ETV Bharat / bharat

ಆಂಧ್ರಪ್ರದೇಶ, ತೆಲಂಗಾಣದ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ದಾಳಿ

author img

By ETV Bharat Karnataka Team

Published : Oct 2, 2023, 12:35 PM IST

NIA raids in more than 60 places in Andhra Pradesh, Telangana
ಆಂಧ್ರಪ್ರದೇಶ, ತೆಲಂಗಾಣದ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ದಾಳಿ

ನಕ್ಸಲ್​ ಜೊತೆ ನಂಟು ಹೊಂದಿರುವ ಶಂಕೆ ಮೇರೆಗೆ ಪ್ರಮುಖರ ಮನೆ ಮೇಲೆ ಎನ್​ಐಎ ದಾಳಿ ನಡೆಸಿದೆ.

ಹೈದರಾಬಾದ್​/ವಿಶಾಖಪಟ್ಟಣ: ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಲವು ಸ್ಥಳಗಳಲ್ಲಿ ಶಂಕಿತ ಮಾವೋವಾದಿ ಬೆಂಬಲಿಗರ ಸುಮಾರು 60ಕ್ಕೂ ಹೆಚ್ಚು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ದಾಳಿ ನಡೆಸಿದೆ.

ನಾಗರಿಕ ಸ್ವಾತಂತ್ರ್ಯ ಕಾರ್ಯಕರ್ತರು ಮತ್ತು ಅಮರ ಬಂಧು ಮಿತ್ರರ ಸಂಘ, ಕುಲ ನಿರ್ಮೂಲ ಸಮಿತಿ, ಚೈತನ್ಯ ಮಹಿಳಾ ಸಂಘ ಮುಂತಾದ ಸಂಘಟನೆಗಳ ಮುಖಂಡರು, ಅವರ ಸಂಬಂಧಿಕರು ಮತ್ತು ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಜನರ ಮನೆಗಳಲ್ಲಿ ಎನ್‌ಐಎ ಅಧಿಕಾರಿಗಳು ಇಂದು ಬೆಳಗ್ಗೆಯಿಂದಲೇ ಶೋಧ ಕಾರ್ಯ ನಡೆಸಿದ್ದಾರೆ.

ಮಾಹಿತಿ ಆಧರಿಸಿ ಬೆಳಗ್ಗೆಯಿಂದಲೇ ಎನ್​ಐಎಯ ಪ್ರತ್ಯೇಕ ಎರಡು ತಂಡಗಳು, ರಾಜ್ಯ ಪೊಲೀಸ್​ ಪಡೆಯ ಸಹಾಯದೊಂದಿಗೆ ದಾಳಿ ಆರಂಭಿಸಿವೆ. ತೆಲಂಗಾಣದ ಹೈದರಾಬಾದ್​ನಲ್ಲಿ ಹಾಗೂ ಆಂಧ್ರಪ್ರದೇಶದ ಗುಂಟೂರು, ನೆಲ್ಲೂರು ಹಾಗೂ ತಿರುಪತಿ ಮುಂತಾದ ಜಿಲ್ಲೆಗಳಲ್ಲಿ ಎನ್​ಐಎ ತಂಡಗಳು ದಾಳಿ ನಡೆಸಿವೆ. ನಕ್ಸಲ್​ ಜೊತೆ ನಂಟು ಹೊಂದಿರುವ ಶಂಕೆ ಮೇರೆಗೆ ನಾಗರಿಕ ಹಕ್ಕು ಹೋರಾಟಗಾರರ ಮನೆಗಳಲ್ಲಿ ಎನ್​ಐಎ ಶೋಧ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಅವರ ಚಟುವಟಿಕೆಗಳು ಹಾಗೂ ಮಾವೋವಾದಿಗಳೊಂದಿಗೆ ಅವರಿಗೆ ಸಂಪರ್ಕವಿದೆಯಾ ಎನ್ನುವುದರ ಬಗ್ಗೆ ಎನ್​ಐಎ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ಸಿಆರ್​ಪಿಸಿ ಸೆಕ್ಷನ್​ 160ರ ಅಡಿಯಲ್ಲಿ ಅವರಿಗೆ ನೋಟಿಸ್​ ನೀಡಲಾಗಿದ್ದು, ಅದರಲ್ಲಿ ಏಜೆನ್ಸಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಹೈದರಾಬಾದ್​ನಲ್ಲಿರುವ ಕಾರ್ಯಕರ್ತ ಭವಾನಿ ಹಾಗೂ ವಕೀಲ ಸುರೇಶ್​ ಅವರ ಮನೆಗಳಲ್ಲಿ ಕೇಂದ್ರ ತನಿಖಾ ಸಂಸ್ಥೆ ಶೋಧ ನಡೆಸುತ್ತಿದೆ. ಆಂಧ್ರಪ್ರದೇಶದಲ್ಲಿ ವಿಜಯವಾಡ, ಪೊನ್ನೂರು, ಮಂಗಳಗಿರಿ, ಬಾಪಟ್ಲಾ, ನೆಲ್ಲೂರು, ಅಮದಾಲವಲಸ ಮತ್ತು ಅನಂತಪುರದ ವಿವಿಧೆಡೆ ಶೋಧ ಕಾರ್ಯ ನಡೆಯುತ್ತಿದೆ.

