ETV Bharat / bharat

ಪ್ರಕಾಶ್​ ಸಿಂಗ್​ ಬಾದಲ್​ಗೆ ಪಿಎಂ ಮೋದಿ ಅಂತಿಮ ನಮನ: 2 ದಿನ ರಾಷ್ಟ್ರೀಯ ಶೋಕಾಚರಣೆ, ನಾಳೆ ಅಂತ್ಯಕ್ರಿಯೆ

author img

By

Published : Apr 26, 2023, 10:46 AM IST

Updated : Apr 26, 2023, 1:53 PM IST

ಪ್ರಕಾಶ್​ ಸಿಂಗ್​ ಬಾದಲ್​ ನಿಧನ
ಪ್ರಕಾಶ್​ ಸಿಂಗ್​ ಬಾದಲ್​ ನಿಧನ

ಪಂಜಾಬ್​ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ನಿಧನರಾಗಿದ್ದು, ಇಂದು, ನಾಳೆ 2 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಪ್ರಧಾನಿ ಮೋದಿ ಅವರು ಪಂಜಾಬ್​ಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಚಂಡೀಗಢ: ನಿನ್ನೆ ನಿಧನರಾದ ಪಂಜಾಬ್​ನ 5 ಬಾರಿಯ ಮುಖ್ಯಮಂತ್ರಿ, ಶಿರೋಮಣಿ ಅಕಾಲಿದಳದ ಹಿರಿಯ ರಾಜಕಾರಣಿ ಪ್ರಕಾಶ್ ಸಿಂಗ್ ಬಾದಲ್ (95) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಂತಿನ ನಮನ ಸಲ್ಲಿಸಿದರು. ಚಂಡೀಗಢಕ್ಕೆ ಆಗಮಿಸಿದ ಪ್ರಧಾನಿ ಬಾದಲ್​ರ ಅಂತಿಮ ದರ್ಶನ ಪಡೆದರು.

ಪ್ರಕಾಶ್ ಸಿಂಗ್ ಬಾದಲ್ ಅವರು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ನಿಧನರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಬಾದಲ್ ಅವರ ಮೃತದೇಹವನ್ನು ಚಂಡೀಗಢ ಸೆಕ್ಟರ್ 28 ರ ಶಿರೋಮಣಿ ಅಕಾಲಿದಳದ ಕಚೇರಿಯಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿದೆ. ಗುರುವಾರ ಅವರ ಹುಟ್ಟೂರಾದ ಬಾದಲ್​ನಲ್ಲಿ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ರಾಷ್ಟ್ರೀಯ ಶೋಕಾಚರಣೆ: ದೇಶದ ಹಿರಿಯ ರಾಜಕಾರಣಿಯಾಗಿದ್ದ ಪ್ರಕಾಶ್ ಸಿಂಗ್ ಬಾದಲ್ ನಿಧನಕ್ಕೆ ಸಂತಾಪ ಸೂಚಿಸಲು ಕೇಂದ್ರ ಸರ್ಕಾರ 2 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ದೇಶಾದ್ಯಂತ ಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು. ಎಲ್ಲಾ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಪಂಜಾಬ್‌ನಲ್ಲಿ ನಾಳೆ ರಜೆ: ಬಾದಲ್ ನಿಧನದ ಶೋಕಾಚರಣೆಯ ಹಿನ್ನೆಲೆಯಲ್ಲಿ ನಾಳೆ ರಾಜ್ಯದಲ್ಲಿ ರಜೆ ಘೋಷಿಸಲಾಗಿದೆ. ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಕಚೇರಿಗಳಿಗೆ ರಜೆ ನೀಡಲಾಗಿದೆ. ಜಲಂಧರ್ ಲೋಕಸಭಾ ಉಪಚುನಾವಣೆ ಘೋಷಣೆಯಾಗಿದ್ದು, ತಯಾರಿಯಲ್ಲಿದ್ದ ರಾಜಕೀಯ ಪಕ್ಷಗಳಲ್ಲಿ ಶಿರೋಮಣಿ ಅಕಾಲಿದಳವು ಎರಡು ದಿನಗಳ ಚುನಾವಣಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಬಿಜೆಪಿ ಒಂದು ದಿನದ ಕಾರ್ಯಕ್ರಮಗಳನ್ನು ಕೈಬಿಟ್ಟಿದೆ.

