ETV Bharat / state

Madras Eye: ಕಲಬುರಗಿಯಲ್ಲಿ‌ ಮದ್ರಾಸ್ ಐ ಸೋಂಕಿನ ಭೀತಿ.. ಭಯ ಬಿಟ್ಟು, ಮುನ್ನೆಚ್ಚರಿಕೆ ವಹಿಸಿ

author img

By

Published : Aug 13, 2023, 6:48 AM IST

Madras eye infection: ಮದ್ರಾಸ್ ಐ ಸೋಂಕಿತ ಪ್ರಕರಣಗಳು ಅಧಿಕವಾಗುತ್ತಿದ್ದು, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕಾ ಕ್ರಮ ವಹಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

madras eye
ಮದ್ರಾಸ್ ಐ

ಕಲಬುರಗಿ : ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಕಂಜಕ್ಟವೈಟೀಸ್ (Madras Eye) ವೈರಸ್ ಉಪಟಳ‌ ಇದೀಗ ಜಿಲ್ಲೆಯಲ್ಲಿ ಉಲ್ಬಣಗೊಳ್ಳುತ್ತಿದೆ.‌ ಪುಟ್ಟ ಮಕ್ಕಳಿಂದ ವಯಸ್ಕರವರೆಗೂ ಮದ್ರಾಸ್ ಐ ಸೋಂಕು ಕಂಡುಬರುತ್ತಿದೆ.

ಇಂದೊಂದು ಭಯಾನಕ ಸೋಂಕು ಅಲ್ಲದಿದ್ರೂ ವೈರಸ್​ ತಗುಲಿದವರು ಮನೆಯಿಂದ ಹೊರಗೆ ಓಡಾಡುವುದು ಕಷ್ಟವಾಗ್ತಿದೆ. ಇದೊಂದು ವೇಗವಾಗಿ ಹರಡಬಲ್ಲ ಸೋಂಕು, ಸೋಂಕುವುಳ್ಳ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕಕ್ಕೆ ಬರುವವರಿಗೂ ವೈರಸ್​ ಅಂಟಿಕೊಳ್ಳುತ್ತದೆ. ಕಣ್ಣು‌‌ ಕೆಂಪಾಗಿ ಉರಿತ ಉಂಟಾಗುತ್ತದೆ. ಹೀಗಾಗಿ, ಮದ್ರಾಸ್ ಐ‌ ಅಂಟಿದವರು ಕಪ್ಪು‌ ಕನ್ನಡಕದ ಮೊರೆ ಹೋಗ್ತಿದ್ದಾರೆ. ಇದು ವೈರಸ್​ನಿಂದ ಹರಡುವ ಕಾಯಿಲೆಯಾಗಿದ್ದು, ಸಾರ್ವಜನಿಕರು ಅನಗತ್ಯ ಭಯ ಪಡುವ ಅವಶ್ಯಕತೆಯಿಲ್ಲ, ಮುನ್ನೆಚ್ಚರಿಕಾ ಕ್ರಮ ವಹಿಸಿದರೆ ಸಾಕು ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

ಕಂಜಕ್ಟವೈಟೀಸ್ (Madras Eye) ಕಾಯಿಲೆ ಕಣ್ಣಿನ ಬಿಳಿಭಾಗವನ್ನು ಆವರಿಸುವ ಕಣ್ಣಿನ ಮುಂಭಾಗದಲ್ಲಿ ಇರುವ ಪದರದ ಸೋಂಕಿಗೆ (ಉರಿತ) ಕಂಜಕ್ಟವೈಟೀಸ್ ಎಂದು ಕರೆಯುತ್ತಾರೆ. ಸೋಂಕಿತ ವ್ಯಕ್ತಿಯ ಕಣ್ಣಿನಿಂದ ಬರುವ ದ್ರವದ ಸಂಪರ್ಕದಿಂದ ಆರೋಗ್ಯವಂತ ವ್ಯಕ್ತಿಗೂ ಸಹ ಈ ಕಾಯಿಲೆ ಹರಡಲಿದೆ.

ಇದನ್ನೂ ಓದಿ : Madras eye: ಜನರಲ್ಲಿ ಆತಂಕ ಬೇಡ.. ಸೋಂಕು ನಿವಾರಣೆಗೆ ನೇತ್ರ ತಜ್ಞರ ಸಲಹೆ ಹೀಗಿದೆ

ಸೋಂಕಿತ ವ್ಯಕ್ತಿಗಳು ಕಪ್ಪು ಕನ್ನಡಕ ಬಳಸುವುದರಿಂದ ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಈ ಕಾಯಿಲೆ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಹಾಗೂ ಎಲ್ಲಾ ವಯಸ್ಸಿನವರಲ್ಲಿ ಕಂಡು ಬರುತ್ತದೆ. ವಿಶೇಷವಾಗಿ ಶಾಲಾ ಕಾಲೇಜು, ವಸತಿ ನಿಲಯಗಳಲ್ಲಿ ಮತ್ತು ಅತಿಥಿ ಗೃಹಗಳಲ್ಲಿ (ಪಿ.ಜಿ) ಈ ಸೋಂಕು ಬೇಗ ಹರಡುವ ಸಾಧ್ಯತೆ ಹೆಚ್ಚಿದ್ದು, 3 ರಿಂದ 5 ದಿನಗಳಲ್ಲಿ ಗುಣ ಮುಖವಾಗುತ್ತದೆ‌ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಶೇಖರ್​ ಮಾಲಿ ತಿಳಿಸಿದ್ದಾರೆ.

