ETV Bharat / bharat

'ಗ್ಲಾಂಡರ್' ರೋಗ ಭೀತಿಯಿಂದ ಕುದುರೆ ಮೇಳ ನಿಷೇಧಿಸಿದ ಪಂಜಾಬ್ ಸರ್ಕಾರ: ವ್ಯಾಪಾರಿಗಳಿಗೆ ನಷ್ಟ

author img

By ETV Bharat Karnataka Team

Published : Oct 4, 2023, 6:25 AM IST

Stud Farming In Punjab
ಗ್ಲಾಂಡರ್ ರೋಗ ಭೀತಿಯಿಂದ ಕುದುರೆ ಮೇಳ ನಿಷೇಧಿಸಿದ ಪಂಜಾಬ್ ಸರ್ಕಾರ: ಕುದುರೆ ವ್ಯಾಪಾರಿಗಳಿಗೆ ಲಕ್ಷಾಂತರ ರೂ. ನಷ್ಟ

ಕುದುರೆಗಳಿಗೆ ಗ್ಲಾಂಡರ್ ರೋಗ ಭೀತಿ ಎದುರಾಗಿದ್ದು ಪಂಜಾಬ್ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

ಬಟಿಂಡಾ (ಪಂಜಾಬ್): ಪಂಜಾಬ್‌ನಲ್ಲಿ ರೈತರ ಸ್ಟಡ್ ಕೃಷಿ ವ್ಯವಹಾರವನ್ನು ಗ್ಲಾಂಡರ್ ರೋಗ ತೀವ್ರವಾಗಿ ಕಾಡುತ್ತಿದೆ. ಇದರಿಂದಾಗಿ ಸರ್ಕಾರವು ಪಂಜಾಬ್‌ನಲ್ಲಿ ಕುದುರೆ ಮೇಳ ನಿಷೇಧಿಸಿದೆ. ಕುದುರೆ ತರುವುದನ್ನು ಮತ್ತು ಪ್ರಯಾಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ಪರಿಣಾಮ ಕುದುರೆ ವ್ಯಾಪಾರ ಮಾಡುವ ರೈತರು ಕೋಟ್ಯಂತರ ರೂಪಾಯಿ ಮೌಲ್ಯದ ಜಾನುವಾರುಗಳನ್ನು ತಡೆ ಹಿಡಿದಿದ್ದಾರೆ. ಇದಕ್ಕಾಗಿ ನಿತ್ಯ ಸಾವಿರಾರು ರೂಪಾಯಿ ಖರ್ಚು ಮಾಡಿ ಅವುಗಳ ಪಾಲನೆ ಪೋಷಣೆ ಮಾಡಲಾಗುತ್ತದೆ.

ಬಟಿಂಡಾದ ದಿಯುನ್ ಗ್ರಾಮದಲ್ಲಿ ಸ್ಟಡ್ ಫಾರ್ಮಿಂಗ್‌ ಮಾಡುವ ಹಾಗೂ ಕುದುರೆ ವ್ಯಾಪಾರಿ ಜಲೋರ್ ಸಿಂಗ್ ಮಾತನಾಡಿ, "ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರೈತರು ಪಂಜಾಬ್‌ನಲ್ಲಿ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ. ಈ ವ್ಯವಹಾರದಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಲಾಗಿದೆ. ಪಂಜಾಬ್‌ನಲ್ಲಿ ನಡೆಯುವ ಕುದುರೆ ಮೇಳದ ಮೂಲಕ ವ್ಯವಹಾರ ಮಾಡಲಾಗುತ್ತದೆ. ಇದರಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್ ಮತ್ತು ಮಾಲ್ಡೀವ್ಸ್ ಮುಂತಾದ ದೇಶಗಳ ವ್ಯಾಪಾರಿಗಳು ಕುದುರೆಗಳನ್ನು ಖರೀದಿಸಲು ಬರುತ್ತಾರೆ" ಎಂದು ಹೇಳಿದರು.

