ETV Bharat / bharat

ಮಹಿಳಾ ಮೀಸಲಾತಿ ಮಸೂದೆ ತಕ್ಷಣ ಕಾನೂನಾಗಲಿ; ಸೋನಿಯಾ ಗಾಂಧಿ ಒತ್ತಾಯ

author img

By ETV Bharat Karnataka Team

Published : Sep 20, 2023, 2:54 PM IST

ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣ ಕಾನೂನಾಗಿ ಮಾಡಬೇಕೆಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ.

Sonia Gandhi seeks immediate implementation
Sonia Gandhi seeks immediate implementation

ನವದೆಹಲಿ: 'ನಾರಿ ಶಕ್ತಿ ವಂದನ್ ಅಧಿನಿಯಮ್ 2023' ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ ಸೋನಿಯಾ ಗಾಂಧಿ, ಇದನ್ನು ತಕ್ಷಣ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಸತ್ತಿನ ವಿಶೇಷ ಅಧಿವೇಶನದ ಮೂರನೇ ದಿನವಾದ ಬುಧವಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯನ್ನು ಪ್ರಾರಂಭಿಸಿ ಮಾತನಾಡಿದರು. ಮಸೂದೆಯನ್ನು ಜಾರಿಯ ವಿಳಂಬ ಎಂದರೆ ಅದು ದೇಶದ ಮಹಿಳೆಯರಿಗೆ ಅನ್ಯಾಯ ಎಸಗಿದಂತೆ ಎಂದು ಅವರು ಹೇಳಿದರು.

"ನಾನು ನಾರಿ ಶಕ್ತಿ ವಂದನ್ ಅಧಿನಿಯಮ್ 2023 ಅನ್ನು ಬೆಂಬಲಿಸುತ್ತೇನೆ. ಈ ಮಸೂದೆ ಕಾನೂನಾಗಲು ಇನ್ನೂ ಕಾಯಬೇಕಿದೆ ಎಂದು ಮಹಿಳೆಯರಿಗೆ ಹೇಳಲಾಗುತ್ತಿದೆ. ಆದರೆ ಮಸೂದೆಯನ್ನು ತಕ್ಷಣವೇ ಕಾನೂನನ್ನಾಗಿ ಮಾಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಮಸೂದೆ ಜಾರಿಯಲ್ಲಿನ ವಿಳಂಬವು ದೇಶದ ಮಹಿಳೆಯರಿಗೆ ಮಾಡುವ ಅನ್ಯಾಯ. ತಕ್ಷಣವೇ ಮಸೂದೆಯನ್ನು ಕಾನೂನಾಗಿ ಮಾಡುವಂತೆ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ" ಎಂದು ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಹೇಳಿದರು.

ಇತರ ಹಿಂದುಳಿದ ವರ್ಗ / ಪರಿಶಿಷ್ಟ ಜಾತಿ (ಒಬಿಸಿ / ಎಸ್ಸಿ) ಸಮುದಾಯಗಳಿಗೆ ಸೇರಿದ ಮಹಿಳೆಯರಿಗೂ ಸೂಕ್ತ ಮೀಸಲಾತಿ ಅವಕಾಶ ಸಿಗುವಂತೆ ಜಾತಿ ಗಣತಿ ನಡೆಸಬೇಕೆಂದು ಅವರು ಒತ್ತಾಯಿಸಿದರು. ಲೋಕಸಭೆಯಲ್ಲಿ ತಮ್ಮ ಭಾಷಣಕ್ಕೂ ಮುನ್ನ ಮಾತನಾಡಿದ ಸೋನಿಯಾ ಗಾಂಧಿ, "ಇದು ರಾಜೀವ್ ಜಿ ಅವರ ಕನಸಿನ ಮಸೂದೆಯಾಗಿತ್ತು " ಎಂದು ಹೇಳಿದರು.

"ಇದು ನನ್ನ ಜೀವನದ ಭಾವನಾತ್ಮಕ ಕ್ಷಣವೂ ಹೌದು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಾಗಿ ಸಾಂವಿಧಾನಿಕ ತಿದ್ದುಪಡಿಯನ್ನು ಮೊದಲ ಬಾರಿಗೆ ನನ್ನ ಜೀವನ ಸಂಗಾತಿ ರಾಜೀವ್ ಗಾಂಧಿ ತಂದಿದ್ದರು. ರಾಜ್ಯಸಭೆಯಲ್ಲಿ ಅದು ಏಳು ಮತಗಳಿಂದ ಸೋತಿತು. ನಂತರ, ಪ್ರಧಾನಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಿತು. ಇದರ ಪರಿಣಾಮವಾಗಿ, ನಾವು ಸ್ಥಳೀಯ ಸಂಸ್ಥೆಗಳ ಮೂಲಕ ದೇಶಾದ್ಯಂತ 15 ಲಕ್ಷ ಚುನಾಯಿತ ಮಹಿಳಾ ನಾಯಕರನ್ನು ಹೊಂದಿದ್ದೇವೆ. ರಾಜೀವ್ ಗಾಂಧಿಯವರ ಕನಸು ಭಾಗಶಃ ಮಾತ್ರ ಪೂರ್ಣಗೊಂಡಿದೆ. ಈ ಮಸೂದೆಯ ಅಂಗೀಕಾರದೊಂದಿಗೆ ಇದು ಪೂರ್ಣಗೊಳ್ಳುತ್ತದೆ" ಎಂದು ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಹೇಳಿದರು.

"ಭಾರತೀಯ ಮಹಿಳೆಯರು ಕಳೆದ 13 ವರ್ಷಗಳಿಂದ ತಮ್ಮ ರಾಜಕೀಯ ಸ್ಥಾನಮಾನಗಳಿಗಾಗಿ ಕಾಯುತ್ತಿದ್ದಾರೆ. ಅವರು ಇನ್ನೂ ಎಷ್ಟು ವರ್ಷ ಕಾಯಬೇಕು? ಭಾರತೀಯ ಮಹಿಳೆಯರೊಂದಿಗೆ ಈ ವರ್ತನೆ ಸೂಕ್ತವೇ? ಮಸೂದೆಯನ್ನು ತಕ್ಷಣದಿಂದ ಜಾರಿಗೆ ತರಬೇಕೆಂದು ಕಾಂಗ್ರೆಸ್​ ಒತ್ತಾಯಿಸುತ್ತದೆ. ಜೊತೆಗೆ ಜಾತಿ ಗಣತಿಯನ್ನು ಸಹ ಕೈಗೊಳ್ಳಬೇಕು ಮತ್ತು ಎಸ್ಸಿ, ಎಸ್ಟಿ ಮತ್ತು ಒಬಿಸಿ ಮಹಿಳೆಯರಿಗೆ ಮೀಸಲಾತಿ ಜಾರಿ ಮಾಡಬೇಕು" ಎಂದು ಅವರು ತಿಳಿಸಿದರು.

ಇದನ್ನೂ ಓದಿ : ವಿಶ್ವಸಂಸ್ಥೆಯಲ್ಲಿ ಮತ್ತೆ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.