ETV Bharat / city

ವಿದೇಶಿ ಪ್ರಯಾಣಿಕರಿಗೆ ಹೋಂ ಕ್ವಾರಂಟೈನ್ ರದ್ದು, ಅಂತಾರಾಜ್ಯ ಪ್ರಯಾಣಿಕರಿಗೆ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ; ಸುಧಾಕರ್

author img

By

Published : Jan 5, 2022, 1:21 AM IST

Health Minister Sudhakar
ಆರೋಗ್ಯ ಸಚಿವ ಡಾ.ಸುಧಾಕರ್​

ರಾಜ್ಯದ ಆಸ್ಪತ್ರೆಗಳಲ್ಲಿ ಕೋವಿಡ್ ಹಾಸಿಗೆಗಳ ಸಿದ್ಧತೆ, ಆಕ್ಸಿಜನ್, ಐಸಿಯು ಮತ್ತು ಅಗತ್ಯವಾಗಿ ಬೇಕಾಗಿರುವ ಔಷಧಗಳ ಸರಬರಾಜು ಮತ್ತು ಖರೀದಿ ಸಿದ್ಧತೆಗಳ ಬಗ್ಗೆ ಸಂಪೂರ್ಣವಾಗಿ ಚರ್ಚೆ ಮಾಡಿ ಯಾವ ರೀತಿ ಸಿದ್ಧತೆ ಮಾಡಬೇಕು ಎನ್ನುವುದನ್ನು ತೀರ್ಮಾನಿಸಿದ್ದೇವೆ. ಕರ್ನಾಟಕಕ್ಕೆ ಒಂದು ರೀತಿಯ ತಂತ್ರ ಮತ್ತು ಬೆಂಗಳೂರಿಗೆ ಪ್ರತ್ಯೇಕ ತಂತ್ರ ಅನುಸರಿಸುತ್ತೇವೆ.

ಬೆಂಗಳೂರು: ಪಾಸಿಟಿವ್ ವರದಿ ಬಂದ ವಿದೇಶಿ ಪ್ರಯಾಣಿಕರಿಗೆ ಇನ್ಮುಂದೆ ಹೋಂ ಕ್ವಾರಂಟೈನ್ ರದ್ದುಪಡಿಸಿ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಲು ತೀರ್ಮಾನಿಸಿದ್ದು, ಹೊಸ ವರ್ಷಾಚರಣೆ ಮಾಡಿ ಗೋವಾದಿಂದ ಮರಳಿದವರನ್ನು ಹುಡುಕಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹೈರಿಸ್ಕ್ ದೇಶಗಳು ಎಂದು ಕೇಂದ್ರ ಸರ್ಕಾರ ಗುರುತಿಸಿರುವ ದೇಶದಿಂದ ಬರುವ ಪ್ರಯಾಣಿಕರನ್ನು ನಾವು ವಿಮಾನ ನಿಲ್ದಾಣದಲ್ಲೇ ತಪಾಸಣೆ ಮಾಡುತ್ತೇವೆ. ಪಾಸಿಟಿವ್ ಬಂದರೆ ಅಲ್ಲಿಯೇ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಪಾಸಿಟಿವ್ ಬಂದವರನ್ನು ಇನ್ಮುಂದೆ ಹೋಂ ಕ್ವಾರಂಟೈನ್ ಕಳುಹಿಸುವುದಿಲ್ಲ, ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ. ಅದಕ್ಕಾಗಿ ತಾರಾ ಹೋಟೆಲ್​ಗಳ ವ್ಯವಸ್ಥೆ ಮಾಡಲಾಗುತ್ತದೆ ಅದರ ವೆಚ್ಚ ಅವರೇ ಭರಿಸಬೇಕಾಗುತ್ತದೆ. ಆದರೆ ಬಡ್ಜೆಟ್ ಹೋಟೆಲ್​ಗಳಾದರ ಸರ್ಕಾರವೇ ಅದರ ಹಣ ಬರಿಸುತ್ತದೆ ಎಂದರು.

ಆರೋಗ್ಯ ಸಚಿವ ಡಾ. ಕೆ ಸುಧಾಕರ್


ರಾಜ್ಯ ಮತ್ತು ಬೆಂಗಳೂರಿಗೆ ಪ್ರತ್ಯೇಕ ತಂತ್ರ:

ರಾಜ್ಯದ ಆಸ್ಪತ್ರೆಗಳಲ್ಲಿ ಕೋವಿಡ್ ಹಾಸಿಗೆಗಳ ಸಿದ್ಧತೆ, ಆಕ್ಸಿಜನ್, ಐಸಿಯು ಮತ್ತು ಅಗತ್ಯವಾಗಿ ಬೇಕಾಗಿರುವ ಔಷಧಗಳ ಸರಬರಾಜು ಮತ್ತು ಖರೀದಿ ಸಿದ್ಧತೆಗಳ ಬಗ್ಗೆ ಸಂಪೂರ್ಣವಾಗಿ ಚರ್ಚೆ ಮಾಡಿ ಯಾವ ರೀತಿ ಸಿದ್ಧತೆ ಮಾಡಬೇಕು ಎನ್ನುವುದನ್ನು ತೀರ್ಮಾನಿಸಿದ್ದೇವೆ. ಕರ್ನಾಟಕಕ್ಕೆ ಒಂದು ರೀತಿಯ ತಂತ್ರ ಮತ್ತು ಬೆಂಗಳೂರಿಗೆ ಪ್ರತ್ಯೇಕ ತಂತ್ರ ಅನುಸರಿಸುತ್ತೇವೆ.

