ETV Bharat / city

ವಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ

author img

By

Published : Dec 23, 2021, 5:21 PM IST

Updated : Dec 23, 2021, 6:13 PM IST

Karnataka Religious Freedom Rights Protection bill passed in assembly
ವಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ

Karnataka Anti Conversion Bill 2021: ವಿಪಕ್ಷಗಳ ವಿರೋಧದ ನಡುವೆಯೇ ವಿಧಾನಸಭೆಯಲ್ಲಿಂದು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಕ ವಿಧೇಯಕ -2021ಕ್ಕೆ ಅಂಗೀಕಾರ ನೀಡಲಾಗಿದೆ.

ಸುವರ್ಣಸೌಧ(ಬೆಳಗಾವಿ): ವಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಸದಸ್ಯರ ತೀವ್ರ ಪ್ರತಿಭಟನೆ, ಪ್ರತಿರೋಧದ ಮಧ್ಯೆಯೇ ಮತಾಂತರ ನಿಷೇಧ ವಿಧೇಯಕ (ಕರ್ನಾಟಕ ಧಾರ್ಮಿಕ ಸ್ವಾತಂತ್ಯ ಹಕ್ಕು ಸಂರಕ್ಷಣಾ ವಿಧೇಯಕ-2021) ವಿಧಾನಸಭೆಯಲ್ಲಿಂದು ಅಂಗೀಕಾರಗೊಂಡಿತು.

ವಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ

ಮತಾಂತರ ನಿಷೇಧ ವಿಧೇಯಕ ಅಂಗೀಕಾರ ಮಾಡದಂತೆ ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಬಾವಿಗಳಿದು ಧರಣಿ ನಡೆಸಿದರು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಧ್ವನಿಮತಗಳ ಮೂಲಕ ವಿಧೇಯಕ ಅಂಗೀಕಾರ ಮಾಡುವುದಾಗಿ ತಿಳಿಸಿದರು. ಅದಕ್ಕೆ ಬಿಜೆಪಿ ಸದಸ್ಯರು ಬೆಂಬಲ ಸೂಚಿಸಿ ಸದನದಲ್ಲಿ ವಿಧೇಯಕ ಅಂಗೀಕಾರ ಪಡೆದುಕೊಂಡರು. ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದಕ್ಕೆ ಸ್ಪೀಕರ್ ಕಾಗೇರಿ ಕಲಾಪವನ್ನು 10 ನಿಮಿಷ ಮುಂದೂಡಿದರು.

ಚಳಿಗಾಲ ಅಧಿವೇಶನ ಕೊನೆಯ ದಿನವಾದ ನಾಳೆ ಕರ್ನಾಟಕ ಧಾರ್ಮಿಕ ಸ್ವಾತಂತ್ಯ ಹಕ್ಕು ಸಂರಕ್ಷಣಾ ವಿಧೇಯಕ-2021 ಪರಿಷತ್‍ನಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ಬಿಲ್ ಹಿಂದೆ ಆರ್‌ಎಸ್‍ಎಸ್ ಕೈವಾಡ:

ಕರ್ನಾಟಕ ಧಾರ್ಮಿಕ ಸ್ವಾತಂತ್ಯ ಹಕ್ಕು ಸಂರಕ್ಷಣಾ ವಿಧೇಯಕ-2021 ಜಾರಿಯ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಳಗ್ಗೆಯಿಂದಲೇ ಪ್ರತಿಪಾದಿಸುತ್ತ ಬಂದಿದ್ದರು.

