ETV Bharat / bharat

ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಗೋದಾವರಿ ನದಿಗೆ ತಳ್ಳಿದ ವ್ಯಕ್ತಿ.. ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಬಾಲಕಿ

author img

By

Published : Aug 7, 2023, 12:51 PM IST

Updated : Aug 7, 2023, 2:17 PM IST

Andhra Pradesh
Andhra Pradesh

ಗೋದಾವರಿ ನದಿಗೆ ತಳ್ಳಲ್ಪಟ್ಟ 13 ವರ್ಷದ ಬಾಲಕಿಯೊಬ್ಬಳು ತನ್ನ ವಿವೇಚನೆಯಿಂದ ಸಕಾಲದಲ್ಲಿ ತನ್ನನ್ನು ತಾನು ರಕ್ಷಿಸಿಕೊಂಡು ಅಪಾಯದಿಂದ ಪಾರಾಗಿದ್ದಾಳೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಈ ಘಟನೆ ನಡೆದಿದೆ.

ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಬಾಲಕಿ...

ಗುಂಟೂರು(ಆಂಧ್ರಪ್ರದೇಶ): ಇಲ್ಲಿಯವರೆಗೂ ಅವಳೊಂದಿಗೆ ಖುಷಿಯಿಂದ ಕಾಲ ಕಳೆಯುತ್ತಿದ್ದ ತಾಯಿ ಹಾಗೂ ತಂಗಿ ಕಣ್ಣೆದುರೇ ಗೋದಾವರಿ ನದಿಗೆ ಬಿದ್ದಿದ್ದಾರೆ. ಈ ಭಯಾನಕ ಪರಿಸ್ಥಿತಿಯಲ್ಲಿಯೂ 13 ವರ್ಷದ ಕೀರ್ತನಾ ಎಂಬ ಬಾಲಕಿ ಅಸಾಧಾರಣ ಧೈರ್ಯ ತೋರಿದ್ದಾಳೆ. ಸಕಾಲದಲ್ಲಿ ತನ್ನನ್ನು ತಾನು ರಕ್ಷಿಸಿಕೊಂಡು ಅಪಾಯದಿಂದ ಪಾರಾಗಿದ್ದಾಳೆ. ದೊಡ್ಡವರು ಅಸಹಾಯಕರಾಗಿರುವ ಪರಿಸ್ಥಿತಿಯಲ್ಲಿ ಈ ಬಾಲಕಿಯ ಜಾಣ್ಮೆ ಇತರರಿಗೆ ಸ್ಪೂರ್ತಿಯಾಗಿದೆ.

ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ನದಿಗೆ ತಳ್ಳಿದ ವ್ಯಕ್ತಿ: ಗುಂಟೂರು ಜಿಲ್ಲೆಯ ರಾವುಲಪಾಲೆಂನಲ್ಲಿ ವ್ಯಕ್ತಿಯೊಬ್ಬ ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರಿಯರನ್ನು ಗೌತಮಿ ಸೇತುವೆಯಿಂದ ಗೋದಾವರಿ ನದಿಗೆ ತಳ್ಳಿದ್ದಾನೆ. ಈ ಭೀಕರ ಘಟನೆಯಲ್ಲಿ ತಾಯಿ ಮತ್ತು ಒಂದು ವರ್ಷದ ಮಗು ಪ್ರಾಣ ಕಳೆದುಕೊಂಡಿದ್ದು, ಮತ್ತೊಬ್ಬ ಮಗಳು ಸೇತುವೆಯ ಪೈಪ್ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡಿದ್ದಾಳೆ.

ಪ್ರಕರಣದ ಸಂಪೂರ್ಣ ವಿವರ: ಪೊಲೀಸರ ಪ್ರಕಾರ ಗುಂಟೂರು ಜಿಲ್ಲೆಯ ತಾಡೆಪಲ್ಲಿಯ ಸುಹಾಸಿನಿ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿದ್ದರು. ಬಳಿಕ ಗುಡಿವಾಡದ ಉಳವ ಸುರೇಶ್ ಎಂಬಾತನೊಂದಿಗೆ ಹಲವು ದಿನಗಳಿಂದ ವಾಸಿಸುತ್ತಿದ್ದಳು. ಈ ನಡುವೆ, ಇವರಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಆದರೆ, ಇತ್ತೀಚೆಗೆ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದ ಸುಹಾಸಿನಿ ಹಾಗೂ ಮಕ್ಕಳನ್ನು ಹೇಗಾದರೂ ಮಾಡಿ ಮುಗಿಸಿ ಬಿಡಬೇಕೆಂದು ಸುರೇಶ್​ ಪ್ಲಾನ್ ಮಾಡಿದ್ದನಂತೆ.