ಮೊದಲ ಮತ್ತು ಎರಡನೇ ಅಲೆಯಲ್ಲಿ ಶೇಕಡಾ 70 ರಿಂದ 80 ರಷ್ಟು ಪಾಸಿಟಿವ್ ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗುತ್ತಿದ್ದವು. ಈಗಲೂ ಬೆಂಗಳೂರಿನಲ್ಲಿ ಅದೇ ಪರಿಸ್ಥಿತಿ ಮುಂದುವರೆದಿದೆ. ಶೇಕಡ 80ರಿಂದ 90ರಷ್ಟು ಪ್ರಕರಣ ಬೆಂಗಳೂರಿನಲ್ಲಿ ಪತ್ತೆ ಆಗುತ್ತಿವೆ. ಹಾಗಾಗಿ ಬೆಂಗಳೂರನ್ನು ಎಂಟು ವಲಯಗಳನ್ನಾಗಿ ವಿಂಗಡಿಸಿ ಪ್ರತಿ ವಲಯಕ್ಕೆ ಐಎಎಸ್, ಐಪಿಎಸ್ ಅಧಿಕಾರಿಗಳ ತಂಡ ಮಾಡಿದ್ದೇವೆ. ಹಾಸಿಗೆಗಳ ಸಿದ್ಧತೆ, ಆಕ್ಸಿಜನ್ ಸೌಲಭ್ಯ, ಸಣ್ಣ ಸಣ್ಣ ವಿಷಯಗಳನ್ನು ಕೂಡ ವೈಜ್ಞಾನಿಕತೆಯಿಂದ ಮತ್ತು ಸಮಗ್ರವಾಗಿ ಶಿಸ್ತಿನಿಂದ ನಿರ್ವಹಣೆ ಮಾಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.

ಹೊರರಾಜ್ಯದಿಂದ ಬರುವವರಿಗೆ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ:

ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ಬರುವ ಪ್ರಯಾಣಿಕರಲ್ಲಿ ರೈಲು, ರಸ್ತೆ ,ವಿಮಾನದ ಮೂಲಕ ಸಂಚರಿಸುವವರೆಲ್ಲರ ಮೇಲೆ ನಿಗಾ ಇಡುವ ಕೆಲಸ ಮಾಡುತ್ತೇವೆ. ಕಡ್ಡಾಯವಾಗಿ ನೆಗಟಿವ್ ಪ್ರಮಾಣ ಪತ್ರ ತರುವ ಮಾರ್ಗಸೂಚಿ ತಂದಿದ್ದೇವೆ. ಹೊಸ ವರ್ಷಾವನ್ನಾಚರಿಸಿ ಗೋವಾದಿಂದ ಬಂದಿರುವ ಅನೇಕರು ಪಾಸಿಟಿವ್ ಆಗಿದ್ದಾರೆ ಎನ್ನುವ ಮಾಹಿತಿಯಿದೆ. ಹಾಗಾಗಿ ಹೊಸ ವರ್ಷದಿಂದ ಯಾರು ಗೋವಾದಿಂದ ಬಂದಿದ್ದಾರೋ, ಅವರ ಮೇಲೆ ನಿಗಾ ಇಟ್ಟು ಅವರೆಲ್ಲರನ್ನು ಮತ್ತೆ ಪರೀಕ್ಷೆಗೆ ಒಳಪಡಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದರು.

ಆತಂಕ ಬೇಡ:

ಸರ್ಕಾರದ ಕಠಿಣ ಕ್ರಮದಿಂದ ಯಾರು ಕೂಡ ಆತಂಕಕ್ಕೆ ಒಳಗಾಗಬಾರದು. ಮೊದಲ ಮತ್ತು ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆ ಅಷ್ಟು ಭೀಕರವಾದ ವ್ಯಾಧಿ ಅಲ್ಲ. ಆಮ್ಲಜನಕ, ವೆಂಟಿಲೇಟರ್ ಅವಶ್ಯಕತೆ ಕಡಿಮೆ ಆಗಲಿದೆ. ಅತಿ ಹೆಚ್ಚು ಸೋಂಕಿತರು ಆದಾಗ ನಮಗೆ ಆಸ್ಪತ್ರೆಗಳ ಮೇಲೆ ಒತ್ತಡ ಬೀಳಬಹುದು ಹಾಗೂ ಪರಿಸ್ಥಿತಿ ನಮ್ಮ ಕೈಮೀರಿ ಹೋಗದಂತೆ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಈ ಮುಂದಾಲೋಚನೆಯ ಕ್ರಮವನ್ನು ಬಹಳ ಜವಾಬ್ದಾರಿಯಿಂದ ಮಾಡಿದೆ ಎಂದರು.

ಯಾವುದೇ ರೀತಿಯ ಸಮಾರಂಭಗಳಿಗೆ ಕಡಿವಾಣ ಧಾರ್ಮಿಕ ಸಂಘ ಸಂಸ್ಥೆಗಳು, ಯಾವುದೇ ಹೋರಾಟದ ಕಾರ್ಯಕ್ರಮಗಳು ಸೇರಿದಂತೆ ಎಲ್ಲದಕ್ಕೂ ಸರ್ಕಾರ ನಿಯಮ ತಂದಿದೆ. ಮುಂದಿನ ಎರಡು ವಾರಗಳ ಕಾಲ ಯಾರು ಇದರಲ್ಲಿ ಭಾಗಿಯಾಗಬಾರದು. ಎಲ್ಲರೂ ಸರಕಾರದ ಜೊತೆ ಭಾಗಿಯಾಗಬೇಕು ಜನರ ರಕ್ಷಣೆಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:ಮಾಲ್​, ಸಿನಿಮಾ ಮಂದಿರಕ್ಕೆ ಶೇ.50ರಷ್ಟು ಮಿತಿ... ಸರ್ಕಾರದ ಕೈಗೊಂಡ ಕ್ರಮಗಳ ವಿವರ ಇಲ್ಲಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.