ETV Bharat / bharat

ಗ್ರಾಮೀಣ ಸೇವೆಗೆ ಹಿಂದೇಟು: ಹೊಸ ವೈದ್ಯರ ನೋಂದಣಿ ರದ್ಧತಿಗೆ ಜಾರ್ಖಂಡ್ ಸರ್ಕಾರ ನಿರ್ಧಾರ

author img

By

Published : Aug 11, 2023, 9:07 PM IST

jharkhand-government dicide to action-against-29-newly-appointed-doctors
ಗ್ರಾಮೀಣ ಸೇವೆಗೆ ತೆರಳದ ಹೊಸ ವೈದ್ಯರ ನೋಂದಣಿ ರದ್ಧತಿಗೆ ಜಾರ್ಖಂಡ್ ಸರ್ಕಾರ ನಿರ್ಧಾರ

Jharkhand Government: ಜಾರ್ಖಂಡ್​ನಲ್ಲಿ ಹೊಸದಾಗಿ ನೇಮಕಗೊಂಡ 29 ವೈದ್ಯರು ಗ್ರಾಮೀಣ ಆಸ್ಪತ್ರೆಗಳ ಸೇವೆಗೆ ಸೇರಿಲ್ಲ. ಆದ್ದರಿಂದ ಇವರ ವೈದ್ಯಕೀಯ ನೋಂದಣಿಯನ್ನೇ ರದ್ದು ಮಾಡಲು ಸರ್ಕಾರ ಮುಂದಾಗಿದೆ.

ರಾಂಚಿ (ಜಾರ್ಖಂಡ್): ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿರುವ ಹೊಸದಾಗಿ ನೇಮಕಗೊಂಡ 29 ಸರ್ಕಾರಿ ವೈದ್ಯರ ವಿರುದ್ಧ ಜಾರ್ಖಂಡ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಇದೇ ಆಗಸ್ಟ್​ 15ರೊಳಗಾಗಿ ಗ್ರಾಮೀಣ ಭಾಗದಲ್ಲಿ ಸೇವೆಗೆ ಹಾಜರಾಗದೇ ಇದ್ದಲ್ಲಿ ಅಂತಹವರ ವೈದ್ಯಕೀಯ ನೋಂದಣಿಯನ್ನೇ ತಡೆ ಹಿಡಿಯುವಂತೆ ಭಾರತೀಯ ವೈದ್ಯಕೀಯ ಮಂಡಳಿಗೆ (ಎಂಸಿಐ) ಶಿಫಾರಸು ಮಾಡಲು ತೀರ್ಮಾನಿಸಿದೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಆರೋಗ್ಯ ಇಲಾಖೆಯು ಏಪ್ರಿಲ್ 3ರಂದು 171 ವೈದ್ಯರ ನೇಮಕಾತಿ ಪತ್ರವನ್ನು ಹಸ್ತಾಂತರಿಸಿತ್ತು. ನೇಮಕಾತಿ ಪತ್ರದೊಂದಿಗೆ ಹೊಸದಾಗಿ ನೇಮಕಗೊಂಡ ಎಲ್ಲ ವೈದ್ಯರು ವಿವಿಧ ಆಸ್ಪತ್ರೆಗಳಲ್ಲಿ ತಮ್ಮ ಕೊಡುಗೆ ನೀಡುವಂತೆ ಸೂಚಿಸಲಾಗಿತ್ತು. ಈ 171 ವೈದ್ಯರ ಪೈಕಿ 29 ವೈದ್ಯರು ನೇಮಕಾತಿ ಪತ್ರ ಪಡೆದು ನಾಲ್ಕು ತಿಂಗಳು ಕಳೆದರೂ ಆಯಾ ಆಸ್ಪತ್ರೆಗಳ ಸೇವೆಗೆ ಸೇರಿಲ್ಲ. ಗ್ರಾಮೀಣ ಭಾಗ ಎಂಬ ಕಾರಣಕ್ಕೆ ಅವರು ಸೇವೆ ಸೇರಲು ಹಿಂದೇಟು ಹಾಕುತ್ತಿದ್ದಾರೆ.

