ETV Bharat / bharat

₹ 2.5 ಲಕ್ಷ ಖರ್ಚು ಮಾಡಿ ವಿದೇಶದಿಂದ ಬಂದರೂ ವೋಟಿಂಗ್ ಮಿಸ್​!: ಕಾರಣವೇನು ಗೊತ್ತಾ?

author img

By ETV Bharat Karnataka Team

Published : Dec 1, 2023, 11:04 PM IST

Telangana Elections : despite-spending-rs-2-dot-5-lakh-telangana-man-fails-to-cast-his-vote
₹ 2.5 ಲಕ್ಷ ಖರ್ಚು ಮಾಡಿ ವಿದೇಶದಿಂದ ಬಂದರೂ ವೋಟಿಂಗ್ ಮಿಸ್​!, ಕಾರಣವೇನು ಗೊತ್ತಾ?

Telangana Assembly Elections Result 2023: ತೆಲಂಗಾಣದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್​ನಿಂದ ಮತದಾನ ಮಾಡಲು ಬಂದಿದ್ದ ವ್ಯಕ್ತಿಯ ಹೆಸರೇ ಮತದಾರರ ಪಟ್ಟಿಯಲ್ಲಿ ಕಾಣೆಯಾಗಿದೆ. ಇದರಿಂದ ಆತ ಮತ ಚಲಾಯಿಸದೆ ಮನೆಗೆ ಮರಳಿದ ಪ್ರಸಂಗ ನಡೆದಿದೆ.

ಹೈದರಾಬಾದ್​ (ತೆಲಂಗಾಣ): ತೆಲಂಗಾಣದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ವಿದೇಶದಿಂದ ಹುಟ್ಟೂರಿಗೆ ಬರಲು 2.5 ಲಕ್ಷ ರೂಪಾಯಿ ಖರ್ಚು ಮಾಡಿದರೂ, ತಮ್ಮ ಮತ ಹಕ್ಕು ಚಲಾಯಿಸಲು ಸಾಧ್ಯವಾಗಲಿಲ್ಲ. ಮಂಚಿರ್ಯಾಲ ಜಿಲ್ಲೆಯ ಜನ್ನಾರಾಮ್​ ಮಂಡಲದ ಚಿಂತಗುಡ ಗ್ರಾಮದ ಪುದರಿ ಶ್ರೀನಿವಾಸ್​ ಎಂಬುವವರೇ ವೋಟಿಂಗ್ ಮಿಸ್ ಮಾಡಿಕೊಂಡು ವ್ಯಕ್ತಿ.

ಕಳೆದ 15 ವರ್ಷಗಳಿಂದ ನ್ಯೂಜಿಲೆಂಡ್​ನ ಕಂಪನಿಯೊಂದರಲ್ಲಿ ಪುದರಿ ಶ್ರೀನಿವಾಸ್ ವೆಲ್ಡರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಚುನಾವಣಾ ಸಂದರ್ಭದಲ್ಲಿಯೇ ಹುಟ್ಟೂರಿಗೆ ಪ್ರವಾಸ ಕೈಗೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಶ್ರೀನಿವಾಸ್ ಅವರ ಸ್ನೇಹಿತರೊಬ್ಬರು ಮತದಾರರ ಪಟ್ಟಿಯನ್ನೂ ವಾಟ್ಸಾಪ್‌ನಲ್ಲಿ ಕಳುಹಿಸಿದ್ದರು. ಅದರಲ್ಲಿ ಶ್ರೀನಿವಾಸ್ ಮತ್ತು ಅವರ ಪತ್ನಿ ಲಾವಣ್ಯ ಹೆಸರುಗಳು ಇದ್ದವು. ಹೀಗಾಗಿ ಹುಟ್ಟೂರಿಗೆ ಬಂದು ಪೋಷಕರೊಂದಿಗೆ ಕಾಲ ಕಳೆಯುವುದರ ಜೊತೆಗೆ ಮತದಾನ ಮಾಡುವ ಲೆಕ್ಕಾಚಾರ ಹೊಂದಿದ್ದರು.

ಇದನ್ನೂ ಓದಿ: ತೆಲಂಗಾಣ ಚುನಾವಣಾ ಫಲಿತಾಂಶದ ಬಗ್ಗೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್: ಆ್ಯಪ್, ವೆಬ್‌ಸೈಟ್‌ಗಳೇ ಅಡ್ಡೆಗಳು!

