ETV Bharat / city

ಬೀದಿಯಲ್ಲಿ ರಕ್ತದ ಓಕುಳಿ ಹರಿಸುವುದು ಬೇಡ: ಹೆಚ್.ಡಿ.ಕುಮಾರಸ್ವಾಮಿ

author img

By

Published : May 11, 2022, 9:36 PM IST

ನನ್ನ ವಿರುದ್ಧ ಏನೇ ದಾಖಲೆ ಇದ್ದರೂ ಬಿಡುಗಡೆ ಮಾಡಲಿ. ನಾನು ಸಮ್ಮಿಶ್ರ ಸರ್ಕಾರದಲ್ಲಿ ‌ನಿಮ್ಮ ತರಹ ಲೂಟಿ ಮಾಡಿಲ್ಲ. ಲೂಟಿ ಮಾಡ್ತಿರೋರು ನೀವು. ನಿಮಗೆ ತಾಕತ್ ಇದ್ದರೆ ನಾಳೆ ಬೆಳಗ್ಗೆಯೇ ದಾಖಲೆ ಬಿಡುಗಡೆ ‌ಮಾಡಿ ಎಂದು ವೇದಿಕೆಯಲ್ಲಿ ಅಶ್ವತ್ಥ ನಾರಾಯಣ ಅವರಿಗೆ ಹೆಚ್​ಡಿಕೆ ಸವಾಲ್ ಹಾಕಿದರು.

H. D. Kumaraswamy
ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಧರ್ಮದ ಹೆಸರಿನಲ್ಲಿ ನಿಮ್ಮನ್ನು ದಾರಿ ತಪ್ಪಿಸಲಾಗುತ್ತಿದೆ. ನಿಮಗೆ ಧರ್ಮ ಬೇಕಾ, ಜೀವನ ಬೇಕಾ?. ಧರ್ಮವನ್ನು ಮನೆಯಲ್ಲಿ ಇಟ್ಟುಕೊಳ್ಳೋಣ ಬೀದಿಯಲ್ಲಿ ರಕ್ತದ ಓಕುಳಿ ಹರಿಸುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮದ ವೇಳೆ ಗವಿಗಂಗಾಧರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಜಲಧಾರೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ಚಾನಲ್​ನಲ್ಲಿ ಶಾಲಾ ಮಕ್ಕಳು ಅನುಭವಿಸುತ್ತಿರುವ ಹಿಂಸೆ ನೋಡಿದ್ದೇನೆ. ಮಹಾಲಕ್ಷ್ಮಿ ಲೇಔಟ್​ನಲ್ಲಿ ಖಾಸಗಿ ಶಾಲೆಯ ಅವ್ಯವಸ್ಥೆ ಹೊರಗಿಟ್ಟಿದೆ. ಹಲವಾರು ಶಾಲೆಗಳಲ್ಲಿ ಇಂತಹ ವ್ಯವಸ್ಥೆ ಇದೆ. ಇದನ್ನು ಗಮನಿಸಿ ನಾನು ಪಂಚತಂತ್ರ ಕಾರ್ಯಕ್ರಮದಲ್ಲಿ ಶಾಲೆಯ ಬಗ್ಗೆ ಕಾರ್ಯಕ್ರಮ ರೂಪಿಸಿದ್ದೇನೆ. ಕೂಡಲೇ ಆ ಶಾಲೆಯ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದರು.

ಸಚಿವ ಅಶ್ವತ್ಥ ನಾರಾಯಣ ಅವರಿಗೆ ಸವಾಲ್ ಹಾಕಿದ ಹೆಚ್​ಡಿಕೆ: ನನ್ನ ವಿರುದ್ಧ ಏನೇ ದಾಖಲೆ ಇದ್ದರು ಬಿಡುಗಡೆ ಮಾಡಲಿ. ನಾನು ಸಮ್ಮಿಶ್ರ ಸರ್ಕಾರದಲ್ಲಿ ‌ನಿಮ್ಮ ತರಹ ಲೂಟಿ ಮಾಡಿಲ್ಲ. ಲೂಟಿ ಮಾಡ್ತಿರೋರು ನೀವು. ನಿಮಗೆ ತಾಕತ್ ಇದ್ದರೆ ನಾಳೆ ಬೆಳಗ್ಗೆಯೇ ದಾಖಲೆ ಬಿಡುಗಡೆ ‌ಮಾಡಿ. ಪ್ರಾಧ್ಯಾಪಕರ ನೇಮಕಾತಿಯಲ್ಲಿ 450 ಕೋಟಿ ಅಕ್ರಮ ಆಗಿದೆ. ನನ್ನ ಬಗ್ಗೆ ಮಾತನಾಡಿದರೆ ಹುಷಾರ್, ನನ್ನ ಬಳಿ ಇರುವ ದಾಖಲಾತಿ ನಿಮ್ಮ ಬಳಿ ಇಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ ಅವರಿಗೆ ಸವಾಲ್ ಹಾಕಿದರು.

ಐಪಿಎಸ್ ಅಧಿಕಾರಿ ರವೀಂದ್ರನಾಥ್ ರಾಜೀನಾಮೆ ಅಂಗೀಕಾರ ಬೇಡ: ಐಪಿಎಸ್ ಅಧಿಕಾರ ರವೀಂದ್ರನಾಥ್ ರಾಜೀನಾಮೆಯನ್ನು ಸರ್ಕಾರ ಅಂಗೀಕಾರ ಮಾಡಬಾರದು. ಸರ್ಕಾರದ ನಡವಳಿಕೆ ವಿರುದ್ದ ರಾಜೀನಾಮೆ ನೀಡಿದ್ದಾರೆ. ಅನೇಕ ಜನ ನಕಲಿ ಮೀಸಲಾತಿ ಸರ್ಟಿಫಿಕೇಟ್ ಪಡೆದಿದ್ದರು. ಇದನ್ನ ತನಿಖೆ ಮಾಡಲು ಹೋದರೆ ವರ್ಗಾವಣೆ ಮಾಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಬಗ್ಗೆ ಸಿದ್ದರಾಮಯ್ಯ ಅಧಿವೇಶನದಲ್ಲಿ ಭಾಷಣ ಮಾಡಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ಫೇಕ್ ದಾಖಲಾತಿ ಕೊಟ್ಟ ಪೊಲೀಸ್ ಅಧಿಕಾರಿಯಾಗಿದ್ದ ಕೆಂಪಯ್ಯ ಅಧಿಕಾರ ಪಡೆದಿದ್ದರು. ಅಂತಹವರಿಗೆ ಪೊಲೀಸ್ ಇಲಾಖೆ ಜವಾಬ್ದಾರಿ ಕೊಟ್ಟಿದ್ದರು. ಸಿದ್ದರಾಮಯ್ಯಗೆ ಈ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಸಂಪುಟ ಸರ್ಕಸ್​.. ಸಿಎಂ-ಶಾ ಭೇಟಿ ಅಂತ್ಯ, ಬರಿಗೈಯಲ್ಲೇ ರಾಜ್ಯಕ್ಕೆ ಬೊಮ್ಮಾಯಿ ವಾಪಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.