ETV Bharat / bharat

ಕಾರು ಅಪಘಾತ ಪ್ರಕರಣ: ಮುಂಬೈಗೆ ಕ್ರಿಕೆಟಿಗ ರಿಷಭ್​ ಪಂತ್​ ಶಿಫ್ಟ್​ ಸಾಧ್ಯತೆ

author img

By

Published : Jan 3, 2023, 6:35 PM IST

ಕ್ರಿಕೆಟಿಗ ರಿಷಭ್​ ಪಂತ್​ಗೆ ಮುಂದುವರೆದ ಚಿಕಿತ್ಸೆ - ಡೆಹ್ರಾಡೂನ್‌ನಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ಸ್ಥಳಾಂತರ ಸಾಧ್ಯತೆ - ಪಂತ್​ ಆಪ್ತರಾದ ಖಾನ್ಪುರ ಶಾಸಕ ಉಮೇಶ್ ಕುಮಾರ್ ಮಾಹಿತಿ

Pictures of Rishabh Pant
ಮುಂಬೈಗೆ ಕ್ರಿಕೆಟಿಗ ರಿಷಭ್​ ಪಂತ್​ ಶಿಫ್ಟ್​ ಸಾಧ್ಯತೆ

ಡೆಹ್ರಾಡೂನ್ (ಉತ್ತರಾಖಂಡ): ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕ್ರಿಕೆಟಿಗ ರಿಷಭ್​​​ ಪಂತ್​ ಆರೋಗ್ಯ ವೇಗವಾಗಿ ಸುಧಾರಿಸುತ್ತಿದೆ. ಸದ್ಯ ಉತ್ತರಾಖಂಡದ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಭ್​ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ಸ್ಥಳಾಂತರಿಸಬಹುದು ಎಂದು ಹೇಳಲಾಗುತ್ತಿದೆ.

ಡಿಸೆಂಬರ್​ 3ರಂದು ದೆಹಲಿ - ಡೆಹ್ರಾಡೂನ್‌ ಹೆದ್ದಾರಿಯಲ್ಲಿ ರಿಷಭ್​ ಪಂತ್​ ಅವರ ಕಾರು ಅಪಘಾತಕ್ಕೀಡಾಗಿತ್ತು. ಹಣೆ, ಮೊಣಕಾಲು, ಬೆನ್ನು ಹಾಗೂ ಬಲಗೈನ ಮಣಿಕಟ್ಟಿಗೆ ಗಾಯವಾಗಿದ್ದು, ಡೆಹ್ರಾಡೂನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿದ್ದ ಪಂತ್​ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಇದೀಗ ಅವರ ಆರೋಗ್ಯ ಮತ್ತಷ್ಟು ವೇಗವಾಗಿ ಸುಧಾರಿಸುತ್ತಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಶುಭ ಸುದ್ದಿ.. ಸುಧಾರಿಸುತ್ತಿದೆ ರಿಷಭ್​ ಪಂತ್​ ಆರೋಗ್ಯ

ಆದರೆ, ಆಸ್ಪತ್ರೆಯ ಬೆಡ್ ಮೇಲೆ ಪಂತ್ ತುಂಬಾ ಚಿಂತಾಕ್ರಾಂತರಾಗಿದ್ದಾರೆ. ತಮ್ಮ ವೃತ್ತಿಜೀವನದ ಬಗ್ಗೆ ತಮ್ಮ ಆಪ್ತರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯೊಂದಿಗೆ ಪ್ಲಾಸ್ಟಿಕ್​ ಸರ್ಜರಿ ಸಹ ಮಾಡಲಾಗಿದೆ. ಸದ್ಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಅಸ್ಥಿರಜ್ಜು ಹರಿದ ಕಾರಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ಶಿಫ್ಟ್​​ ಮಾಡಿ ಹೆಚ್ಚಿನ ಚಿಕಿತ್ಸೆ ನೀಡಬಹುದು ಎಂದೂ ಬಲ್ಲ ಮೂಲಗಳು ಖಚಿತಪಡಿಸಿವೆ.

ಖಾನ್ಪುರ ಶಾಸಕ, ಆಪ್ತರಾದ ಉಮೇಶ್ ಕುಮಾರ್ ನಿರಂತರವಾಗಿ ಆಸ್ಪತ್ರೆಗೆ ಭೇಟಿ ನೀಡಿ ರಿಷಭ್​ ಪಂತ್ ಜೊತೆ ಮಾತನಾಡುತ್ತಿದ್ದಾರೆ. ಇಂದು ಕೂಡ ಸುಮಾರು 40 ನಿಮಿಷಗಳ ಕಾಲ ಪಂತ್ ಜೊತೆಗೆ ಶಾಸಕ ಉಮೇಶ್ ಇದ್ದು, ಆರೋಗ್ಯ ವಿಚಾರಿಸಿದರು. ನಂತರ 'ಈಟಿವಿ ಭಾರತ' ​ನೊಂದಿಗೆ ಮಾತನಾಡಿದ ಅವರು, ಪಂತ್​ ಅವರನ್ನು ಮುಂಬೈಗೆ ಸ್ಥಳಾಂತರಿಸುವ ಬಗ್ಗೆ ಮಾಹಿತಿ ನೀಡಿದರು.