ಜಾರ್ಖಂಡ್ ವೈದ್ಯಕೀಯ ಪೂರೈಸಿದವರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೂ, ಹೊಸ ವೈದ್ಯರು ಗ್ರಾಮೀಣ ಆಸ್ಪತ್ರೆಗಳಿಗೆ ತೆರಳಲು ಮೀನಮೇಷ ಎಣಿಸುತ್ತಿದ್ದಾರೆ. ಆದ್ದರಿಂದ ಆರೋಗ್ಯ ಇಲಾಖೆಯು ಈಗಾಗಲೇ ಅಂತಹ 29 ಜನರ ಪಟ್ಟಿಯನ್ನು ಸಿದ್ಧಪಡಿಸಿ ಕಠಿಣದ ನಿರ್ಧಾರಕ್ಕೆ ಬಂದಿದೆ. ಇದೇ ವೇಳೆ, ಗ್ರಾಮೀಣ ಆಸ್ಪತ್ರೆಗಳಿಗೆ ತೆರಳುವಂತೆ ಆ ವೈದ್ಯರಿಗೆ ಆಗಸ್ಟ್ 15ರವರೆಗೆ ಕೊನೆಯ ಅವಕಾಶ ನೀಡುವ ತೀರ್ಮಾನ ಮಾಡಿದೆ. ಅದರ ನಂತರವೂ ಯಾವುದೇ ಸೂಕ್ತ ಕಾರಣವಿಲ್ಲದೆ ಸೇವೆಗೆ ಹಾಜರಾಗದ ವೈದ್ಯರನ್ನು ಆರೋಗ್ಯ ಇಲಾಖೆಯಿಂದ ಅಮಾನತುಗೊಳಿಸುವುದ ಜೊತೆಗೆ ವೈದ್ಯಕೀಯ ನೋಂದಣಿ ರದ್ದು ಮಾಡುವಂತೆ ಎಂಸಿಐಗೆ ಶಿಫಾರಸು ಮಾಡಲು ಮುಂದಾಗಿದೆ.

ಆರೋಗ್ಯ ಸಚಿವರು ಹೇಳಿದ್ದೇನು?: ''ವೈದ್ಯರ ವಿಷಯದಲ್ಲಿ ಸರ್ಕಾರ ಖಂಡಿತವಾಗಿಯೂ ಉದಾರವಾಗಿದೆ. ಆದರೆ ನಾವು ಆರೋಗ್ಯ ವ್ಯವಸ್ಥೆಯನ್ನು ಸುಗಮವಾಗಿ ನಡೆಸಬೇಕಿದೆ. ಆದ್ದರಿಂದ ಜವಾಬ್ದಾರಿ ನಿರ್ವಹಿಸದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಜೊತೆಗೆ ಗ್ರಾಮೀಣ ಸೇವೆಯಿಂದ ವರ್ಷಗಟ್ಟಲೆ ದೂರು ಉಳಿದಿರುವ ವೈದ್ಯರ ಪಟ್ಟಿಯನ್ನೂ ಇಲಾಖೆ ಸಿದ್ಧಪಡಿಸುತ್ತಿದೆ'' ಎಂದು ಆರೋಗ್ಯ ಸಚಿವ ಬನ್ನಾ ಗುಪ್ತಾ ತಿಳಿಸಿದ್ದಾರೆ.

ಸರ್ಕಾರದ ಕ್ರಮಕ್ಕೆ ಐಎಂಎ ವಿರೋಧ: ಗ್ರಾಮೀಣ ಆಸ್ಪತ್ರೆಗಳಿಗೆ ಕೊಡುಗೆ ನೀಡದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸರ್ಕಾರದ ನಿರ್ಧಾರವನ್ನು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜಾರ್ಖಂಡ್ ಘಟಕ ಖಂಡಿಸಿದೆ. ''ರಾಜ್ಯದ ಯುವ ವೈದ್ಯರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬದಲು ಅವರಿಗೆ ಸರ್ಕಾರಿ ಉದ್ಯೋಗದ ಬಗ್ಗೆ ಏಕೆ ಆಸಕ್ತಿ ಇಲ್ಲ ಎಂದು ಸರ್ಕಾರ ಮತ್ತು ಆರೋಗ್ಯ ಇಲಾಖೆ ಯೋಚಿಸಬೇಕು. ಇಲ್ಲಿನ ಪ್ರತಿಭಾನ್ವಿತ ಮತ್ತು ಭರವಸೆಯ ಯುವ ವೈದ್ಯರು ಈಗಾಗಲೇ ಬಿಹಾರ ಮತ್ತು ಇತರ ರಾಜ್ಯಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕ್ರಮದ ಭೀತಿ ಎದುರಾದರೆ ಮುಂದಿನ ದಿನಗಳಲ್ಲಿ ಇಲ್ಲಿನ ವೈದ್ಯರು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದೇ ಕಠಿಣವಾಗಬಹದು'' ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರದೀಪ್ ಸಿಂಗ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: IAF Recruitment: ವಾಯುಸೇನೆ ಸೇರುವಿರಾ? 'ಅಗ್ನಿವೀರ್‌ವಾಯು' ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.