ETV Bharat / bharat

ಭಾರತ - ನೇಪಾಳ ನಡುವಿನ ಸಾಮರಸ್ಯದ ಪ್ರತೀಕವಾದ ರೈಲು ಸಂಚಾರಕ್ಕೆ ಗ್ರೀನ್​ ಸಿಗ್ನಲ್​; ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಉಭಯ ದೇಶಗಳು

author img

By

Published : Apr 2, 2022, 7:04 PM IST

India Nepal Maitree Train start in madhubani
ರೈಲು ಸಂಚಾರಕ್ಕೆ ಗ್ರೀನ್​ ಸಿಗ್ನಲ್

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಶೇರ್ ಬಹದೂರ್ ದೇವುಬಾ ಅವರು ಜಂಟಿಯಾಗಿ ಇಂದು ಭಾರತ -ನೇಪಾಳ ನಡುವಿನ ರೈಲು ಸಂಚಾರ ಮಾರ್ಗ ಸೇರಿದಂತೆ ಹಲವು ಯೋಜನೆಗಳಿಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಬಹುದಿನಗಳ ಬೇಡಿಕೆಯಾದ ಬಿಹಾರದ ಮಧುಬನಿ ಜಿಲ್ಲೆಯ ಜಯನಗರದಿಂದ ನೇಪಾಳದ ಜನಕ್‌ಪುರಧಾಮ್ ಮೂಲಕ ಕುರ್ತಾಗೆ ತಲುಪುವ ರೈಲು ಸೇವೆ ಒಂದಾಗಿದೆ.

ಮಧುಬನಿ (ಬಿಹಾರ): ಭಾರತ ಮತ್ತು ನೇಪಾಳ ನಡುವಿನ ಸಾಮರಸ್ಯದ ಪ್ರತೀಕವಾಗಿ ಇಂದಿನಿಂದ (ಶನಿವಾರ ಏಪ್ರಿಲ್​ 02) ರೈಲು ಸಂಚಾರ ಪುನಾರಂಭಗೊಂಡಿತು. ಭಾರತ ಮತ್ತು ನೇಪಾಳದ ನಡುವೆ ಬಿಹಾರದ ಮಧುಬನಿಯಲ್ಲಿ ಪ್ರಯಾಣಿಕರ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ವರ್ಚುಯಲ್ ಮಾಧ್ಯಮದ ಮೂಲಕ ಉದ್ಘಾಟಿಸಿದರು. ಮಧುಬನಿಯ ಜಯನಗರದಿಂದ ನೇಪಾಳದವರೆಗೆ ಈ ರೈಲು ಇಂದು ಪ್ರಯಾಣ ಬೆಳೆಸಿದ್ದು, ಅಧಿಕಾರಿಗಳು ಮತ್ತು ನೌಕರರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

India Nepal Maitree Train start in madhubani
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಉಭಯ ದೇಶಗಳ ನಿವಾಸಿಗರು

ಇದನ್ನೂ ಓದಿ: ಇಮ್ರಾನ್ ಖಾನ್​​​​​ ಮಾತಿನಿಂದಾದ ಡ್ಯಾಮೇಜ್​ ಕಂಟ್ರೋಲ್​​ಗೆ ಪಾಕ್​ ಸೇನಾ ಮುಖ್ಯಸ್ಥರ ಹರಸಾಹಸ..

ಎಲ್ಲಿಂದ ಎಲ್ಲಿಗೆ?: ಬಿಹಾರದ ಮಧುಬನಿ ಜಿಲ್ಲೆಯ ಜಯನಗರದಿಂದ ನೇಪಾಳದ ಜನಕ್‌ಪುರಧಾಮ್ ಮೂಲಕ ಕುರ್ತಾಗೆ ಈ ರೈಲು ಸೇವೆ ಆರಂಭಗೊಂಡಿತು. ಇಂದಿನ ಮೊದಲ ರೈಲಿನಲ್ಲಿ ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳು ಅದರಲ್ಲಿ ಕುರ್ತಾದತ್ತ ಪ್ರಯಾಣ ಬೆಳೆಸಿದರು. ನಾಳೆಯಿಂದ (ಏಪ್ರಿಲ್​ 03) ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಎರಡೂ ದೇಶಗಳ ಪ್ರಯಾಣಿಕರು ಈ ರೈಲು ಸೇವೆಯಿಂದ ಸಾಕಷ್ಟು ಪ್ರಯೋಜನ ಪಡೆಯಲಿದ್ದಾರೆ.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಉಭಯ ದೇಶಗಳು

ಭವಿಷ್ಯದಲ್ಲಿ ಇದನ್ನು ಇನ್ನು ವಿಸ್ತರಿಸಲಾಗುತ್ತದೆಯಂತೆ. ಗಡಿ ವಿಚಾರ ಹಾಗೂ ಕೆಲವು ಕಾರಣಾಂತರಳಿಂದ 2014 ರಿಂದ ಈ ರೈಲು ಸೇವೆ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಇದೀಗ ಈ ಸೇವೆ ಮತ್ತೆ ಆರಂಭಗೊಂಡಿದ್ದು ಎರಡೂ ದೇಶಗಳ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಸಾಮರಸ್ಯದ ಪ್ರತೀಕ: ರೈಲು ಆರಂಭದ ಬಗ್ಗೆ ಮಾತನಾಡಿರುವ ಡಿಆರ್‌ಎಂ ಅಲೋಕ್ ಅಗರ್ವಾಲ್, ಈ ರೈಲು ಸೇವೆಯನ್ನು ಮರುಸ್ಥಾಪಿಸಿರುವುದರಿಂದ ಉಭಯ ದೇಶಗಳ ಜನರು ತುಂಬಾ ಸಂತೋಷಪಟ್ಟಿದ್ದಾರೆ. ಈ ರೈಲು ಸೇವೆಯನ್ನು ಸ್ಥಗಿತಗೊಳಿಸಿದಾಗ ಜನರು ರಸ್ತೆಯ ಮೂಲಕ ಮಾತ್ರ ಪ್ರಯಾಣಿಸುತ್ತಿದ್ದರು. ಆದರೆ, ಇದೀಗ ಆ ಸಮಸ್ಯೆ ದೂರವಾಗಿದೆ. ರೈಲು ಪುನಾರಂಭದಿಂದ ಜನರಿಗೆ ಹೆಚ್ಚಿನ ನೆರವು ದೊರೆಯಲಿದೆ.