ಕಾಯಿಲೆಯ ಲಕ್ಷಣಗಳು : ಕಣ್ಣು ಕೆಂಪಾಗುವಿಕೆ, ನೀರು ಸೋರುವಿಕೆ, ಅತಿಯಾದ ಕಣ್ಣೀರು, ಕಣ್ಣಿನಲ್ಲಿ ತುರಿಕೆ, ಸತತ ಕಣ್ಣು ನೋವು ಹಾಗೂ ಚುಚ್ಚುವಿಕೆ, ಬೆಳಕನ್ನು ನೋಡಲು ಸಾಧ್ಯವಾಗದಿರುವುದು, ದೃಷ್ಟಿ ಮುಸಕಾಗುವುದು/ ಮಂಜಾಗುವುದು, ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತ ದ್ರವದಿಂದ ಅಂಟಿರುವುದು, ರೆಪ್ಪೆ ಊದಿಕೊಳ್ಳುವ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ನಿಮ್ಮ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಚಿಕಿತ್ಸೆ/ ಸಲಹೆ ಪಡೆಯಬೇಕು.

ಸೋಂಕಿಗೆ ಚಿಕಿತ್ಸೆ ಏನು? : ಶುಚಿಯಾದ ಒದ್ದೆ ಮಾಡಿದ ಬಟ್ಟೆ ಅಥವಾ ಹತ್ತಿಯ ಉಂಡೆಗಳಿಂದ ಉಗುರು ಬೆಚ್ಚಗಿನ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಬೇಕು. ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ಬಳಸಬೇಕು. ಶಾಲಾ ವಿದ್ಯಾರ್ಥಿ/ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಂಕು ಕಂಡುಬಂದಲ್ಲಿ ಅವರನ್ನು ಶಾಲೆಯಿಂದ ಪ್ರತ್ಯೇಕಿಸಿ ಚಿಕಿತ್ಸೆ ನೀಡಬೇಕು. ಸೋಂಕಿತ ವ್ಯಕ್ತಿಯು ಬಳಸಿದ ಕರವಸ್ತ್ರ ಹಾಗೂ ಇತರೆ ವಸ್ತುಗಳನ್ನು ಬೇರೆಯವರು ಬಳಸಬಾರದು. ಪದೇ ಪದೇ ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ಸೋಂಕಿತ ವ್ಯಕ್ತಿಗಳು ಕಪ್ಪು ಕನ್ನಡಕ ಬಳಸುವುದು ಉತ್ತಮ. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ಕೊಡಿ, ಆರೋಗ್ಯವಂತ ವ್ಯಕ್ತಿಯು ಸೋಂಕುವುಳ್ಳ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕದಿಂದ ದೂರವಿರಬೇಕು. ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು. ಸೋಂಕಿತ ವ್ಯಕ್ತಿಗಳಿಗೆ ಶೀತ, ಕೆಮ್ಮು, ಜ್ವರ ಇದ್ದಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ತೀವ್ರತರದ ಸೋಂಕು ಉಂಟಾದಲ್ಲಿ ತಕ್ಷಣವೇ ನೇತ್ರ ತಜ್ಞರಿಂದ ಚಿಕಿತ್ಸೆ ಪಡೆಯಬೇಕು.

ಇದನ್ನೂ ಓದಿ : ಹುಬ್ಬಳ್ಳಿಯಲ್ಲೂ ಜನರನ್ನು ಕಂಗೆಡಿಸಿದ 'ಮದ್ರಾಸ್‌ ಐ': ಮುನ್ನಚ್ಚರಿಕೆ ಅವಶ್ಯಕ

ಏನು ಮಾಡಬೇಕು? - ಏನು ಮಾಡಬಾರದು? : ಸ್ವಚ್ಛವಾದ ನೀರಿನಿಂದ ಕಣ್ಣುಗಳನ್ನು ಶುಚಿಗೊಳಿಸಬೇಕು. ಸೋಂಕು ಕಂಡುಬಂದ ತಕ್ಷಣ ವೈದ್ಯರಿಂದ ಚಿಕಿತ್ಸೆ/ ಸಲಹೆ ಪಡೆಯಬೇಕು. ಸೋಂಕಿತ ವ್ಯಕ್ತಿಗಳಿಗೆ ಪೌಷ್ಟಿಕ ಅಹಾರ ನೀಡಬೇಕು. ಸೋಂಕಿತ ವ್ಯಕ್ತಿಗಳು ಬಳಸಿದ ಕೈವಸ್ತ್ರ/ಟವೆಲ್ ಇನ್ನಿತರೆ ವಸ್ತುಗಳನ್ನು ಸಂಸ್ಕರಿಸಿ ಬಳಸಬೇಕು. ಕೈಗಳಿಂದ ಪದೇ ಪದೇ ಕಣ್ಣುಗಳಿಗೆ ಮುಟ್ಟಬಾರದು. ಸ್ವಯಂ ಚಿಕಿತ್ಸೆ ವಿಧಾನಗಳನ್ನು ಮಾಡಬಾರದು. ಸೋಂಕಿತ ವ್ಯಕ್ತಿಯ ಸನಿಹದಿಂದ ದೂರವಿರಬೇಕು. ಸೋಂಕಿತ ವ್ಯಕ್ತಿಗಳು ಬಳಸಿದ ವಸ್ತುಗಳನ್ನು ಮುಟ್ಟಬಾರದು ಎಂದು ಡಿ.ಹೆಚ್.ಒ ಸಲಹೆ ನೀಡಿದ್ದಾರೆ.

ಇದನ್ನೂ ಓದಿ : Madras eye: ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.