ETV Bharat / bharat

ಟಿಆರ್​ಎಸ್ ಶಾಸಕರ ಖರೀದಿ ಯತ್ನ ಪ್ರಕರಣ: ದೇವಸ್ಥಾನದಲ್ಲಿ ಆಣೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ

author img

By

Published : Oct 28, 2022, 6:32 PM IST

mlas-poaching-case-telangana-bjp-chief-swears-to-no-involvement-at-yadadri-temple
ಟಿಆರ್​ಎಸ್ ಶಾಸಕರ ಖರೀದಿ ಯತ್ನ ಪ್ರಕರಣ: ದೇವಸ್ಥಾನದಲ್ಲಿ ಹಣೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರೇ ಶಾಸಕರ ಖರೀದಿ ನಾಟಕದ ಸೂತ್ರದಾರ. ಧೈರ್ಯವಿದ್ದರೆ ಅವರು ಕೂಡ ದೇವರ ಮೇಲೆ ಪ್ರಮಾಣ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ಬಂಡಿ ಸಂಜಯ್ ಸವಾಲು ಹಾಕಿದರು.

ಹೈದರಾಬಾದ್ (ತೆಲಂಗಾಣ): ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ಯ ಶಾಸಕರ ಖರೀದಿ ಯತ್ನದ ಆರೋಪವು ತೆಲಂಗಾಣ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಇದರ ನಡುವೆ ಶಾಸಕರ ಖರೀದಿ ಪ್ರಯತ್ನದಲ್ಲಿ ತಮ್ಮ ಪಕ್ಷ ಭಾಗಿಯಾಗಿಲ್ಲ ಎಂದು ಹೇಳಿ ಬಿಜೆಪಿ ರಾಜ್ಯಾಧ್ಯಕ್ಷರಾದ ಸಂಸದ ಬಂಡಿ ಸಂಜಯ್ ಶುಕ್ರವಾರ ಪ್ರಸಿದ್ಧ ಯಾದಾದ್ರಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿದರು.

ಹಲವಾರು ಬಿಜೆಪಿ ನಾಯಕರೊಂದಿಗೆ ಬಂಡಿ ಸಂಜಯ್ ಯಾದಗಿರಿಗುಟ್ಟದಲ್ಲಿರುವ ದೇಗುಲಕ್ಕೆ ಆಗಮಿಸಿ ಅರ್ಚಕರ ಸಮ್ಮುಖದಲ್ಲಿ ದೇವರಿಗೆ ನಮಸ್ಕರಿಸಿದರು. ಶಾಸಕರ ಖರೀದಿ ಪ್ರಕರಣದಲ್ಲಿ ತಮ್ಮ ಪಕ್ಷವು ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ ಎಂದು ಆಣೆ ಮಾಡಿದರು. ಇದೇ ವೇಳೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರೇ ಶಾಸಕರ ಖರೀದಿ ನಾಟಕದ ಸೂತ್ರದಾರರಾಗಿದ್ದು, ಧೈರ್ಯವಿದ್ದರೆ ಅವರೂ ಕೂಡ ದೇವರ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲೆಸೆದರು.

ಈ ಹಿಂದೆಯೂ ಶಾಸಕರ ಖರೀದಿ ಸಂಬಂಧ ದೇವರ ಮೇಲೆ ಪ್ರಮಾಣ ಮಾಡಲು ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸುವಂತೆ ಟಿಆರ್‌ಎಸ್ ಅಧ್ಯಕ್ಷ ಕೆಸಿಆರ್​ ಅವರಿಗೆ ಬಂಡಿ ಸಂಜಯ್​ ಸವಾಲು ಹಾಕಿದ್ದರು. ಆದರೆ, ಟಿಆರ್‌ಎಸ್ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಶುಕ್ರವಾರ ಸ್ವತಃ ತಾವೊಬ್ಬರೇ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ.

ಗೋ ಬ್ಯಾಕ್ ಬಂಡಿ ಸಂಜಯ್ ಘೋಷಣೆ: ಇದೇ ನವೆಂಬರ್ 3ರಂದು ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಇದರ ಪ್ರಚಾರ ಸಭೆಯಿಂದ ನೇರವಾಗಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಜೊತೆಗೆ ದೇವಸ್ಥಾನಕ್ಕೆ ತೆರಳುವ ಮಾರ್ಗಮಧ್ಯೆಯೇ ಬಂಡಿ ಸಂಜಯ್ ಅವರನ್ನು ಪೊಲೀಸರು ಬಂಧಿಸಬಹುದು ಎಂಬ ಊಹಾಪೋಹಗಳು ಸಹ ಎದ್ದಿದ್ದವು. ಆದರೆ, ಪೊಲೀಸರಿಂದ ಬಿಜೆಪಿ ನಾಯಕರಿಗೆ ಅಡೆ-ತಡೆಗಳು ಉಂಟಾಗಲಿಲ್ಲ.

