ETV Bharat / bharat

ಕೇರಳ ಸಿಎಂ ವಿಜಯನ್ 'ಧೋತಿ ಉಟ್ಟ ಮೋದಿ': ವಿರೋಧ ಪಕ್ಷದ ನಾಯಕ ಸತೀಶನ್ ವಾಗ್ದಾಳಿ

author img

By

Published : Mar 6, 2023, 3:55 PM IST

ಕೇರಳ ಸಿಎಂ ವಿಜಯನ್ 'ಧೋತಿ ಉಟ್ಟ ಮೋದಿ': ವಿರೋಧ ಪಕ್ಷದ ನಾಯಕ ಸತೀಶನ್ ವಾಗ್ದಾಳಿ
Congress leader VD Satheesan

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೋಯಿಕ್ಕೋಡ್ (ಕೇರಳ) : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 'ಧೋತಿ ಧರಿಸಿರುವ ಮೋದಿ' ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ವಾಗ್ದಾಳಿ ನಡೆಸಿದ್ದಾರೆ. ಏಷಿಯಾನೆಟ್ ನ್ಯೂಸ್ ಸುದ್ದಿವಾಹಿನಿಯ ಕಚೇರಿಯ ಮೇಲೆ ಕ್ರೈಂ ಬ್ರಾಂಚ್ ಪೊಲೀಸರ ತಂಡ ದಾಳಿ ನಡೆಸಿದ್ದನ್ನು ಖಂಡಿಸಿರುವ ಸತೀಶನ್ ಸಿಎಂ ಪಿಣರಾಯಿ ವಿರುದ್ಧ ಕಿಡಿ ಕಾರಿದ್ದಾರೆ. ಶಾಸಕ ಪಿವಿ ಅನ್ವರ್ ನೀಡಿದ ದೂರಿನ ಆಧಾರದ ಮೇಲೆ ಮಲಯಾಳಂನ ಪ್ರಮುಖ ಸುದ್ದಿವಾಹಿನಿ ಏಷಿಯಾನೆಟ್ ನ್ಯೂಸ್ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಕೇರಳ ಮುಖ್ಯಮಂತ್ರಿ ತಾವು ಧೋತಿ ಉಟ್ಟಿರುವ ಮೋದಿ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಮೋದಿ ಬಿಬಿಸಿ ಕಚೇರಿಯ ಮೇಲೆ ಮಾಡಿದ್ದನ್ನು ಇಲ್ಲಿ ಏಷ್ಯಾನೆಟ್ ನ್ಯೂಸ್ ಕಚೇರಿಯ ಮೇಲೆ ಸಿಎಂ ಮಾಡಿದ್ದಾರೆ. ಇದು ಅಸಹಿಷ್ಣುತೆಯ ಸ್ಪಷ್ಟ ಸಂಕೇತವಾಗಿದೆ. ಇಬ್ಬರೂ (ಸಿಎಂ ಮತ್ತು ಪಿಎಂ) ತಮ್ಮ ಟೀಕಾಕಾರರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸತೀಶನ್ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.

ವಿಶೇಷವೆಂದರೆ, ಏಷ್ಯಾನೆಟ್ ನವೆಂಬರ್ 10 ರಂದು 'ಮಾದಕ ವಸ್ತು ಒಂದು ಕೊಳಕು ವ್ಯವಹಾರ' (Narcotics is a dirty business) ಎಂಬ ಶೀರ್ಷಿಕೆಯ ವರದಿಯನ್ನು ಪ್ರಸಾರ ಮಾಡಿತ್ತು. ಈ ವರದಿಯು ಕಪೋಲಕಲ್ಪಿತ ಮತ್ತು ಆಧಾರರಹಿತ ಎಂದು ಶಾಸಕರು ಆರೋಪಿಸಿ ಡಿಜಿಪಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಏಷಿಯಾನೆಟ್ ನ ನಾಲ್ವರನ್ನು ಆರೋಪಿಗಳನ್ನಾಗಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಕ್ಸೊ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಅಪರಾಧ ವಿಭಾಗದ ಸಹಾಯಕ ಕಮಿಷನರ್ ವಿ. ಸುರೇಶ್ ಮತ್ತು ಏಳು ಮಂದಿ ಪೊಲೀಸರ ತಂಡ ಇಂದು ಕಚೇರಿ ಮೇಲೆ ದಾಳಿ ನಡೆಸಿದೆ. ಎರಡು ದಿನಗಳ ಹಿಂದೆ ಎಸ್‌ಎಫ್‌ಐ ಕಾರ್ಯಕರ್ತರು ಕೊಚ್ಚಿಯಲ್ಲಿರುವ ಏಷ್ಯಾನೆಟ್ ಕಚೇರಿಗೆ ನುಗ್ಗಿದ್ದರು.