ಅದರಂತೆ ರಾಜಮಹೇಂದ್ರವರಂನಲ್ಲಿ ಬಟ್ಟೆ ಖರೀದಿಸಲು ಶನಿವಾರ ಸಂಜೆ ಕಾರಿನಲ್ಲಿ ಮೂವರನ್ನು ಕರೆದುಕೊಂಡು ಹೋಗಿದ್ದ. ರಾತ್ರಿಯಿಡೀ ವಿವಿಧೆಡೆ ಸಂಚರಿಸಿ ಭಾನುವಾರ ಮುಂಜಾನೆ 4 ಗಂಟೆಗೆ ರಾವುಲಪಾಲೆಂನಲ್ಲಿರುವ ಗೌತಮಿ ಹಳೆಯ ಸೇತುವೆ (ಗೋದಾವರಿ ನದಿಯ ಮೇಲಿನ ಸೇತುವೆ) ಬಳಿಗೆ ಕರೆ ತಂದಿದ್ದಾನೆ. ಸುಹಾಸಿನಿ, ಆಕೆಯ ಒಂದು ವರ್ಷದ ಮಗು ಮತ್ತು ಮತ್ತೊಬ್ಬ ಮಗಳು ಕೀರ್ತನಾ(13) ಅವರೊಂದಿಗೆ ಫೋಟೋ ತೆಗೆಯಲು ಹೇಳಿ ರಾವುಲಪಾಲೆಂ ಗೌತಮಿ ಸೇತುವೆಯ ಮೇಲೆ ನಿಲ್ಲಿಸಿದ್ದಾನೆ. ಅಲ್ಲಿ ಸೆಲ್ಫಿ ತೆಗೆದುಕೊಳ್ಳುವಂತೆ ನಾಟಕವಾಡಿ ಎಲ್ಲರನ್ನೂ ನದಿಗೆ ತಳ್ಳಿದ್ದಾನೆ.

ಸುಹಾಸಿನಿ ಹಾಗೂ ಒಂದು ವರ್ಷದ ಮಗು ನದಿಗೆ ಬಿದ್ದಿದ್ದಾರೆ. ಆದರೆ, 13 ವರ್ಷದ ಕೀರ್ತನಾ ಸೇತುವೆಯ ಬದಿಯಲ್ಲಿದ್ದ ಕೇಬಲ್ ಪೈಪ್ ಅನ್ನು ಹಿಡಿದುಕೊಂಡಿದ್ದಾಳೆ. ಮೂವರು ಗೋದಾವರಿಯಲ್ಲಿ ಬಿದ್ದಿದ್ದಾರೆ ಎಂದು ಭಾವಿಸಿ ಸುರೇಶ್ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದ. ಆದರೆ, ಪೈಪ್ ಹಿಡಿದುಕೊಂಡ ಕೀರ್ತನಾ ತನ್ನ ಪ್ಯಾಂಟ್​ ಜೇಬ್​ನಲ್ಲಿದ್ದ ಫೋನ್​ನಲ್ಲಿ ತುರ್ತು ಕರೆ ಮಾಡಿದ್ದಾಳೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಪೈಪ್ ಹಿಡಿದುಕೊಂಡು ಬಾಲಕಿ ನೇತಾಡುತ್ತಿದ್ದಳು. ಇದನ್ನೂ ನೋಡಿದ ಪೊಲೀಸರು ಕ್ಷಣಕಾಲ ಗಲಿಬಿಲಿಗೊಂಡರು.

ಆರೋಪಿಗಾಗಿ ಶೋಧ: ಗೋದಾವರಿ ನದಿಗೆ ಬಿದ್ದ ತಾಯಿ ಹಾಗೂ ಒಂದು ವರ್ಷದ ಮಗುವಿನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ರಾವುಲಪಾಲೆಂ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸಂದಿಗ್ದ ಪರಿಸ್ಥಿತಿಯಲ್ಲಿಯೂ ಬಾಲಕಿ ತನ್ನ ವಿವೇಚನೆಯಿಂದ ತನ್ನ ಜೀವವನ್ನು ಉಳಿಸಿಕೊಂಡಿದ್ದಾಳೆ ಎಂದು ಪೊಲೀಸರು ಅವಳ ಧೈರ್ಯವನ್ನು ಶ್ಲಾಘಿಸಿದ್ದಾರೆ. ಸದ್ಯ ಗೋದಾವರಿ ನದಿಯಲ್ಲಿ ನಾಪತ್ತೆಯಾದವರಿಗಾಗಿ ಒಂದು ತಂಡ ಹಾಗೂ ಆರೋಪಿಗಳಿಗಾಗಿ ಇನ್ನೊಂದು ತಂಡ ರಚಿಸಲಾಗಿದೆ ಎಂದು ಸಿಐ ರಜಿನಿಕುಮಾರ್ ತಿಳಿಸಿದ್ದಾರೆ. ಅಲ್ಲದೇ ಬಾಲಕಿಯನ್ನು ರಕ್ಷಿಸಿದ ಪೊಲೀಸರನ್ನು ಎಸ್​ಪಿ ಶ್ರೀಧರ್ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಕಾಲುವೆಗೆ ಬಿದ್ದ ಕಾರು.. ಮೂವರು ಬಿಟೆಕ್ ವಿದ್ಯಾರ್ಥಿಗಳು ಸಾವು

Last Updated :Aug 7, 2023, 2:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.