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತ ಪಡಿಸಿಕೊಂಡಿದ್ದ ಶ್ರೀನಿವಾಸ್ ವಿಮಾನ ಟಿಕೆಟ್ ಕಾಯ್ದಿರಿಸಿದರು. ಅಂತೆಯೇ, ವಾರದ ಹಿಂದೆ ದಂಪತಿ ಸಮೇತವಾಗಿ ತಮ್ಮ ಗ್ರಾಮಕ್ಕೆ ಬಂದಿದ್ದರು. ಮತದಾನದ ದಿನವಾದ ನಿನ್ನೆ, ನವೆಂಬರ್​ 30ರಂದು ಶ್ರೀನಿವಾಸ್​ 296ನೇ ಮತಗಟ್ಟೆಗೆ ತೆರಳಿದ್ದರು. ಆದರೆ, ಈ ವೇಳೆ ಅಚ್ಚರಿ ಕಾದಿತ್ತು. ಮತದಾರರ ಪಟ್ಟಿಯಲ್ಲಿ ಪತ್ನಿಯ ಹೆಸರು ಮಾತ್ರ ಇತ್ತು. ಆಗ ಶ್ರೀನಿವಾಸ್​ ತಮ್ಮ ಬಳಿಯಿದ್ದ ಈ ಹಿಂದಿನ ಮತದಾರರ ಪಟ್ಟಿ ತೋರಿಸಿದ್ದಾರೆ.

ಇದನ್ನೂ ಓದಿ: ವಿಧಾನಸಭಾ ಚುನಾವಣೆ: ಮಿಜೋರಾಂನಲ್ಲಿ ಮತ ಎಣಿಕೆ ಮುಂದೂಡಿಕೆ

ಅಲ್ಲದೇ, ತಮ್ಮ ಹೆಸರು ಏಕೆ ನಾಪತ್ತೆಯಾಗಿದೆ ಎಂದು ಅಧಿಕಾರಿಗಳನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಇದು ಪರಿಷ್ಕೃತ ಮತದಾರರ ಪಟ್ಟಿಯಾಗಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಕೊನೆಗೆ ಶ್ರೀನಿವಾಸ್ ಮತ ಚಲಾಯಿಸದೆ ಮನೆಗೆ ಮರಳಿದ್ದಾರೆ. ತಮಗೆ ಮತದಾನ ಮಾಡುವ ಅವಕಾಶ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಶ್ರೀನಿವಾಸ್, ನಾನು ಮತದಾನ ಮಾಡಬೇಕೆಂಬ ಉದ್ದೇಶದೊಂದಿಗೆ 2.50 ಲಕ್ಷ ರೂ.ಗಳಷ್ಟು ವಿಮಾನ ಟಿಕೆಟ್​ಗೆ ಖರ್ಚು ಮಾಡಿದ್ದೆ. ಆದರೆ, ದುರದೃಷ್ಟವಶಾತ್, ನನ್ನ ಮತ ಹಕ್ಕು ಇಲ್ಲವಾಗಿದೆ ಎಂದು ಹೇಳಿದ್ದಾರೆ.

ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ನವೆಂಬರ್ 30ರಂದು ಚುನಾವಣೆ ನಡೆದಿದೆ. ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಬಿಎಸ್‌ಆರ್ ನಡುವೆ ತ್ರಿಕೋನ ಸಮರ ಏರ್ಪಟ್ಟಿದೆ. ಗುರುವಾರ ಬಿಡುಗಡೆಯಾದ ಎಕ್ಸಿಟ್ ಪೋಲ್​ಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ.

ಇದನ್ನೂ ಓದಿ: Exit Poll Result: ತೆಲಂಗಾಣ ಕಾಂಗ್ರೆಸ್​ನ​​ ಹುಮ್ಮಸ್ಸು ಹೆಚ್ಚಿಸಿದ ಎಕ್ಸಿಟ್ ಪೋಲ್​, ರಾಹುಲ್ ಗಾಂಧಿ​ ಕಾರ್ಯತಂತ್ರಕ್ಕೆ ಯಶಸ್ಸು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.