ETV Bharat / bharat

Mann Ki Baat: ದೇಶದ 'ಯುವ ಶಕ್ತಿ'ಶ್ಲಾಘಿಸಿದ ಪ್ರಧಾನಿ ಮೋದಿ; ಸಂಪ್ರದಾಯ-ಸಂಸ್ಕೃತ ಪ್ರೀತಿಸಲು ಕರೆ

author img

By

Published : Aug 29, 2021, 4:09 PM IST

report on PM'S mann ki baat
ಪ್ರಧಾನಿ ಮೋದಿ

ಇಂದಿನ ಯುವಕರು ಪೂರ್ವ ನಿರ್ಧರಿತ ಮಾರ್ಗದಲ್ಲಿ ನಡೆಯಲು ಬಯಸುವುದಿಲ್ಲ. ಅವರು ಅಜ್ಞಾತ ಜಗತ್ತಿಗೆ ಕಾಲಿಡಲು ಬಯಸುತ್ತಾರೆ. ಅವರ ಗುರಿ ಹೊಸದು, ಅವರ ಹಾದಿ ಹೊಸದು ಮತ್ತು ಅವರ ಆಸೆಯೂ ಹೊಸದು. ಅವರು ಹೊಸತನ್ನು ವಿಭಿನ್ನವಾಗಿ ಮಾಡಲು ಬಯಸುತ್ತಾರೆ ಎಂದು ಭಾರತದ ಯುವ ಶಕ್ತಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ನವದೆಹಲಿ: 80ನೇ ಆವೃತ್ತಿಯ 'ಮನ್ ಕಿ ಬಾತ್'ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಯುವ ಶಕ್ತಿ, ಸಂಪ್ರದಾಯಗಳು, ಸಂಸ್ಕೃತ ಭಾಷೆಯ ಮಹತ್ವ, ಟೋಕಿಯೋ ಒಲಿಂಪಿಕ್ಸ್‌ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಹೇಳಿದ್ದಾರೆ.

ಯುವ ಶಕ್ತಿ ಶ್ಲಾಘಿಸಿದ ಪ್ರಧಾನಿ

ಭಾರತದ ಯುವಕರು ಉತ್ತಮ ಗುಣಮಟ್ಟಕ್ಕೆ ಒತ್ತು ನೀಡುತ್ತಿದ್ದಾರೆ. ಇಂದಿನ ಯುವಕರು ಪೂರ್ವ ನಿರ್ಧರಿತ ಮಾರ್ಗದಲ್ಲಿ ನಡೆಯಲು ಬಯಸುವುದಿಲ್ಲ. ಅವರು ಅಜ್ಞಾತ ಜಗತ್ತಿಗೆ ಕಾಲಿಡಲು ಬಯಸುತ್ತಾರೆ. ಅವರ ಗುರಿ ಹೊಸದು, ಅವರ ಹಾದಿ ಹೊಸದು ಮತ್ತು ಅವರ ಆಸೆ ಹೊಸದು. ನಮ್ಮ ಯುವಕರು ದೃಢನಿರ್ಧಾರ ಮಾಡಿದ ನಂತರ, ತಮ್ಮ ಗುರಿಯನ್ನು ಸಾಧಿಸಲು ಶ್ರಮಿಸುತ್ತಾರೆ. ಅದರ ಮೇಲೆ ಹಗಲು ರಾತ್ರಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಹೊಸತನ್ನು ವಿಭಿನ್ನವಾಗಿ ಮಾಡಲು ಬಯಸುತ್ತಾರೆ ಎಂದು ಭಾರತದ ಯುವ ಶಕ್ತಿಯನ್ನು ಮೋದಿ ಶ್ಲಾಘಿಸಿದರು.

ಕ್ರೀಡೆಯ ವಿಚಾರಕ್ಕೆ ಬಂದರೆ, ಇಂದಿನ ಯುವ ಪೀಳಿಗೆಯಲ್ಲಿ ದೊಡ್ಡ ಬದಲಾವಣೆ ಗೋಚರಿಸುತ್ತದೆ. ಭಾರತದಾದ್ಯಂತ ಕ್ರೀಡೆಗಳಿಗೆ ಹೊಸ ವೇಗ ಸಿಕ್ಕಿದೆ. ಯುವಕರು ಈಗ ಕ್ರೀಡೆಗಳತ್ತ ಆಕರ್ಷಿತರಾಗಿದ್ದಾರೆ ಮತ್ತು ಅವರ ಪೋಷಕರು ಅವರನ್ನು ಬೆಂಬಲಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಬಾರಿಯ ಒಲಿಂಪಿಕ್ಸ್ ಬಹುದೊಡ್ಡ ಪರಿಣಾಮ ಬೀರಿದೆ. ನಾಲ್ಕು ದಶಕಗಳ ನಂತರ ಪುರುಷರ ಹಾಕಿಯಲ್ಲಿ ಭಾರತವು ಒಲಿಂಪಿಕ್ ಪದಕವನ್ನು ಗೆದ್ದಿದೆ. ಹಾಕಿಪಟು ಧ್ಯಾನ್ ಚಂದ್ ಅವರ ಜನ್ಮದಿನವಾದ ಆಗಸ್ಟ್​ 29 ಅನ್ನು ರಾಷ್ಟ್ರೀಯ ಕ್ರೀಡಾ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಅವರು ವಿಶ್ವವನ್ನು ಗೆದ್ದಿದ್ದರು ಎಂದ ಮೋದಿ ಹಾಕಿಪಟು ದಿ.ಧ್ಯಾನ್ ಚಂದ್ ಅವರಿಗೆ ಗೌರವ ಸಲ್ಲಿಸಿದರು.

