ETV Bharat / bharat

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ: ಹತ್ತು ರಾಜ್ಯಗಳ ಸಿಎಂಗಳು ಗೈರು

author img

By

Published : May 27, 2023, 4:46 PM IST

Updated : May 27, 2023, 7:51 PM IST

PM Modi chairs 8th governing council meeting of Niti Aayog
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ

ದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಗೆ ಹತ್ತು ರಾಜ್ಯಗಳ ಮುಖ್ಯಮಂತ್ರಿಗಳು ಗೈರು ಹಾಜರಾದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶನಿವಾರ ಮಹತ್ವದ ನೀತಿ ಆಯೋಗದ ಎಂಟನೇ ಆಡಳಿತ ಮಂಡಳಿ ಸಭೆ ನಡೆಯಿತು. 'ವಿಕ್ಷಿತ್ ಭಾರತ್ @2047: ಟೀಂ ಇಂಡಿಯಾದ ಪಾತ್ರ' ಎಂಬ ಧ್ಯೇಯದ ಮೇಲೆ ಈ ಸಭೆ ಜರುಗಿತು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳು ಸಭೆಯ ಪ್ರಮುಖ ಅಂಶಗಳಾಗಿದ್ದವು.

ರಾಷ್ಟ್ರ ರಾಜಧಾನಿ ದೆಹಲಿಯ ಪ್ರಗತಿ ಮೈದಾನದಲ್ಲಿರುವ ಹೊಸ ಕನ್ವೆನ್ಷನ್​ ಸೆಂಟರ್‌ನಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ನೀತಿ ಆಯೋಗದ ಅಧ್ಯಕ್ಷರಾದ ಪ್ರಧಾನಿ ಮೋದಿ ವಹಿಸಿದ್ದರು. ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಇದೇ ವೇಳೆ ಹತ್ತು ರಾಜ್ಯಗಳ ಮುಖ್ಯಮಂತ್ರಿಗಳು ಸಭೆಗೆ ಗೈರಾದರು.

ಸಭೆಗೆ ಹಾಜರಾದ ಸಿಎಂಗಳು: ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಹರಿಯಾಣ ಮುಖ್ಯಮುಂತ್ರಿ ಮನೋಹರ್ ಲಾಲ್​ ಖಟ್ಟರ್​, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದ್ ಸಿಂಗ್ ಸುಖು, ಗುಜರಾತ್​ ಮುಖ್ಯಮಂತ್ರಿ ಭುಪೇಂದ್ರ ಭಾಯ್​ ಪಟೇಲ್​, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚವ್ಹಾಣ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ತ್ರಿಪುರ ಮುಖ್ಯಮಂತ್ರಿ ಮಣಿಕ್ ಶಹಾ ಹಾಗೂ ನಾಗಾಲ್ಯಾಂಡ್, ಸಿಕ್ಕಿಂ ಮುಖ್ಯಮಂತ್ರಿಗಳು ಸೇರಿ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಗೆ ಗೈರಾದ ಸಿಎಂಗಳು: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗೆ ಹಾಜರಾಗಲಿಲ್ಲ.

ತಮಿಳುನಾಡು ಸಿಎಂ ಸ್ವಾಲಿನ್​ ಜಪಾನ್ ಮತ್ತು ಸಿಂಗಾಪುರ ಪ್ರವಾಸದಲ್ಲಿದ್ದರೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಅನುಪಸ್ಥಿತಿಗೆ ಆರೋಗ್ಯ ಕಾರಣವನ್ನು ನೀಡಿದ್ದರೆ, ಕೇರಳ ಸಿಎಂ ವಿಜಯನ್ ಯಾವುದೇ ಕಾರಣವನ್ನು ಕೊಟ್ಟಿಲ್ಲ.

