ETV Bharat / bharat

ಮಧ್ಯಪ್ರದೇಶ ಸರ್ಕಾರದ ಮೇಲೆ 50% ಕಮಿಷನ್​ ಆರೋಪ: ಪ್ರಿಯಾಂಕಾ ಗಾಂಧಿ, ಕಮಲ್​ನಾಥ್​ ವಿರುದ್ಧ ಎಫ್​ಐಆರ್​

author img

By

Published : Aug 13, 2023, 9:14 AM IST

ಮಧ್ಯಪ್ರದೇಶ ಸರ್ಕಾರದ ಮೇಲೆ 50% ಕಮಿಷನ್​ ಆರೋಪ
ಮಧ್ಯಪ್ರದೇಶ ಸರ್ಕಾರದ ಮೇಲೆ 50% ಕಮಿಷನ್​ ಆರೋಪ

ಮಧ್ಯಪ್ರದೇಶ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕರು ಕಮಿಷನ್​ ಆರೋಪ ಮಾಡುತ್ತಿದ್ದು, ಇದಕ್ಕೆ ಪುರಾವೆ ನೀಡುವಂತೆ ಸೂಚಿಸಲಾಗಿದೆ. ಪ್ರಿಯಾಂಕಾ ಗಾಂಧಿ, ಮಾಜಿ ಸಿಎಂ ಕಮಲ್​ನಾಥ್​ ಸೇರಿದಂತೆ ಕೆಲ ನಾಯಕರ ಮೇಲೆ ಕೇಸ್​ ಹಾಕಲಾಗಿದೆ.

ಇಂದೋರ್ (ಮಧ್ಯಪ್ರದೇಶ) : ಕರ್ನಾಟಕದ ಬಿಜೆಪಿ ಸರ್ಕಾರ 40% ಕಮಿಷನ್​ ಪಡೆದರೆ, ಮಧ್ಯಪ್ರದೇಶ ಬಿಜೆಪಿ ಸರ್ಕಾರ 50% ಕಮಿಷನ್​ ಪಡೆದು ಕೆಲಸ ಮಾಡಿಕೊಡುತ್ತದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್​ ಹಾಕಿದ್ದ ಕಾಂಗ್ರೆಸ್​ ನಾಯಕರಾದ ಪ್ರಿಯಾಂಕಾ ಗಾಂಧಿ, ಮಾಜಿ ಸಿಎಂ ಕಮಲ್​ನಾಥ್​, ಅರುಣ್​ ಯಾದವ್​​ ಸೇರಿದಂತೆ ಇತರರ ವಿರುದ್ಧ ಅಲ್ಲಿನ ಸರ್ಕಾರ ಕೇಸ್​ ದಾಖಲಿಸಿದೆ. ಈ ಬಗ್ಗೆ ಸೂಕ್ತ ದಾಖಲೆ ನೀಡುವಂತೆಯೂ ಸೂಚಿಸಿದೆ.

ಬಿಜೆಪಿಯ ಕಾನೂನು ಘಟಕದ ಇಂದೋರ್ ಘಟಕದ ಸಂಚಾಲಕ ನಿಮೇಶ್ ಪಾಠಕ್ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಮತ್ತು 469 (ಪ್ರತಿಷ್ಠೆಗೆ ಹಾನಿ) ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಸುಳ್ಳು ಆಪಾದನೆ ಮಾಡಿ ಜನರನ್ನು ತಪ್ಪುದಾರಿಗೆಳೆಯುವ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ಸಂಚು ರೂಪಿಸಿದ್ದಾರೆ ಎಂದು ಪಾಠಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿ ನಾಯಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. X (ಹಿಂದಿನ ಟ್ವಿಟರ್​) ನಲ್ಲಿ ಹಂಚಿಕೊಂಡ ಮಾಹಿತಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನಗರದ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಮಲ್ ನಾಥ್ ಮತ್ತು ಅರುಣ್ ಯಾದವ್ ವಿರುದ್ಧ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಾಮಸನೇಹಿ ಮಿಶ್ರಾ ಹೇಳಿದ್ದಾರೆ.

ಪೋಸ್ಟ್​ನಲ್ಲಿ ಏನಿತ್ತು?: ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು Xನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್​ ಆರೋಪ ಮಾಡಿ, ಮಧ್ಯಪ್ರದೇಶದ ಗುತ್ತಿಗೆದಾರರ ಒಕ್ಕೂಟವು ಸರ್ಕಾರದ ವಿರುದ್ಧ 50% ಕಮಿಷನ್​ ಪಾವತಿ ಬಗ್ಗೆ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದೆ. ಕರ್ನಾಟಕದ ಭ್ರಷ್ಟ ಬಿಜೆಪಿ ಸರ್ಕಾರ ಶೇ.40ರಷ್ಟು ಕಮಿಷನ್ ಸಂಗ್ರಹಿಸುತ್ತಿತ್ತು. ಮಧ್ಯಪ್ರದೇಶದಲ್ಲಿ ಬಿಜೆಪಿ ಭ್ರಷ್ಟಾಚಾರದಲ್ಲಿ ಆ ದಾಖಲೆಯನ್ನು ಮುರಿದು ಮುನ್ನಡೆದಿದೆ. ಕರ್ನಾಟಕದ ಜನರು 40% ಕಮಿಷನ್ ಸರ್ಕಾರವನ್ನು ಕಿತ್ತೊಗೆದಿದ್ದಾರೆ. ಈಗ ಮಧ್ಯಪ್ರದೇಶದ ಜನರು 50% ಕಮಿಷನ್ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕುತ್ತಾರೆ ಎಂದು ಪೋಸ್ಟ್‌ ಹಂಚಿಕೊಂಡಿರುವ ಆರೋಪವಿದೆ.

ಇತ್ತ ಮಧ್ಯಪ್ರದೇಶ ಕಾಂಗ್ರೆಸ್​ ನಾಯಕ ಕಮಲ್​ನಾಥ್ ಮತ್ತು ಅರುಣ್​ ಯಾದವ್ ಕೂಡ ಇದೇ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಪ್ರಿಯಾಂಕಾ ಗಾಂಧಿಯವರ ಆರೋಪವನ್ನು ಸುಳ್ಳು ಎಂದು ಜರಿದಿರುವ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ಆರೋಪದ ಬಗ್ಗೆ ಪುರಾವೆ ನೀಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದರು. ವಿರೋಧ ಪಕ್ಷಗಳು ಸರ್ಕಾರ ವಿರುದ್ಧ ಸುಳ್ಳುಗಳನ್ನು ಹಬ್ಬಿಸುತ್ತಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಟೀಕಿಸಿದರು.

ಇದನ್ನೂ ಓದಿ: Madras Eye: ಕಲಬುರಗಿಯಲ್ಲಿ‌ ಮದ್ರಾಸ್ ಐ ಸೋಂಕಿನ ಭೀತಿ.. ಭಯ ಬಿಟ್ಟು, ಮುನ್ನೆಚ್ಚರಿಕೆ ವಹಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.