ETV Bharat / bharat

ಭಯೋತ್ಪಾದನೆ ಮಟ್ಟಹಾಕಲು ಭಾರತೀಯ ಸೇನೆಯಿಂದ 'ಆಪರೇಷನ್​ ಸರ್ವಶಕ್ತಿ'

author img

By ETV Bharat Karnataka Team

Published : Jan 15, 2024, 7:57 PM IST

ಭಾರತೀಯ ಸೇನೆ
ಭಾರತೀಯ ಸೇನೆ

ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆ ಜಮ್ಮು- ಕಾಶ್ಮೀರದಲ್ಲಿ ಆಪರೇಷನ್ ಸರ್ವಶಕ್ತಿ ಆರಂಭಿಸಲು ಭಾರತೀಯ ಸೇನೆ ಸಜ್ಜಾಗಿದೆ.

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಜಮ್ಮು ಮತ್ತು ಕಾಶ್ಮೀರದ ಪೂಂಚ್ - ರಾಜೌರಿ ಸೆಕ್ಟರ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು 'ಆಪರೇಷನ್ ಸರ್ವಶಕ್ತಿ' ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ. ಇದು ದೊಡ್ಡ ಪ್ರಮಾಣದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಾಗಿದ್ದು, ಉಗ್ರವಾದವನ್ನು ಸರ್ವನಾಶ ಮಾಡುವುದಾಗಿದೆ.

ಭಾರತೀಯ ಸೇನೆ, ಗುಪ್ತಚರ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸ್​ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ. ಇದನ್ನು ಪಿರ್ ಪಂಜಾಲ್ ಶ್ರೇಣಿಯ ಸೈನಿಕರು ನಡೆಸುತ್ತಾರೆ. ಸಂಪೂರ್ಣ ಕಾರ್ಯಾಚರಣೆಯನ್ನು ಸೇನಾ ಪ್ರಧಾನ ಕಚೇರಿ ಮತ್ತು ಉತ್ತರ ಕಮಾಂಡ್‌ನಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಪೂಂಚ್ ಮತ್ತು ರಜೌರಿ ಪ್ರದೇಶಗಳಲ್ಲಿ ಉಗ್ರರ ಒಳನುಸುಳುವಿಕೆ ಹೆಚ್ಚಿದ ಕಾರಣ ಈಗಾಗಲೇ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

ಸೇನಾ ವಾಹನಗಳ ಮೇಲೆ ದಾಳಿ: ಪೂಂಚ್- ರಜೌರಿ ವಲಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಈಚೆಗೆ ಹೆಚ್ಚಾಗುತ್ತಿವೆ. ಜನವರಿ 12 ರಂದು ಸೇನಾ ವಾಹನಗಳ ಬೆಂಗಾವಲು ಪಡೆಯ ಮೇಲೆ ಶಂಕಿತ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೂ ಮೊದಲು ಡಿಸೆಂಬರ್ 21 ರಂದು ಧಾತ್ಯಾರ್ ಮೋರ್‌ನಲ್ಲಿ ಸೇನಾ ವಾಹನಗಳ ಮೇಲೆ ದಾಳಿ ನಡೆದಿತ್ತು. ಘಟನೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಈಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ 'ಆಪರೇಷನ್ ಸರ್ವಶಕ್ತಿ' ಕಾರ್ಯಾಚರಣೆ ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗುಪ್ತಚರ ಸಂಸ್ಥೆಗಳ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್​ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಾದ 'ಆಪರೇಷನ್ ಸರ್ಪವಿನಾಶ್' ಅನ್ನು 2003 ರಲ್ಲಿ ಪಿರ್ ಪಂಜಾಲ್ ಪ್ರದೇಶದಲ್ಲಿ ಭಯೋತ್ಪಾದಕರನ್ನು ಮಟ್ಟಹಾಕಲು ನಡೆಸಲಾಗಿತ್ತು.

ಭದ್ರತೆ ಮಧ್ಯೆ ಉಗ್ರ ಕೃತ್ಯ ಹೆಚ್ಚಳ: ಇಂದು ಸೇನಾ ದಿನ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಉಗ್ರಪೀಡಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಕಳೆದ ಕೆಲವು ತಿಂಗಳಲ್ಲಿ ಹಲವು ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಭದ್ರತಾ ಪಡೆ ಮತ್ತು ಗುಪ್ತಚರ ಪಡೆಗಳ ನೆರವಿನಿಂದ ಭಯೋತ್ಪಾದನೆ ಮಟ್ಟಹಾಕಲು ನಿರಂತರ ಯತ್ನ ನಡೆದಿದೆ. ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕದನ ವಿರಾಮವಿದೆ. ಆದರೆ, ಗಡಿ ಉದ್ದಕ್ಕೂ ಭಯೋತ್ಪಾದನೆ ಪೂರ್ಣವಾಗಿ ನಿಂತಿಲ್ಲ ಎಂಬುದು ಒಳನುಸುಳುವಿಕೆ ಪ್ರಯತ್ನಗಳಿಂದ ತಿಳಿದು ಬರುತ್ತದೆ ಎಂದರು.

ಇದನ್ನೂ ಓದಿ: ಬಿಗಿ ಭದ್ರತೆ ನಡುವೆಯೂ ಕೆಲ ಪ್ರದೇಶಗಳಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಳ: ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.