ಏತನ್ಮಧ್ಯೆ, ಈ ಬೆಳವಣಿಗೆಗಳ ಬಗ್ಗೆ ಏಷಿಯಾನೆಟ್ ನ್ಯೂಸ್‌ನ ಕಾರ್ಯನಿರ್ವಾಹಕ ಸಂಪಾದಕ ಸಿಂಧು ಸೂರ್ಯಕುಮಾರ್ ಅವರು ಭಾನುವಾರ ಹೇಳಿಕೆ ನೀಡಿದ್ದು, ನಾವು ನಿರ್ಭಯ ಮತ್ತು ನ್ಯಾಯಸಮ್ಮತ ಪತ್ರಿಕೋದ್ಯಮ ಮಾಡುತ್ತೇವೆ ಮತ್ತು ತನಿಖಾ ಪ್ರಕ್ರಿಯೆಗೆ ಸಹಕರಿಸುವುದಾಗಿ ಹೇಳಿದರು. ಏಷ್ಯಾನೆಟ್ ನ್ಯೂಸ್ ಕಾನೂನು ಪ್ರಕಾರ ನಡೆಯುವ ಯಾವುದೇ ತನಿಖೆಗೆ ಸಹಕರಿಸುತ್ತದೆ. ನಮ್ಮ ತನಿಖಾ ವರದಿಯು ಡ್ರಗ್ಸ್ ಮಾಫಿಯಾ ವಿರುದ್ಧದ ಅಭಿಯಾನದ ಭಾಗವಾಗಿದೆ. ಸರ್ಕಾರದ ಪ್ರತಿಷ್ಠೆಗೆ ಮಾನಹಾನಿ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ ಎಂದು ಸಿಂಧು ಹೇಳಿದರು.

ಡ್ರಗ್ಸ್ ಮಾಫಿಯಾ ವಿರುದ್ಧದ ಹೋರಾಟ ಸಮಾಜದ ಹಿತಾಸಕ್ತಿಯಿಂದ ಕೂಡಿದೆ. ಸರ್ಕಾರ ತನ್ನ ಅಧಿಕಾರ ಬಳಸಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ. ಆಡಳಿತ ಪಕ್ಷದ ಶಾಸಕರೊಬ್ಬರ ದೂರಿನ ಮೇಲೆ ಅತ್ಯಂತ ತ್ವರಿತವಾಗಿ ಕ್ರಮಕೈಗೊಂಡಿರುವುದನ್ನು ಇಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಬೇಕಾಗಿದೆ. ತನಿಖೆ ಆರಂಭಿಸುವ ಮುನ್ನವೇ ಕಚೇರಿಗೆ ನುಗ್ಗಿ ಗೂಂಡಾಗಿರಿ ಮಾಡುವುದು ಪ್ರಜಾಸತ್ತಾತ್ಮಕ ಸಂಸ್ಕೃತಿಗೆ ಸೂಕ್ತವಲ್ಲ. ಏಷ್ಯಾನೆಟ್ ನ್ಯೂಸ್ ನಿರ್ಭೀತಿಯಿಂದ ಮುಕ್ತ ಮತ್ತು ನ್ಯಾಯಸಮ್ಮತ ಪತ್ರಿಕೋದ್ಯಮ ಮಾಡಲಿದೆ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : ಏಷ್ಯಾನೆಟ್ ನ್ಯೂಸ್ ಕಚೇರಿಯಲ್ಲಿ ಕೇರಳ ಪೊಲೀಸರಿಂದ ಶೋಧ ಕಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.