ETV Bharat / city

ಜೆಡಿಎಸ್ ಅಧಿಕಾರಕ್ಕೆ ಬಂದರೆ ಒತ್ತುವರಿ ಕುಳಗಳನ್ನು ಖಾಲಿ ಮಾಡಿಸುತ್ತೇನೆ: ಹೆಚ್​ಡಿಕೆ

author img

By

Published : Jun 27, 2022, 6:56 AM IST

H D Kumaraswamy
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಬೆಂಗಳೂರು ಸರಿಹೋಗಬೇಕಾದರೆ ಜೆಡಿಎಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತನ್ನಿ. ನಾಡಪ್ರಭು ಕೆಂಪೇಗೌಡರ ಆಶಯದಂತೆ ಬೆಂಗಳೂರನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಬೆಂಗಳೂರು: ಕೋವಿಡ್ ಸಂಕಷ್ಟದಲ್ಲಿ ಜನರ ತೆರಿಗೆ ಹಣ ಲೂಟಿ ಮಾಡಿದವರು, ಕೆರೆ ಮತ್ತು ರಾಜಕಾಲುವೆಗಳನ್ನು ನುಂಗಿದವರು, ಕಾಮಗಾರಿಗಳಲ್ಲಿ ಕಮಿಷನ್ ಹೊಡೆದವರು ಅದೇ ಜನರಿಗೆ ನಾಲ್ಕೈದು ಕೆಜಿ ಅಕ್ಕಿ ನೀಡಿ ಫೋಸು ಕೊಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.

ಬೆಂಗಳೂರಿನ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಆರ್.ಟಿ.ನಗರದ ಮೈದಾನದಲ್ಲಿ ನಿನ್ನೆ ಸಂಜೆ ಜೆಡಿಎಸ್ ಪಕ್ಷದ ವತಿಯಿಂದ ಮೋಯಿದ್ದಿನ್ ಅಲ್ತಾಫ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಪ್ರಭುಗಳು ಬಹಳ ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನು ಕಟ್ಟಿದ್ದರು. ಕೆರೆಕಟ್ಟೆಗಳು ಕಟ್ಟಿ ಇಡೀ ನಗರವನ್ನು ಜಲ ಶ್ಯಾಮಲಗೊಳಿಸಿದ್ದರು. ಆದರೆ, ಇಂದು ಭೂಗಳ್ಳರು ಸಾವಿರಾರು ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾರೆ. ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಮೆರೆಯುತ್ತಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಇವರೆಲ್ಲರನ್ನೂ ಖಾಲಿ ಮಾಡಿಸುತ್ತೇನೆ ಎಂದು ಗುಡುಗಿದರು.

ಕೆರೆ ಮುಚ್ಚಿ ಭೂ ಕಬಳಿಕೆ ಮಾಡಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದ್ದಾರೆ. ರಾಜಕಾಲುವೆಗಳ ಮೇಲೆ ಅರಮನೆಗಳನ್ನು ಮಾಡಿಕೊಂಡಿದ್ದಾರೆ. ಕೆರೆಗಳಿಗೆ ಹರಿದು ಹೋಗಬೇಕಿರುವ ನೀರು ಮನೆಗಳಿಗೆ ಹರಿಯುತ್ತಿದೆ. ಮಳೆ ಬಂದರೆ ತಗ್ಗು ಪ್ರದೇಶಗಳಲ್ಲಿ ವಾಸ ಮಾಡುವ ಜನರು ಜಾಗರಣೆ ಮಾಡಬೇಕಿದೆ. ಇಂಥ ದುಸ್ಥಿತಿ ರಾಜಧಾನಿಯಲ್ಲಿ ನಿರ್ಮಾಣ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಸಂಚರಿಸಿದ ರಸ್ತೆ ಕುಸಿತಕ್ಕೆ ಕಿಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಚಾರ ಮಾಡಿದ ರಸ್ತೆಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣ ಮಾಡಿದ್ದಾರೆ. ಅವರು ಬೆಂಗಳೂರಿನಿಂದ ಮೈಸೂರು ಪ್ರವಾಸ ಮುಗಿಸಿ ದೆಹಲಿಗೆ ವಿಮಾನ ಹತ್ತಿದ ಕೂಡಲೇ ಆ ರಸ್ತೆ ಕುಸಿದುಬಿದ್ದಿತ್ತು. ನಾಚಿಕೆಯಾಗಬೇಕು ಇವರಿಗೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಜನರ ತೆರಿಗೆ ಹಣವನ್ನು ಮನಸೋ ಇಚ್ಛೆ ವೆಚ್ಚ ಮಾಡಿದ್ದಾರೆ. ಅದಕ್ಕೊಂದು ಉತ್ತರದಾಯಿತ್ವ ಇಲ್ಲ. ಡಾಂಬರು ಕಿತ್ತುಹೋಗಿ ಗುಂಡಿ ಕಾಣಿಸಿಕೊಂಡಿದೆ. ಹೀಗೆ ಕೋಟ್ಯಂತರ ರೂಪಾಯಿ ಹಣ ಲೂಟಿ ಹೊಡೆದವರು, ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ರಾಜಕಾಲುವೆಗಳನ್ನು ನುಂಗಿ ನೀರು ಕುಡಿದವರು, ಅದೇ ಲೂಟಿ ಹೊಡೆದ ಹಣದಲ್ಲಿ ಕೋವಿಡ್​ನಲ್ಲಿ ನಾಲ್ಕು ಕೆ.ಜಿ ಅಕ್ಕಿ ನೀಡಿ, ನಾವು ನಿಮ್ಮ ಜತೆ ಇದ್ದೇವೆ ಎಂದು ಪೋಸು ಕೊಡ್ತಿದ್ದಾರೆ ಎಂದು ಕುಟುಕಿದರು.

ಬೆಂಗಳೂರು ಸರಿಹೋಗಬೇಕಾದರೆ ಜೆಡಿಎಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತನ್ನಿ. ನಾಡಪ್ರಭು ಕೆಂಪಗೌಡರ ಆಶಯದಂತೆ ಬೆಂಗಳೂರನ್ನು ಅಭಿವೃದ್ಧಿ ಮಾಡುತ್ತೇನೆ. ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ ಜೆಡಿಎಸ್ ಅನ್ನು ಒಂದು ಬಾರಿ ಅಧಿಕಾರಕ್ಕೆ ತನ್ನಿ. ಒಂದು ಬಾರಿ ಸ್ವತಂತ್ರ ಆಡಳಿತ ನೀಡಿ, ಎಲ್​ಕೆಜಿಯಿಂದ 12ನೇ ತರಗತಿವರೆಗೆ ಉತ್ತಮ ಶಿಕ್ಷಣ ನೀಡುವ ಸರ್ಕಾರ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಆರ್​ಎಸ್​​ಎಸ್​ ಪ್ರಮುಖರಿಗೆ ಶಾಸಕರು, ಸಚಿವರಿಂದ ಕಮಿಷನ್​ ಹೋಗ್ತಿದೆ: ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.