ETV Bharat / bharat

ಗನ್​ ಅಥವಾ ಪೆನ್​ ಹಿಡಿದ ಎಲ್ಲ ರೀತಿಯ ಮಾವೋವಾದ ಮಟ್ಟ ಹಾಕಬೇಕು: ಪ್ರಧಾನಿ ಮೋದಿ

author img

By

Published : Oct 28, 2022, 3:30 PM IST

Updated : Oct 28, 2022, 5:45 PM IST

maoists-with-guns-or-pens-have-to-be-defeated-says-pm-modi
ಗನ್​, ಪೆನ್​ ಹಿಡಿದ ಎಲ್ಲ ರೀತಿಯ ಮಾವೋವಾದ ಮಟ್ಟ ಹಾಕಬೇಕು: ಪ್ರಧಾನಿ ಮೋದಿ ಕರೆ

ಮುಂದಿನ ಪೀಳಿಗೆಗೂ ತಮ್ಮ ವಿಕೃತ ಮನಸ್ಥಿತಿಯನ್ನು ಸೃಷ್ಟಿಸಬಹುದಾದ ಸ್ಥಳಗಳನ್ನು ಮಾವೋವಾದಿಗಳು ಆವರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಗನ್​ ಮತ್ತು ಪೆನ್​ ಹಿಡಿದ ಎಲ್ಲ ರೀತಿಯ ಮಾವೋವಾದ ಮಟ್ಟ ಹಾಕಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ನವದೆಹಲಿ: ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸಲು ಎಲ್ಲ ರೀತಿಯ ಮಾವೋವಾದವನ್ನು ತೊಡೆದುಹಾಕಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಸರ್ಕಾರ ಈಗಾಗಲೇ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಳವಡಿಸಿಕೊಂಡಿದೆ. ಈಗ ಯುವ ಪೀಳಿಗೆ ದಾರಿತಪ್ಪದಂತೆ ರಕ್ಷಿಸಲು ನಗರ ನಕ್ಸಲರು ಅಥವಾ ಪೆನ್​ ಹಿಡಿದ ಮಾವೋವಾದಿಗಳನ್ನು ನಿಗ್ರಹಿಸುವ ಸಮಯ ಬಂದಿದೆ ಎಂದು ಒತ್ತಿ ಹೇಳಿದರು.

ಆಂತರಿಕ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಹರಿಯಾಣದ ಸೂರಜ್‌ಕುಂಡ್‌ನಲ್ಲಿ ಶುಕ್ರವಾರ ಆಯೋಜಿಸಲಾದ ಗೃಹ ಸಚಿವಾಲಯದ ಚಿಂತನ್​ ಶಿಬಿರದಲ್ಲಿ ವರ್ಚುವಲ್ ಮೂಲಕ​ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಮಾವೋವಾದಿ ಪೀಡಿತ ಜಿಲ್ಲೆಗಳತ್ತ ಗಮನಹರಿಸುತ್ತಿದೆ. ಮಾವೋವಾದವು ಗನ್​ ಅಥವಾ ಪೆನ್​ ಮೂಲಕವೇ ಇರಲಿ, ಬೇರುಸಹಿತ ಕಿತ್ತು ಹಾಕಬೇಕೆಂದು ತಿಳಿಸಿದರು.

ಮಾವೋವಾದಿಗಳು ಪೆನ್​ ಮೂಲಕ ತಮ್ಮ ಬೌದ್ಧಿಕ ವಲಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ಪೀಳಿಗೆಯಲ್ಲಿ ತಮ್ಮ ವಿಕೃತ ಮನಸ್ಥಿತಿಯನ್ನು ಸೃಷ್ಟಿಸಬಹುದಾದ ಸ್ಥಳಗಳನ್ನು ಆವರಿಸಿಕೊಳ್ಳುತ್ತಿದ್ದಾರೆ. ಇದು ಮುಂದೆ ಸಮಾಜದಲ್ಲಿ ಬಿರುಕಿಗೆ ಕಾರಣವಾಗಬಹುದು ಎಂದು ಪ್ರಧಾನಿ ಎಚ್ಚರಿಸಿದರು.

