ETV Bharat / bharat

ಬಿಗಿ ಭದ್ರತೆ ನಡುವೆಯೂ ಕೆಲ ಪ್ರದೇಶಗಳಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಳ: ಸೇನೆ

author img

By ETV Bharat Karnataka Team

Published : Jan 15, 2024, 7:14 PM IST

ಜನರಲ್ ಮನೋಜ್ ಪಾಂಡೆ
ಜನರಲ್ ಮನೋಜ್ ಪಾಂಡೆ

ಇಂದು ಭಾರತೀಯ ಸೇನೆಯ 76ನೇ ವರ್ಷಾಚರಣೆ. ಭದ್ರತಾ ಪಡೆಗಳ ಸಾಹಸ, ಉಗ್ರರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮೆಚ್ಚುಗೆ ಸೂಚಿಸಿದರು.

ನವದೆಹಲಿ: ಭಾರತೀಯ ಸೇನೆ ಮತ್ತು ಸರ್ಕಾರದ ನಿರಂತರ ಪ್ರಯತ್ನದಿಂದಾಗಿ ಗಲಭೆಪೀಡಿತ ಮಣಿಪುರ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶ ಕಂಡಿದ್ದೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಸೋಮವಾರ ಹೇಳಿದರು. 76ನೇ ಸೇನಾ ದಿನದಂದು ಮಾತನಾಡಿದ ಅವರು, ಕೇಂದ್ರ ಸರ್ಕಾರ ಸ್ಥಳೀಯ ಬಂಡುಕೋರ ಗುಂಪುಗಳೊಂದಿಗೆ ಶಾಂತಿ ಮಾತುಕತೆ ನಡೆಸಿದೆ. ಕೆಲ ಸಂಘಟನೆಗಳನ್ನು ಶಸ್ತ್ರತ್ಯಾಗ ಮಾಡಿಸಲಾಗಿದೆ. ಇದರಿಂಧ ಈಶಾನ್ಯ ಪ್ರದೇಶದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ ಎಂದರು.

ಈಶಾನ್ಯ ರಾಜ್ಯಗಳಲ್ಲಿ ದಂಗೆಕೋರ ಗುಂಪುಗಳೊಂದಿಗೆ ಶಾಂತಿ ಒಪ್ಪಂದಗಳು ಮತ್ತು ಮಾತುಕತೆಗಳು ನಡೆದಿವೆ. ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಸರ್ಕಾರದ ನೀತಿಗಳು ಪ್ರಮುಖ ಪಾತ್ರವಹಿಸಿವೆ. ಮಣಿಪುರದಲ್ಲಿ ಸರ್ಕಾರದ ಕ್ರಿಯಾಶೀಲತೆ ಮತ್ತು ಭಾರತೀಯ ಸೇನೆಯ ಪ್ರಯತ್ನದಿಂದಾಗಿ ಪರಿಸ್ಥಿತಿ ತಹಬದಿಗೆ ಬಂದಿದೆ. ಸೇನೆ ಕೂಡ ತಾಳ್ಮೆಯಿಂದ ಕೆಲಸ ಮಾಡುವ ಮೂಲಕ ಗಲಭೆಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದರು.

ಭದ್ರತೆ ಮಧ್ಯೆ ಉಗ್ರ ಕೃತ್ಯ ಹೆಚ್ಚಳ: ಉಗ್ರಪೀಡಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಕಳೆದ ಕೆಲವು ತಿಂಗಳಲ್ಲಿ ಹಲವು ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಭದ್ರತಾ ಪಡೆ ಮತ್ತು ಗುಪ್ತಚರ ಪಡೆಗಳ ನೆರವಿನಿಂದ ಭಯೋತ್ಪಾದನೆ ಮಟ್ಟಹಾಕಲು ನಿರಂತರ ಯತ್ನ ನಡೆದಿದೆ. ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕದನ ವಿರಾಮವಿದೆ. ಆದರೆ, ಗಡಿ ಉದ್ದಕ್ಕೂ ಭಯೋತ್ಪಾದನೆ ಪೂರ್ಣವಾಗಿ ನಿಂತಿಲ್ಲ ಎಂಬುದು ಒಳನುಸುಳುವಿಕೆ ಪ್ರಯತ್ನಗಳಿಂದ ತಿಳಿದು ಬರುತ್ತದೆ ಎಂದರು.

ದೇಶದ ಗಡಿ ಕಾಪಾಡಲು ನಮ್ಮ ಸೇನೆಯು ಸಂಪೂರ್ಣ ಸನ್ನದ್ಧವಾಗಿದೆ. ಯಾವುದೇ ಸವಾಲು ಎದುರಿಸಲು ಸಮರ್ಥವಾಗಿದೆ. ಉತ್ತರದ ಗಡಿಗಳಲ್ಲಿ ಸೇನಾ ಸಾಮರ್ಥ್ಯ ಹೆಚ್ಚಳ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜನರಲ್ ಮನೋಜ್ ಪಾಂಡೆ ಮಾಹಿತಿ ನೀಡಿದರು.

ಉಗ್ರ ಸಂಚುಗಳು ವಿಫಲ: ಹೊಸ ತಂತ್ರಜ್ಞಾನದ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಆಧುನಿಕ ಉಪಕರಣಗಳನ್ನು ಆಮದು ಮಾಡಿಕೊಂಡಿದ್ದೇವೆ. ಗಡಿ ಪ್ರದೇಶಗಳಲ್ಲಿ ನಿರ್ಣಾಯಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಅನುದಾನ ನೀಡಲಾಗಿದೆ. ಈ ಹಿಂದೆ, ಭಾರತೀಯ ಸೇನೆಯು ದೊಡ್ಡ ಉಗ್ರ ಸಂಚುಗಳನ್ನು ಎದುರಿಸಿದೆ. ಸವಾಲಿನ ಹವಾಮಾನ, ಕಷ್ಟಕರ ಪ್ರದೇಶ ಏನೇ ಇದ್ದರೂ, ಗಡಿ ರಕ್ಷಣೆ ವಿಚಾರದಲ್ಲಿ ಸೇನೆಯು ಬದ್ಧತೆ ಕಾಪಾಡಿಕೊಂಡಿದೆ ಎಂಬುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನವನ್ನು ಚಾಕಚಕ್ಯತೆಯಿಂದ ವಿಫಲಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ನಿರಂತರ ಪ್ರಯತ್ನದ ಫಲವಾಗಿ, ಹಿಂಸಾಚಾರದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ದೇಶದಿಂದ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಲು ಸೇನೆ ಬದ್ಧವಾಗಿದೆ ಎಂದರು.

ಇದನ್ನೂ ಓದಿ: ಪುತ್ರಿ ಸಾರಾ ಬಳಿಕ ಸಚಿನ್​ ತೆಂಡೂಲ್ಕರ್​ಗೆ ಡೀಪ್​ಫೇಕ್​ ತಲೆಬಿಸಿ: ನಕಲಿ ವಿಡಿಯೋ ವಿರುದ್ಧ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.