ETV Bharat / bharat

ಪ್ರಧಾನಿ ಮೋದಿ ಸಂಸತ್ ಭವನ ಉದ್ಘಾಟಿಸಿದ್ದನ್ನು ಸ್ವಾಗತಿಸಿದ ರಾಷ್ಟ್ರಪತಿ ಮುರ್ಮು

author img

By

Published : May 28, 2023, 2:06 PM IST

President Murmu welcomes inauguration of new Parliament building
President Murmu welcomes inauguration of new Parliament building

ಹೊಸ ಸಂಸತ್ ಭವನದ ಕಟ್ಟಡ ಉದ್ಘಾಟನೆಯಾಗಿರುವುದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಸ ವ್ಯಕ್ತಪಡಿಸಿದ್ದಾರೆ. ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯು ದೇಶದ ಇತಿಹಾಸದಲ್ಲಿ ಚಿನ್ನದ ಪದಗಳಲ್ಲಿ ಬರೆಯಲ್ಪಡುತ್ತದೆ ಎಂದು ಅವರು ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನ ಕಟ್ಟಡ ಉದ್ಘಾಟಿಸಿದ್ದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾಗತಿಸಿದ್ದಾರೆ. ಇದು ಇಡೀ ದೇಶಕ್ಕೆ ಹೆಮ್ಮೆಯ ಮತ್ತು ಅಪಾರ ಸಂತೋಷದ ವಿಷಯ ಎಂದು ಅವರು ಹೇಳಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಸಂದೇಶ ಕಳುಹಿಸಿದ ರಾಷ್ಟ್ರಪತಿ ಮುರ್ಮು, ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯು ದೇಶದ ಇತಿಹಾಸದಲ್ಲಿ ಚಿನ್ನದ ಪದಗಳಲ್ಲಿ ಬರೆಯಲ್ಪಡುತ್ತದೆ ಎಂದು ಹೇಳಿದರು.

ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿಯವರನ್ನು ಆಹ್ವಾನಿಸಲಿಲ್ಲವೆಂದು ಕೊಂಕು ತೆಗೆದು ಹಲವಾರು ವಿಪಕ್ಷಗಳು ಉದ್ಘಾಟನಾ ಸಮಾರಂಭದಿಂದ ದೂರ ಉಳಿದಿವೆ. ಆದರೆ ಈಗ ಸ್ವತಃ ರಾಷ್ಟ್ರಪತಿಯವರೇ ಉದ್ಘಾಟನಾ ಸಮಾರಂಭಕ್ಕೆ ತಮ್ಮ ಸಂದೇಶವನ್ನು ಕಳುಹಿಸಿ, ಪ್ರಧಾನಿಯವರು ಸಂಸತ್ ಭವನ ಉದ್ಘಾಟಿಸಿದ್ದು ಸ್ವಾಗತಾರ್ಹ ಎಂದಿರುವುದು ಗಮನಾರ್ಹ.

"ಹೊಸ ಸಂಸತ್ ಕಟ್ಟಡದ ಉದ್ಘಾಟನೆಯು ಭಾರತದ ಸಮಸ್ತ ಜನತೆಗೆ ಹೆಮ್ಮೆಯ ಮತ್ತು ಸಂತೋಷದ ವಿಷಯವಾಗಿದೆ" ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ರಾಷ್ಟ್ರಪತಿಯವರ ಸಂದೇಶವನ್ನು ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ಅವರು ಓದಿದರು. ಸಂಸತ್ತು ದೇಶಕ್ಕೆ ಮಾರ್ಗದರ್ಶನ ತೋರುವ ಬೆಳಕು, ಹೊಸ ಸಂಸತ್ತಿನ ಕಟ್ಟಡವು ನಮ್ಮ ಪ್ರಜಾಪ್ರಭುತ್ವದ ಪಯಣದಲ್ಲಿ ಪ್ರಮುಖ ಮೈಲಿಗಲ್ಲು ಎಂದು ರಾಷ್ಟ್ರಪತಿಯವರು ಸಂದೇಶದಲ್ಲಿ ತಿಳಿಸಿದ್ದಾರೆ.