ಇದನ್ನೂ ಓದಿ: ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಪ್ರಕರಣ: ಆರೋಪಿಗಳ ರಿಮ್ಯಾಂಡ್​ಗೆ ಕೋರ್ಟ್​ ನಕಾರ

ಆದರೆ, ಬಂಡಿ ಸಂಜಯ್ ವಿರುದ್ಧ ಟಿಆರ್​ಎಸ್​ ಮುಖಂಡರು ಪ್ರತಿಭಟನೆ ನಡೆಸಿದರು. ನಿಮ್ಮ ರಾಜಕೀಯಕ್ಕಾಗಿ ಯಾದಾದ್ರಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆ ಹಾಳು ಮಾಡಬೇಡಿ ಎಂದು ಯಾದಗಿರಿಗುಟ್ಟದಲ್ಲಿ ಸಾವಿರಕ್ಕೂ ಹೆಚ್ಚು ಟಿಆರ್​ಎಸ್​ ಮುಖಂಡರು, ಕಾರ್ಯಕರ್ತರು ಕಪ್ಪು ಬಾವುಟ ಹಿಡಿದು, ಬಂಡಿ ಸಂಜಯ್ ಡೌನ್ ಡೌನ್, ಗೋ ಬ್ಯಾಕ್ ಬಂಡಿ ಸಂಜಯ್ ಎಂಬ ಘೋಷಣೆಗಳನ್ನು ಕೂಗಿದರು.

ಇದು ಟಿಆರ್‌ಎಸ್ ನಡೆಸಿದ ಷಡ್ಯಂತ್ರ: ದೇವಸ್ಥಾನದಲ್ಲಿ ಪ್ರಮಾಣ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಂಡಿ ಸಂಜಯ್, ಬಿಜೆಪಿಗೆ ಕಳಂಕ ತರಲು ಟಿಆರ್‌ಎಸ್ ಸುಳ್ಳು ಆರೋಪ ಮಾಡುತ್ತಿದೆ. ಮುನುಗೋಡು ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಶಾಸಕರ ಖರೀದಿ ಎಂದು ಟಿಆರ್‌ಎಸ್ ನಡೆಸಿದ ಷಡ್ಯಂತ್ರ ನಡೆಸಿದೆ. ಟಿಆರ್‌ಎಸ್ ಎಷ್ಟೇ, ಏನೇ ಷಡ್ಯಂತ್ರ ಮಾಡಿದರೂ ಉಪಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತದಿಂದ ಗೆಲ್ಲಲಿದೆ ಎಂದರು.

ಬಿಜೆಪಿ ವಿರುದ್ಧ ಯಾವುದೇ ಪುರಾವೆಗಳಿಲ್ಲದೆ ಟಿಆರ್‌ಎಸ್ ಆರೋಪ ಮಾಡಿದೆ. ಈ ಪ್ರಕರಣದಲ್ಲಿ ಬಂಧಿತರಾದ ಮೂವರು ಆರೋಪಿಗಳನ್ನು ರಿಮಾಂಡ್​ಗೆ ಕಳುಹಿಸಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಾಲಯಕ್ಕೂ ಯಾವುದೇ ಸಾಕ್ಷ್ಯಗಳನ್ನೂ ಸಹ ಒದಗಿಸಿಲ್ಲ. ಆದ್ದರಿಂದ ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಬಿಐ ತನಿಖೆ ನಡೆಸಬೇಕು. ಈಗಾಗಲೇ ಸಿಬಿಐ ತನಿಖೆಗೆ ಕೋರಿ ಬಿಜೆಪಿ ಹೈಕೋರ್ಟ್‌ ಮೆಟ್ಟಿಲೇರಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಟಿಆರ್​ಎಸ್​ನ ನಾಲ್ವರು ಶಾಸಕರ ಖರೀದಿ ಯತ್ನ: ಫಾರ್ಮ್‌ಹೌಸ್‌ನಲ್ಲಿ ನೋಟುಗಳ ಬಂಡಲ್ ಸಮೇತ ನಾಲ್ವರ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.