ETV Bharat / bharat

ಸಾಫ್ಟ್​ವೇರ್​ ಗಂಡನ ಬಿಟ್ಟು ಪ್ರಿಯಕರನ ಹಿಂದೆ ಹೋದ ಪುತ್ರಿ.. ಮಗಳನ್ನು ಬರ್ಬರವಾಗಿ ಕೊಂದ ಅಪ್ಪ

author img

By

Published : Feb 25, 2023, 5:13 PM IST

Honor killing in Alamuru
ಆಲಮೂರಿನಲ್ಲಿ ಮರ್ಯಾದೆ ಹತ್ಯೆ

ಕುಟುಂಬದ ಮರ್ಯಾದೆ ಹೋಗಿದೆ ಎಂದು ತಂದೆಯೇ ತನ್ನ ಪುತ್ರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿ ನಡೆದಿದೆ.

ಪಾಣ್ಯಂ (ಆಂಧ್ರ ಪ್ರದೇಶ): ಕುಟುಂಬದ ಮಾನ ಮರ್ಯಾದೆ ಹೋಯಿತು ಎಂದು ಆಕ್ರೋಶಗೊಂಡ ತಂದೆಯು ತನ್ನ ಪುತ್ರಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಮರ್ಯಾದ ಹತ್ಯೆ ಪ್ರಕರಣ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿ ಬೆಳಕಿಗೆ ಬಂದಿದೆ. ಪಾಣ್ಯಂ ಎಸ್​ಐ ಸುಧಾಕರ ರೆಡ್ಡಿ ಪ್ರಕಾರ, ಆಲಮೂರು ಗ್ರಾಮದ ದೇವೇಂದ್ರ ರೆಡ್ಡಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳು ಪ್ರಸನ್ನಾ (21) ಎರಡು ವರ್ಷಗಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ವಿವಾಹವಾಗಿದ್ದಳು. ಅವರು ಹೈದರಾಬಾದ್‌ನಲ್ಲಿ ನೆಲೆಸಿದ್ದರು. ಪುತ್ರಿ ಪ್ರಸನ್ನಾ ಮದುವೆಗೂ ಮುನ್ನ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಈತನ ಜೊತೆ ಸಂಪರ್ಕ ಬೆಳೆಸಿದ್ದಳು. ಇತ್ತೀಚೆಗಷ್ಟೇ ಹೈದರಾಬಾದಿನಿಂದ ಗ್ರಾಮಕ್ಕೆ ಬಂದಿದ್ದಳು. ಆದರೆ, ಮತ್ತೆ ಗಂಡನ ಬಳಿಗೆ ಹೋಗಿರಲಿಲ್ಲ.

ಪುತ್ರಿಯ ತಲೆ, ದೇಹ ಬೇರ್ಪಡಿಸಿ ಎಸೆದ ತಂದೆ: ತನ್ನ ಕುಟುಂಬದ ಮರ್ಯಾದೆ ಹೋಗಿದೆ ಎಂದು ಭಾವಿಸಿದ ಪ್ರಸನ್ನಾ ತಂದೆ ದೇವೇಂದ್ರ ರೆಡ್ಡಿ ಮಗಳ ಮೇಲೆ ಕೋಪಗೊಂಡಿದ್ದರು. ಫೆ.10ರಂದು ಮನೆಯಲ್ಲಿಯೇ ತಂದೆಯೇ ಮಗಳ ಕತ್ತು ಹಿಸುಕಿ ಕೊಲೆ ಮಾಡಿ ಘಟನೆ ನಡೆದಿದೆ. ಆರೋಪಿ ತಂದೆ ಸೇರಿದಂತೆ ಕೆಲವರು ಜತೆಗೂಡಿ ಕಾರಿನಲ್ಲಿ ಶವವನ್ನು ನಂದ್ಯಾಲ-ಗಿದ್ದಲೂರು ಮಾರ್ಗದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ತಲೆ ಮತ್ತು ದೇಹವನ್ನು ಬೇರ್ಪಡಿಸಿದ್ದಾರೆ. ತಲೆ ಒಂದೆಡೆ ಹಾಗೂ ದೇಹವನ್ನು ಇನ್ನೊಂದೆಡೆ ಎಸೆದಿದ್ದಾರೆ. ನಂತರ ಸ್ಥಳದಿಂದ ಹಿಂದುರುಗಿ ಹೋಗಿದ್ದಾರೆ.