ಭೋಜನ ವಿರಾಮದ ನಂತರ ದಾಖಲೆ ಸಮೇತ ಚರ್ಚೆ ಆರಂಭಿಸಿದ ಸಿದ್ದರಾಮಯ್ಯ, 2009ರಲ್ಲಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆಗ ಬಿಜೆಪಿ ಬೆಂಬಲಿತ ಚಿಂತಕರು ಬಿಎಸ್‍ವೈಗೆ ಮನವಿ ಸಲ್ಲಿಸಿ, ಮಧ್ಯಪ್ರದೇಶ ಮಾದರಿಯಲ್ಲಿ ಮತಾಂತರ ನಿಷೇಧ ವಿಧೇಯಕ ಜಾರಿಗೆ ತರುವಂತೆ ಕೋರಿದ್ದರು. ಮಧ್ಯಪ್ರದೇಶ ತೆಗೆದು ಕರ್ನಾಟಕ ಎಂದು ಸೇರಿಸಿದರೆ ಸಾಕು ಎಂದು ಮನವಿ ಪತ್ರದಲ್ಲೇ ಉಲ್ಲೇಖಿಸಲಾಗಿತ್ತು ಎಂದು ದೂರಿದರು. ಹೀಗಾಗಿ ಮತಾಂತರ ನಿಷೇಧ ವಿಧೇಯಕ ಜಾರಿಯ ಹಿಂದೆ ಆರ್‌ಎಸ್‍ಎಸ್ ಕೈವಾಡ ಇದೆ ಎಂದು ಆರೋಪಿಸಿದರು. ಇಂಥ ಅಮಾನವೀಯ ಕಾನೂನು ಜಾರಿಗೆಗೆ ನಮ್ಮ ವಿರೋಧ ಎಂದು ಕುಟುಕಿದರು.

ಮನವಿ ಬಂದಿದ್ದು ನಿಜ ಎಂದ ಬಿಎಸ್‍ವೈ

ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ, ಹೌದು, ಸಿದ್ದರಾಮಯ್ಯ ಮಾಡುತ್ತಿರುವ ಆರೋಪ ನೂರಕ್ಕೆ ನೂರರಷ್ಟು ಸತ್ಯವಿದೆ. 2009ರಲ್ಲೇ ಕೆಲ ಚಿಂತಕರು ನನಗೆ ಮನವಿ ಸಲ್ಲಿಸಿದ್ದು ನಿಜ. ಆಗಿನಿಂದಲೂ ಈ ವಿಧೇಯಕ ಜಾರಿಗೆ ತರಲು ನಾವು ಚಿಂತನೆ ನಡೆಸುತ್ತಿದ್ದೇವೆ. ಆದರೆ ಸಿದ್ದರಾಮಯ್ಯನವರು ಕೂಡ 2016ರಲ್ಲಿ ಈ ಕಾನೂನು ಜಾರಿಗೆಗೆ ಡ್ರಾಪ್ ಸಿದ್ದಪಡಿಸಲು ಸೂಚಿಸಿ, ಸಹಿ ಕೂಡ ಮಾಡಿದ್ದರು.

ಕ್ಯಾಬಿನೆಟ್‍ವರೆಗೆ ಬರುವ ತನಕ ಎಲ್ಲ ಪ್ರಕ್ರಿಯೆಗಳು ಮುಗಿದ್ದವು. ಕೊನೆ ಕ್ಷಣದಲ್ಲಿ ಈ ವಿಧೇಯಕವನ್ನು ಕ್ಯಾಬಿನೆಟ್‍ಗೆ ಒಯ್ಯದೇ ಡ್ರಾಪ್ ಮಾಡಿದ್ದೀರಿ. ನೀವೇ ಸಿದ್ಧಪಡಿಸಿರುವ ವಿಧೇಯಕದಲ್ಲಿ ಕೆಲವು ಅಂಶಗಳನ್ನು ನಾವು ಸೇರಿಸಿ, ಇದೀಗ ಮಂಡನೆ ಮಾಡಿದ್ದೇವೆ. ಸರ್ವ ಸದಸ್ಯರು ಅಂಗೀಕಾರ ಮಾಡಬೇಕು ಎಂದು ಕೋರಿದರು.