ನೂತನ ಸಂಸತ್ ಭವನದ ಉದ್ಘಾಟನಾ ವಿಷಯವನ್ನು ವಿಪಕ್ಷಗಳು ಸುಪ್ರೀಂಕೋರ್ಟ್​ವರೆಗೂ ತೆಗೆದುಕೊಂಡು ಹೋಗಿದ್ದವು. ರಾಷ್ಟ್ರಪತಿಯವರಿಂದಲೇ ಸಂಸತ್ ಭವನವನ್ನು ಉದ್ಘಾಟಿಸುವಂತೆ ಲೋಕಸಭೆಯ ಕಾರ್ಯದರ್ಶಿಗೆ ನಿರ್ದೇಶನ ನೀಡಬೇಕೆಂದು ಕೋರಿ ವಿಪಕ್ಷಗಳು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು. ಆದರೆ ಸುಪ್ರೀಂ ಕೋರ್ಟ್​ ಶುಕ್ರವಾರ ಈ ಮನವಿಯನ್ನು ವಜಾ ಮಾಡಿತ್ತು.

ವಿಶೇಷ ನಾಣ್ಯ, ಅಂಚೆ ಚೀಟಿ ಬಿಡುಗಡೆ: ಹೊಸ ಸಂಸತ್ ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಅಂಚೆ ಚೀಟಿ ಮತ್ತು 75 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿದರು. ಕೇಂದ್ರ ಹಣಕಾಸು ಸಚಿವಾಲಯದ ಅಧೀನದ ಆರ್ಥಿಕ ವ್ಯವಹಾರಗಳ ಇಲಾಖೆಯ ಗೆಜೆಟ್ ಅಧಿಸೂಚನೆಯ ಪ್ರಕಾರ ಈ ನಾಣ್ಯದ ತೂಕ 34.65 ರಿಂದ 35.35 ಗ್ರಾಂ ಇರಲಿದೆ.

ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಚಿತ್ರವನ್ನು ಹೊಂದಿದ್ದು, ಅದರ ಸುತ್ತಲೂ ದೇವನಾಗರಿ ಲಿಪಿಯಲ್ಲಿ "ಭಾರತ್" ಮತ್ತು ಇಂಗ್ಲಿಷ್‌ನಲ್ಲಿ "ಇಂಡಿಯಾ" ಎಂಬ ಪದಗಳಿವೆ ಎಂದು ಅದು ಹೇಳಿದೆ. ಅಂತಾರಾಷ್ಟ್ರೀಯ ಅಂಕಿಗಳಲ್ಲಿ ರೂಪಾಯಿ ಚಿಹ್ನೆ ಮತ್ತು ಮುಖಬೆಲೆಯ ಮೌಲ್ಯ "75" ಅನ್ನು ಸಿಂಹ ರಾಜಮುದ್ರೆಯ ಕೆಳಗೆ ಕೆತ್ತಲಾಗಿದೆ.

ಹೊಸ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ ನಂತರ ಮತ್ತು ಲೋಕಸಭೆಯ ಸಭಾಂಗಣದಲ್ಲಿ ಸೆಂಗೋಲ್ ಅನ್ನು ಸ್ಥಾಪಿಸಿದ ನಂತರ ಇಂದು ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಪ್ರಾರಂಭವಾಯಿತು. ಪ್ರತಿಯೊಂದು ದೇಶದ ಅಭಿವೃದ್ಧಿಯ ಪಯಣದಲ್ಲಿ ಕೆಲ ಕ್ಷಣಗಳು ಅಮರವಾಗುತ್ತವೆ. ಮೇ 28 ಅಂತಹ ದಿನವಾಗಿದೆ ಎಂದು ಹೊಸ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು. ನೂತನ ಸಂಸತ್ತು ಕೇವಲ ಕಟ್ಟಡವಲ್ಲ, 140 ಕೋಟಿ ಜನರ ಆಶಯದ ಪ್ರತೀಕವಾಗಿದೆ ಎಂದರು.

ಇದನ್ನೂ ಓದಿ : ಹೊಸ ಸಂಸತ್‌ ಭವನ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸಿದೆ: ಧಾರ್ಮಿಕ ಪ್ರತಿನಿಧಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.