ಮಾವೋವಾದಿಗಳಿಗೆ ವಿದೇಶಿ ನೆರವು: ಮಾವೋವಾದವನ್ನು ತಜ್ಞರು ಬುದ್ಧಿವಂತಿಕೆಯಿಂದ ನಿಭಾಯಿಸಬೇಕು. ಅವರ ಮುಖಗಳು ವಿಭಿನ್ನವಾಗಿ ಕಾಣುತ್ತವೆ. ಅವರು ವಿಭಿನ್ನವಾಗಿ ಕೆಲಸ ಮಾಡುತ್ತಾರೆ. ಇದನ್ನು ಭದ್ರತಾ ಏಜೆನ್ಸಿಗಳು ಅರ್ಥಮಾಡಿಕೊಳ್ಳಬೇಕು. ಮಾವೋವಾದಿಗಳು ವಿದೇಶಿ ನೆರವನ್ನೂ ಸಹ ಪಡೆಯುತ್ತಾರೆ ಎಂದು ಮೋದಿ ತಿಳಿಸಿದರು.

ಈಗಾಗಲೇ ದೇಶದಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರವನ್ನು ಕೊನೆಗೊಳಿಸಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಯೋತ್ಪಾದನೆಯ ಮೂಲ ಜಾಲವನ್ನು ನಾಶಪಡಿಸುವ ಗಾಂಭೀರ್ಯತೆಯನ್ನು ಎಲ್ಲ ರಾಜ್ಯಗಳು ಅರ್ಥಮಾಡಿಕೊಳ್ಳಬೇಕೆಂದೂ ಹೇಳಿದರು.

ನಿರೀಕ್ಷಿತ ಫಲಿತಾಂಶವನ್ನು ಸಾಧಿಸಲು ರಾಜ್ಯಗಳು ಮತ್ತು ಕೇಂದ್ರ ಏಜೆನ್ಸಿಗಳ ನಡುವೆ ಪರಿಪೂರ್ಣ ಸಮನ್ವಯ ಅತ್ಯಗತ್ಯ. ಏಕೆಂದರೆ, ಇದು ಜಂಟಿಯಾಗಿ ಮಾಡಬೇಕಾದ ಹೋರಾಟ. ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯದಲ್ಲಿ ಅಭಿವೃದ್ಧಿಯಿಂದಾಗಿ ಉಗ್ರರು ಮುಖ್ಯವಾಹಿನಿಗೆ ಮರಳುತ್ತಿದ್ದಾರೆ. ಗಡಿ ಭದ್ರತೆಯ ಬಗ್ಗೆಯೂ ಗಮನ ಹರಿಸುವುದು ಮುಖ್ಯ.

ಅಧಿಕಾರಿಗಳು ಗಡಿ ಪ್ರದೇಶಗಳಲ್ಲಿ ಒಂದು ದಿನ ಕಳೆಯಬೇಕು. ಅಲ್ಲಿನ ವಾಸ್ತವತೆಯನ್ನು ಅರಿಯಬೇಕೆಂದೂ ಸಲಹೆ ನೀಡಿದ ಪ್ರಧಾನಿ ಮೋದಿ, ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾಗುವ ಸಾಮೂಹಿಕ ಮಾರ್ಗಸೂಚಿ ರಚಿಸುವ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.

ಇದನ್ನೂ ಓದಿ: ನೋಟುಗಳ ಮೇಲೆ ಲಕ್ಷ್ಮಿ, ಗಣೇಶ ಚಿತ್ರ ಮುದ್ರಿಸಲು ಕೋರಿ ಪ್ರಧಾನಿಗೆ ಸಿಎಂ ಕೇಜ್ರಿವಾಲ್‌ ಪತ್ರ

Last Updated :Oct 28, 2022, 5:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.