ನಮ್ಮ ತಂಟೆಗೆ ಬಂದರೆ ಚಿಂದಿ - ಚಿಂದಿ:

ಮತಾಂತರ ನಿಷೇಧ ವಿಧೇಯಕ ಜಾರಿ ಹಿಂದೆ ಆರ್‌ಎಸ್‍ಎಸ್ ಕೈವಾಡ ಇದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದರು. ಬಿಜೆಪಿ-ಆರ್‌ಎಸ್‍ಎಸ್ ಎರಡೂ ಒಂದೇ. ನಾವು ಆರ್‌ಎಸ್‍ಎಸ್‍ನವರು ಹೇಳಿದನ್ನೇ ಮಾಡುತ್ತೇವೆ. ಆರ್‌ಎಸ್‍ಎಸ್ ಕೂಡ ದೇಶ - ಧರ್ಮ ಸಂರಕ್ಷಣೆಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾವೂ ಯಾರ ತಂಟೆಗೆ ಹೋಗಲ್ಲ. ಯಾರಾದರೂ ನಮ್ಮ ತಂಟೆಗೆ ಬಂದರೆ ಬಿಡಲ್ಲ. ಅಂಥವರನ್ನು ಚಿಂದಿಚಿಂದಿ ಮಾಡಿ ತೀರುತ್ತೇವೆ. 2016ರಲ್ಲಿ ವಿಧೇಯಕ ಸಿದ್ಧಪಡಿಸಿದ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರ ಸೂಚನೆಯಿಂದ ಮಂಡಿಸಲಿಲ್ಲ. ಸಿದ್ದರಾಮಯ್ಯನವರಿಗೆ ಸಿಎಂ ಆಗಿ ಮುಂದುವರೆಯಬೇಕಿತ್ತು. ಹೀಗಾಗಿ ವಿಧೇಯಕವನ್ನು ಅಂದು ಸಿದ್ದರಾಮಯ್ಯ ಮಂಡಿಸಲಿಲ್ಲ ಎಂದರು.

ಆರ್‌ಎಸ್‍ಎಸ್ ಬೇಡಿಕೆಗೆ ಸ್ಪಂದಿಸಿದ್ದೇಕೆ?

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಸಿ, ವಿಧೇಯಕವನ್ನು ಏಕೆ ತರಲಾಗಿದೆ? ಇದರ ಹಿಂದೆ ಯಾರಿದ್ದಾರೆ? ಎಂಬ ಬಗ್ಗೆ ಪ್ರತಿಪಕ್ಷ ನಾಯಕರು ಹೇಳುತ್ತಿದ್ದಾರೆ. 2009ರಲ್ಲಿ ಬಿಎಸ್‍ವೈ ಸಿಎಂ ಆಗಿದ್ದಾಗ ಮನವಿ ಬಂದಿದ್ದು ನಿಜ. ಆದರೆ ಆರ್‌ಎಸ್‍ಎಸ್ ಬೇಡಿಕೆಗೆ ನೀವೇಕೆ ಸ್ಪಂದಿಸಿದ್ದೀರಿ ಹೇಳಿ ಎಂದು ಸಿದ್ದರಾಮಯ್ಯನವರ ಕಾಲೆಳೆದರು. ಮಸೂದೆ ಸಿದ್ದಪಡಿಸಿ, ಪರಿಶೀಲನೆ ಮಾಡಿ ಸಹಿ ಕೂಡ ಸಿದ್ದರಾಮಯ್ಯನವರು ಮಾಡಿದ್ದರು.

ಕ್ಯಾಬಿನೆಟ್‍ಗೆ ಇದು ಬರುವುದೊಂದೇ ಬಾಕಿ ಇತ್ತು. ಬಿಎಸ್‍ವೈಗೆ ಆರ್‌ಎಸ್‍ಎಸ್ ಸಲಹೆ ಬಂದಿತ್ತು. ಆದರೆ ನೀವೇಕೆ ಆರ್‌ಎಸ್‍ಎಸ್ ಬೇಡಿಕೆಗೆ ಸ್ಪಂದಿಸಿದ್ದೀರಿ. ವಿಧೇಯಕ ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ. ಕಾಂಗ್ರೆಸ್ ನಾಯಕರೇ ರಾಜಕಾರಣ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಇದನ್ನೂ ಓದಿ: ವಿಧೇಯಕ ವಿರೋಧಿಸಿದರೆ ಕಾಂಗ್ರೆಸ್ ಪಕ್ಷವನ್ನು ಜನ ಹರಿದು ಹಾಕ್ತಾರೆ: ಬಿಎಸ್​ವೈ

Last Updated :Dec 23, 2021, 6:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.