ETV Bharat / bharat

Rajasthan Accident: ನಿಂತಿದ್ದ ಕಂಟೇನರ್‌ಗೆ ಬೊಲೆರೋ ಡಿಕ್ಕಿ: ರಾಜಸ್ಥಾನದಲ್ಲಿ ಒಂದೇ ಕುಟುಂಬದ 6 ಮಂದಿ ಸಾವು!

author img

By

Published : Aug 15, 2023, 6:05 PM IST

Rajasthan road accident: Six family members killed in Phalodi
Rajasthan Accident: ನಿಂತಿದ್ದ ಕಂಟೇನರ್‌ಗೆ ಬೊಲೆರೋ ಡಿಕ್ಕಿ: ಒಂದೇ ಕುಟುಂಬದ ಆರು ಮಂದಿ ದುರ್ಮರಣ

Rajasthan Road Accident: ನಿಂತಿದ್ದ ಕಂಟೇನರ್‌ಗೆ ಬೊಲೆರೋ ಡಿಕ್ಕಿ ಹೊಡೆದು ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಫಲೋಡಿ ಜಿಲ್ಲೆಯಲ್ಲಿ ನಡೆದಿದೆ.

ಫಲೋಡಿ (ರಾಜಸ್ಥಾನ): ರಾಜಸ್ಥಾನದ ಫಲೋಡಿ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಜನರು ಮೃತಪಟ್ಟರು. ನಿಂತಿದ್ದ ಕಂಟೇನರ್‌ಗೆ ಬೊಲೆರೋ ಡಿಕ್ಕಿ ಹೊಡೆದು ದುರ್ಘಟನೆ ನಡೆಯಿತು. ಡಿಕ್ಕಿಯ ರಭಸಕ್ಕೆ ಬೊಲೆರೋ ಸಂಪೂರ್ಣ ಜಖಂಗೊಂಡಿದೆ. ಶವಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು ಎಂದು ಪೊಲೀಸರು ತಿಳಿಸಿದರು.

"ಮೃತರೆಲ್ಲರೂ ಜುನೇಜಾ ಧಾನಿ ನಿವಾಸಿಗಳಾಗಿದ್ದು, 72 ವರ್ಷದ ವೃದ್ಧೆಯಿಂದ 40 ವರ್ಷದೊಳಗಿನವರು. ಇತ್ತೀಚೆಗೆ ಹಜ್‌ ಯಾತ್ರೆಯಿಂದ ಮರಳಿದ್ದ ಸಂಬಂಧಿಕರನ್ನು ಭೇಟಿ ಮಾಡಲೆಂದು ಪೋಖ್ರಾನ್ ಸಮೀಪದ ಗ್ರಾಮಕ್ಕೆ ಒಟ್ಟಾಗಿ ಬೊಲೆರೋ ಕಾರಿನಲ್ಲಿ ತೆರಳಿದ್ದರು. ಅಲ್ಲಿಂದ ಮರಳಿ ಬರಬೇಕಾದರೆ ಕಲ್ರಾನ್ ಗ್ರಾಮದ ಬಳಿ ಫಲೋಡಿ-ಜೈಸಲ್ಮೇರ್ ಹೆದ್ದಾರಿಯಲ್ಲಿ ನಿಂತಿದ್ದ ಕಂಟೇನರ್‌ಗೆ ಬೊಲೆರೋ ಗುದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ" ಎಂದು ಫಲೋಡಿ ಪೊಲೀಸ್ ಠಾಣಾಧಿಕಾರಿ ಓಂಪ್ರಕಾಶ್ ವಿಷ್ಣೋಯ್ ಹೇಳಿದರು.

"ಅಪಘಾತದಲ್ಲಿ ಬುಲೆರೋದಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಫಲೋಡಿಯ ಸರ್ಕಾರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಹಿಳೆಯೊಬ್ಬರನ್ನು ಜೋಧಪುರಕ್ಕೆ ರವಾನಿಸುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಅವರು ಮಾಹಿತಿ ನೀಡಿದರು.

"ಡಿಕ್ಕಿಯ ರಭಸಕ್ಕೆ ಬೊಲೆರೋ ನಜ್ಜುಗುಜ್ಜಾಗಿದ್ದು, ಮೃತದೇಹಗಳು ವಾಹನದೊಳಗೆ ಸಿಲುಕಿಕೊಂಡಿದ್ದವು. ಹೀಗಾಗಿ ಹೊರತೆಗೆಯಲು ಸಾಕಷ್ಟು ಪ್ರಯತ್ನ ಪಡಬೇಕಾಯಿತು. ಸ್ಥಳೀಯರ ನೆರವಿನಿಂದ ಎಲ್ಲ ಶವಗಳನ್ನು ಫಲೋಡಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ" ಎಂದು ಅಧಿಕಾರಿ ವಿಷ್ಣೋಯ್ ತಿಳಿಸಿದರು. ಮತ್ತೊಂದೆಡೆ, ಅಪಘಾತದ ಮಾಹಿತಿ ಅರಿತ ಜಿಲ್ಲಾಧಿಕಾರಿ ಜಸ್ಮೀತ್ ಸಂಧು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಬನ್ಸಾಲ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಮೂರು ದಿನಗಳ ಡಿಡ್ವಾನಾ ಜಿಲ್ಲೆಯಲ್ಲೂ ಇದೇ ರೀತಿಯ ಭೀಕರ ಅಪಘಾತ ಸಂಭವಿಸಿತ್ತು. ಆ.12ರಂದು ವಿವಾಹ ಸಮಾರಂಭದಿಂದ ಆಗಮಿಸುತ್ತಿದ್ದ ಕಾರಿಗೆ ಖಾಸಗಿ ಬಸ್​ ಗುದ್ದಿತ್ತು. ಇದರಿಂದ ಕಾರಿನಲ್ಲಿದ್ದ ಏಳು ಜನ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.

ನಗೌರ್ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಕಾರಿನಲ್ಲಿದ್ದವರು ಸಿಕಾರ್‌ಗೆ ತೆರಳುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿತ್ತು. ಬಸ್​ ಗುದ್ದಿದ ತೀವ್ರತೆಗೆ ಕಾರು ಗಾಳಿಯಲ್ಲಿ ಚಿಮ್ಮಿ, ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿತ್ತು. ಅಲ್ಲದೇ, ರಸ್ತೆಯಿಂದ 20 ಅಡಿ ದೂರದಲ್ಲಿ ಕಾರು ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: Bengaluru accident: ನಿದ್ದೆ ಮಂಪರಿನಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ; ಬೆಂಗಳೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.