ಪೊಲೀಸರಿಂದ ತನಿಖೆ ಆರಂಭ: ಮೊಮ್ಮಗಳು ಇತ್ತೀಚೆಗೆ ಕರೆ ಮಾಡದ ಕಾರಣ ಅಜ್ಜ ಶಿವಾ ರೆಡ್ಡಿಗೆ ಅನುಮಾನ ಬಂದಿದ್ದು, ಮೊಮ್ಮಗಳು ಪ್ರಸನ್ನಾ ಎಲ್ಲಿಗೆ ಹೋಗಿದ್ದಾಳೆ ಎಂದು ವಿಚಾರಿಸಿದ್ದಾರೆ. ಕುಟುಂಬದ ಮಾನ ಮರ್ಯಾದೆ ಹೋಯಿತು ಎಂಬ ಕಾರಣಕ್ಕೆ ಮಗಳನ್ನು ಕೊಂದಿರುವುದಾಗಿ ದೇವೇಂದ್ರ ರೆಡ್ಡಿ ತಂದೆಗೆ ತಿಳಿಸಿದ್ದಾರೆ. ತಕ್ಷಣವೇ ಅಜ್ಜ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಗುರುವಾರ ದೇವೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಳಿಕ ಪುತ್ರಿಯ ಶವ ಎಸೆದ ಸ್ಥಳವನ್ನು ದೇವೇಂದ್ರ ರೆಡ್ಡಿ ಪೊಲೀಸರಿಗೆ ತೋರಿಸಿದರು. ಆ ಪ್ರದೇಶದಲ್ಲಿ ಇಡೀ ದಿನ ಹುಡುಕಿದರೂ ಸಿಗಲಿಲ್ಲ. ನಂತರ, ಶುಕ್ರವಾರ ತಲೆ ಮತ್ತು ದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಹಿಂದೆ ಮಹಾರಾಷ್ಟ್ರದಲ್ಲಿ ನಡೆದಿತ್ತು ಮರ್ಯಾದ ಹತ್ಯೆ: ಮಹಾರಾಷ್ಟ್ರದ ಜಲಗಾಂವ್​ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ನಡೆದಿತ್ತು. ಅಪ್ರಾಪ್ತ ವಯಸ್ಸಿನ ಸಹೋದರನೊಬ್ಬ ತನ್ನ ಅಕ್ಕನನ್ನು ಕತ್ತು ಹಿಸುಕಿ ಹಾಗೂ ಆಕೆಯ ಪ್ರಿಯಕರನನ್ನು ಗುಂಡಿಕ್ಕಿ ಕೊಂದ ಪ್ರಕರಣ ನಡೆದಿತ್ತು. ಜೋಡಿ ಕೊಲೆ ಮಾಡಿದ ನಂತರ ಆರೋಪಿ ಸಹೋದರ ತನ್ನ ಸ್ವಂತ ಪಿಸ್ತೂಲ್‌ನೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದ ಘಟನೆಯು ಕೆಲವು ತಿಂಗಳ ಹಿಂದೆ ನಡೆದಿತ್ತು. ಮೃತರನ್ನು ರಾಕೇಶ್ ಸಂಜಯ್ ರಜಪೂತ್ (22) ಮತ್ತು ವರ್ಷಾ ಸಾಧನ್ ಕೋಲಿ (20) ಎಂದು ಗುರುತಿಸಲಾಗಿತ್ತು. ಇಬ್ಬರ ಮೃತ ದೇಹಗಳು ಚೋಪ್ಡಾ ನಗರದ ಜುನಾ ವರದ್ ಶಿವರಾದಲ್ಲಿ ಪತ್ತೆಯಾಗಿದ್ದವು.

ಒಬ್ಬ ಸಹೋದರ ಪೊಲೀಸ್​ ಠಾಣೆಗೆ ಶರಣಾಗಿದ್ದ. ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈ ಇಬ್ಬರು ಆರೋಪಿಗಳು ಕೂಡ ಅಪ್ರಾಪ್ತರೇ ಆಗಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ವರ್ಷಾ ಮತ್ತು ರಾಕೇಶ್​ ಓಡಿ ಹೋಗಿ ಮದುವೆಯಾಗಲು ಪ್ರಯತ್ನಿಸುತ್ತಿದ್ದರು. ಈ ವಿಷಯ ತಿಳಿದ ಸಹೋದರ ಮೊದಲು ರಾಕೇಶ್​ಗೆ ಗುಂಡು ಹಾರಿಸಿ ಕೊಲೆ ಮಾಡಿದ್ದ. ನಂತರ ಸಹೋದರಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: ಪ್ರಾಂಶುಪಾಲೆಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಮಾಜಿ ವಿದ್ಯಾರ್ಥಿ: ಚಿಕಿತ್ಸೆ ಫಲಿಸದೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.