ಬಾದಲ್​ ರಾಜಕೀಯ ಜೀವನ: ಪ್ರಕಾಶ್ ಸಿಂಗ್ ಬಾದಲ್ ಅವರು ಬರೋಬ್ಬರಿ 75 ವರ್ಷಗಳ ಯಶಸ್ವಿ ರಾಜಕೀಯ ಜೀವನ ನಡೆಸಿದ್ದಾರೆ. ಅವರು 5 ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಸತತ 11 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಗರಿಮೆ ಅವರದ್ದು, ಕಳೆದ ವರ್ಷ ಲಂಬಿಯಿಂದ ಚುನಾವಣಾ ಅಖಾಡಕ್ಕಿಳಿದು ಸೋಲು ಅನುಭವಿಸಿದರು.

ಇದಾದ ಬಳಿಕ ಅವರು ಸಕ್ರಿಯ ರಾಜಕಾರಣದಿಂದ ದೂರವುಳಿದರು. ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಶಿರೋಮಣಿ ಅಕಾಲಿದಳ ಬಿಜೆಪಿಯೊಂದಿಗಿನ ನಂಟು ಕಡಿದುಕೊಂಡಿದೆ. ಇದರ ನಂತರ ಪ್ರಕಾಶ್ ಸಿಂಗ್ ಬಾದಲ್ ಅವರು ತಮಗೆ ನೀಡಲಾದ ಪದ್ಮವಿಭೂಷಣ ಗೌರವವನ್ನು ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸಿದ್ದರು.

20 ವರ್ಷದವರಿದ್ದ ಪ್ರಕಾಶ್ ಸಿಂಗ್ ಬಾದಲ್ ಅವರು ಮೊದಲ ಬಾರಿಗೆ ಬಾದಲ್ ಗ್ರಾಮದ ಸರಪಂಚ್ ಆಗಿ ಆಯ್ಕೆಯಾಗಿದ್ದರು. ಇದರ ನಂತರ 1957 ರಲ್ಲಿ ಲಂಬಿ ವಿಧಾನಸಭೆಗೆ ಸ್ಪರ್ಧಿಸಿದರು. ಇದಾದ ಬಳಿಕ 2017 ರವರೆಗೆ ಸತತವಾಗಿ 10 ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 94 ನೇ ವಯಸ್ಸಿನಲ್ಲೂ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

ರಾಷ್ಟ್ರ ರಾಜಕಾರಣದಲ್ಲೂ ಗುರುತಿಸಿಕೊಂಡಿದ್ದ ಬಾದಲ್​ ಅವರು, 1977 ರಲ್ಲಿ ಮೊರಾರ್ಜಿ ದೇಸಾಯಿ ಅವರ ಜನತಾ ಪಕ್ಷದ ಸರ್ಕಾರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾಗಿ ಕೆಲಸ ಮಾಡಿದ್ದರು. 4 ತಿಂಗಳ ಕಾಲ ಸಚಿವರಾಗಿದ್ದ ಅವರು ರಾಷ್ಟ್ರ ರಾಜಕಾರಣದಿಂದ ಹಿಂದೆ ಸರಿದು ಸಚಿವ ಸ್ಥಾನ ತೊರೆದು, ರಾಜ್ಯ ರಾಜಕಾರಣದಲ್ಲೇ ಮುಂದುವರಿದರು.

ಓದಿ: ಮೇ ತಿಂಗಳಲ್ಲಿ ಜಿ-7 ಶೃಂಗಸಭೆ: ಅಮೆರಿಕ ಅಧ್ಯಕ್ಷ ಜೋ ಬೈಡನ್​ ಭಾಗಿ

Last Updated :Apr 26, 2023, 1:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.