ಶಾಸಕ ಉಮೇಶ್ ಕುಮಾರ್ ಹೇಳಿದ್ದೇನು?: ರಿಷಭ್​ ಪಂತ್​ ಅವರ ಆರೋಗ್ಯ ಸಾಕಷ್ಟು ಸುಧಾರಿಸುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಇದ್ದ ಆರೋಗ್ಯ ಸ್ಥಿತಿಗೆ ಇಂದಿನ ಪರಿಸ್ಥಿತಿಗೂ ತುಂಬಾ ಚೇತರಿಕೆ ಕಂಡು ಬರುತ್ತಿದೆ. ಗಾಯದ ನೋವು ಕಡಿಮೆಯಾಗಿದೆ ಎಂದು ಪಂತ್ ತಿಳಿಸಿದ್ದಾರೆ. ಪಂತ್​ ಮಾತನಾಡುತ್ತಿದ್ದಾರೆ. ನೀರು ಮತ್ತು ಆಹಾರ ಸಹ ಸೇವಿಸುತ್ತಿದ್ದಾರೆ ಎಂದು ಖಾನ್ಪುರ ಶಾಸಕ ಉಮೇಶ್ ಕುಮಾರ್ ಹೇಳಿದರು.

ದೇಹದ ಯಾವ ಭಾಗದಲ್ಲೂ ಮೊಳೆ ಮರಿದಂತಹ ಘಟನೆಗಳು ಆಗಿಲ್ಲ. ಮುಖದ ಮೇಲೆ ಆಳವಾದ ಗಾಯದ ಗುರುತುಗಳಿವೆ. ಪಂತ್​ ಅವರ ಚಿಕಿತ್ಸೆ ನಿರಂತರವಾಗಿ ನಡೆಯುತ್ತಿದೆ. ಕೈ ಮತ್ತು ಸೊಂಟದ ಮೇಲೂ ಗಾಯವಾಗಿದೆ. ಬ್ಯಾಂಡೇಜ್ ಮತ್ತು ಡ್ರೆಸ್ಸಿಂಗ್​ ಸಹ ನಿರಂತರವಾಗಿ ಮಾಡಲಾಗುತ್ತಿದೆ. ಮುಖ, ಕೈ ಮತ್ತು ಬೆನ್ನಿನ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಯೋಚಿಸಲಾಗುತ್ತಿದೆ. ಈ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡ ಮತ್ತು ಮ್ಯಾಕ್ಸ್ ಆಸ್ಪತ್ರೆಯ ವೈದ್ಯರ ತಂಡ ಸಮಾಲೋಚನೆ ನಡೆಸಲಿದ್ದು, ಒಂದೆರಡು ದಿನಗಳಲ್ಲೇ ವೈದ್ಯರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ವೃತ್ತಿಜೀವನದ ಬಗ್ಗೆ ಪಂತ್​ ಚಿಂತೆ: ರಿಷಭ್​ ಪಂತ್​ ಆಸ್ಪತ್ರೆಯ ಬೆಡ್ ಮೇಲಿದ್ದರೂ ಕ್ರಿಕೆಟ್​ ಬಗ್ಗೆ ಆಲೋಚನೆ ಮಾಡುತ್ತಿದ್ದು, ವೃತ್ತಿಜೀವನದ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಅಪಘಾತದ ಕುರಿತು ಪಂತ್ ತುಂಬಾ ದುಃಖಿತರಾಗಿದ್ದಾರೆ. ಕುಟುಂಬ ಸದಸ್ಯರು ಪಂತ್​ಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಉಮೇಶ್ ಕುಮಾರ್ ಹೇಳಿದರು.

ಜೊತೆಗೆ ಮುಂಬರುವ ಕ್ರಿಕೆಟ್​​ ಸರಣಿಗಳು ಮತ್ತು ವಿಶ್ವಕಪ್‌ ಬಗ್ಗೆಯೂ ಪಂತ್​ ಚಿಂತಾಕ್ರಾಂತರಾಗಿದ್ದಾರೆ. ಪ್ರಸ್ತುತ ಪರಿಸ್ಥಿತಿಯಿಂದ ಹೊರ ಬರಲು ಬಲವಾಗಿ ಹೋರಾಡುತ್ತಿದ್ದಾರೆ. ಮೈದಾನಕ್ಕೆ 8ರಿಂದ 10 ತಿಂಗಳಲ್ಲಿ ಮರಳುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಇದನ್ನೂ ಓದಿ: ಪಂತ್‌ ಪ್ರಾಣ ರಕ್ಷಿಸಿದ ಬಸ್‌ ಚಾಲಕ, ನಿರ್ವಾಹಕನನ್ನು ಗೌರವಿಸಲಿದೆ ಉತ್ತರಾಖಂಡ್ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.