ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 13ರಿಂದ ಅಧಿವೇಶನ ಆರಂಭವಾಗಲಿದೆ. ಈ ಭಾಗದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಡಿ.12 ರಂದು ಖಾನಾಪುರದಿಂದ ಸುವರ್ಣಸೌಧದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಘೋಷಿಸಿದ್ದಾರೆ.
ಖಾನಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾನಾಪುರ ಅಭಿವೃದ್ಧಿಗಾಗಿ 'ಸುವರ್ಣಸೌಧ ಚಲೋ, ಖಾನಾಪುರ ಸಂಘರ್ಷ' ಹೆಸರಲ್ಲಿ ಪಾದಯಾತ್ರೆಗೆ ನಿರ್ಧರಿಸಲಾಗಿದೆ. ಡಿಸೆಂಬರ್ 12ರಂದು ಮಧ್ಯಾಹ್ನ 3 ಗಂಟೆಗೆ ಪಾದಯಾತ್ರೆ ಆರಂಭಿಸಲಾಗುವುದು. ಖಾನಾಪುರದಿಂದ ಬೆಳಗಾವಿಯ ಸುವರ್ಣಸೌಧವರೆಗೆ 40 ಕಿಮೀ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆ ಮಾಡಿ ಡಿ.13 ಕ್ಕೆ ಪಾದಯಾತ್ರೆ ಸುವರ್ಣಸೌಧ ತಲುಪಲಿದೆ ಎಂದರು.
ಖಾನಾಪುರ ತಾಲೂಲಕಿನಲ್ಲಿ ಹೆಚ್ಚಿನ ಹಾನಿ
ಅಕಾಲಿಕ ಮಳೆಯಿಂದ ಖಾನಾಪುರ ತಾಲೂಕಿನಲ್ಲಿ 3632 ಹೆಕ್ಟೇರ್ ಪ್ರದೇಶ ಭತ್ತ ಹಾನಿಯಾಗಿದೆ. NDRF ನಿಯಮಾವಳಿ ಪ್ರಕಾರ ಪ್ರತಿ ಎಕರೆಗೆ 2,720 ರೂ. ಪರಿಹಾರ ಕೊಡುವುದಾಗಿ ಹೇಳುತ್ತಿದ್ದಾರೆ. ಆದರೆ, 1 ಎಕರೆ ಭತ್ತ ಬೆಳೆಯಲು 15 ಸಾವಿರ ರೂಪಾಯಿಗೂ ಹೆಚ್ಚು ಖರ್ಚಾಗುತ್ತದೆ. ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರದ್ದೇನು ಜವಾಬ್ದಾರಿ ಇಲ್ವಾ? ಎಂದು ಪ್ರಶ್ನಿಸಿದರು.
ಮಳೆಯಿಂದ 255 ಶಾಲಾ ಕೊಠಡಿಗಳಿಗೆ ಹಾನಿ
ಖಾನಾಪುರ ತಾಲೂಕಿನಲ್ಲಿ 66 ಶಾಲೆಗಳ ಒಟ್ಟು 255 ಶಾಲೆಯ ಕೊಠಡಿಗಳು ಮಳೆಯಿಂದ ಹಾನಿಯಾಗಿವೆ. ಅಕ್ಟೋಬರ್, ನವೆಂಬರ್ನಲ್ಲಿ ಮಳಗೆ 100 ಮನೆಗಳು ಬಿದ್ದಿವೆ. ಬಿಜೆಪಿ ಸರ್ಕಾರ ಕೇವಲ ಘೋಷಣೆ ಮಾಡಿ ಜನರಿಗೆ ಮೋಸ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೊರೆಯೂ ರೈತರ ಮೇಲಿದೆ. ಅಕ್ರಮ ಸಕ್ರಮ ಯೋಜನೆ, ಹನಿ ನೀರಾವರಿಗಿದ್ದ ಸಬ್ಸಿಡಿ ಕಡಿತಗೊಳಿಸಲಾಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ: ಬಿಜೆಪಿ ಸೇರದಿರೋದಕ್ಕೆ ನನ್ನನ್ನು ತಿಹಾರ ಜೈಲಿಗೆ ಹಾಕಿದ್ರು : ಡಿಕೆಶಿ ಹೊಸ ಬಾಂಬ್
ಖಾನಾಪುರ ತಾಲೂಕಿನಲ್ಲಿ ಸಮರ್ಪಕ ಸರ್ಕಾರಿ ಬಸ್ಗಳಿಲ್ಲ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಿಕ್ಕಿರಿದು ಬಸ್ನಲ್ಲಿ ವಿದ್ಯಾರ್ಥಿಗಳು ಕುಳಿತಿರುವ ಫೋಟೋಗಳನ್ನು ಶಾಸಕಿ ನಿಂಬಾಳ್ಕರ್ ಪ್ರದರ್ಶಿಸಿದರು.
ರಸ್ತೆ ಕಾಮಗಾರಿಯೂ ಕುಂಠಿತ; ಆಕ್ರೋಶ
ತಾಲೂಕಿನಲ್ಲಿ ಪಿಡಬ್ಲ್ಯೂಡಿ ರಸ್ತೆ, ರಾಜ್ಯ ಹೆದ್ದಾರಿಗಳೆಲ್ಲವೂ ಹಾಳಾಗಿವೆ. 820 ಕ್ಕೂ ಹೆಚ್ಚು ಕಿಲೋಮೀಟರ್ ರಸ್ತೆ, 23 ಸೇತುವೆಗಳಿಗೆ ಹಾನಿಯಾಗಿವೆ. ಖಾನಾಪುರ ತಾಲೂಕಿನಲ್ಲಿ 525 ರಸ್ತೆ ಕಾಮಗಾರಿ ಮಾಡಿಲ್ಲ. ಅರಣ್ಯಪ್ರದೇಶದಿಂದ ಬರುವ ಸಾರ್ವಜನಿಕರಿಗೆ ತೊಂದರೆ ಆಗ್ತಿದೆ. ಮಂಜೂರಾದ ಒಂದು ಸೇತುವೆ ಕಟ್ಟಲು ಸಹ ಇವರಿಂದ ಆಗ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.