ETV Bharat / bharat

Manipur violence case: ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದ ಸುಪ್ರೀಂ ಕೋರ್ಟ್​​.. ಡಿಜಿಪಿಗೆ ಸಮನ್ಸ್

author img

By

Published : Aug 1, 2023, 5:17 PM IST

SC on Manipur violence case: ಮಣಿಪುರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಉಳಿದಿಲ್ಲ. ರಾಜ್ಯ ಪೊಲೀಸರು ತನಿಖೆ ನಡೆಸಲು ಅಸಮರ್ಥರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಕಟುವಾದ ಟೀಕೆ ಮಾಡಿದೆ.

supreme-court-says-breakdown-of-law-and-order-and-constitutional-machinery-in-manipur
ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದ ಸುಪ್ರೀಂ ಕೋರ್ಟ್​​.. ಡಿಜಿಪಿಗೆ ಸಮನ್ಸ್

ನವದೆಹಲಿ: ಮಣಿಪುರದ ಹಿಂಸಾಚಾರ ಕುರಿತು ಮಂಗಳವಾರವೂ ಆಡಳಿತ ಮತ್ತು ಭದ್ರತಾ ಸಂಸ್ಥೆಗಳ ವಿರುದ್ಧ ಸುಪ್ರೀಂ ಕೋರ್ಟ್​ ಕಟುವಾದ ಟೀಕೆಗಳನ್ನು ಮುಂದುವರಿಸಿದೆ. ಮೇ ಆರಂಭದಿಂದ ಜುಲೈ ಅಂತ್ಯದವರೆಗೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾಂವಿಧಾನಿಕ ಯಂತ್ರಗಳ ಸಂಪೂರ್ಣ ಸ್ಥಗಿತವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಈಶಾನ್ಯ ರಾಜ್ಯ ಮಣಿಪುರ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿದೆ. ಕಾನೂನಿಗೆ ಜನರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಅವರಿಗೆ ಏನು ಉಳಿದಿದೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ. ಇತ್ತೀಚೆಗೆ ವೈರಲ್ ವಿಡಿಯೋದಲ್ಲಿ ಸಂತ್ರಸ್ತರನ್ನು ಜನರ ಗುಂಪಿಗೆ ಹಸ್ತಾಂತರಿಸಿದ ಪೊಲೀಸರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದೂ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಪ್ರಶ್ನಿಸಿದೆ. ಇದೇ ವೇಳೆ, ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ 11 ಎಫ್‌ಐಆರ್‌ಗಳನ್ನು ಸಿಬಿಐಗೆ ವರ್ಗಾಯಿಸಲು ಸರ್ಕಾರ ಪ್ರಸ್ತಾಪಿಸಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.

ಪೊಲೀಸರು ತನಿಖೆ ನಡೆಸಲು ಅಸಮರ್ಥರು - ಸುಪ್ರೀಂ: ಸಿಜೆ ಡಿವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಮಣಿಪುರದ ಹಿಂಸಾಚಾರ ಕುರಿತು ವಿಚಾರಣೆ ನಡೆಸಿತು. ಮೇ ಮತ್ತು ಜುಲೈ ನಡುವೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾಂವಿಧಾನಿಕ ಯಂತ್ರದ ಸಂಪೂರ್ಣ ಸ್ಥಗಿತವಾಗಿದೆ. ಮಣಿಪುರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಉಳಿದಿಲ್ಲ. ರಾಜ್ಯ ಪೊಲೀಸರು ತನಿಖೆ ನಡೆಸಲು ಅಸಮರ್ಥರಾಗಿದ್ದಾರೆ ಮತ್ತು ಅವರು ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ತರಾಟೆ ತೆಗೆದುಕೊಂಡರು.

ಇದನ್ನೂ ಓದಿ: Manipur violence: ಮಣಿಪುರ ಮಹಿಳೆಯರ ಅವಮಾನಿಸಿದ ಘಟನೆ ಕ್ಷಮಿಸಲಾಗದ ತಪ್ಪು: ಸುಪ್ರೀಂ ಕೋರ್ಟ್​

ಕಾನೂನಿಗೆ ಜನರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಆ ಜನತೆಗೆ ಮತ್ತೇನು ಉಳಿದಿದೆ ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ, ಎರಡು ತಿಂಗಳಿಂದ ಪರಿಸ್ಥಿತಿ ಹದಗೆಟ್ಟಿದೆ. ನಿಮಗೆ ಎಫ್‌ಐಆರ್ ದಾಖಲಿಸಲು ಹಾಗೂ ಬಂಧಿಸಲು ಸಹ ಸಾಧ್ಯವಾಗಿಲ್ಲ ಎಂದು ಪೊಲೀಸರಿಗೆ ಚಾಟಿ ಬೀಸಿದರು. ಈ ವೇಳೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ಅರಿತುಕೊಂಡ ತಕ್ಷಣವೇ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಿದೆ ಎಂದು ಹೇಳಿದರು.

ಇದಕ್ಕೆ ಮುಖ್ಯ ನ್ಯಾಯಮೂರ್ತಿ, 50 ಪ್ರಕರಣಗಳು ಸಿಬಿಐಗೆ ಹೋದರೆ, ಇನ್ನು ಉಳಿದ 5500 ಪ್ರಕರಣಗಳ ವಿಷಯ ಏನು?, ರಾಜ್ಯ ಪೊಲೀಸರು ತನಿಖೆ ನಡೆಸಲು ಅಸಮರ್ಥರಾಗಿದ್ದಾರೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಉಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಇದುವರೆಗೆ ದಾಖಲಾದ ಎಫ್‌ಐಆರ್‌ಗಳಲ್ಲಿ 250 ಜನರನ್ನು ಬಂಧನ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 12,000 ಜನರನ್ನು ಬಂಧನ ಮಾಡಲಾಗಿದೆ ಎಂದು ಮೆಹ್ತಾ ಹೇಳಿದರು.

ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆಯ ಹೇಳಿಕೆ ಪ್ರಕಾರ, ಆಕೆಯನ್ನು ಪೊಲೀಸರಿಂದ ಜನಸಮೂಹಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ಯಾವ ಪೊಲೀಸರನ್ನಾದರೂ ಬಂಧಿಸಲಾಗಿದೆಯೇ?. ಡಿಜಿಪಿ ಇಷ್ಟು ತಿಂಗಳು ಏನು ಮಾಡಿದ್ದಾರೆ?, ಪೊಲೀಸ್ ಅಧಿಕಾರಿಗಳನ್ನು ವಿಚಾರಣೆ ಮಾಡಿದ್ದಾರೆಯೇ ಎಂದು ನ್ಯಾಯ ಪೀಠ ಪ್ರಶ್ನೆ ಮಾಡಿತು. ಮುಂದಿನ ವಿಚಾರಣೆಯ ದಿನಾಂಕದಂದು ಮಣಿಪುರದ ಡಿಜಿಪಿ ನ್ಯಾಯಾಲಯಕ್ಕೆ ಹಾಜರಾಗಬೇಕು ಮತ್ತು ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರಿಸುವ ಸ್ಥಿತಿಯಲ್ಲಿರಬೇಕು ಎಂದು ಸೂಚಿಸಿತು.

ಇದನ್ನೂ ಓದಿ: ಮಣಿಪುರ ಗಲಭೆ: ಪ್ರಕರಣ ದಾಖಲಿಸಲು 14 ದಿನ ಬೇಕಿತ್ತಾ?.. ರಾಜ್ಯ, ಕೇಂದ್ರಕ್ಕೆ ಸುಪ್ರೀಂ ತರಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.