಬೇಸರ ವ್ಯಕ್ತಪಡಿಸಿದ ಪೀಠ, ಪಡಿತರ ವಿತರಣೆ ಸಂಬಂಧ, ಆಹಾರ ಭದ್ರತೆ ಸಂಬಂಧ ಈಗಾಗಲೇ ಕೋರ್ಟ್ ಕಾಲ ಕಾಲಕ್ಕೆ ನಿರ್ದೇಶನಗಳನ್ನು ನೀಡುತ್ತಿದೆ. ಆದೇಶಗಳನ್ನು ಓದದೇ ಮತ್ತೆ ಅದೇ ವಿಚಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ನ್ಯಾಯಾಲಯದ ಅದೇಶಗಳನ್ನು ಗಮನಿಸಬೇಕು ಎಂದು ಹೇಳಿದೆ.
ಒಂದು ವೇಳೆ, ಯಾವುದೇ ವಾಸ್ತವಿಕ ವಿಚಾರಗಳನ್ನು ಕೋರ್ಟ್ ಗಮನಕ್ಕೆ ತರಲು ಬಯಸಿದರೆ ಅಂಥವುಗಳಿಗೆ ಪ್ರತ್ಯೇಕ ಅರ್ಜಿ ಅಥವಾ ಮನವಿ ಸಲ್ಲಿಸುವ ಬದಲು ಅಮಿಕಸ್ ಕ್ಯೂರಿ ವಿಕ್ರಮ್ ಹುಯಿಲಗೋಳ ಅವರಿಗೆ ಕಳುಹಿಸಬಹುದು ಎಂದು ಹೈಕೋರ್ಟ್ ಸಲಹೆ ನೀಡಿದೆ.