ಭಾರತೀಯ ಮತ್ತು ನೇಪಾಳದ ನಾಗರಿಕರು ಮಾತ್ರ ಈ ರೈಲು ಸೇವೆಯ ಸೌಲಭ್ಯವನ್ನು ಪಡೆಯಲಿದ್ದಾರೆ. ಬೇರೆ ದೇಶಗಳ ನಾಗರಿಕರು ಈ ರೈಲಿನಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ರೈಲ್ವೆ ಮಂಡಳಿಯು ಈಗಾಗಲೇ ಎಸ್‌ಒಪಿ (ಕಾರ್ಯತಂತ್ರ ಮಾನದಂಡ) ನೀಡಿದೆ ಎಂದು ಕೆಲವು ಮಾಹಿತಿಯನ್ನು ಅವರು ಹಂಚಿಕೊಂಡರು.

ಹಲವಾರು ಒಪ್ಪಂದಗಳಿಗೆ ಸಹಿ: ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಕೆಲವು ಒಪ್ಪಂದಗಳಿಗೆ ಸಹಿ ಹಾಕಿದರು. ಕಾರ್ಯಕ್ರಮವನ್ನು ಜಂಟಿಯಾಗಿ ಉದ್ಘಾಟಿಸಿದ ಉಭಯ ದೇಶಗಳ ಪ್ರಧಾನಿಗಳು, ರೈಲು ಸೇವೆ, ರುಪೇ ಪಾವತಿ ವ್ಯವಸ್ಥೆ ಸೇರಿದಂತೆ ಹಲವು ಒಪ್ಪಂದಗಳಿಗೆ ಅಂಕಿತ ಹಾಕಿದರು.

ಫೋಟೋ ಮತ್ತು ಐಡಿ ಕಡ್ಡಾಯ: ಈ ರೈಲು ಮಾರ್ಗವೂ ಭಾರತದ ಬಿಹಾರದಲ್ಲಿರುವ ಜಯನಗರದಿಂದ ನೇಪಾಳದ ಜನಕ್‌ಪುರಧಾಮ್​ದಲ್ಲಿರುವ ಕುರ್ತಾ ನಡುವೆ ಸಂಚರಿಸಲಿದೆ. ಇದು ಒಟ್ಟು 68.8 ಕಿ.ಮೀ ಉದ್ದದ ಜಯನಗರ-ಬಿಜಾಲ್ಪುರ್‌-ಬರ್ದಿದಾಸ್‌ ರೈಲು ಮಾರ್ಗದ ಭಾಗವಾಗಿದೆ. ಪ್ರಯಾಣಿಕರು ಪ್ರಯಾಣಿಸುವಾಗ ಫೋಟೋದೊಂದಿಗೆ ನಿಗದಿತ ಗುರುತಿನ ಚೀಟಿಯನ್ನು ಒಯ್ಯುವುದು ಕಡ್ಡಾಯ ಮಾಡಲಾಗಿದೆ.

ಇದನ್ನೂ ಓದಿ: ಜಾತಿ - ಧರ್ಮ ಇಲ್ಲದ ಪ್ರಮಾಣಪತ್ರ ಕೋರಿ ಗುಜರಾತ್​ ಹೈಕೋರ್ಟ್​ಗೆ ಬ್ರಾಹ್ಮಣ ಯುವತಿ ಅರ್ಜಿ

ಪ್ರಯಾಣಕ್ಕಾಗಿ ಈ ದಾಖಲೆಗಳನ್ನು ತೋರಿಸಬೇಕು: ಮಾನ್ಯವಾದ ರಾಷ್ಟ್ರೀಯ ಪಾಸ್‌ಪೋರ್ಟ್, ಉದ್ಯೋಗಿಗಳಿಗೆ ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತದಿಂದ ನೀಡಲಾಗಿರುವ ಫೋಟೋ ಜೊತೆಗಿನ ಗುರುತಿನ ಕಾರ್ಡ್, ಭಾರತದ ಚುನಾವಣಾ ಆಯೋಗವು ನೀಡಿದ ಫೋಟೋ ಗುರುತಿನ ಚೀಟಿ, ನೇಪಾಳದಲ್ಲಿರುವ ಭಾರತದ ರಾಯಭಾರ ಕಚೇರಿ/ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ನೀಡಿದ ತುರ್ತು ಪ್ರಮಾಣಪತ್ರ ಅಥವಾ ಗುರುತಿನ ಪುರಾವೆಯನ್ನು ತೋರಿಸಲೇಬೇಕು.

ಇದಲ್ಲದೇ ಪಾನ್​ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, CGHS ಕಾರ್ಡ್, 65 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ವಯಸ್ಸು ಮತ್ತು ಗುರುತಿನ ಪುರಾವೆಗಾಗಿ ರೇಷನ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದನ್ನು ಹೊಂದಿರಲೇಬೇಕು ಎಂದು ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.