ಉಳಿದಂತೆ ದೆಹಲಿ ಆಡಳಿತಾತ್ಮಕ ವಿಷಯವಾಗಿ ದೆಹಲಿ ಸಿಎಂ ಕೇಜ್ರಿವಾಲ್​ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಸಮರಕ್ಕೆ ಇಳಿದಿದ್ದಾರೆ. ನಾಗರಿಕ ಸೇವಾ ಪ್ರಾಧಿಕಾರ ರಚನೆ ಕುರಿತ ಕೇಂದ್ರದ ಸುಗ್ರೀವಾಜ್ಞೆ ವಿರೋಧಿಸಿ ಕೇಜ್ರಿವಾಲ್​ ಶುಕ್ರವಾರ ಮೋದಿ ಅವರಿಗೆ ಪತ್ರ ಬರೆದು ನೀತಿ ಆಯೋಗದ ಸಭೆ ಹಾಜರಾಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದರು. ಮತ್ತೊಂದೆಡೆ, ಪಂಜಾಬ್‌ನ ಹಿತಾಸಕ್ತಿಗಳ ಬಗ್ಗೆ ಕೇಂದ್ರ ಸಾಕಷ್ಟು ಗಮನ ಹರಿಸುತ್ತಿಲ್ಲ ಎಂದು ಆರೋಪಿ ಸಿಎಂ ಭಗವಂತ್ ಮಾನ್ ಕೂಡ ಪತ್ರ ಬರೆದಿದ್ದರು.

ಮೋದಿ ಸರ್ಕಾರದ ಆಡಳಿತದ ವಿಷಯವಾಗಿ ತೆಲಂಗಾಣ ಸಿಎಂ ಕೆಸಿಆರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅಲ್ಲದೇ, 2024ರ ಲೋಕಸಭೆ ಚುನಾವಣೆಗೆ ಮೋದಿ ಅವರನ್ನು ಎದುರಿಸಲು ಒಗ್ಗಟ್ಟಿನ ರಂಗ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, "ನೀತಿ ಆಯೋಗದ ಸಭೆ ಮತ್ತು ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಗೆ ಯಾವುದೇ ಅರ್ಥವಿಲ್ಲ'' ಎಂದು ಹೇಳಿದರು.

ಮಮತಾ ಬ್ಯಾನರ್ಜಿ ತಮ್ಮ ಬದಲಿಗೆ ಪ್ರತಿನಿಧಿಗಳಾಗಿ ಹಣಕಾಸು ರಾಜ್ಯ ಸಚಿವ ಮತ್ತು ಮುಖ್ಯ ಕಾರ್ಯದರ್ಶಿ ಅವರನ್ನು ಕಳುಹಿಸುವ ಪ್ರಸ್ತಾವ ಹೊಂದಿದ್ದರು. ಆದರೆ, ಇದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ಕೇವಲ ಮುಖ್ಯಮಂತ್ರಿಗಳು ಮಾತ್ರ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿತ್ತು.

ಸಭೆಯಲ್ಲಿ ಚರ್ಚಿತ ವಿಷಯಗಳು: ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖ ಎಂಟು ವಿಷಯಗಳ ಅಜೆಂಡಾ ಹೊಂದಲಾಗಿತ್ತು. 1. ವಿಕ್ಷಿತ್ ಭಾರತ್@2047, 2. ಎಂಎಸ್​ಎಂಇಗಳ ಬಗ್ಗೆ ಒತ್ತು, 3. ಮೂಲಸೌಕರ್ಯ ಮತ್ತು ಹೂಡಿಕೆಗಳು, 4. ಅನುಸರಣೆಗಳನ್ನು ಕಡಿಮೆ ಮಾಡುವುದು, 5. ಮಹಿಳಾ ಸಬಲೀಕರಣ, 6. ಆರೋಗ್ಯ ಮತ್ತು ಪೋಷಣೆ, 7. ಕೌಶಲ್ಯ ಅಭಿವೃದ್ಧಿ ಹಾಗೂ 8. ಪ್ರದೇಶಾಭಿವೃದ್ಧಿ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕಾಗಿ ಗತಿ ಶಕ್ತಿ ವಿಷಯಗಳು ಸಭೆಯ ಮುಂದಿದ್ದವು.

ಇದನ್ನೂ ಓದಿ: ನಾಳಿನ ನೀತಿ ಆಯೋಗದ ಸಭೆ ಬಹಿಷ್ಕರಿಸಿದ ದೆಹಲಿ ಸಿಎಂ: ಖರ್ಗೆ, ರಾಹುಲ್ ಭೇಟಿಗೆ​ ಸಮಯ ಕೇಳಿದ ಕೇಜ್ರಿವಾಲ್

Last Updated :May 27, 2023, 7:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.