ETV Bharat / bharat

ಕಾಲುವೆಗೆ ಬಿದ್ದ ಕಾರು.. ಮೂವರು ಬಿಟೆಕ್ ವಿದ್ಯಾರ್ಥಿಗಳು ಸಾವು

author img

By

Published : Aug 6, 2023, 1:15 PM IST

BE students died in accident: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಕಾರು ಅಪಘಾತಕ್ಕೀಡಾಗಿ ಮೂವರು ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

car falls into canal
ಕಾಲುವೆಗೆ ಬಿದ್ದ ಕಾರು

ರಾಜಮಹೇಂದ್ರವರಂ (ಆಂಧ್ರ ಪ್ರದೇಶ): ಇಲ್ಲಿನ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕಾರು ಕಾಲುವೆಗೆ ಉರುಳಿದ ಪರಿಣಾಮ ಮೂವರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊರುಕೊಂಡ ಮಂಡಲದ ಬುರುಗುಪುಡಿ ಗ್ರಾಮದಲ್ಲಿ ಭಾನುವಾರ ಮುಂಜಾನೆ ಈ ಭೀಕರ ಅಪಘಾತ ಸಂಭವಿಸಿದೆ.

ಮೃತ ಮೂವರೂ ಬಿಟೆಕ್ ವಿದ್ಯಾರ್ಥಿಗಳು. ಅತಿವೇಗದ ಕಾರು ಚಾಲನೆ ದುರ್ಘಟನೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತರನ್ನು ಹರ್ಷವರ್ಧನ್, ಹೇಮಂತ್ ಮತ್ತು ಉದಯ್ ಕಿರಣ್ ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದ ಉಳಿದ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ "ಏಲೂರು ಪಟ್ಟಣದ ಸಮೀಪದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಬಿಟೆಕ್ ಓದುತ್ತಿರುವ 10 ವಿದ್ಯಾರ್ಥಿಗಳ ತಂಡ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಜಲಪಾತಗಳಿರುವ ಮರೆಡುಮಿಲ್ಲಿ ಬಯೋ ಡೈವರ್ಸಿಟಿ ಹಬ್‌ಗೆ ಪಿಕ್ನಿಕ್‌ಗೆ ತೆರಳಿತ್ತು. ಅವರು ತಮ್ಮ ಭೇಟಿಯನ್ನು ಆನಂದಿಸಿ ಮರಳಿ ಬರುತ್ತಿದ್ದಾಗ ಮಾರ್ಗ ಮಧ್ಯೆ ಕಾರು ರಸ್ತೆಯಿಂದ ಜಾರಿ ಬೂರುಗುಪುಡಿ ಗೇಟ್‌ನ ಹಳೆಯ ಮತ್ತು ಹೊಸ ಸೇತುವೆಗಳ ನಡುವಿನ ಕಾಲುವೆಗೆ ಧುಮುಕಿದೆ".

ಘಟನೆಯಲ್ಲಿ ಇನ್ನೂ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ರಾಜಮಹೇಂದ್ರವರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಅಪಘಾತ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿದ್ಯಾರ್ಥಿಗಳು ಎರಡು ಕಾರುಗಳಲ್ಲಿ ತೆರಳಿದ್ದು, ಒಂದು ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.

ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸಾವು: ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ಇಕೌನಾ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಭೀಕರ ಕಾರು ಅಪಘಾತ: ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸಾವು, ಚಾಲಕನಿಗೆ ಗಂಭೀರ ಗಾಯ

ನದಿಗೆ ಉರುಳಿ ಬಿದ್ದ ಬಸ್​.. ಮೂವರು ಸಾವು: ಜಾರ್ಖಂಡ್​ನ ಗಿರಿಡಿಹ್ ಜಿಲ್ಲೆಯಲ್ಲಿ ಭೀಕರ ಬಸ್​ ಅಪಘಾತ ಸಂಭವಿಸಿದೆ. ಶನಿವಾರ ರಾಂಚಿಯಿಂದ ಗಿರಿಡಿಹ್​ಗೆ ಬರುತ್ತಿದ್ದ ಬಸ್​ ಇಲ್ಲಿನ ಬರಾಕರ್​ ನದಿಗೆ ಉರುಳಿಬಿದ್ದ ಪರಿಣಾಮ ಮೂರು ಮಂದಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ 12ಕ್ಕೂ ಹೆಚ್ಚು ಆಂಬ್ಯುಲೆನ್ಸ್​ಗಳನ್ನು ನಿಯೋಜಿಸಲಾಗಿದೆ. ಗಿರಿಡಿಹ್ -ದುಮ್ರಿ ರಸ್ತೆಯಲ್ಲಿ ಸಂಚರಿಸುವಾಗ ಬಸ್​ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ಬಸ್‌ನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ ಮೂರು ಜನ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ನದಿಗೆ ಉರುಳಿ ಬಿದ್ದ ಬಸ್​.. ಮೂವರು ಸಾವು, 20 ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.