ಖ್ಯಾತ ವೈದ್ಯ ಹಾಗೂ ಗುಂಟೂರು ಜಿಲ್ಲಾ ನಾಗರಿಕ ಸ್ವಾತಂತ್ರ್ಯ ಸಮಿತಿ ಅಧ್ಯಕ್ಷ ರಾಜಾ ರಾವ್ ಅವರ ಪೊನ್ನೂರಿನ ಮನೆಯಲ್ಲಿ ಎನ್‌ಐಎ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಪ್ರಜಾ ತಂತ್ರ ಪಕ್ಷವನ್ನು ನಡೆಸುತ್ತಿರುವ ಅವರ ಸ್ನೇಹಿತ ಟಿ ಸುಬ್ಬ ರಾವ್ ಅವರ ನಿವಾಸದಲ್ಲೂ ಶೋಧ ನಡೆಸಲಾಗುತ್ತಿದೆ. ನೆಲ್ಲೂರಿನಲ್ಲಿ ಯಳ್ಳಂಕಿ ವೆಂಕಟೇಶ್ವರಲು, ತಿರುಪತಿಯ ಕ್ರಾಂತಿ ಚೈತನ್ಯ ಮತ್ತು ತಿರುಪತಿಯ ಕವಲಿ ಬಾಲಯ್ಯ ಅವರ ಮನೆಗಳಲ್ಲೂ ಶೋಧ ನಡೆದಿದೆ.

ಅದೇ ರೀತಿ, ಎನ್‌ಐಎ ಅಧಿಕಾರಿಗಳು ಪ್ರಕಾಶಂ ಜಿಲ್ಲೆಯ ಡಿ ವೆಂಕಟರಾವ್, ಸಂತೆಮಗುಲುವಿನ ಶ್ರೀನಿವಾಸ್ ರಾವ್, ರಾಜಮಂಡ್ರಿಯಲ್ಲಿ ನಾಜರ್, ಶ್ರೀಕಾಕುಳಂನಲ್ಲಿ ಕೃಷ್ಣಯ್ಯ ಮತ್ತು ಅನಂತಪುರದ ಶ್ರೀರಾಮುಲು ಅವರ ಮನೆಗಳಲ್ಲೂ ಶೋಧ ನಡೆಸುತ್ತಿದ್ದಾರೆ.

ಸೆಪ್ಟೆಂಬರ್​ 9ರಂದು ಎನ್​ಐಎ, ಭದ್ರತಾ ಪಡೆಗಳ ವಿರುದ್ಧ ಬಳಸಲು ನಿಷೇಧಿತ ಕಮ್ಯುನಿಸ್ಟ್​ ಪಾರ್ಟಿ ಆಫ್​ ಇಂಡಿಯಾ ಹೊಂದಿದ್ದ ಸ್ಫೋಟಕ ವಸ್ತುಗಳು, ಡ್ರೋನ್​ಗಳು ಹಾಗೂ ಲ್ಯಾಥ್​ ಯಂತ್ರವನ್ನು ವಶಪಡಿಸಿಕೊಂಡ 2023ರ ಆಗಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ತೆಲಂಗಾಣ ಹಾಗೂ ಛತ್ತೀಸ್​ಗಢದಲ್ಲಿ ಸರಣಿ ದಾಳಿ ಹಾಗೂ ಶೋಧ ನಡೆಸಿತ್ತು. ಕೊತ್ತಗುಂಡೆಂನ ಚೆರ್ಲಾ ಮಂಡಲದಲ್ಲಿ ಇಷ್ಟು ವಸ್ತುಗಳನ್ನು ವಶಪಡಿಸಿಕೊಂಡ ನಂತರ ಎನ್​ಐಎ 12 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.

ಇದನ್ನೂ ಓದಿ : ಆರು ರಾಜ್ಯಗಳ 51 ಸ್ಥಳಗಳಲ್ಲಿ ಎನ್ಐಎ ದಾಳಿ, ದಾಖಲೆಗಳ ಪರಿಶೀಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.