ಬಾಹ್ಯಾಕಾಶ ಕ್ಷೇತ್ರವನ್ನು ನೋಡಿದರೆ ಅಲ್ಲಿಯೂ ಯುವಕರು ಅವಕಾಶವನ್ನು ಪಡೆದುಕೊಂಡಿದ್ದಾರೆ. ಯುವಕರ ಮನಸ್ಸು ವಿಕಸನಗೊಳ್ಳುತ್ತಿದೆ. ಕಾಲೇಜು, ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಖಾಸಗಿ ವಲಯದಲ್ಲಿ ಕೆಲಸ ಮಾಡುವ ಯುವಕರು ಬಾಹ್ಯಾಕಾಶ ಕ್ಷೇತ್ರದ ಲಾಭ ಪಡೆಯಲು, ಇಲ್ಲಿ ಕೆಲಸ ಮಾಡಲು ಮುಂದೆ ಬಂದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೋದಿ ಹೇಳಿದರು.

'ಸಂಪ್ರದಾಯಗಳನ್ನು ಮುಂದುವರಿಸಿ'

ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ ಪ್ರಧಾನಿ ದೇಶದ ಶ್ರೇಷ್ಠ ಸಂಪ್ರದಾಯಗಳನ್ನು ಮುಂದುವರಿಸುವಂತೆ ಜನರನ್ನು ಕೋರಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಹಬ್ಬವು ಭಗವಾನ್ ಶ್ರೀ ಕೃಷ್ಣನ ಜನ್ಮದಿನವನ್ನು ಆಚರಿಸುವ ಹಬ್ಬವಾಗಿದೆ. ತುಂಟ ಬಾಲಕೃಷ್ಣನಿಂದ ಹಿಡಿದು ಶಸ್ತ್ರಾಸ್ತ್ರಗಳಲ್ಲಿ ಪರಿಣಿತನಾದ ಆತನ ಎಲ್ಲಾ ರೂಪಗಳು ನಮಗೆ ತಿಳಿದಿದೆ. ಈ ತಿಂಗಳ 20ರಂದು ಭಗವಾನ್ ಸೋಮನಾಥ ದೇವಸ್ಥಾನಕ್ಕೆ ಸಂಬಂಧಿಸಿದ ನಿರ್ಮಾಣ ಕಾರ್ಯವನ್ನು ಜನರಿಗೆ ಸಮರ್ಪಿಸಲಾಗಿದೆ ಎಂಬುದು ನಿಮಗೆ ತಿಳಿದಿರಬೇಕು. ಸೋಮನಾಥ ದೇವಸ್ಥಾನದಿಂದ ಸುಮಾರು 3-4 ಕಿಲೋ ಮೀಟರ್ ದೂರದಲ್ಲಿ ಭಾಲ್ಕ ತೀರ್ಥವಿದೆ, ಇದು ಶ್ರೀಕೃಷ್ಣನು ಭೂಮಿಯ ಮೇಲೆ ತನ್ನ ಕೊನೆಯ ಕ್ಷಣಗಳನ್ನು ಕಳೆದ ಸ್ಥಳವಾಗಿದೆ. ಜಾದುರಾಣಿ ದಾಸಿ ಎಂಬ ಅಮೆರಿಕದ ಪ್ರಜೆ ಹರೇ ಕೃಷ್ಣ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಪಂಚದ ಜನರು ಇಂದು ಭಾರತೀಯ ಆಧ್ಯಾತ್ಮಿಕತೆ ಮತ್ತು ತತ್ವಶಾಸ್ತ್ರಕ್ಕೆ ಗಮನ ನೀಡುತ್ತಿರುವಾ ಈ ಶ್ರೇಷ್ಠ ಸಂಪ್ರದಾಯಗಳನ್ನು ಮುಂದುವರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮೋದಿ ತಿಳಿಸಿದರು.

'ಸಂಸ್ಕೃತವನ್ನು ಪ್ರೀತಿಸಿ, ಸಂರಕ್ಷಿಸಿ'

ಸಂಸ್ಕೃತವನ್ನು ಪ್ರೀತಿಸಲು ಹಾಗೂ ಸಂರಕ್ಷಿಸಲು ಜನರಿಗೆ ಕರೆ ನೀಡಿದ ಪ್ರಧಾನಿ ಮೋದಿ, ಸಂಸ್ಕೃತ ಭಾಷೆಯು ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸಂಸ್ಕೃತ ಸಾಹಿತ್ಯವು ಮಾನವೀಯತೆಯ ದೈವಿಕ ತತ್ತ್ವ ಮತ್ತು ಜ್ಞಾನವನ್ನು ಒಳಗೊಂಡಿದ್ದು, ಯಾರ ಗಮನವನ್ನೂ ತನ್ನೆಡೆ ಸೆಳೆಯಬಲ್ಲದು. ವಿದೇಶಗಳಲ್ಲಿ ಸಂಸ್ಕೃತ ಕಲಿಸುವ ಸ್ಫೂರ್ತಿದಾಯಕ ಕೆಲಸದಲ್ಲಿ ತೊಡಗಿರುವ ಅನೇಕರಿದ್ದಾರೆ. ಸಂಸ್ಕೃತವನ್ನು ಉಳಿಸಿ ಭವಿಷ್ಯದ ಪೀಳಿಗೆ ಅದರ ಮಹತ್ವ ತಿಳಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ. ಇಂತಹ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳ ಬಗ್ಗೆ ನಿಮಗೆ ತಿಳಿದಿದ್ದರೆ ಅವರ ಬಗ್ಗೆ #CelebratingSanskrit ಹ್ಯಾಷ್​ಟ್ಯಾಗ್​ನಡಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಿ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.