ETV Bharat / bharat

ಆಭರಣ ಮಳಿಗೆಯಲ್ಲಿ 4,600 ಗ್ರಾಂ ಚಿನ್ನಾಭರಣ ಕಳವು: ಪತ್ನಿ ಸೆರೆ, ಪತಿ ಪರಾರಿ

author img

By ETV Bharat Karnataka Team

Published : Dec 2, 2023, 5:11 PM IST

police-investigation-on-jos-alukkas-showroom-robbery-case-in-coimbatore
ಆಭರಣ ಮಳಿಗೆಯಲ್ಲಿ 4,600 ಗ್ರಾಂ ಚಿನ್ನಾಭರಣ ಕಳವು: ಪತ್ನಿ ಸೆರೆ, ಪತಿ ಪರಾರಿ

Jos Alukkas Showroom Robbery Case in Coimbatore: ತಮಿಳುನಾಡು ಕೊಯಮತ್ತೂರಿನಲ್ಲಿ ಜೋಸ್​ ಅಲುಕ್ಕಾಸ್ ಆಭರಣ ಮಳಿಗೆ ದರೋಡೆ ಪ್ರಕರಣದಲ್ಲಿ ಪೊಲೀಸರು ಚುರುಕಿನ ತನಿಖೆ ಕೈಗೊಂಡಿದ್ದಾರೆ. ಈಗಾಗಲೇ 3 ಕೆಜಿ ಚಿನ್ನಾಭರಣ ಪತ್ತೆ ಹಚ್ಚಿ, ಒಬ್ಬ ಮಹಿಳೆಯನ್ನು ಬಂಧಿಸಿದ್ದಾರೆ. ಈಕೆಯ ಪತಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

ಕೊಯಮತ್ತೂರು (ತಮಿಳುನಾಡು): ತಮಿಳುನಾಡಿನ ಕೊಯಮತ್ತೂರಿನಲ್ಲಿ ಜೋಸ್​ ಅಲುಕ್ಕಾಸ್ ಆಭರಣ ಮಳಿಗೆಯಲ್ಲಿ ಸುಮಾರು 4,600 ಗ್ರಾಂಗಳ ಚಿನ್ನಾಭರಣ, ವಜ್ರಗಳು ಮತ್ತು ಪ್ಲಾಟಿನಂಗಳ ಕಳ್ಳತನ ಪ್ರಕರಣ ಬೆಚ್ಚಿಬೀಳಿಸಿದೆ. ಈ ಪ್ರಕರಣದಲ್ಲಿ ತಕ್ಷಣವೇ ಕಾರ್ಯಪ್ರವೃತರಾದ ಪೊಲೀಸರು, ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ. ಇವಳ ಪತಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ನವೆಂಬರ್​ 27ರಂದು ನಡೆದ ಜೋಸ್​ ಅಲುಕ್ಕಾಸ್ ಆಭರಣ ಮಳಿಗೆ ದರೋಡೆ ಸಂಬಂಧ ರತ್ನಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನೂ ಮುಂದುವರೆಸಲಾಗಿದೆ. ಈ ಪ್ರಕರಣ ಭೇದಿಸಲು ಕೊಯಮತ್ತೂರು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಚಂಡೀಶ್​ ನೇತೃತ್ವದಲ್ಲಿ ಐದು ವಿಶೇಷ ಪಡೆಗಳ ತಂಡವನ್ನೂ ರಚಿಸಲಾಗಿದೆ.

ಕೊಯಮತ್ತೂರು ಡಿಸಿಪಿ ಚಂಡೀಶ್ ನೇತೃತ್ವದಲ್ಲಿ ವಿಶೇಷ ಪಡೆಗಳು ಆಭರಣ ಮಳಿಗೆಯ ಸ್ಥಳ ಮತ್ತು ಬಸ್ ನಿಲ್ದಾಣಗಳು ಸೇರಿದಂತೆ ಸುತ್ತ - ಮುತ್ತಲಿನ ಸ್ಥಳಗಳಿಂದ 400ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿವೆ. ಇದರ ಪರಿಣಾಮ ಆರೋಪಿ ಧರ್ಮಪುರಿ ಜಿಲ್ಲೆಯ ವಿಜಯ್ ಎಂದು ಗುರುತಿಸಲಾಗಿದೆ. ಈತನೊಬ್ಬ ಕ್ರಿಮಿನಲ್ ಆಗಿದ್ದು, ಕೊಯಮತ್ತೂರು ಮತ್ತು ಧರ್ಮಪುರಿ ಎರಡರಲ್ಲೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪತ್ನಿ ಸೆರೆ, ಪತಿ ಪರಾರಿ: ಆಭರಣ ಮಳಿಗೆ ದರೋಡೆ ಮಾಡಿದ್ದ ಆರೋಪಿ ಪೊಲ್ಲಾಚಿಯಿಂದ ಬಸ್‌ನಲ್ಲಿ ಪ್ರಯಾಣಿಸಿದ್ದಾಗ ಬಗ್ಗೆಯೂ ಪೊಲೀಸ್​ ತನಿಖೆಯಿಂದ ತಿಳಿದು ಬಂದಿದೆ. ಇದರ ನಡುವೆ ಪೊಲೀಸರು, ಅನೈಮಲೈನಲ್ಲಿ ವಿಜಯ್‌ನ ಅಡಗುತಾಣವನ್ನು ಭೇದಿಸಿದ್ದಾರೆ. ಅಲ್ಲಿ ಈತ ತನ್ನ ಹೆಂಡತಿ ನರ್ಮದಾ ಜೊತೆಗೆ ಸ್ನೇಹಿತನ ಮನೆಯಲ್ಲಿದ್ದ. ಆದರೆ, ಪೊಲೀಸರು ಬಂದಿರುವ ಸುಳಿವು ಅರಿತು ಆರೋಪಿ ವಿಜಯ್ ಮನೆಯ ಛಾವಣಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಇದೇ ವೇಳೆ, ವಿಜಯ್​ನ ಪತ್ನಿ ನರ್ಮದಾಳನ್ನು ಪೊಲೀಸರು ಬಂಧಿಸಿದ್ದಾರೆ.