ಕುದುರೆಗಳ ಖರೀದಿ, ಮಾರಾಟದ ಮೇಲೆ ಎಫೆಕ್ಟ್​: "ಪಂಜಾಬ್ ಸರ್ಕಾರ ಪಂಜಾಬ್‌ನಲ್ಲಿ ಕುದುರೆ ಮೇಳ ನಡೆಸುವುದನ್ನು ನಿಷೇಧಿಸಿತು. ಇದರಿಂದಾಗಿ ದೇಶದ ವ್ಯಾಪಾರಿಗಳು ಕುದುರೆಗಳನ್ನು ಖರೀದಿಸಲು ಬರುತ್ತಿದ್ದ ಜಾಗರವಾನ್ ಮತ್ತು ಶ್ರೀ ಮುಕ್ತಸರ ಸಾಹಿಬ್ ಎಂಬ ದೊಡ್ಡ ಜಾತ್ರೆಗಳನ್ನು ರದ್ದುಗೊಳಿಸಲಾಗಿದೆ. ಈ ಸಂತೆಗಳು ರದ್ದಾಗಿರುವುದರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಜಾನುವಾರುಗಳ ಖರೀದಿ, ಮಾರಾಟಕ್ಕೆ ಭಾರಿ ಹೊಡೆತ ಬಿದ್ದಿದೆ. ಜಾಗರವಾನ್ ಕುದುರೆ ಜಾತ್ರೆಯೊಂದರಲ್ಲೇ ಐದು ಕೋಟಿಗೂ ಹೆಚ್ಚು ಜಾನುವಾರುಗಳನ್ನು ಖರೀದಿ ಹಾಗೂ ಮಾರಾಟ ಮಾಡಲಾಗುತ್ತಿತ್ತು. ನಿಷೇಧದಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಕುದುರೆಗಳು ರೈತರ ಮನೆಗಳಲ್ಲಿ ನಿಂತಿವೆ" ಎಂದು ಜಲೋರ್ ಸಿಂಗ್ ಈಟಿವಿ ಭಾರತಗೆ ತಿಳಿಸಿದರು.

"ಒಂದು ಕುದುರೆಗೆ ದಿನಕ್ಕೆ ಸುಮಾರು 1,000 ರೂಪಾಯಿ ವೆಚ್ಚವಾಗುತ್ತದೆ. ಪ್ರತಿ ಉದ್ಯಮಿ 50 ರಿಂದ 60 ಲಕ್ಷ ರೂಪಾಯಿ ಮೌಲ್ಯದ ಕುದುರೆಗಳನ್ನು ಹೊಂದಿದ್ದಾರೆ. ಇದರಿಂದಾಗಿ, ಈ ವ್ಯವಹಾರಕ್ಕೆ ಸಂಬಂಧಿಸಿದವರ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ. ಮತ್ತೊಂದೆಡೆ, ಗ್ಲಾಂಡರ್​ ಎಂಬ ಕಾಯಿಲೆಯ ಭಯದಿಂದ ಸರ್ಕಾರವು ಕುದುರೆ ಮೇಳಗಳನ್ನು ನಿರಂತರವಾಗಿ ನಿಷೇಧಿಸುತ್ತಿದೆ. ಕಳೆದ ವರ್ಷ ಜಾಗರವನ ಜಾತ್ರೆಯೊಂದರಲ್ಲೇ 10 ಲಕ್ಷ ರೂಪಾಯಿ ಲಾಭ ಬಂದಿತ್ತು. ಈ ಬಾರಿ ಜಾತ್ರೆ ರದ್ದು ಪಡಿಸಿದ್ದರಿಂದ ಅಪಾರ ನಷ್ಟ ಉಂಟಾಗಿದೆ" ಎನ್ನುತ್ತಾರೆ ಜಲೋರ್ ಸಿಂಗ್.

ಕುದುರೆ ವ್ಯಾಪಾರಕ್ಕೆ ಮರುಜೀವ ನೀಡಲು ಪಂಜಾಬ್‌ನಲ್ಲಿ ಕುದುರೆ ಮೇಳಕ್ಕೆ ಅನುಮತಿ ನೀಡಬೇಕು ಎಂದು ಕುದುರೆ ವ್ಯಾಪಾರಿ ಜಲೋರ್ ಸಿಂಗ್ ಪಂಜಾಬ್ ಸರ್ಕಾರವನ್ನು ಒತ್ತಾಯಿಸಿದರು. ಕಳೆದ ವರ್ಷ ಪಂಜಾಬ್‌ನ ಲೂಧಿಯಾನ ಮತ್ತು ಬಟಿಂಡಾದಲ್ಲಿ ಗ್ಲಾಂಡರ್ ರೋಗ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಪಶುಸಂಗೋಪನಾ ಇಲಾಖೆಯು ಕುದುರೆ ವ್ಯಾಪಾರಿಗಳಿಗೆ ಸರ್ಕಾರದಿಂದ ಎಚ್ಚರಿಕೆ ನೀಡಿತು.

ಜಿಲ್ಲಾಧಿಕಾರಿ ಶೌಕತ್ ಅಹ್ಮದ್ ಪಾರೆ ವಲ್ಲೋ ಅವರು, "ಗ್ಲಾಂಡರ್ ರೋಗ ಹರಡುವುದನ್ನು ತಡೆಯಲು ನವೆಂಬರ್ 25ರವರೆಗೆ ಸೆಕ್ಷನ್ 144 ಜಾರಿ ಮಾಡಿದ್ದಾರೆ. ಕುದುರೆಗಳನ್ನು ತರುವುದು, ಪ್ರಯಾಣಿಸುವುದು ಮತ್ತು ಜಾತ್ರೆಗಳನ್ನು ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ" ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.