ETV Bharat / bharat

ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಶಾಂತಿ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಲಿ: ರಾಷ್ಟ್ರಪತಿ ಭೇಟಿಯಾದ ಖರ್ಗೆ ನಿಯೋಗದ ಒತ್ತಾಯ

author img

By

Published : Aug 2, 2023, 3:42 PM IST

PM should visit Manipur, take steps to restore peace: Kharge to President
ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಶಾಂತಿ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಲಿ: ರಾಷ್ಟ್ರಪತಿ ಭೇಟಿಯಾದ ಖರ್ಗೆ ನಿಯೋಗದ ಒತ್ತಾಯ

ಮಣಿಪುರ ಹಿಂಸಾಚಾರ ವಿಚಾರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಧ್ಯಪ್ರವೇಶಿಸಬೇಕೆಂದು ರಾಜ್ಯಸಭೆ ಪ್ರತಿಪಕ್ಷದ ನಾಯಕರಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ನಾಯಕರ ನಿಯೋಗ ಮನವಿ ಮಾಡಿದೆ.

ನವದೆಹಲಿ: ಮಣಿಪುರ ಹಿಂಸಾಚಾರ ಕುರಿತಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ನಾಯಕರ ನಿಯೋಗ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಮಣಿಪುರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದೆ. ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಿ ಕಲಹ ಪೀಡಿತ ಈಶಾನ್ಯ ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಖರ್ಗೆ ನಿಯೋಗ ಒತ್ತಾಯಿಸಿದೆ.

ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, 'ಇಂಡಿಯಾ' ಮೈತ್ರಿಕೂಟದ 31 ಸಂಸದರ ನಿಯೋಗ ಇಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಿದೆ. ಮಣಿಪುರಕ್ಕೆ ಭೇಟಿ ನೀಡಿದ್ದ ಮೈತ್ರಿಕೂಟದ 21 ಸಂಸದರ ಮಾಹಿತಿ ಆಧರಿಸಿ ಮಣಿಪುರದ ಪರಿಸ್ಥಿತಿಯ ಬಗ್ಗೆ ನಾವು ರಾಷ್ಟ್ರಪತಿಗಳಿಗೆ ವಿವರಿಸಿದ್ದೇವೆ. ಅಲ್ಲಿ ನಡೆಯುತ್ತಿರುವ ಘಟನೆಗಳು, ಅದರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿದ ಬಗ್ಗೆ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.

  • 92 दिनों से मणिपुर में हिंसा जारी है, पर प्रधानमंत्री जी अब तक वहाँ नहीं गये, उसके बारे में अब तक संसद में नहीं बोले !

    मोदी सरकार लोकतंत्र, संविधान और संसदीय परंपराओं के तहत नहीं चलना चाहती।

    महामहिम राष्ट्रपति जी से आज INDIA पार्टियों का प्रतिनिधिमंडल मिला और मणिपुर में शांति… pic.twitter.com/vxNO6xfEZD

    — Mallikarjun Kharge (@kharge) August 2, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಸೇರಿ 24 ಶಿಫಾರಸುಗಳನ್ನು ಸಲ್ಲಿಸಿದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ

ಮಣಿಪುರದಲ್ಲಿ ಇದುವರೆಗೆ 5,000ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. 200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 500ಕ್ಕೂ ಅಧಿಕ ಜನರು ಗಾಯಗೊಂಡರು. ಸುಮಾರು 60,000 ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಪರಿಹಾರ ಶಿಬಿರದಲ್ಲಿರುವ ಜನರಿಗೆ ಸರಿಯಾದ ನೀರು, ಆಹಾರ ಸಿಗುತ್ತಿಲ್ಲ ಮತ್ತು ರೋಗಿಗಳಿಗೆ ಸರಿಯಾದ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ನಾವು ಮಣಿಪುರ ವಿಷಯದ ಬಗ್ಗೆ ರಾಷ್ಟ್ರಪತಿ ಮುರ್ಮು ಅವರ ಭೇಟಿ ಮಾಡಿ ಗಮನ ಸೆಳೆದಿದ್ದೇವೆ. ರಾಷ್ಟ್ರಪತಿಗಳು ಸಹ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಖರ್ಗೆ ತಿಳಿಸಿದರು.

ಸಂಸತ್ತಿನಲ್ಲಿ ಮಣಿಪುರದ ಕುರಿತು ರಾಜ್ಯಸಭೆಯಲ್ಲಿ ನಿಯಮ 267ರ ಅಡಿಯಲ್ಲಿ ಮತ್ತು ಲೋಕಸಭೆಯಲ್ಲಿ ಮುಂದೂಡಿಕೆ ನಿರ್ಣಯದ ಮೂಲಕ ಚರ್ಚೆಗೆ ನಾವು ಬಯಸಿದ್ದೇವೆ. ರಾಜ್ಯಸಭೆಯಲ್ಲಿ ನಿಯಮ 267ರ ಅಡಿಯಲ್ಲಿ 65 ಸದಸ್ಯರು ನೋಟಿಸ್‌ ನೀಡಿದ್ದಾರೆ. ಆದರೆ, ಅದನ್ನು ಸರ್ಕಾರ ತಿರಸ್ಕರಿಸುತ್ತಿದೆ. ನಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಲೋಕಸಭೆಯಲ್ಲಿ ಮುಂದೂಡಿಕೆ ನಿರ್ಣಯ ಅಂಗೀಕಾರವಾಗದಿದ್ದಾಗ ಅವಿಶ್ವಾಸ ನಿರ್ಣಯ ಮಂಡಿಸಬೇಕಾಯಿತು ಎಂದು ಖರ್ಗೆ ವಿವರಿಸಿದರು.

ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ: ಆಗಸ್ಟ್ 8ರಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಕುರಿತು ಚರ್ಚೆ ನಡೆಯಲಿದೆ. ಆಗಸ್ಟ್ 10ರಂದು ಪ್ರಧಾನಿ ಉತ್ತರ ನೀಡಲಿದ್ದಾರೆ. ಆಗಸ್ಟ್ 11ರಂದು ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯಗೊಳ್ಳಲಿದೆ. ಇದನ್ನು ಉಲ್ಲೇಖಿಸಿ ಮಾತನಾಡಿದ ಖರ್ಗೆ, ಅವರು (ಪ್ರಧಾನಿ ಮೋದಿ) ಅಧಿವೇಶನದ ಕೊನೆಯ ದಿನಗಳವರೆಗೆ ಚರ್ಚೆ ನಡೆಯದಂತೆ ನೋಡಿಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡದಿರುವುದು, ಚರ್ಚೆ ಮತ್ತು ಸಮಯ ನೀಡದಿರುವುದು ಅವರ ಉದ್ದೇಶವಾಗಿದೆ. ಕೊನೆಗೆ ಸದನವನ್ನು ಮುಂದೂಡುವುದರಿಂದ ತಮ್ಮದೇ ಆದ ಉತ್ತರ ಕೊಟ್ಟು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಸಭೆಯಲ್ಲೂ ನಾವು ವಿಷಯ ಪ್ರಸ್ತಾಪಿಸುತ್ತಿದ್ದರೂ ಮಾತನಾಡಲು ಬಿಡುತ್ತಿಲ್ಲ. ನಾನು ಮಾತನಾಡಲು ಎದ್ದಾಗ ನನ್ನ ಮೈಕ್ರೊಫೋನ್ ಸೆಕೆಂಡ್​ಗಳಲ್ಲೇ ಸ್ವಿಚ್ ಆಫ್ ಆಗುತ್ತದೆ. ಇದು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಅನುಸರಿಸಲು ಬಯಸುವುದಿಲ್ಲ ಎಂದು ತೋರಿಸುತ್ತದೆ. ಹೀಗಾಗಿ ನಾವು ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕರಾದ ಖರ್ಗೆ ಹೇಳಿದರು.

ಮಣಿಪುರದಲ್ಲಿ ಎರಡು ಸಮುದಾಯಗಳ ಘರ್ಷಣೆ ನಡೆಯುತ್ತಿರುವಾಗ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡಬೇಕಿತ್ತು. ಈಗಾಗಲೇ 92 ದಿನಗಳಾಗಿವೆ. ಅವರು (ಪ್ರಧಾನಿ) ಜನರೊಂದಿಗೆ ಮಾತನಾಡಬೇಕಿತ್ತು. ನಿಯಮ 267ರ ಅಡಿಯಲ್ಲಿ ಚರ್ಚೆ ನಡೆಸಿರುವ ಹಲವು ಉದಾಹರಣೆಗಳಿದ್ದರೂ ಕೇಳಲು ಸರ್ಕಾರ ಚರ್ಚೆಗೆ ಸಿದ್ಧವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹರಿಯಾಣದಲ್ಲಿ ಹಿಂಸಾಚಾರ ಅವರ (ಪ್ರಧಾನಿ) ಕಣ್ಣೆದುರೇ ನಡೆಯುತ್ತಿದೆ. ಇದು ಪಿಎಂಒದ 100 ಕಿಮೀ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಹರಿಯಾಣದಲ್ಲಿನ ಗಲಭೆ ಮತ್ತು ಹಿಂಸಾಚಾರವನ್ನು ಸರ್ಕಾರ ಗಮನಿಸಲು ಸಾಧ್ಯವಾಗದಿದ್ದರೆ, ನಾವು ಅದರ ಬಗ್ಗೆ ರಾಷ್ಟ್ರಪತಿಯವರಿಗೂ ತಿಳಿಸಿದ್ದೇವೆ ಎಂದು ಖರ್ಗೆ ಹೇಳಿದರು. ಇಂಡಿಯಾ ಕೂಟದ ಪಕ್ಷಗಳ ಪ್ರಮುಖ ಬೇಡಿಕೆ ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಪ್ರಧಾನಿ ಮಣಿಪುರಕ್ಕೆ ಹೋಗಿ ಜನರೊಂದಿಗೆ ಮಾತನಾಡಿ ಶಾಂತಿ ಮರುಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Manipur violence case: ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದ ಸುಪ್ರೀಂ ಕೋರ್ಟ್​​.. ಡಿಜಿಪಿಗೆ ಸಮನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.