3 ಕೆಜಿ ಚಿನ್ನಾಭರಣ ವಶ: ಪೊಲೀಸರು ನರ್ಮದಾಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತಮ್ಮ ಮನೆಯಲ್ಲಿ ಚಿನ್ನಾಭರಣ ಬಚ್ಚಿಟ್ಟಿರುವ ಮಾಹಿತಿ ನೀಡಿದ್ದು, ಪೊಲೀಸರು 3 ಕೆಜಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಸದ್ಯ ಪರಾರಿಯಾದ ವಿಜಯ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ವಿಶೇಷ ಪಡೆಗಳು ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.

ಡಿಸಿಪಿ ಚುರುಕಿನ ತನಿಖೆಯ ರೂವಾರಿ : ಈ ಪ್ರಕರಣದ ಚುರುಕು ತನಿಖೆಗೊಳ್ಳುವಲ್ಲಿ ಪ್ರಮುಖ ಪಾತ್ರವಾಗಿರುವುದು ಡಿಸಿಪಿ ಚಂಡೀಶ್. ಆಂಧ್ರಪ್ರದೇಶದ ಚಿತ್ತೂರಿನವರಾದ ಇವರು, ಈ ಹಿಂದೆ ತೂತುಕುಡಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಶ್ಲಾಘನೀಯ ಸೇವೆ ಸಲ್ಲಿಸಿದ್ದರು. 1 ಕೋಟಿ ರೂ. ಗೋಡಂಬಿ ಕಳ್ಳಸಾಗಣೆ ಮತ್ತು ಕುರಿ ಕಳ್ಳಸಾಗಣೆ ಗ್ಯಾಂಗ್​ಗಳಂತಹ ಹೈಪ್ರೊಫೈಲ್ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಳೆದ ವರ್ಷ ಡಿಸೆಂಬರ್ 6ರಂದು ಕೊಯಮತ್ತೂರಿನ ಉಪ ಪೊಲೀಸ್ ಆಯುಕ್ತರಾಗಿ​ ಅಧಿಕಾರ ವಹಿಸಿಕೊಂಡಿದ್ದರು. ಅಂದಿನಿಂದ ನಗರದಲ್ಲಿ ಗಾಂಜಾ ಹಾವಳಿ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಇದೀಗ ಆಭರಣ ಅಂಗಡಿಯ ದರೋಡೆ ಪ್ರಕರಣವು ತ್ವರಿತ ಕ್ರಮಕೈಗೊಳ್ಳುವ ಮೂಲಕ ಕದ್ದ ವಸ್ತುಗಳನ್ನು ವಶಪಡಿಸಿಕೊಂಡು, ಹೆಚ್ಚಿನ ತನಿಖೆ ಪ್ರಗತಿ ಸಾಧಿಸುವಂತೆ ಮಾಡಿದ್ದಾರೆ.

ಈ ಬಗ್ಗೆ 'ಈಟಿವಿ ಭಾರತ್‌'ನೊಂದಿಗೆ ಮಾತನಾಡಿದ ಡಿಸಿಪಿ ಚಂದೀಶ್, ಆಭರಣ ಮಳಿಗೆ ದರೋಡೆ ಮಾಡಿದ ಆರೋಪಿಯು ಮೂರು ಅಂತಸ್ತಿನ ಕಟ್ಟಡ ಏರಿ, ಆಭರಣದ ಅಂಗಡಿ ಪ್ರವೇಶಿಸಿ, 4 ಕೆಜಿ ಚಿನ್ನಾಭರಣವನ್ನು ಕದ್ದಿದ್ದ. ಈ ಚಾಣಾಕ್ಷ ಕಳ್ಳ ಸ್ಪೈಡರ್ ಮ್ಯಾನ್​ ವೇಷ ಧರಿಸಿದ್ದ. ಕೈಗವಸುಗಳು ಮತ್ತು ಮುಖವಾಡ ಧರಿಸುವ ಮೂಲಕ ಯಾವುದೇ ಸುಳಿವು ನೀಡಿರಲಿಲ್ಲ. ಆದರೆ, ಪೊಲೀಸ್​ ಸಿಬ್ಬಂದಿ ಶ್ರಮದಿಂದ ಪ್ರಕರಣ ಭೇದಿಸಲಾಗಿದೆ. ಆರೋಪಿ ವಿಜಯ್‌ಗಾಗಿ ಶೋಧ ಮುಂದುವರೆದಿದೆ ಎಂದು ಹೇಳಿದರು.

ಇದನ್ನೂ ಓದಿ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ದರೋಡೆ: ಬಂದೂಕು ತೋರಿಸಿ 19 ಕೋಟಿ ದೋಚಿ ಪರಾರಿಯಾದ ಖದೀಮರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.