ETV Bharat / business

ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ ಆರ್​​​​​ಬಿಐ... ಸಾಲಗಾರರಿಗೆ ಇಲ್ಲ ಯಾವುದೇ ಚಿಂತೆ!

author img

By ETV Bharat Karnataka Team

Published : Oct 6, 2023, 10:31 AM IST

Updated : Oct 6, 2023, 11:20 AM IST

ಆರ್​ಬಿಐ ಗವರ್ನರ್​​ ಶಕ್ತಿಕಾಂತ ದಾಸ, ಹಣಕಾಸು ನೀತಿ ಬಗ್ಗೆ ಸುದ್ದಿಗೋಷ್ಠಿ ನಡೆಸಿದರು. ಇದೇ ವೇಳೆ, ಭಾರತವು ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಲು ಸಿದ್ಧವಾಗಿದೆ ಎಂದು ಘೋಷಿಸಿದರು.

Repo Rate unchanged at 6.5 RBI Governor Shaktikanta
Repo Rate unchanged at 6.5 RBI Governor Shaktikanta

ಮುಂಬೈ: ಈ ಬಾರಿಯೂ ರಿಜರ್ವ್​ ಬ್ಯಾಂಕ್​ ಆಫ್​ ಇಂಡಿಯಾ ರೆಪೋ ರೇಟ್​ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದಿನಂತೆ ರೆಪೋ ರೇಟ್​ ಶೇ 6.5 ರಷ್ಟೇ ಮುಂದುವರೆಯಲಿದೆ.

ಆರ್ಥಿಕ ನೀತಿ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಆರ್​ಬಿಐ ಗವರ್ನರ್​​ ಶಕ್ತಿ ಕಾಂತ್​ ದಾಸ್​, ವಿಕಸನಗೊಳ್ಳುತ್ತಿರುವ ಸ್ಥೂಲ ಆರ್ಥಿಕತೆ ಮತ್ತು ಆರ್ಥಿಕ ಬೆಳವಣಿಗೆಗಳು ಹಾಗೂ ಅದರ ವಿವರವಾದ ಮೌಲ್ಯಮಾಪನದ ನಂತರ ರೆಪೋ ದರವನ್ನು 6.5ರಲ್ಲೇ ಮುಂದುವರಿಸಲು ಆರ್‌ಬಿಐನ ಹಣಕಾಸು ನೀತಿ ಸಮಿತಿಯು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಈ ನಡುವೆ SDF, MSF ದರದಲ್ಲೂ ಯಾವುದೇ ಬದಲಾವಣೆ ಮಾಡದಿರಲು ಆರ್​ಬಿಐ ನಿರ್ಧರಿಸಿದೆ. ಇನ್ನು ಸ್ಥಾಯಿ ಠೇವಣಿ ಸೌಲಭ್ಯ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರಗಳು ಸಹ 6.25% ಮತ್ತು 6.75% ರಲ್ಲೇ ಬದಲಾವಣೆ ಮಾಡದೇ ಮುಂದುವರಿಸಲಾಗಿದೆ.

ಆರ್ಥಿಕ ನೀತಿ ಬಿಡುಗಡೆ ಮಾಡಿ ಮಾತನಾಡಿದ ದಾಸ್​, ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಭಾರತವು ಸ್ಥೂಲ ಸ್ಥಿರತೆ ಮತ್ತು ಮೂಲಭೂತ ಬೆಳವಣಿಗೆಯ ಮೇಲೆ ತನ್ನ ನೀತಿಯನ್ನು ಕೇಂದ್ರೀಕರಿಸಿದೆ ಎಂದಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರ ನಿಯಂತ್ರಣ ಮಾಡಲು ಹಾಗೂ ಹಣದುಬ್ಬರ ಏರಿಕೆ ಆಗದಂತೆ ಜಾಗರೂಕತೆ ಕಾಯ್ದುಕೊಳ್ಳುವ ಕಾರಣದಿಂದ ಸತತವಾಗಿ ನಾಲ್ಕನೇ ಬಾರಿಗೆ ತನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಪಾಡಿಕೊಳ್ಳಲು ನಿರ್ಧರಿಸಿದೆ. ಮೇ 2022 ರಿಂದ ಒಟ್ಟು ಆರು ಬಾರಿ ಸತತವಾಗಿ ರೆಪೋ ದರ ಏರಿಕೆ ಮಾಡಿದ್ದ ಆರ್​ಬಿಐ ಕಳೆದ ಏಪ್ರಿಲ್​​​ನಿಂದ ಇದಕ್ಕೆ ವಿರಾಮ ಹಾಕಿದೆ. ಅದನ್ನು ಈ ಬಾರಿಯೂ ಮುದುವರೆಸಲಾಗಿದೆ.

ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಕೇಂದ್ರ ಬ್ಯಾಂಕ್​​ನ ಗವರ್ನರ್​ ಶಕ್ತಿಕಾಂತ ದಾಸ್, ವಿತ್ತೀಯ ನೀತಿ ಸಮಿತಿ ಎಂಪಿಸಿ ಸರ್ವಾನುಮತದಿಂದ ರೆಪೋ ದರವನ್ನು ಶೇಕಡಾ 6.5 ರಷ್ಟು ಯಥಾಸ್ಥಿತಿಯಲ್ಲಿಡಲು ತೀರ್ಮಾನಿಸಿದೆ ಎಂದು ಹೇಳಿದರು. ಎಂಪಿಸಿ ಹಣದುಬ್ಬರದ ಮೇಲೆ ನಿಗಾ ಇಡುತ್ತದೆ ಮತ್ತು ಹಣದುಬ್ಬರವನ್ನು ಹತೋಟಿಯಲ್ಲಿ ಇಡಲು ತನ್ನ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿದೇಶದ ಜಿಡಿಪಿ ದರವನ್ನು ಶೇಕಡ 6.5 ಕ್ಕೆ ಉಳಿಸಿಕೊಳ್ಳಲಾಗಿದೆ ಮತ್ತು ಅಪಾಯಗಳನ್ನು ಮೆಟ್ಟಿ ನಿಲ್ಲಲು ಆರ್ಥಿಕ ನೀತಿಗಳನ್ನು ಸಮತೋಲನಗೊಳಿಸಲಾಗಿದೆ. ಗ್ರಾಹಕ ಬೆಲೆ ಆಧಾರಿತ ಹಣದುಬ್ಬರ (ಸಿಪಿಐ) ಆಗಸ್ಟ್‌ನಲ್ಲಿ ಶೇಕಡಾ 6.83 ಕ್ಕೆ ತಲುಪಿದ ಹಿನ್ನೆಲೆಯಲ್ಲಿ ಎಂಪಿಸಿ ಸಭೆ ನಡೆಸಲಾಗಿತ್ತು. ಹಣದುಬ್ಬರದ ಸೆಪ್ಟೆಂಬರ್ ಅಂಕಿ- ಅಂಶಗಳನ್ನು ಮುಂದಿನ ವಾರದ ವೇಳೆಗೆ ನಿರೀಕ್ಷಿಸಲಾಗಿದೆ ಎಂದು ಶಕ್ತಿಕಾಂತ ದಾಸ್​ ಹೇಳಿದ್ದಾರೆ.

ಹಠಾತ್ ಆಗಿ ಏರಿಕೆ ಆಗುತ್ತಿರುವ ಆಹಾರ ಮತ್ತು ಇಂಧನ ಬೆಲೆ ಏರಿಕೆಯನ್ನು ನಿಭಾಯಿಸಲು ವಿತ್ತೀಯ ನೀತಿಯು ಸಂಪೂರ್ಣ ಸಿದ್ಧತೆಯಲ್ಲಿರಬೇಕಾದ ಅನಿವಾರ್ಯತೆ ಇದೆ ಎಂದು ಆರ್​ಬಿಐ ಗವರ್ನರ್​ ಹೇಳಿದರು. ಆಹಾರ ಹಣದುಬ್ಬರವು ಮೂರನೇ ತ್ರೈಮಾಸಿಕದಲ್ಲಿ ನಿರಂತರವಾದ ಸರಾಗತೆಯನ್ನು ಕಾಣದಿರಬಹುದು ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು. ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ತನ್ನ ಸ್ಥಿತಿಸ್ಥಾಪಕತ್ವ ಮುಂದುವರೆಸಿದೆ ಎಂದು ಇದೇ ವೇಳೆ ಶಕ್ತಿಕಾಂತ್​ ದಾಸ್​ ಹೇಳಿದರು.

ಇದನ್ನು ಓದಿ: ಷೇರು ಮಾರುಕಟ್ಟೆ ಇಂದು: ಸೆನ್ಸೆಕ್ಸ್​ 405 & ನಿಫ್ಟಿ 108 ಅಂಕ ಏರಿಕೆ

Last Updated :Oct 6, 2023, 11:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.