ETV Bharat / city

ಸಿದ್ದರಾಮಯ್ಯ ಮೊದಲು ಆರ್ಯರಾ, ದ್ರಾವಿಡರಾ ಅನ್ನೋದನ್ನು ಹೇಳಲಿ: ಸಿಎಂ ಬೊಮ್ಮಾಯಿ ತಿರುಗೇಟು

author img

By

Published : May 28, 2022, 11:42 AM IST

Updated : May 28, 2022, 11:49 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
CM Basavaraj Bommai

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರದಂದು ಆರ್​ಎಸ್​ಎಸ್​ ಮೂಲವನ್ನು ಪ್ರಶ್ನಿಸಿದ್ದರು. ಈ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ ಸಿದ್ದರಾಮಯ್ಯನವರ ಮೂಲವನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು: ಸಿದ್ದರಾಮಯ್ಯ ಅವರು ಆರ್ಯರಾ? ಅಥವಾ ದ್ರಾವಿಡರಾ? ಅನ್ನೋದನ್ನು ಮೊದಲು ಹೇಳಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಆರ್.ಟಿ. ನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಆರ್​ಎಸ್​ಎಸ್ ಮೂಲದ ಬಗ್ಗೆ ಪ್ರಶ್ನಿಸಿದ್ದ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಮೊದಲು ಸಿದ್ದರಾಮಯ್ಯ ಎಲ್ಲಿಂದ ಬಂದಿದ್ದಾರೆ ಅಂತ ಹೇಳಲಿ. ಸಿದ್ದರಾಮಯ್ಯ ಆರ್ಯರಾ? ದ್ರಾವಿಡರಾ?. ಇದನ್ನು ಮೊದಲು ಅವರು ಹೇಳಲಿ ಎಂದು ಮರು ಸವಾಲು ಹಾಕಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯಿಂದ ರೋಹಿತ್ ಚಕ್ರತೀರ್ಥರನ್ನು ಕೈಬಿಡಬೇಕೆಂಬ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಈ ವಿಚಾರಗಳ ಬಗ್ಗೆ ಶಿಕ್ಷಣ ಸಚಿವರಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಏನೇನಾಗಿದೆ ಅಂತ‌ ನೋಡಿಕೊಂಡು ಮುಂದುವರೆಯುತ್ತೇವೆ ಎಂದರು.

ಕೋರ್ಟ್ ಆದೇಶ ಪಾಲಿಸಬೇಕು: ಹಿಜಾಬ್ ವಿವಾದ ಮಾಡುವ ಅಗತ್ಯ ಇಲ್ಲ. ಈಗಾಗಲೇ ಕೋರ್ಟ್ ತನ್ನ ಆದೇಶ ಕೊಟ್ಟಿದೆ. ಎಲ್ಲರೂ ಕೋರ್ಟ್ ಆದೇಶ ಪಾಲಿಸಬೇಕು. ಶೇ.99.99ರಷ್ಟು ಮಂದಿ ಕೋರ್ಟ್ ಆದೇಶ ಪಾಲಿಸಿದ್ದಾರೆ. ಹಿಜಾಬ್ ಬಗ್ಗೆ ಮಂಗಳೂರು ವಿವಿ ಸಿಂಡಿಕೇಟ್ ನಿರ್ಣಯ ತೆಗೆದುಕೊಂಡಿದೆ. ಆಡಳಿತ ಮಂಡಳಿ ಏನು ನಿರ್ಧಾರ ಮಾಡುತ್ತಾರೋ ಅದನ್ನು ಪಾಲಿಸಬೇಕು. ಸಿಂಡಿಕೇಟ್ ಸಹ ಕೋರ್ಟ್ ಆದೇಶ ಪಾಲಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಹಿಜಾಬ್ ಬಿಟ್ಟು ವಿದ್ಯಾರ್ಜನೆ ಕಡೆ ಗಮನ ಕೊಡಲಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಆರ್​ಎಸ್​ಎಸ್​​ನವರೇನು ಮೂಲ ಭಾರತೀಯರಾ?: ಸಿದ್ದರಾಮಯ್ಯ ಪ್ರಶ್ನೆ

ಕನ್ನಡಿಗರಿಗೆ ತೊಂದರೆ ಕೊಟ್ಟರೆ ಸುಮ್ಮನೆ ಇರಲ್ಲ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈಗಾಗಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಎಂಇಎಸ್​ನವರು ಕಾನೂನು ಕೈಗೆತ್ತಿಕೊಳ್ಳೋದನ್ನು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು. ಎಂಇಎಸ್ ನವರು ನಮ್ಮ ನೆಲದಲ್ಲಿ ಕಾನೂನು ಕೈಗೆತ್ತಿಕೊಳ್ಳೋದನ್ನು ಸಹಿಸಲ್ಲ. ಅವರಿಗೆ ಈ ಪ್ರಕರಣದಲ್ಲಿ ಸ್ಪಷ್ಟ ಸಂದೇಶ ಕಳಿಸಿದ್ದೇವೆ. ಕನ್ನಡಿಗರಿಗೆ ತೊಂದರೆ ಕೊಟ್ಟರೆ ಸುಮ್ಮನೆ ಇರಲ್ಲ ಎಂದು ಎಚ್ಚರಿಕೆ ರವಾನಿಸಿದರು.

Last Updated :May 28, 2022, 11:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.