ETV Bharat / bharat

ಮಾಲ್ಡೀವ್ಸ್​ನಲ್ಲಿ ತಮಿಳುನಾಡಿನ 12 ಮೀನುಗಾರರ ಬಂಧನ: ​ಕರೆ ತರುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ

author img

By ETV Bharat Karnataka Team

Published : Oct 28, 2023, 10:38 AM IST

tamilnadu-fishermen-arrested-in-the-maldives-arrested-persons-mom-receives-call-from-maldives
ಮಾಲ್ಡೀವ್ಸ್​ನಲ್ಲಿ ತಮಿಳುನಾಡಿನ 12 ಮೀನುಗಾರರ ಬಂಧನ : ​ಕರೆ ತರುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ

ಮಾಲ್ಡೀವ್ಸ್​ನ ಜಲಪ್ರದೇಶಕ್ಕೆ ತೆರಳಿದ ತಮಿಳುನಾಡು ಮೀನುಗಾರರನ್ನು ಮಾಲ್ಡೀವ್ಸ್​ ಕರಾವಳಿ ಕಾವಲು ಪಡೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಶೀಘ್ರದಲ್ಲೇ ಕರೆತರುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ತೂತುಕುಡಿ (ತಮಿಳುನಾಡು ) : ಮೀನುಗಾರಿಕೆಗೆ ತೆರಳಿದ್ದ ವೇಳೆ ಮಾಲ್ಡೀವ್ಸ್​ನ ಜಲಪ್ರದೇಶಕ್ಕೆ ತೆರಳಿದ ತಮಿಳುನಾಡಿನ ಮೀನುಗಾರರನ್ನು ಮಾಲ್ಡೀವ್ಸ್​ನ ಕರಾವಳಿ ಕಾವಲು ಪಡೆ​ ಅಧಿಕಾರಿಗಳು ಬಂಧಿಸಿದ್ದಾರೆ. ಒಟ್ಟು 12 ಮೀನುಗಾರರನ್ನು ಬಂಧಿಸಿದ್ದು, 1.5 ಕೋಟಿ ಮೌಲ್ಯದ ಬಾರ್ಜ್​ (ದೋಣಿ)ನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಒಂದು ವಾರದ ಹಿಂದೆ ಮೀನುಗಾರರನ್ನು ಬಂಧಿಸಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಲ್ಡೀವ್ಸ್​ ಸರ್ಕಾರವ ಇದೇ ಮೊದಲ ಬಾರಿಗೆ ತಮಿಳುನಾಡು ಮೀನುಗಾರರನ್ನು ಬಂಧಿಸಿದೆ.

ಬಂಧನಕ್ಕೊಳಗಾಗಿರುವವರನ್ನು ರಾಮೇಶ್ವರಂನ ಉದಯಕುಮಾರ್ (31), ತೂತುಕುಡಿಯ ವೆಂಬಾರ್​ನ ಮೈಕೆಲ್ ರಾಜ್ (21), ಆಂಟನಿ ಅನ್ಸೆಲ್ ಕ್ರಿಸ್ಟೋಫರ್ (22), ಆದಿಶಯ ಪರಲೋಕ ಧೀರವಿಯಂ (25 ), ಮಧುರೈನ ಮಾಧೇಶ್ ಕುಮಾರ್ (15), ಆಂಟೋನಿ ಸೆಲ್ವಶೇಖರನ್ (23), ಆದಿ ನಾರಾಯಣನ್ (20), ಮಹೇಶ್​ ಕುಮಾರ್ (24) , ಅನ್ಬು ಸೂಸೈ ಮೈಕಲ್ (48), ವಿಘ್ನೇಶ್ (31) ಮತ್ತು ಮಣಿ ಶಕ್ತಿ ಎಂದು ಗುರುತಿಸಲಾಗಿದೆ. ಬಂಧಿತರು ಅಕ್ಟೋಬರ್ 1ರಂದು ತೂತುಕುಡಿ ಸಮೀಪದ ತರುವೈಕುಲಂ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗಾಗಿ ತೆರಳಿದ್ದರು.

ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಬಂಧನಕ್ಕೊಳಗಾಗಿರುವ ಮೀನುಗಾರ ಆದಿ ನಾರಾಯಣ್​ ತಾಯಿ ವಿಜಯಲಕ್ಷ್ಮಿ, ಅಕ್ಟೋಬರ್​ 1ರಂದು ಅವರು ಮೀನು ಹಿಡಿಯಲು ಆಳ ಸಮುದ್ರಕ್ಕೆ ತೆರಳಿದ್ದರು. ಮೀನು ಹಿಡಿಯುವ ಸಂದರ್ಭ ಮಾಲ್ಡೀವ್ಸ್​ನ ಜಲಪ್ರದೇಶಕ್ಕೆ ತೆರಳಿದ್ದ ಅವರನ್ನು ಅಲ್ಲಿನ ಕೋಸ್ಟ್​ ಗಾರ್ಡ್​ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಗ್ಗೆ ಮಹಿಳೆಯೊಬ್ಬರು ಕರೆ ಮಾಡಿ, ನಿಮ್ಮ ಮಗ ಸುರಕ್ಷಿತವಾಗಿದ್ದಾನೆ. ನಮ್ಮ ಪರಿಶೀಲನೆ ನಡೆದ ಕೂಡಲೇ ಅವರನ್ನು ಮರಳಿ ತಾಯ್ನಾಡಿಗೆ ಕಳುಹಿಸಲಾಗುವುದು. ಆದರೆ, ಯಾವಾಗ ಕಳುಹಿಸಲಾಗುವುದು ಎಂದು ಮಹಿಳೆ ಹೇಳಲಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ಈ ಕೂಡಲೇ ಬಂಧಿತರಾಗಿರುವ ಮೀನುಗಾರರನ್ನು ಭಾರತಕ್ಕೆ ತರಬೇಕು ಎಂದು ವಿಜಯಲಕ್ಷ್ಮಿ ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೀನುಗಾರಿಕಾ ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ಪುಗಳ್​ ಸೆಲ್ವಮಣಿ, ಕಳೆದ ಅಕ್ಟೋಬರ್​ 1ರಂದು 12 ಮಂದಿ ಮೀನುಗಾರರು ಇಲ್ಲಿನ ತರುವೈಕುಲಂ ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಅಕ್ಟೋಬರ್​ 20ರಂದು ಮಾಲ್ಡೀವ್ಸ್​ನ ಕರಾವಳಿ ಕಾವಲು ಪಡೆ ಮೀನುಗಾರರನ್ನು ಬಂಧಿಸಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ಈ ವಿಷಯ ಅಕ್ಟೋಬರ್​ 27ಕ್ಕೆ ಗೊತ್ತಾಗಿದೆ. ಅಲ್ಲಿ ಮೀನುಗಾರರಿಗೆ ಹಿಂಸೆ ನೀಡಲಾಗುತ್ತಿದೆ. ಆದರೆ ಹಿಂಸೆ ನೀಡಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದರು.

ಬಂಧನದ ಬಗ್ಗೆ ಮಾಹಿತಿ ತಿಳಿದ ತಕ್ಷಣ ತಮಿಳುನಾಡು ಮೀನುಗಾರಿಕಾ ಸಚಿವೆ ಅನಿತಾ ಆರ್​ ರಾಧಾಕೃಷ್ಣನ್​, ಮೀನುಗಾರಿಕಾ ಇಲಾಖೆ ಅಧಿಕಾರಿಗಳು, ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ಮಾಹಿತಿ ನೀಡಿದ್ದೇವೆ. ಅವರು ಮೀನುಗಾರರನ್ನು ಕರೆತರುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಕಳೆದ ಮೂರು ವರ್ಷಗಳ ಹಿಂದೆ ತಮಿಳುನಾಡು ಮೀನುಗಾರನ್ನು ಬಂಧಿಸಿದ್ದ ಮಾಲ್ಡೀವ್ಸ್​ ಸರ್ಕಾರ ಅವರ ಪರವಾನಗಿಯನ್ನು ಪರಿಶೀಲಿಸಿದ ನಂತರ ಬಿಡುಗಡೆ ಮಾಡಿತ್ತು. ಆದರೆ ಇದೀಗ ಭಾರತ ಸರ್ಕಾರ ಮತ್ತು ಮಾಲ್ಡೀವ್ಸ್​ ಸರ್ಕಾರ ನಡುವಿನ ಅಂತಾರಾಷ್ಟ್ರೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆ ಮೊದಲ ಬಾರಿಗೆ ಮೀನುಗಾರನ್ನು ಬಂಧಿಸಿದೆ ಎಂದು ಹೇಳಲಾಗಿದೆ. ಈ ಸಂಬಂಧ ಮೀನುಗಾರರ ಒಕ್ಕೂಟದ ಅಂಥೋನಿ ಜಯಬಾಲನ್​ ಸೇರಿದಂತೆ ಒಕ್ಕೂಟದ ಸದಸ್ಯರು ಮಾಲ್ಡೀವ್ಸ್​ಗೆ ತೆರಳಿದ್ದಾರೆ.

ಇದನ್ನೂ ಓದಿ : ಟೊಮೆಟೊ ಆಯ್ತು ಈಗ ಕಣ್ಣೀರು ತರಿಸ್ತಿದೆ ಈರುಳ್ಳಿ - ಗಗನಕ್ಕೇರುತ್ತಿರುವ ಬೆಲೆ..: 5 ಕೆಜಿಗೆ 350 ರೂ.. !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.