ಬೆಂಗಳೂರು: ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಪರವಾಗಿ ಅಲ್ ಖೈದಾ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಆದರೆ ಅಲ್ ಖೈದಾ ಉಗ್ರನ ಹೇಳಿಕೆಗೂ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕೇನ್ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿ ನಜೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಸ್ಕಾನ್ ಪರವಾಗಿ ಅಲ್ ಖೈದಾ ಹೇಳಿಕೆ ಖಂಡನೀಯ. ಅಲ್ ಖೈದಾ ಒಂದು ಉಗ್ರ ಸಂಘಟನೆ ಹಾಗೂ ನಿಷೇಧಿತ ಸಂಘಟನೆ. ನಮ್ಮ ಆಂತರಿಕ ವಿಚಾರಗಳ ಬಗ್ಗೆ ಮೂಗುತೂರಿಸುವ ಯಾವುದೇ ಹಕ್ಕು ಅವರಿಗಿಲ್ಲ. ನಮ್ಮ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ. ಆದರೆ, ಅದೇ ರೀತಿ ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ ಹೇಳಿಕೆಯನ್ನು ಕೂಡಾ ನಾವು ಖಂಡಿಸುತ್ತೇವೆ ಎಂದರು.
ಹಿಜಾಬ್, ಹಲಾಲ್, ಆಜಾನ್, ವ್ಯಾಪಾರ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿ, ಈ ರೀತಿಯ ಹೇಳಿಕೆ ನೀಡುವ ಮೂಲಕ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಭ್ರಷ್ಟಾಚಾರ, ಆಡಳಿತ ವೈಫಲ್ಯದಿಂದ ಬೇರೆ ಕಡೆ ಗಮನವನ್ನು ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ. ಕರ್ನಾಟಕದ ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.
'ಮೋದಿ ಸರ್ಕಾರದಿಂದ ಬೆಲೆ ಏರಿಕೆ ಉಡುಗೊರೆ': ಇದಕ್ಕೂ ಮುನ್ನ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಅವರು, ಬಿಜೆಪಿಯಿಂದ ಜನಸಾಮಾನ್ಯರಿಗೆ 1,25,407.20 ಕೋಟಿ ಹೊರೆಯನ್ನೇ ಉಡುಗೊರೆ ನೀಡಲಾಗಿದೆ. ಬಿಜೆಪಿ ಸರ್ಕಾರ ಚುನಾವಣೆಯ ಗೆಲುವು ಲೂಟಿಗೆ ಸಿಕ್ಕ ಪರವಾನಿಗೆ ಎಂದು ಭಾವಿಸಿದೆ. ಏಪ್ರಿಲ್ 1ರಿಂದ ಮೋದಿ ಸರ್ಕಾರ, ಬೆಲೆ ಏರಿಕೆಯ ನಿರ್ಧಾರದಿಂದ ಎಲ್ಲ ಜನಸಾಮಾನ್ಯರ ನಿತ್ಯ ಬದುಕಿನ ಬಜೆಟ್ ಮೇಲೆ ಗದಾಪ್ರಹಾರ ಮಾಡಿದೆ. ಪ್ರತಿಯೊಬ್ಬರಿಗೂ 'ದುಬಾರಿ'ಯಲ್ಲಿ ಬದುಕುವುದು ದೊಡ್ಡ ಸವಾಲಾಗಿದೆ ಎಂದರು.
ಇದನ್ನೂ ಓದಿ: ಅಲ್ ಖೈದಾ ಮುಖ್ಯಸ್ಥನ ಹೇಳಿಕೆಗೆ ನಮ್ಮ ಸರ್ಕಾರ ಸೊಪ್ಪು ಹಾಕುವುದಿಲ್ಲ: ಲಕ್ಷ್ಮಣ ಸವದಿ